‘ಡೀಲ್ ಮಾಡಿಕೊಳ್ಳುವುದಿದ್ದರೆ 26 ದಿನ ಉಪವಾಸ ಇರುತ್ತಿದ್ದೆನೇ?’: ಉಪವಾಸ ಸತ್ಯಾಗ್ರಹ ಅಂತ್ಯದ ಕುರಿತ ಪ್ರಶ್ನೆಗಳಿಗೆ ಸೋನಮ್ ವಾಂಗ್ಚುಕ್ ಸಿಡಿಮಿಡಿ

ದೆಹಲಿ: 26 ದಿನಗಳ ಕಾಲ ನಿರಂತರ ಉಪವಾಸ ಸತ್ಯಾಗ್ರಹ ನಡೆಸಿದ ನಂತರವೂ ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕೇ ಎಂದು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ತಮ್ಮ ಟೀಕಾಕಾರರನ್ನು ಪ್ರಶ್ನಿಸಿದ್ದಾರೆ. ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ಸಂದೇಶವೊಂದನ್ನು ಹಂಚಿಕೊಂಡಿರುವ ಸೋನಮ್ ವಾಂಗ್ಚುಕ್, ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ವದಂತಿಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸಚಿವರ ಕೈಯಿಂದ ಸತ್ಯಾಗ್ರಹ ಏಕೆ ಅಂತ್ಯಗೊಳಿಸಲಾಯಿತು, ಏನು ಡೀಲ್ ಆಯಿತು ಎಂಬ ಪ್ರಶ್ನೆಗಳಿಗೆ ನಾನು ಉತ್ತರಿಸಬೇಕೇ? ಕೇಂದ್ರ ಸಚಿವರಿಂದ ಉಪವಾಸ ಅಂತ್ಯಗೊಳಿಸಿದ ಬಗ್ಗೆ ಹಲವರು ಪ್ರಶ್ನೆ ಎತ್ತುತ್ತಿದ್ದಾರೆ ಎಂದು ನನಗೆ ತಿಳಿದುಬಂತು. ಒಂದು ವೇಳೆ ಸರ್ಕಾರದೊಂದಿಗೆ ಯಾವುದೇ ಡೀಲ್ ಮಾಡಿಕೊಳ್ಳುವುದೇ ಆಗಿದ್ದರೆ ನಾನು 26 ದಿನಗಳ ಕಾಲ ಹಸಿವಿನಿಂದ ಬಳಲಬೇಕಿತ್ತೇ?” ಎಂದು ಅವರು ‘ಎಕ್ಸ್’ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಕೇಳಿದ್ದಾರೆ.

ನನಗೆ ಚಾರಿತ್ರ್ಯ ಪ್ರಮಾಣಪತ್ರದ ಅಗತ್ಯವಿದೆ – ಸೋನಮ್ ವಾಂಗ್ಚುಕ್

ವೀಡಿಯೊದಲ್ಲಿ ಮಾತು ಮುಂದುವರಿಸಿದ ವಾಂಗ್ಚುಕ್, “26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹದ ನಂತರವೂ ನನಗೆ ಚಾರಿತ್ರ್ಯ ಪ್ರಮಾಣಪತ್ರದ (Character Certificate) ಅಗತ್ಯವಿದೆಯೇ? ದೈಹಿಕವಾಗಿ ನಾನು ಹೋರಾಡಬೇಕಾಯಿತು ಮತ್ತು ನೆಲದ ಮೇಲೆ ಮಲಗಿ ಮತ್ತೊಂದು ಹಂತದ ಸತ್ಯಾಗ್ರಹವನ್ನು ಎದುರಿಸಬೇಕಾಯಿತು. 22 ದಿನಗಳವರೆಗೆ ನನ್ನಲ್ಲಿದ್ದ ಶಕ್ತಿಯೇ ನನ್ನನ್ನು ಇಲ್ಲಿಯವರೆಗೆ ಕೊಂಡೊಯ್ದಿದೆ” ಎಂದಿದ್ದಾರೆ.

“ತುಂಬಾ ಬೇಸರದಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಬೆಳಿಗ್ಗೆಯಿಂದಲೇ ಜನರು ನನಗೆ ಕರೆ ಮಾಡುತ್ತಿದ್ದಾರೆ ಅಥವಾ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ತೋರಿಸಿ ನನ್ನನ್ನೇ ಪ್ರಶ್ನಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಗೀತಾಂಜಲಿ ಆಂಗ್ಮೋ ತೀವ್ರ ಪ್ರತಿಕ್ರಿಯೆ

