Home ಬೆಂಗಳೂರು ರಾಜ್ಯದ ಆರ್ಥಿಕತೆ ದಿಕ್ಕಾಪಾಲಾಗುತ್ತಿದೆ, ಬಜೆಟ್ ವಿರುದ್ಧ ಹೆಚ್.ಡಿ.ಕೆ ಕೆಂಡಾಮಂಡಲ

ರಾಜ್ಯದ ಆರ್ಥಿಕತೆ ದಿಕ್ಕಾಪಾಲಾಗುತ್ತಿದೆ, ಬಜೆಟ್ ವಿರುದ್ಧ ಹೆಚ್.ಡಿ.ಕೆ ಕೆಂಡಾಮಂಡಲ

ಬೆಂಗಳೂರು : ಕರ್ನಾಟಕದ ಆರ್ಥಿಕ ಪರಿಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂಡಿಸಿದ ಬಜೆಟ್‌ (Karnataka budget 2026) ರಾಜ್ಯವನ್ನು ಸಂಕಷ್ಟದ ದಿಕ್ಕಿಗೆ ತಳ್ಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡ ಅವರು, ಸ್ಲೋಗನ್ ರಾಮಯ್ಯ ಕೇವಲ ದಾಖಲೆ ಮಾಡುವ ಉದ್ದೇಶದಲ್ಲಿ ಸರ್ಕಾರ ರಾಜ್ಯದ ಹಣಕಾಸು ಸ್ಥಿತಿಯನ್ನು ದುರ್ಬಲಗೊಳಿಸಿದೆ ಎಂದು ಟೀಕಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಈಗಾಗಲೇ ಸಿಎಜಿ ವರದಿ ಹಾಗೂ ರಿಸರ್ವ್ ಬ್ಯಾಂಕ್ ಎಚ್ಚರಿಕೆಗಳು ಅಪಾಯ ಸೂಚಿಸುತ್ತಿವೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇದೆ ಮತ್ತು ಕಾಂಗ್ರೆಸ್ ಸರ್ಕಾರದ ಈ ನೀತಿಯನ್ನು ಜನರು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದ ವಿರುದ್ಧ ಅನಗತ್ಯ ಟೀಕೆ ಮಾಡುವುದಕ್ಕಿಂತ ಸಹಕಾರದ ಮನೋಭಾವ ಇರಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. 16ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯದ ತೆರಿಗೆ ಪಾಲು 3.61%ರಿಂದ 4.7%ಗೆ ಏರಿಕೆಯಾಗಿದ್ದು, ಸುಮಾರು ₹11,000 ಕೋಟಿ ಹೆಚ್ಚುವರಿ ಹಣ ರಾಜ್ಯಕ್ಕೆ ಸಿಗಲಿದೆ ಎಂದಿದ್ದಾರೆ.

ಆದ್ರೆ ಪ್ರಸ್ತುತ ರಾಜ್ಯದಲ್ಲಿ ಆದಾಯ ಕೊರತೆ ಮತ್ತು ಸಾಲದ ಏರಿಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ₹4.48 ಲಕ್ಷ ಕೋಟಿ ಬಜೆಟ್ ಹೊಂದಿರುವ ರಾಜ್ಯದ ಒಟ್ಟು ಸಾಲ ಈಗ ₹8.24 ಲಕ್ಷ ಕೋಟಿ ತಲುಪಿದ್ದು, ಮುಂದಿನ ವರ್ಷ ಇದು ₹9 ಲಕ್ಷ ಕೋಟಿಯನ್ನು ಮೀರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಲವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕು; ಆದರೆ ಬಂಡವಾಳ ವೆಚ್ಚ ಹೆಚ್ಚಳವಾಗಿಲ್ಲ ಎಂದ ಕುಮಾರಸ್ವಾಮಿ, ಅನಾವಶ್ಯಕ ಖರ್ಚುಗಳು ಹೆಚ್ಚಾಗಿ, ಸರ್ಕಾರದ ಕ್ರಮಗಳು ರಾಜ್ಯದ ಜನರನ್ನು ಸಾಲದ ಭಾರಕ್ಕೆ ತಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

You cannot copy content of this page

Exit mobile version