Home ದೆಹಲಿ ಜಿರಳೆ ಪಕ್ಷದ ಪ್ರತಿಭಟನೆಗೆ ಬೆಂಬಲ; ಬೇಡಿಕೆ ಈಡೇರದಿದ್ದರೆ ಜೂನ್ 28ರಿಂದ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ

ಜಿರಳೆ ಪಕ್ಷದ ಪ್ರತಿಭಟನೆಗೆ ಬೆಂಬಲ; ಬೇಡಿಕೆ ಈಡೇರದಿದ್ದರೆ ಜೂನ್ 28ರಿಂದ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ

0

ನವದೆಹಲಿ/ಜಿನೀವಾ: ಜಿರಳೆ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಲಡಾಖ್‌ನ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್, ಪಕ್ಷವು ಒತ್ತಾಯಿಸುತ್ತಿರುವ ಪ್ರಮುಖ ಬೇಡಿಕೆಗಳಲ್ಲಿ ಕನಿಷ್ಠ ಒಂದನ್ನಾದರೂ ಜೂನ್ 28ರೊಳಗೆ ಕೇಂದ್ರ ಸರ್ಕಾರ ಈಡೇರಿಸದಿದ್ದರೆ ತಾವು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಸಿಜೆಪಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಹಾಗೂ ಲಡಾಖ್‌ಗೆ ಹೆಚ್ಚಿನ ಆಡಳಿತಾತ್ಮಕ ಅಧಿಕಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ. ಈ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ, ಜೂನ್ 28ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸದ ಮುಷ್ಕರ ಆರಂಭಿಸುವುದಾಗಿ ವಾಂಗ್‌ಚುಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿರುವ ವಾಂಗ್‌ಚುಕ್, ವಿಶ್ವಸಂಸ್ಥೆಯ ಕಚೇರಿ ಎದುರಿನ ಪ್ರತಿಭಟನಾ ಚೌಕದಿಂದ ವಿಡಿಯೊ ಸಂದೇಶ ಬಿಡುಗಡೆ ಮಾಡಿ, ಜೂನ್ 27ರವರೆಗೆ ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯುವುದಾಗಿ ತಿಳಿಸಿದ್ದಾರೆ. “ಶಿಕ್ಷಣ ಮತ್ತು ಪರಿಸರ ನನ್ನ ಎರಡು ಪ್ರಮುಖ ವಿಚಾರಗಳು. ಈ ವಾರದೊಳಗೆ ಅವುಗಳಲ್ಲಿ ಕನಿಷ್ಠ ಒಂದಾದರೂ ಪರಿಹಾರವಾಗಲಿದೆ ಎಂಬ ನಿರೀಕ್ಷೆಯಿದೆ. ಸರ್ಕಾರ ಕನಿಷ್ಠ ಒಂದು ಬೇಡಿಕೆಯನ್ನಾದರೂ ಈಡೇರಿಸಿದರೆ ನಾನು ಉಪವಾಸ ಕೂರುವುದಿಲ್ಲ,” ಎಂದು ಅವರು ಹೇಳಿದ್ದಾರೆ.

ಕಳೆದ ವಾರವೇ ಸರ್ಕಾರಕ್ಕೆ ಗಡುವು ನೀಡಿದ್ದ ವಾಂಗ್‌ಚುಕ್, ಶಿಕ್ಷಣ ಕ್ಷೇತ್ರದಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಹಾಗೂ ಲಡಾಖ್‌ಗೆ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದರು. ಲಡಾಖ್‌ಗೆ ಹೆಚ್ಚಿನ ಅಧಿಕಾರ ನೀಡುವುದು, ಅಲ್ಲಿನ ಪರಿಸರ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಭರವಸೆಗಳಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ ಎಂದು ಅವರು ಆರೋಪಿಸಿದ್ದರು.

ಪ್ರತಿಭಟನೆಯ ಆರನೇ ದಿನದಂದು ವಾಂಗ್‌ಚುಕ್ ಅವರ ವಿಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಜಿರಳೆ ಜನತಾ ಪಕ್ಷ, “ಸೋನಮ್ ವಾಂಗ್‌ಚುಕ್ ಜೂನ್ 28ರಂದು ಜಂತರ್ ಮಂತರ್‌ನಲ್ಲಿ ಹಸಿವು ಮುಷ್ಕರ ಆರಂಭಿಸಲಿದ್ದಾರೆ. ಜೂನ್ 27ರೊಳಗೆ ಸರ್ಕಾರ ಹೊಣೆಗಾರಿಕೆಯನ್ನು ತೋರಿಸಬೇಕು. ಇಲ್ಲವಾದರೆ ಅವರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ,” ಎಂದು ತಿಳಿಸಿದೆ.

ಕಳೆದ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ವಾಂಗ್‌ಚುಕ್, ಶಿಕ್ಷಣ ಕ್ಷೇತ್ರ ಮತ್ತು ಲಡಾಖ್ ವಿಚಾರದಲ್ಲಿ ಸರ್ಕಾರ ಸ್ಪಷ್ಟ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದರು. ಒಂದು ವಾರದೊಳಗೆ ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ ಜಂತರ್ ಮಂತರ್‌ಗೆ ಮರಳಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದರು. ಇದೀಗ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಜೂನ್ 28ರಿಂದ ಅವರ ಉಪವಾಸ ಸತ್ಯಾಗ್ರಹ ಆರಂಭವಾಗುವ ಸಾಧ್ಯತೆ ಹೆಚ್ಚಿದೆ.

You cannot copy content of this page

Exit mobile version