ಈಗ ಕಾಂಗ್ರೆಸ್ಸಿನ ಮುಂದಿರುವ ಅತಿ ದೊಡ್ಡ ಸವಾಲೆಂದರೆ ಅದು ತನ್ನನ್ನು ತಾನೇ ಹೊಸದು ಗೊಳಿಸಿಕೊಳ್ಳುವುದು ಹೇಗೆ ಎಂಬುದು. ಕಳೆದ ಸುಮಾರು ಒಂಬತ್ತು ವರ್ಷಗಳಲ್ಲಿ ಬಿಜೆಪಿಯು ಭಾರತದ ರಾಜಕಾರಣಕ್ಕೆ ಕಾರ್ಪೊರೇಟೀಕರಣ ಮತ್ತು ಹಿಂದುತ್ವದ ಭಾಷೆಯನ್ನು ಕಲಿಸಿದೆ. ಸಾಮಾಜಿಕ ನ್ಯಾಯವನ್ನು ಮರೆಗೆ ತಳ್ಳಿದೆ. ಸಂವಿಧಾನವನ್ನು ಗೌಣಗೊಳಿಸಿದೆ. ಚುನಾಯಿತ ಸರಕಾರವನ್ನು ನಿಯಂತ್ರಿಸುವ ಮಟ್ಟಕ್ಕೆ ಆರ್ ಎಸ್ ಎಸ್ ಬೆಳೆದಿದೆ. ಇಂಥ ಬೆಳವಣಿಗೆಗಳನ್ನು ಕಾಂಗ್ರೆಸ್ ಹೇಗೆ ತಿದ್ದಿ ಭಾರತವನ್ನು ಸರಿ ಹಾದಿಗೆ ಕೊಂಡೊಯ್ಯಬಹುದು ಎಂಬುದು ಬಹಳ ಮುಖ್ಯ ಪ್ರಶ್ನೆ.
1885 ರಷ್ಟು ಹಿಂದೆ ಸ್ಥಾಪಿತವಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್ ಸಿ- ಕೆಲವೊಮ್ಮೆ ಕಾಂಗ್ರೆಸ್ ಪಕ್ಷ ಅಥವಾ ಸರಳವಾಗಿ ಕಾಂಗ್ರೆಸ್) ಸಹಜವಾಗಿ ಅನೇಕ ಏಳುಬೀಳುಗಳನ್ನು ಕಂಡಿದೆ. ಬ್ರಿಟಿಷ್ ವಸಾಹತೀಕರಣದ ವಿರುದ್ಧ ಹುಟ್ಟಿಕೊಂಡ ಮೊದಲ ರಾಷ್ಟ್ರೀಯತಾವಾದಿ ಪಕ್ಷವದು. ದಾದಾಭಾಯಿ ನವರೋಜಿ, ಫಿರೋಜ್ ಶಾ ಮೆಹತಾ, ಗೋಪಾಲಕೃಷ್ಣ ಗೋಖಲೆ , ಮಹಾತ್ಮಾ ಗಾಂಧಿ, ನೆಹರೂ, ಸುಭಾಷ್ ಚಂದ್ರ ಬೋಸ್ , ಇಂದಿರಾ ಗಾಂಧಿ, ಕಾಮರಾಜ್, ಸೋನಿಯಾ ಗಾಂಧಿ, ಮೊದಲಾದವರ ನೇತೃತ್ವದಲ್ಲಿ ಬೆಳೆಯುತ್ತಾ ಬಂದ ಈ ಪಕ್ಷವು ನಿಜವಾದ ಅರ್ಥದಲ್ಲಿ ಜಾತ್ಯತೀತ ಗುಣಗಳನ್ನು ಹೊಂದಿತ್ತು. ಭಾರತೀಯ ಮಧ್ಯಮ ವರ್ಗದ ಉದಾರವಾದೀ ನಿಲುವನ್ನು ಇಟ್ಟುಕೊಂಡದ್ದರಿಂದ ಕಾಂಗ್ರೆಸ್ ಎಲ್ಲರಿಗೂ ಒಂದು ಕಾಲಕ್ಕೆ ಪ್ರಿಯವಾಗಿತ್ತು ಕೂಡಾ. ಕಾಂಗ್ರೆಸ್ ನ ಸಾಮಾಜಿಕ ನೀತಿ ಗಾಂಧೀಜಿಯವರ ಸರ್ವೋದಯದ ತತ್ವವನ್ನು ಆಧರಿಸಿತ್ತು. ಸಮಾಜದ ಎಲ್ಲಾ ವರ್ಗಗಳನ್ನೂ ಮೇಲಕ್ಕೆತ್ತುವುದು, ಆರ್ಥಿಕವಾಗಿ ದುರ್ಬಲ ಮತ್ತು ಸಾಮಾಜಿಕವಾಗಿ ಅಂಚಿನಲ್ಲಿರುವ ಜನರ ಜೀವನವನ್ನು ಸುಧಾರಿಸುವ ಕೆಲಸಗಳನ್ನು ಮಾಡುವುದು, ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವುದು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದು – ಈ ಪಕ್ಷದ ಪ್ರಮುಖ ಆದ್ಯತೆಗಳಾಗಿದ್ದುವು.
