ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳ ಮೂಲಕ ನ್ಯಾಯಾಲಯದ ತೀರ್ಪಿನ ಮೇಲೆ ಪ್ರಭಾವ ಬೀರಲು ಕೆಲವು ಗುಂಪುಗಳು ಪ್ರಯತ್ನಿಸುತ್ತಿವೆ ಎಂದು ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ನ್ಯಾಯಾಧೀಶರು ಜಾಗೃತರಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎನ್ಡಿಟಿವಿ ಇಂಡಿಯಾ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ನ್ಯಾಯಾಧೀಶರ ಮೇಲೆ ಪರಿಣಾಮ ಬೀರುತ್ತದೆಯೇ? ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಅವರು, ‘ಇಂದು ವಿಶೇಷ ಆಸಕ್ತಿ ಗುಂಪುಗಳು ಮತ್ತು ಒತ್ತಡ ಗುಂಪುಗಳಿವೆ. ನ್ಯಾಯಾಲಯಗಳು ಮತ್ತು ಪ್ರಕರಣಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಅವರು ಸಾಮಾಜಿಕ ಮಾಧ್ಯಮವನ್ನು ಬಳಸಲು ಪ್ರಯತ್ನಿಸುತ್ತಾರೆ. ತೀರ್ಪಿನ ಆಧಾರವನ್ನು ತಿಳಿದುಕೊಳ್ಳುವ ಹಕ್ಕು ಮತ್ತು ನ್ಯಾಯಾಲಯದ ತೀರ್ಪುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಇದು ನ್ಯಾಯಾಲಯದ ತೀರ್ಪುಗಳನ್ನು ಮೀರಿ ಮತ್ತು ನ್ಯಾಯಾಧೀಶರನ್ನು ವೈಯಕ್ತಿಕವಾಗಿ ಗುರಿಯಾಗಿಸಿದಾಗ, ಅದು ನಿಜವಾಗಿಯೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೇ? ಎಂಬ ಮೂಲಭೂತ ಪ್ರಶ್ನೆಗಳು ಉದ್ಭವಿಸುತ್ತವೆ’ ಎಂದು ಚಂದ್ರಚೂಡ್ ಹೇಳಿದರು.
ಇಂದಿನ ಜನರು ಯೂಟ್ಯೂಬ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ 20 ಸೆಕೆಂಡ್ ಗಳ ವೀಡಿಯೋ ನೋಡಿ ಅದರ ಆಧಾರದ ಮೇಲೆ ಅಭಿಪ್ರಾಯ ರೂಪಿಸಲು ಬಯಸುತ್ತಿದ್ದು, ಇದು ಅತ್ಯಂತ ಅಪಾಯಕಾರಿ ಎಂದರು. ನ್ಯಾಯಮೂರ್ತಿಗಳು ನಿವೃತ್ತಿ ನಂತರ ರಾಜಕೀಯಕ್ಕೆ ಬರಬಾರದು ಎಂದು ಸಂವಿಧಾನವಾಗಲಿ, ಕಾನೂನುಗಳಾಗಲಿ ಹೇಳುವುದಿಲ್ಲ ಎಂದರು. ಸಮಾಜವು ನಿವೃತ್ತಿಯ ನಂತರವೂ ನ್ಯಾಯಾಧೀಶರನ್ನು ನ್ಯಾಯಾಧೀಶರಂತೆ ನೋಡುತ್ತದೆ, ಆದ್ದರಿಂದ ನ್ಯಾಯಾಧೀಶರು ನಿವೃತ್ತಿಯ ನಂತರವೂ ಅದು ಮಾಡಬಾರದು, ಇದು ಮಾಡಬಾರದು ಎನ್ನುವುದು ಸರಿಯಲ್ಲ ಎಂದು ಹೇಳಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಕೊಲಿಜಿಯಂ ಉತ್ತಮ ನೀತಿ ಎಂದೂ ಅವರು ಅಭಿಪ್ರಾಯಪಟ್ಟರು.