ದೆಹಲಿಯಲ್ಲಿರುವ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT Delhi) ವಿದ್ಯಾರ್ಥಿಗಳು ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ದಾರೆ. 31 ವರ್ಷದ ಎಂಎಸ್ಸಿ ಫಿಸಿಕ್ಸ್ (MSc Physics) ವಿದ್ಯಾರ್ಥಿ ಋಷಿಕೇಶ್ ಕುಮಾರ್ ಅವರು ಕ್ಯಾಂಪಸ್ನ ಕಟ್ಟಡವೊಂದರ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ನಂತರ ಈ ತೀವ್ರ ಪ್ರತಿಭಟನೆ ಭುಗಿಲೆದ್ದಿದೆ.
ಕ್ಯಾಂಪಸ್ನ ಲೆಕ್ಚರ್ ಹಾಲ್ ಕಾಂಪ್ಲೆಕ್ಸ್ ಬಳಿ ಜಮಾಯಿಸಿದ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮುಖ್ಯ ಕಟ್ಟಡದ ಮೊದಲ ಮಹಡಿಯ ಲಾಬಿ ಹಾಗೂ ಡೈರೆಕ್ಟರ್ ಅವರ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಿ ಆಡಳಿತ ಮಂಡಳಿಯ ಹೊಣೆಗಾರಿಕೆಯನ್ನು ಪ್ರಶ್ನಿಸಿದರು. ಐಐಟಿ ಕ್ಯಾಂಪಸ್ಗಳಲ್ಲಿ ಇಂತಹ ಬೃಹತ್ ವಿದ್ಯಾರ್ಥಿ ಪ್ರತಿಭಟನೆಗಳು ತೀರಾ ವಿರಳವಾಗಿದ್ದು, ವಿದ್ಯಾರ್ಥಿಗಳ ಆಕ್ರೋಶ ತೀವ್ರವಾಗಿತ್ತು.
ಪ್ರತಿಭಟನೆಯಲ್ಲಿದ್ದ ವಿದ್ಯಾರ್ಥಿಯೊಬ್ಬರು ಮಾತನಾಡುತ್ತಾ, “ನಾವು ಕೇವಲ ಒಂದು ಆತ್ಮಹತ್ಯೆಯ ನಂತರ ಇಲ್ಲಿಗೆ ಬಂದಿಲ್ಲ, ಎರಡು ಸಾವುಗಳ ನಂತರವೂ ಬಂದಿಲ್ಲ. ಸತತ 8 ಸಾವುಗಳ ನಂತರ ನಾವಿಲ್ಲಿ ಜಮಾಯಿಸಿದ್ದೇವೆ. ಆಡಳಿತ ಮಂಡಳಿಗೆ ಇದು ಇನ್ನೂ ಗಂಭೀರವಾಗಿ ಕಾಣಿಸುತ್ತಿಲ್ಲವೇ?” ಎಂದು ಆಕ್ರೋಶ ಹೊರಹಾಕಿದ್ದಾರೆ. 2023ರಿಂದ ಈವರೆಗೆ ಸಂಸ್ಥೆಯಲ್ಲಿ ಸಂಭವಿಸಿದ ಎಂಟನೇ ಆತ್ಮಹತ್ಯೆ ಇದಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಪ್ರತಿಭಟನಾ ನಿರತರು ವಿದ್ಯಾರ್ಥಿ ಕಲ್ಯಾಣ ವಿಭಾಗದ ಅಸೋಸಿಯೇಟ್ ಡೀನ್ ಪ್ರೊಫೆಸರ್ ಶ್ರೀದೇವಿ ಉಪಾಧ್ಯಾಯ ಅವರ ತಕ್ಷಣದ ರಾಜೀನಾಮೆ, ಈ ಎಲ್ಲಾ ಸಾವುಗಳ ಕುರಿತು ಸ್ವತಂತ್ರ ತನಿಖೆ ಹಾಗೂ ಮೃತ ಋಷಿಕೇಶ್ ಕುಟುಂಬಕ್ಕೆ ₹1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪಟ್ಟುಹಿಡಿದರು.
ಮೃತ ಋಷಿಕೇಶ್ ಸ್ಮರಣಾರ್ಥ ಕೆಲಕಾಲ ಮೌನ ಆಚರಿಸಿದ ಬಳಿಕ, ಸಂಸ್ಥೆಯ ನಿರಂತರ ಆಡಳಿತಾತ್ಮಕ ನಿರ್ಲಕ್ಷ್ಯದ ಕುರಿತು ವಿದ್ಯಾರ್ಥಿಗಳು ಬಹಿರಂಗವಾಗಿ ಮಾತನಾಡಿದರು. ಈ ವರ್ಷದ ಆರಂಭದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಋಷಿಕೇಶ್, ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿದ್ದರಿಂದ ಒಂದು ಸೆಮಿಸ್ಟರ್ ಕಾಲ ಬ್ರೇಕ್ ತೆಗೆದುಕೊಂಡು ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆದಿದ್ದರು.