ಸ್ವಾತಂತ್ರ್ಯ ಪಡೆದಾನಂತರ ಕಾಂಗ್ರೆಸ್ ಪ್ರಬಲ ರಾಜಕೀಯ ಪಕ್ಷವಾಗಿ ಸುದೀರ್ಘ ಕಾಲ ಆಡಳಿತ ನಡೆಸಿತು. 2015 ರ ಹೊತ್ತಿಗೆ ಕಾಂಗ್ರೆಸ್ ಒಟ್ಟು15 ಸಲ ಸಾರ್ವತ್ರಿಕ ಚುನಾವಣೆಗಳನ್ನು ಗೆದ್ದಿತ್ತು. ಅದರಲ್ಲಿ ಆರು ಸಂದರ್ಭಗಳಲ್ಲಿ ಅದು ಸಂಪೂರ್ಣ ಬಹುಮತವನ್ನು ಗಳಿಸಿತ್ತು ಮತ್ತು ನಾಲ್ಕು ಸಲ ಇತರ ಪಕ್ಷಗಳೊಂದಿಗೆ ಸೇರಿ ಸರಕಾರವನ್ನು ಮುನ್ನಡೆಸಿತ್ತು. ಈ ಸುದೀರ್ಘ ಅವಧಿಯಲ್ಲಿ ಕಾಂಗ್ರೆಸ್ ತನ್ನ ಮೂಲ ಉದ್ದೇಶಗಳಿಂದ ಬಹಳ ಸಲ ದೂರ ಸರಿದಿದೆ. ಅನೇಕ ಸಲ ವಿಭಜನೆಗೊಂಡಿದೆ. ಪಕ್ಷ ಚಿಹ್ನೆಯನ್ನು ಬದಲಾಯಿಸಿಕೊಂಡಿದೆ. 1975 ರ ಹೊತ್ತಿಗೆ ಅದು ಸರ್ವಾಧಿಕಾರೀ ಗುಣಗಳನ್ನು ಹೊಂದಿ ತುರ್ತು ಪರಿಸ್ಥಿತಿಯನ್ನೂ ಘೋಷಣೆ ಮಾಡಿತ್ತು. ಅದರಲ್ಲಿ ಭ್ರಷ್ಟರು, ನೀಚರು, ಕೋಮುವಾದಿಗಳೆಲ್ಲ ಸೇರಿಕೊಂಡಿದ್ದರು. ಹೀಗಾಗಿ ಸುಮಾರು 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ 2014ರ ಚುನಾವಣೆಯಲ್ಲಿ ಹೀನಾಯವಾಗಿ ಸೋತು ತನ್ನ ಸಂಖ್ಯೆಯನ್ನು 44ಕ್ಕೆ ಇಳಿಸಿಕೊಂಡಿತು.