ಇನ್ನೊಂದೆಡೆ, ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಕೂಡ ಟೀಕಾಕಾರರಿಗೆ ತೀವ್ರ ತಿರುಗೇಟು ನೀಡಿದ್ದಾರೆ. ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, “ವಾಂಗ್ಚುಕ್ ಅವರನ್ನು ನಿಂದಿಸುವ ಮೊದಲು, ಸಮಾಜದ ದೊಡ್ಡ ಉದ್ದೇಶಕ್ಕಾಗಿ 26 ದಿನಗಳ ಕಾಲ ಉಪವಾಸ ಇರುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಆರಾಮದಾಯಕ ಜೀವನದ ಬದಲಿಗೆ ತ್ಯಾಗದ ಹಾದಿ ಹಿಡಿದಿದ್ದರಿಂದ ಅವರು ಇಂದು ತೀವ್ರ ನಿಗಾ ಘಟಕದಲ್ಲಿದ್ದಾರೆ (ICU), ಅವರ ದೇಹದ ತೂಕ ಹಾಗೂ ಮಾಂಸಖಂಡಗಳ ದ್ರವ್ಯರಾಶಿ ಸೇರಿದಂತೆ 11 ಕೆಜಿ ತೂಕ ಕಡಿಮೆಯಾಗಿದೆ.

ನಿಮ್ಮ ನಿರೀಕ್ಷೆಗಳು ಮತ್ತು ರಾಜಕೀಯ ಲೆಕ್ಕಾಚಾರಗಳ ಹೊರೆಯನ್ನು ಅವರ ಮೇಲೆ ಹೇರುವ ಮೊದಲು ಕನಿಷ್ಠ ಒಂದು ದಿನ ಅವರಿಗೆ ಅನುಕಂಪ ತೋರಿಸಿ. ಪ್ರತಿಯೊಬ್ಬರಿಗೂ ನಿಸ್ಸಾರ ಸ್ವಾರ್ಥ ಸೇವೆಯ ಜೀವನವನ್ನು ತೀರ್ಮಾನಿಸುವ ಅರ್ಹತೆ ಇರುವುದಿಲ್ಲ, ಅದಕ್ಕಾಗಿ ಮೊದಲು ನೈತಿಕ ಎತ್ತರವನ್ನು ತಲುಪಬೇಕು” ಎಂದು ಬರೆದುಕೊಂಡಿದ್ದಾರೆ.

ಸೋನಮ್ ವಾಂಗ್ಚುಕ್ ಅವರನ್ನು ಅಣ್ಣಾ ಹಜಾರೆಗೆ ಹೋಲಿಸಿದ ಇಮ್ರಾನ್ ಮಸೂದ್

ಶುಕ್ರವಾರ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ವಾಂಗ್ಚುಕ್ ಅವರನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಹೋಲಿಸಿ, ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಅವರನ್ನು ‘ಅಣ್ಣಾ ಹಜಾರೆ ಪಾರ್ಟ್-2’ ಎಂದು ಕರೆದ ಮಸೂದ್, “ಅವರು ಅಣ್ಣಾ ಹಜಾರೆ ಅವರ ಎರಡನೇ ಭಾಗ. 12 ವರ್ಷಗಳ ಕಾಲ ಅಣ್ಣಾ ಹಜಾರೆ ಮೌನವಾಗಿದ್ದರು, ಈಗ ಸೋನಮ್ ವಾಂಗ್ಚುಕ್ ಮೌನವಾಗಿರುತ್ತಾರೆ. ನೀವು ನಿನ್ನೆ ಸರ್ಕಾರದೊಂದಿಗೆ ಸಭೆ ನಡೆಸಿ ಒಪ್ಪಂದ ಮಾಡಿಕೊಳ್ಳುವಾಗ ಅಲ್ಲಿ ಯಾರಾದರೂ ವಿದ್ಯಾರ್ಥಿಗಳು ಇದ್ದರೇ? ಸರ್ಕಾರದೊಂದಿಗಿನ ನಿಮ್ಮ ವೈಯಕ್ತಿಕ ಒಪ್ಪಂದವನ್ನು ಹೊರತುಪಡಿಸಿ ಅಲ್ಲಿ ಇನ್ನೇನಿದೆ?” ಎಂದು ಪ್ರಶ್ನಿಸಿದ್ದರು. ಅಲ್ಲದೆ ಸರ್ಕಾರದೊಂದಿಗಿನ ವಾಂಗ್ಚುಕ್ ಸಭೆಯಲ್ಲಿ ವಿದ್ಯಾರ್ಥಿಗಳೇಕೆ ಇರಲಿಲ್ಲ, ಕೇವಲ ಲಡಾಖ್‌ನ ಜನರು ಮಾತ್ರ ಏಕೆ ಭಾಗವಹಿಸಿದ್ದರು ಎಂದು ಅವರು ಆರೋಪಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು