Friday, June 20, 2025

ಸತ್ಯ | ನ್ಯಾಯ |ಧರ್ಮ

ಪ್ರೊ. ಜಿ ಎನ್ ಸಾಯಿಬಾಬಾ ಖುಲಾಸೆ ಆದೇಶವನ್ನು ಅಮಾನತ್ತಿನಲ್ಲಿಟ್ಟ ಸುಪ್ರೀಂಕೋರ್ಟ್

ಹೊಸದಿಲ್ಲಿ: ಡೆಲ್ಲಿ ಯೂನಿವರ್ಸಿಟಿ ಪ್ರಾಧ್ಯಾಪಕರಾಗಿದ್ದ ಜಿ ಎನ್‌ ಸಾಯಿಬಾಬಾ ಮತ್ತು ಇತರ ಐವರನ್ನು ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಗುರುತರ ಆರೋಪಗಳಿಂದ ಖುಲಾಸೆಗೊಳಿಸಿ ನೆನ್ನೆ ಬಾಂಬೆ ಹೈಕೋರ್ಟು ನೀಡಿದ್ದ ತೀರ್ಪನ್ನು ಇಂದು ಸುಪ್ರೀಂ ಕೋರ್ಟು ಅಮಾನತ್ತುಗೊಳಿಸಿದೆ. ಬಾಂಬೆ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ತುರ್ತು ಮೇಲ್ಮನವಿಯನ್ನು ಪರಿಶೀಲಿಸಿದ ನ್ಯಾ. ಎಂ.ಆರ್.ಶಾ ಮತ್ತು ನ್ಯಾ.ಬೇಲಾ ಎಂ.ತ್ರಿವೇದಿಯವರನ್ನೊಳಗೊಂಡ ಪೀಠವು ಈ ಆದೇಶನ್ನು ಹೊರಡಿಸಿದೆ. ʼಬಾಂಬೆ ಹೈಕೋರ್ಟು ತೀರ್ಪು ನೀಡುವಾಗ ಕೇಸಿನ ಮೆರಿಟ್ಟನ್ನು ಪರಿಗಣನೆಗೆ ತೆಗೆದುಕೊಳ್ಳದಿರುವಲ್ಲಿ ತಪ್ಪೆಸಗಿದೆʼ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾ.ಶಾ ಬಾಯ್ಮಾತಿನಲ್ಲಿ ತಿಳಿಸಿದರು.

ಪ್ರೊ.ಜಿ.ಎನ್‌.ಸಾಯಿಬಾಬಾ ತಮ್ಮ ಸಂಗಾತಿಯೊಂದಿಗೆ

ಇದೇ ವೇಳೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಸಲ್ಲಿಸಿರುವ ಅರ್ಜಿಗೆ ಪ್ರೊ ಸಾಯಿಬಾಬಾ ಇನ್ನು ನಾಲ್ಕು ವಾರಗಳಲ್ಲಿ ಉತ್ತರ ನೀಡಬೇಕು ಎಂದೂ ಸುಪ್ರೀಂ ಕೋರ್ಟು ತಿಳಿಸಿದೆ. ಬಾಂಬೆಹೈಕೋರ್ಟು ಇವರನ್ನು ಜೈಲಿನಿಂದ ಬಿಡುಗಡೆಗಳಿಸಬಹುದು ಎಂದು ಹೇಳಿದ್ದಕ್ಕೆ ತಡೆಯನ್ನೂ ಸುಪ್ರೀಂಕೋರ್ಟು ವಿಧಿಸಿದೆ. ಪ್ರೊ. ಸಾಯಿಬಾಬಾ ಅವರು ತಮ್ಮ ಅಂಗವಿಕಲತೆ ಮತ್ತು ಅನಾರೋಗ್ಯ ಕಾರಣಗಳನ್ನು ತಿಳಿಸಿ ತಮ್ಮನ್ನು ಅಂತಿಮ ತೀರ್ಪು ಬರುವ ವರೆಗೆ ಗೃಹಬಂಧನದಲ್ಲಿ ಇರಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟು ತಳ್ಳಿಹಾಕಿದೆ. ಇದಕ್ಕೆ ಮೊದಲು 90% ಅಂಗವಿಕಲತೆ ಹೊಂದಿರುವ ಸಾಯಿಬಾಬಾ ಅವರ ವಕೀಲರಾದ ಹಿರಿಯ ನ್ಯಾಯವಾದಿ ಆರ್‌ ಬಸಂತ್ ಅವರು, ʼಸಾಯಿಬಾಬಾ ಅವರು ವೀಲ್‌ ಚೇರ್‌ ಮೇಲೆಯೇ ಇರಬೇಕಾಗುತ್ತದೆ. ಅವರನ್ನು ಮೂತ್ರ ವಿಸರ್ಜನೆಗೆ ಕೊಂಡೊಯ್ಯಲೂ ಯಾರಾದರೂ ಜೊತೆಗಿರಬೇಕು. ಆದರೆ ಅಂತಹ ಸೌಲಭ್ಯ ಜೈಲಿನಲ್ಲಿ ಇಲ್ಲದಿರುವುದರಿಂದ ಅವರಿಗೆ ಸಮಸ್ಯೆಯಾಗುತ್ತಿದೆ. ಇದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ವೈದ್ಯರು ಹೇಳಿದ್ದಾರೆʼ ಎಂದು ತಿಳಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ʼಅರ್ಬನ್‌ ನಕ್ಸಲʼರಿಂದ ಪದೇ ಪದೇ ಗೃಹಬಂಧನದ ಬೇಡಿಕೆಗಳು ಬರುತ್ತಿವೆ ಎಂದಿದ್ದರು.‌

ಮಾರ್ಚ್‌ 2017ರಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿ ಸೆಷನ್‌ ಕೋರ್ಟು ಪ್ರೊ. ಜಿ ಎನ್‌ ಸಾಯಿಬಾಬಾ ಮತ್ತು ಸಂಗಡಿಗರನ್ನು ಭಯೋತ್ಪಾದನಾ ವಿರೋಧಿ UAPA ಮತ್ತು IPC ಅಡಿಯಲ್ಲಿ ತಪಿತಸ್ಥರು ಎಂದು ತಿಳಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page