ಇವತ್ತು ಎಷ್ಟೋ ಕಾಂಗ್ರೆಸ್ಸಿಗರಿಗೆ ತಮ್ಮ ಪಕ್ಷದ ಚರಿತ್ರೆಯೇ ತಿಳಿದಿಲ್ಲ. ಸಂವಿಧಾನ ಒಂದು ಗೌರವವಾಗಿ ಗೊತ್ತು, ಓದಿ ತಿಳಿದು ಗೊತ್ತಿಲ್ಲ.2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಆನಂತರ ಗಾಂಧಿ ಮತ್ತು ನೆಹರೂ ಮೇಲೆ ನಡೆಸಿದ ಅಪಪ್ರಚಾರಗಳ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ತಮ್ಮ ನೇತಾರರನ್ನೇ ಸರಿಯಾಗಿ ಸಮರ್ಥಿಸಿಕೊಳ್ಳಲಾಗಲಿಲ್ಲ. ಕಾಂಗ್ರೆಸ್ಸಿಗೆ ಅದರ ಸುದೀರ್ಘ ಇತಿಹಾಸವೇ ಭಾರವಾಗಿದೆ. ಅದರ ಭಾರಕ್ಕೆ ಅದುವೇ ಕುಸಿದು ಹೋಗಿದೆ.
ಈಗ ಕಾಂಗ್ರೆಸ್ಸಿನ ಮುಂದಿರುವ ಅತಿ ದೊಡ್ಡ ಸವಾಲೆಂದರೆ ಅದು ತನ್ನನ್ನು ತಾನೇ ಹೊಸದುಗೊಳಿಸಿಕೊಳ್ಳುವುದು ಹೇಗೆ ಎಂಬುದು. ಕಳೆದ ಸುಮಾರು ಒಂಬತ್ತು ವರ್ಷಗಳಲ್ಲಿ ಬಿಜೆಪಿಯು ಭಾರತದ ರಾಜಕಾರಣಕ್ಕೆ ಕಾರ್ಪೊರೇಟೀಕರಣ ಮತ್ತು ಹಿಂದುತ್ವದ ಭಾಷೆಯನ್ನು ಕಲಿಸಿದೆ. ಸಾಮಾಜಿಕ ನ್ಯಾಯವನ್ನು ಮರೆಗೆ ತಳ್ಳಿದೆ. ಸಂವಿಧಾನವನ್ನು ಗೌಣಗೊಳಿಸಿದೆ. ಸರ್ವಾಧೀಕಾರೀ ಪ್ರವೃತ್ತಿಯನ್ನು, ರಾಜಕೀಯ, ಆಡಳಿತ ಮತ್ತು ಪ್ರಜೆಗಳಲ್ಲಿ ಬೆಳೆಸಿದೆ. ಚುನಾಯಿತ ಸರಕಾರವನ್ನು ನಿಯಂತ್ರಿಸುವ ಮಟ್ಟಕ್ಕೆ ಆರ್ ಎಸ್ ಎಸ್ ಬೆಳೆದಿದೆ. ಇಂಥ ಬೆಳವಣಿಗೆಗಳನ್ನು ಕಾಂಗ್ರೆಸ್ ಹೇಗೆ ತಿದ್ದಿ ಭಾರತವನ್ನು ಸರಿ ಹಾದಿಗೆ ಕೊಂಡೊಯ್ಯಬಹುದು ಎಂಬುದು ಬಹಳ ಮುಖ್ಯ ಪ್ರಶ್ನೆ.
ಕಳೆದ ಶತಮಾನದ ತೊಂಭತ್ತರ ದಶಕದಲ್ಲಿ ಎರಡು ಮುಖ್ಯ ಘಟನೆಗಳು ಭಾರತದಲ್ಲಿ ನಡೆದವು. ಒಂದು, ಜಾಗತೀಕರಣ, ಎರಡನೆಯದು ಬಾಬ್ರಿ ಮಸೀದಿ ಪ್ರಕರಣ. ಈ ಎರಡು ಘಟನೆಗಳಲ್ಲಿ ಮೊದಲನೆಯದನ್ನು ಹುಟ್ಟು ಹಾಕಿದ್ದು ಕಾಂಗ್ರೆಸ್ ಸರಕಾರ. ಗ್ಯಾಟ್ (General Agreement of Trade in Services ಹಾಗೂ ಡಬ್ಲ್ಯುಟಿ ಒ (World Trade Organizations) ಒಪ್ಪಂದದ ಮೇರೆಗೆ ಮನಮೋಹನ ಸಿಂಗರ ಕಾಲದಲ್ಲಿ ಇದು ಆರಂಭವಾಯಿತು. ಎಪ್ರಿಲ್ 1, 2005 ರಂದು ಜ್ಯಾರಿಗೆ ಬಂದ ಈ ಒಪ್ಪಂದದ ಅನುಸಾರವಾಗಿ, 10ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣವನ್ನು Educational Services as sector