Home ರಾಜ್ಯ ಮೈಸೂರು ಹಲವು ನಿರ್ಬಂಧಗಳ ನಡುವೆಯೂ ಯಶಸ್ವೀ ಮಹಿಷ ದಸರಾ: ಸಂಭ್ರಮದಿಂದ ಭಾಗವಹಿಸಿದ ಸಾವಿರಾರು ಜನರು

ಹಲವು ನಿರ್ಬಂಧಗಳ ನಡುವೆಯೂ ಯಶಸ್ವೀ ಮಹಿಷ ದಸರಾ: ಸಂಭ್ರಮದಿಂದ ಭಾಗವಹಿಸಿದ ಸಾವಿರಾರು ಜನರು

0

ಮೈಸೂರು: ಈ ವರ್ಷದ ಮೈಸೂರು ದಸರಾ ಯಶಸ್ವಿಯಾಗಿ ತೆರೆ ಕಂಡಿದ್ದು, ಇಂದಿನ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡು ಸಂಭ್ರಮಿಸಿದರು.

ಇಂದು (ಶುಕ್ರವಾರ) ಮೈಸೂರಿನ ಟೌನ್ ಹಾಲ್ ಆವರಣದಲ್ಲಿ ಮಹಿಷಾ ದಸರಾ ಆಚರಣಾ ಸಮಿತಿ ಮತ್ತು ರಾಜ್ಯಾದೆಲ್ಲೆಡೆಯ ದಲಿತ ಸಂಘಟನೆಗಳ 7,000ಕ್ಕೂ ಹೆಚ್ಚು ಸದಸ್ಯರು ಮತ್ತು ಸಾರ್ವಜನಿಕರು ಬಿಗಿ ಪೊಲೀಸ್ ಭದ್ರತೆಯ ನಡುವೆ ಮಹಿಷಾ ಉತ್ಸವ ಮತ್ತು ಧಮ್ಮ ದೀಕ್ಷಾವನ್ನು ಶಾಂತಿಯುತವಾಗಿ ಆಚರಿಸಿದರು.

ಮಹಿಷಾ ದಸರಾ ಆಚರಣಾ ಸಮಿತಿಯ ಸದಸ್ಯರು, ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ನಾವು ಯಾರನ್ನೋ ಅಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿಲ್ಲ. ಅಂಬೇಡ್ಕರ್ ಮತ್ತು ಬುದ್ಧನ ಅನುಯಾಯಿಗಳಾಗಿರುವ ನಾವು ಶಾಂತಿಯಿಂದ ಮಹಿಷನ ಇತಿಹಾಸ ತಿಳಿಯಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಜ್ಞಾನಪ್ರಕಾಶ ಸ್ವಾಮೀಜಿ, “ದಸರಾ ಉತ್ಸವಕ್ಕೆ ಅಡ್ಡಿಪಡಿಸುವುದು ಅಥವಾ ಇತಿಹಾಸವನ್ನು ತಪ್ಪಾಗಿ ಅರ್ಥೈಸುವುದು ಈ ಕಾರ್ಯಕ್ರಮದ ಉದ್ದೇಶವಲ್ಲ. ಎಲ್ಲರಲ್ಲಿಯೂ ದೇವರಿರುವಾಗ ಮಹಿಷಾನಲ್ಲೂ ದೇವರು ಇದ್ದಾನೆ. ಇಲ್ಲಿ ಮೂಲ ನಿವಾಸಿ ಜನರು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮಹಿಷ ಮಂಡಲದ ಭಾಗವಾಗಿದ್ದಾರೆ” ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆ ತನಕ ಅವಕಾಶ ನೀಡಲಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಕಾರ್ಯಕ್ರಮವು ಒಂದು ಗಂಟೆ ತಡವಾಗಿ, ಎಂದರೆ ