ಲಕ್ನೋ: ಹಮೀರಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಅಜೇಂದ್ರ ಸಿಂಗ್ ಲೋಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಜೆಪಿ ಜಿಲ್ಲಾ ಮಾಧ್ಯಮ ಉಸ್ತುವಾರಿ ಸತ್ಯೇಂದ್ರ ಪ್ರತಾಪ್ ಗುಪ್ತಾ ನೀಡಿದ ದೂರಿನ ಆಧಾರದ ಮೇಲೆ ಬಿಎನ್ಎಸ್ (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ದ್ವೇಷ ಪ್ರಚೋದನೆ, ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಮತ್ತು ಕಾನೂನುಬಾಹಿರ ಸಭೆ ನಡೆಸಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ವಿವಾದದ ಹಿನ್ನೆಲೆ: ಮೇ 11 ರಂದು ಸಂಸದ ಲೋಧಿ ಮತ್ತು ಅವರ ಬೆಂಬಲಿಗರು ವಿದ್ಯುತ್ ಕಡಿತ ಮತ್ತು ಸ್ಮಾರ್ಟ್ ಮೀಟರ್ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ನಡೆಸಿ, ವಿದ್ಯುತ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಧಿ, ಪ್ರಧಾನಿ ಮೋದಿಯವರನ್ನು “ದೇಶದ್ರೋಹಿ” ಎಂದು ಕರೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಪ್ರಧಾನಿಯವರ ಇತ್ತೀಚಿನ ಬಂಗಾರ ಖರೀದಿ ಮತ್ತು ಪೆಟ್ರೋಲ್ ಉಳಿತಾಯದ ಕರೆಗಳನ್ನು ಅವರು ತೀವ್ರವಾಗಿ ಟೀಕಿಸಿದ್ದರು. ಅವರ ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯೋಗಿ ಆದಿತ್ಯನಾಥ್ ಖಂಡನೆ: ಸಂಸದರ ಈ ಹೇಳಿಕೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದಾರೆ. “ಪ್ರಧಾನಿಯವರನ್ನು ದೇಶದ್ರೋಹಿ ಎಂದು ಕರೆಯುವುದು ಕ್ಷಮಿಸಲಾಗದ ಅಪರಾಧ ಮತ್ತು ಪ್ರಜಾಪ್ರಭುತ್ವದ ಮರ್ಯಾದೆಗೆ ಚ್ಯುತಿ ತರುವಂತದ್ದು. ಇದು ಸಮಾಜವಾದಿ ಪಕ್ಷದ ಕೆಟ್ಟ ರಾಜಕೀಯ ಸಂಸ್ಕೃತಿ ಮತ್ತು ಸೈದ್ಧಾಂತಿಕ ದಿವಾಳಿತನವನ್ನು ಪ್ರತಿಬಿಂಬಿಸುತ್ತದೆ,” ಎಂದು ಅವರು ಕಿಡಿಕಾರಿದ್ದಾರೆ.