of industry under GATS ಎಂದು ಘೋಷಿಸಲಾಯಿತು. ಎರಡನೆಯದಾದ, ಅಯೋಧ್ಯಾ ಪ್ರಕರಣದ ಮೂಲಕ ಕೋಮುವಾದವನ್ನು ಬಿಜೆಪಿ ಭಾರತದಾದ್ಯಂತ ಹಬ್ಬಿಸಿತು. ರಾಜಕೀಯವಾಗಿ ಈ ಎರಡೂ ಘಟನೆಗಳ ಪೂರ್ಣ ಲಾಭ ಆದದ್ದು ಬಿಜೆಪಿಗೆ. ಕಾಂಗ್ರೆಸ್ಸಿಗೆ ಆ ಎರಡೂ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೂ ಗೊತ್ತಾಗಲಿಲ್ಲ. ಎಷ್ಟೋ ಕಾಂಗ್ರೆಸ್ಸಿಗರು ಬಿಜೆಪಿಯ ಕೋಮುವಾದೀ ಭಾಷೆಯಲ್ಲಿ ಮಾತಾಡುವುದು ಗುಟ್ಟಾಗಿಯೇನೂ ಉಳಿದಿಲ್ಲ.
ಇವತ್ತು ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಜಗತ್ತನ್ನು ಅಮೂಲಾಗ್ರವಾಗಿ ಬದಲಾಯಿಸಿವೆ. ಮೇಲಿನ ಪರಿಭಾಷೆಗಳು ಮೂಲತ: ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿವೆಯಾದರೂ ಇಂದು ಅವು ನಮ್ಮ ಸಮಾಜವನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡಿವೆ. ಅದೇ ಪ್ರಕಾರ ಅವು ನಮ್ಮ ಶಿಕ್ಷಣ ಕ್ಷೇತ್ರವನ್ನೂ ಅಮೂಲಾಗ್ರವಾಗಿ ಬದಲಾಯಿಸಲು ಒತ್ತಾಯಿಸುತ್ತಿವೆ. ಪರಿಣಾಮವಾಗಿ ಶಿಕ್ಷಣದ ಅಂತಾರಾಷ್ಟ್ರೀಯಕರಣ ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಈ ಪ್ರಕ್ರಿಯೆಯು ಸ್ಥಳೀಯ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವಿಶಿಷ್ಟತೆಗಳನ್ನೆಲ್ಲ ಮರೆಸಿ, ‘ವಾಸನೆ ಬಣ್ಣ ರಹಿತವಾದ’ ಏಕರೂಪದ ವ್ಯವಸ್ಥೆಯೊಂದನ್ನು ಆಗು ಮಾಡುತ್ತಿದೆ. ಇದನ್ನು ಸರಿಪಡಿಸಲು ಕಾಂಗ್ರೆಸ್ ಕೆಲಸ ಮಾಡಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಕಾಯಕಲ್ಪ ಮಾಡಲು ಈ ಕೆಳಗಿನ ಸಲಹೆಗಳನ್ನು ಪೀಪಲ್ ಮೀಡಿಯಾವು ನೀಡಬಯಸುತ್ತಿದೆ-
- ಎಲ್ಲ ಚುನಾಯಿತ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಸಂವಿಧಾನದ ಬಗ್ಗೆ ನುರಿತವರಿಂದ ಕಮ್ಮಟ
- ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ‘ಸರ್ವಜನಾಂಗದ ಶಾಂತಿಯ ತೋಟ’ ಎಂದರೇನು? ಎಂಬ ಕುರಿತು ಕರ್ನಾಟಕದ ಬಹುಭಾಷಿಕ, ಬಹು ಸಾಂಸ್ಕೃತಿಕ ಮತ್ತು ಬಹು ಸಮುದಾಯಿಕ ನೆಲೆಗಳ ಬಗ್ಗೆ ಕಾರ್ಯಾಗಾರದ ಆಯೋಜನೆ.
