Thursday, June 19, 2025

ಸತ್ಯ | ನ್ಯಾಯ |ಧರ್ಮ

ವೇದಗಣಿತ ಕಲಿಕೆ- ಸರ್ಕಾರದ ಆದೇಶ ವಾಪಾಸ್‌: ಹೋರಾಟಕ್ಕೆ ಗೆಲುವು

ಬೆಂಗಳೂರು: ರಾಜ್ಯ ಸರ್ಕಾರವು ಕಳೆದ ಜನವರಿ ತಿಂಗಳಿನಲ್ಲಿ ಎಸ್‌ ಸಿ, ಎಸ್‌ ಟಿ ಅಭಿವೃದ್ಧಿಗೆ ವಿನಿಯೋಗಿಸಬೇಕಾದ ಹಣದಲ್ಲಿ ಕೆಲಸಕ್ಕೆ ಬಾರದ ವೇದಗಣಿತ ಕಲಿಸಲು ಮುಂದಾಗಿ ನೀಡಿದ್ದ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಸಿಇಓಗಳಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂ.ರಾಜ್)‌ ಇವರಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರಲ್ಲಿ ಈ ಹಿಂದೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಶೇ.25ರ ಅನುದಾನದಲ್ಲಿ 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಯೂನಿಫಾರಂ ಸಮೇತ ವೇದಗಣಿತ ತರಬೇತಿ ನೀಡಲು ಹಿರಿಯೂರಿನ ಎವಿಎಂ ಅಕಾಡೆಮಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದ ಸರ್ಕಾರಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ನಿರ್ದೇಶನ ನೀಡಲಾಗಿದೆ.

ರಾಜ್ಯದ ಎಲ್ಲಾ ಸಿಇಒಗಳಿಗೆ ಸರ್ಕಾರ (ಅಪರ) ಮುಖ್ಯ ಕಾರ್ಯದರ್ಶಿಗಳು (ಪಂರಾಜ್)‌ ಕಳಿಸಿರುವ ಸುತ್ತೋಲೆ

ಹಿನ್ನೆಲೆ:

ದಿನಾಂಕ 16-01-22ರಂದು ಸರ್ಕಾರ ಮಾಡಿದ್ದ ಆದೇಶದ ಪ್ರಕಾರ SCSP/TSPಯ ಸುಮಾರು 70 ಕೋಟಿ ಹಣವನ್ನು ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಬಾರದ ವೇದ ಗಣಿತ ಕಲಿಕೆಗೆ ವಿನಿಯೋಗಿಸುವ ಕೆಲಸ ನಡೆದಿತ್ತು. ವೇದಗಣಿತ ಎಂಬುದೇ ಒಂದು ಬೋಗಸ್‌ ಎಂಬುದು ಹಲವಾರು ವಿದ್ವಾಂಸರ ಅಭಿಪ್ರಾಯವಾಗಿರುವಾಗ ಇದನ್ನು ದಲಿತರ ಹಣದಲ್ಲಿ ಕಲಿಸುವ ಜರೂರತ್ತು ಏನು ಎಂಬ ಪ್ರಶ್ನೆಯನ್ನು ಸರ್ಕಾರಕ್ಕೆ ಹಲವಾರು ಪ್ರಜ್ಞಾವಂತರು ಕೇಳಿದ್ದರು. ಅಲ್ಲದೇ ಹ.ರಾ.ಮಹೇಶ್‌, ಡಾ.ಕೆ.ಎನ್.ನಾಗೇಶ್‌, ರುದ್ರು ಪುನೀತ್‌, ಗೋವಿಂದರಾಜು, ದಲಿತ ಬಹುಜನ ವೆಂಕಟೇಶ್‌, ಕೆ ನಾಗೇಂದ್ರಕುಮಾರ್ ಮೊದಲಾದ ಯುವ ಸಾಮಾಜಿಕ ಚಿಂತಕರು‌, ಕರ್ನಾಟಕ ಬೌದ್ಧ ಸಮಾಜದ ಪ್ರಮುಖರು ಹಾಗೂ ವಕೀಲರ ತಂಡವು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ, ಸಮಾಜಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಹಾಗು ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಕಾನೂನಾತ್ಮಕವಾಗಿ ಮನವಿ ಪತ್ರವನ್ನೂ ಸಲ್ಲಿಸಿತ್ತು.

ಈ ಪ್ರತಿಭಟನೆ ಮತ್ತು ಮನವಿಯ ಹಿನ್ನೆಲೆಯಲ್ಲಿ ಇದೀಗ ಸರ್ಕಾರದ ಅಧಿಕಾರಿಗಳು ತಮ್ಮ ಹಿಂದಿನ ಆದೇಶವನ್ನು ಪರಿಶೀಲಿಸಿ, ಆ ಆದೇಶವನ್ನು ಅನೂರ್ಜಿತಗೊಳಿಸಿ, ವೇದಗಣಿತ ಕಲಿಕೆಯ ಕುರಿತ ನಿರ್ದೇಶನವನ್ನು ಹಿಂಪಡೆಯುವ ಆದೇಶವನ್ನು ಹೊರಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಚಿಂತಕ ಹ.ರಾ ಮಹೇಶ್‌ ಅವರು, ‘ವೇದಗಣಿತದ ನೆಪದಲ್ಲಿ ನಾಡಿನ ಸುಮಾರು ಒಂದೂವರೆ ಲಕ್ಷ ಎಸ್‌ ಸಿ, ಎಸ್‌ ಟಿ ವಿದ್ಯಾರ್ಥಿಗಳು ಅನರ್ಥ ವೈದಿಕೀಕರಣಗೊಳ್ಳುವುದನ್ನು ತಪ್ಪಿಸಿದ್ದೇವೆ,  ಇದೊಂದು ಐತಿಹಾಸಿಕ ಗೆಲುವು, ಇದು ಬಾಬಾಸಾಹೇಬರ ಕಾನೂನಿನ ತಾಕತ್ತು’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page