ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೆ ತಮಿಳುನಾಡಿಗೆ ರಾತ್ರೋರಾತ್ರಿ ಕಾವೇರಿ ನೀರು ಹರಿಸಿ ಮಂಡ್ಯದ ರೈತರ ಹೊಟ್ಟೆ ಮೇಲೆ ಹೊಡೆಯುವ ಮೂಲಕ ರೈತರಿಗೆ ದ್ರೋಹ ಎಸಗಿದೆ ಎಂದು ಕರ್ನಾಟಕ ರಾಜ್ಯ ಜಾತ್ಯತೀತ ಜನತಾದಳ ಆರೋಪಿಸಿದೆ.
ಮುಂದುವರೆದು, ರಾಜಕೀಯ ಸ್ವಾರ್ಥಕ್ಕಾಗಿ ಕನ್ನಡಿಗರಿಗೆ ದ್ರೋಹ ಬಗೆಯುತ್ತಿರುವ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ತಮಿಳುನಾಡು ಸರ್ಕಾರದ ಆಜ್ಞೆ ಪಾಲಿಸುತ್ತಿದ್ದಾರೆಯೇ ? ಎಂದು ಪ್ರಶ್ನಿಸಿದೆ.
ರಾಜ್ಯದ ಜನ ಹನಿ ಹನಿ ನೀರಿಗೆ ಹಾಹಾಕಾರ ಪಡುತ್ತಿದ್ದಾರೆ. ಆದರೆ, “ಗುಲಾಮಿ ಕಾಂಗ್ರೆಸ್” ಕದ್ದು ಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದೆ ಎಂದು ಆರೋಪಿಸುವುದರ ಜೊತೆಗೆ ಕಿಡಿಕಾರಿದೆ.
ʼಮಂಡ್ಯದವರು ಛತ್ರಿಗಳುʼ ಎಂದು ಅವಮಾನ ಮಾಡಿದ್ದ ಡಿಕೆಶಿಯವರು, ಇಂಡಿಯಾ ಮೈತ್ರಿಕೂಟದ ಸ್ಟಾಲಿನ್ ಸರ್ಕಾರವನ್ನು ಮೆಚ್ಚಿಸಲು ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಡುತ್ತಿರುವುದು ನಾಚಿಕೆಗೇಡಿನ ಕೆಲಸ ಎಂದು ಜಾತ್ಯತೀತ ಜನತಾದಳ ತನ್ನ ಅಧಿಕೃತ ಎಕ್ಸ್ ಖಾತೆನಲ್ಲಿ ದೂರಿದೆ.
ತಮಿಳುನಾಡು ಸರ್ಕಾರದ ಆಜ್ಞೆ ಏನು?
ಕರ್ನಾಟಕ ರಾಜ್ಯಕ್ಕೆ ಮೇಕೆದಾಟು ಅಣೆಕಟ್ಟೆ ಕಟ್ಟಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಒಂದು ವೇಳೆ ಅಣೆಕಟ್ಟೆ ಕಟ್ಟಲು ಪ್ರಯತ್ನಿಸಿದ್ದಲ್ಲಿ ನಾವು ಕಾನೂನು ಕ್ರಮಕ್ಕೂ ಹಿಂಜರಿಯುವುದಿಲ್ಲ ಎಂದು ತಮಿಳುನಾಡು ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಆಜ್ನೆ ಮಾಡುವ ಮೂಲಕ, ಎಚ್ಚರಿಕೆ ನೀಡಿತ್ತು.
ರಾಜ್ಯ ಜಾತ್ಯತೀತ ಜನತಾದಳ ಆರೋಪಕ್ಕೆ ಕಾರಣವೇನು?
ರಾಜ್ಯ ಕಾಂಗ್ರೆಸ್ ಸರ್ಕಾರ, ಮೇಕೆದಾಟು ಯೋಜನೆಯ ಡಿಪಿಆರ್ ಇನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೇ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಹುಸಿ ಭರವಸೆ ಕೊಟ್ಟು, ಈಗ ಡಿಎಂಕೆ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರಿಲ್ಲ, ಯಾಕೆ ನೀವು ಮೇಕೆದಾಟು ಯೋಜನೆಯ ಡಿಪಿಆರ್ ಇನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ಜಾತ್ಯತೀತ ಜನತಾದಳ ಪ್ರಶ್ನಿಸಿದೆ.
ಜೊತೆಗೆ ಇತ್ತೀಚಿಗಷ್ಟೇ, ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು, ಕ್ಷೇತ್ರ ಪುನರ್ವಿಂಗಡಣೆ ಕುರಿತು, ಸಭೆಯಲ್ಲಿ ಭಾಗಿಯಾಗಲು ತಮಿಳುನಾಡಿಗೆ ಹೋಗಿ ಬಂದ ನಂತರ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜೊತೆಗೆ ಮಾತು ಕಥೆ ನಡೆಸಿ, ಹೊಂದಾಣಿಕೆ ರಾಜಕೀಯ ಮಾಡಿಕೊಂಡು, ತಮಿಳುನಾಡಿಗೆ ರಾತ್ರೋರಾತ್ರಿ ಕಾವೇರಿ ನೀರು ಹರಿಸಿತ್ತಿದ್ದಾರೆ ಎಂದು ರಾಜ್ಯ ಜಾತ್ಯತೀತ ಜನತಾದಳ ಆರೋಪಿಸಿದೆ.