- 21 ನೇ ಶತಮಾನದಲ್ಲಿ ರಾಷ್ಟ್ರೀಯತೆ ಎಂದರೇನು? ಅದು ಕಾಂಗ್ರೆಸ್ ಹುಟ್ಟಿದ ಕಾಲಕ್ಕಿಂತ ಹೇಗೆ ಭಿನ್ನ ಎಂಬುದನ್ನು ತಿಳಿಸಿ ಹೇಳುವ ಕೆಲಸಗಳು ನಡೆಯಬೇಕು.
- ಸಂಸ್ಕೃತಿಯ ಪರಿಕಲ್ಪನೆ ಇಲ್ಲದೆ ಮಾಡುವ ಕೆಲಸಗಳು ಹೇಗೆ ವಿನಾಶಕಾರಿಯಾಗಿವೆ ( ಉದಾ- ನೇತ್ರಾವತಿ ತಿರುವು ಯೋಜನೆ) ಎಂಬುದನ್ನು ಅರ್ಥಮಾಡಿಕೊಳ್ಳಲು ಸರಕಾರ ಪ್ರಯತ್ನಿಸಬೇಕು.
- ಕೃಷಿ, ಕೈಗಾರಿಕೆ, ಸಾರ್ವಜನಿಕ ಸೇವೆ, ಕಾನೂನು ಮತ್ತು ನ್ಯಾಯ, ನಗರಾಭಿವೃದ್ಧಿ, ಶಿಕ್ಷಣ, ಆರೋಗ್ಯ ಮಹಿಳಾ ಸಬಲೀಕರಣ ಇತ್ಯಾದಿ ಪ್ರತಿ ವಲಯವನ್ನೂ ಬೆಳೆಸುವ ಬಗ್ಗೆ ಕೂಡಲೇ ಒಂದು ಕ್ರಿಯಾ ಯೋಜನೆಯನ್ನು ತಜ್ಞರೊಡಗೂಡಿ ಸಿದ್ಧ ಪಡಿಸುವುದು.
- ಕೊನೆಯದಾಗಿ, ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ನಿಜ. ಆದರೆ ಅದು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪ್ರಾದೇಶಿಕವಾಗುತ್ತಾ ಹೋಗಬೇಕು. ಒಂದೆಡೆ ವರ್ತಮಾನದ ರಾಷ್ಟ್ರೀಯತೆಯ ಒತ್ತಡ, ಇನ್ನೊಂದೆಡೆ ಜನಗಳಿಗೆ ಅಗತ್ಯವಾದ ಪ್ರಾದೇಶಿಕತೆ- ಇವೆರಡರ ನಡುವಣ ಸ್ವಯಂ ವೈರುಧ್ಯಗಳ ನಡುವೆ ಕಾಂಗ್ರೆಸ್ ಕಳೆದುಹೋಗಬಾರದು. ತಮಿಳುನಾಡಿನಲ್ಲಿ ಆಗಿರುವಂತೆ, ಕರ್ನಾಟಕವನ್ನು ಒಂದು ನಿರ್ದಿಷ್ಟ ಪ್ರಾದೇಶಿಕ ಘಟಕವಾಗಿ ಗ್ರಹಿಸಿ ಅದಕ್ಕೊಂದು ರಾಜಕೀಯ ಆಯಾಮವನ್ನು ನೀಡಲು ಕಾಂಗ್ರೆಸ್ ಗೆ ಸಾಧ್ಯವಾಗಬೇಕು.
ಕೊನೆಯದಾಗಿ, ಇಡೀ ದೇಶಕ್ಕೆ ಮಾದರಿ ಅಗಬಹುದಾದ ಕರ್ನಾಟಕ ಕೇಂದ್ರಿತವಾದ ಅಭಿವೃದ್ಧಿಯ ಪರಿಕಲ್ಪನೆಯನ್ನು ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದ ಕಾಂಗ್ರೆಸ್ ನೀಡಲಿ ಎಂದು ಆಶಿಸುತ್ತಾ, ಇಬ್ಬರಿಗೂ ಶುಭಾಶಯಗಳನ್ನು ಸಲ್ಲಿಸುತ್ತಾ ಅದರ ಮುಂದಿನ ಐದು ವರ್ಷಗಳ ಜನಪರ ಆಡಳಿತಕ್ಕೆ ಶುಭ ಹಾರೈಸುತ್ತೇವೆ.
ಸಂಪಾದಕರು
ಇದನ್ನೂ ಓದಿ-ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ ಆರಂಭ