ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಸಲಹೆ ಪಾಲಿಸುವುದನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ನಿಲ್ಲಿಸಿದೆ ಎಂದು ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ) ಮುಖ್ಯಸ್ಥ ಅಭಿಜೀತ್ ದೀಪ್ಕೆ ಅವರು ಮಂಗಳವಾರ ಆರೋಪಿಸಿದ್ದಾರೆ. ಅಲ್ಲದೆ ಜೆನ್ ಝಿ ವಿಚಾರದಲ್ಲಿ ಕೇಂದ್ರದ ಆಡಳಿತ ಪಕ್ಷ ಮತ್ತು ಆರ್ ಎಸ್ಎಸ್ ನಡುವೆ ಬಿರುಕು ಉಂಟಾಗಿದೆ ಎಂದು ಹೇಳಿದ್ದಾರೆ.
ಎಲ್ಲೋ, ಬಿಜೆಪಿ, ಮೋಹನ್ ಭಾಗವತ್ ಮತ್ತು ಆರ್ಎಸ್ಎಸ್ ಮಾತು ಕೇಳುವುದನ್ನು ನಿಲ್ಲಿಸಿದೆ. ಒಂದೆಡೆ, ಮೋಹನ್ ಭಾಗವತ್ ಜೆನ್ ಝಡ್ ರಾಷ್ಟ್ರವಿರೋಧಿಗಳಲ್ಲ ಮತ್ತು ಅವರ ಕಳವಳಗಳು ನಿಜವಾದವು ಎಂದು ಹೇಳುತ್ತಾರೆ. ಆದರೆ ಮತ್ತೊಂದೆಡೆ, ಕೆಲವೇ ತಿಂಗಳುಗಳ ಹಿಂದೆ ನೇಮಕಗೊಂಡ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್, ನಮ್ಮನ್ನು ವೈರಸ್ ಎಂದು ಟೀಕಿಸುತ್ತಾರೆ ಎಂದು ದೀಪ್ಕೆ ಹೇಳಿದ್ದಾರೆ. ಮೋಹನ್ ಭಾಗವತ್, ನಿಮ್ಮ ಮಾರ್ಗದರ್ಶಕರು, ನೀವು ಮೊದಲು ಅವರ ಮಾತು ಕೇಳಬೇಕು. ಅದು ನಿಮಗೆ ಒಳ್ಳೆಯದು ಎಂದು ದೀಪ್ಕೆ ಬಿಜೆಪಿಗೆ ಸಲಹೆ ನೀಡಿದ್ದಾರೆ. ನ್ಯೂಸ್ 24 ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಜೆಪಿ ಸಂಸ್ಥಾಪಕ, ಕೇಂದ್ರದಲ್ಲಿ 12 ವರ್ಷ ಅಧಿಕಾರಾದಲ್ಲಿರುವ ನೀವು ಆರ್ ಎಸ್ಎಸ್ ಮಾತನ್ನು ಕೇಳದಷ್ಟು ದೊಡ್ಡವರಾಗಿದ್ದೀರಾ? ಎಂದು ಪ್ರಧಾನಿ ಮೋದಿ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಪ್ರಶ್ನಿಸಿದ್ದಾರೆ. ನೀವು ಕೇವಲ 12 ವರ್ಷ ಅಧಿಕಾರ ಪೂರೈಸಿದ್ದೀರಿ ಮತ್ತು ನಿತಿನ್ ನಬಿನ್ ಕೇವಲ ಒಂದು ಅಥವಾ ಎರಡು ವರ್ಷಗಳ ಹಿಂದೆ ಬಂದಿದ್ದಾರೆ” ಎಂದು ಹೇಳಿದ್ದಾರೆ.