ಜುಲೈ ಅಂತ್ಯದಲ್ಲಿ ಅವರು ಹಾಸ್ಟೆಲ್ಗೆ ಮರಳಿದಾಗ, ಸೆಮಿಸ್ಟರ್ ಬ್ರೇಕ್ ನೆಪವೊಡ್ಡಿ ಹಾಸ್ಟೆಲ್ ರೋಲ್ನಿಂದ ಅವರ ಹೆಸರನ್ನು ತೆಗೆದುಹಾಕಲಾಗಿತ್ತು. ತಾವು ಚಿಕಿತ್ಸೆ ಪಡೆದ ಆಸ್ಪತ್ರೆಯಿಂದ ಫಿಟ್ನೆಸ್ ಕ್ಲಿಯರೆನ್ಸ್ ಪ್ರಮಾಣಪತ್ರ ತಂದಿದ್ದರೂ, ಐಐಟಿ ದೆಹಲಿ ಆಸ್ಪತ್ರೆಯಿಂದ ಮತ್ತೊಂದು ಕ್ಲಿಯರೆನ್ಸ್ ತರಬೇಕೆಂದು ಆಡಳಿತ ಮಂಡಳಿ ಪೀಡಿಸಿತ್ತು. ಅಂತಿಮವಾಗಿ ಹಾಸ್ಟೆಲ್ ಕೊಠಡಿ ಸಿಗದೆ ಋಷಿಕೇಶ್ ತಮ್ಮ ತಾಯಿಯೊಂದಿಗೆ ಕ್ಯಾಂಪಸ್ನ ಹೊರಗೆ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದರು.
“ನಾವು ಎಷ್ಟೇ ಸಮಸ್ಯೆ ಹೇಳಿಕೊಂಡರೂ ‘ನಿಮಗೆ ನಿಭಾಯಿಸಲು ಆಗದಿದ್ದರೆ ಇಲ್ಲಿಂದ ಹೊರಟುಹೋಗಿ’ ಎಂದು ಅಧಿಕಾರಿಗಳು ಹೇಳುತ್ತಾರೆ; ಅವರಲ್ಲಿ ಕನಿಷ್ಠ ಮಾನವೀಯತೆಯೂ ಇಲ್ಲ” ಎಂದು ವಿದ್ಯಾರ್ಥಿಗಳು ದೂರಿದರು.
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆಡಳಿತ ಮಂಡಳಿಯು ಸೋಮವಾರದ ಎಲ್ಲಾ ತರಗತಿಗಳನ್ನು ರದ್ದುಗೊಳಿಸಿತು. ಸಂಜೆ 5:30ರ ಸುಮಾರಿಗೆ ಕಚೇರಿಯಿಂದ ಹೊರಬಂದ ಐಐಟಿ ದೆಹಲಿ ನಿರ್ದೇಶಕ ರಂಗನ್ ಬ್ಯಾನರ್ಜಿ, ಘಟನೆಯ ತನಿಖೆಗೆ ಸಮಿತಿ ರಚಿಸಲಾಗುವುದು ಹಾಗೂ ಮೃತನ ಏಕೈಕ ಆಧಾರವಾಗಿದ್ದ ತಾಯಿಗೆ ಮೆಡಿಕಲ್ ವೆಚ್ಚಗಳ ಜೊತೆಗೆ ₹6 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಆದರೆ ಅಸೋಸಿಯೇಟ್ ಡೀನ್ ಶ್ರೀದೇವಿ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು.
ನಿರ್ದೇಶಕರ ಈ ನಿರ್ಧಾರದಿಂದ ಮತ್ತಷ್ಟು ರೊಚ್ಚಿಗೆದ್ದ ವಿದ್ಯಾರ್ಥಿಗಳು ಜೋರಾಗಿ ಕೂಗುತ್ತಾ ಧಿಕ್ಕಾರ ಕೂಗಿದರು. ಅದೇ ಸಂದರ್ಭದಲ್ಲಿ ಪ್ರೊಫೆಸರ್ ಶ್ರೀದೇವಿ ಅವರನ್ನು ಕಟ್ಟಡದ ಹಿಂಬದಿಯ ಬಾಗಿಲಿನಿಂದ ರಹಸ್ಯವಾಗಿ ಹೊರಗೆ ಕರೆದೊಯ್ಯಲಾಯಿತು. ಕೇವಲ ₹6 ಲಕ್ಷ ಪರಿಹಾರದಿಂದ ಆ ಬಡ ತಾಯಿ ಹೇಗೆ ಬದುಕಲು ಸಾಧ್ಯ ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ಮುಂದುವರಿಸಿದರು.
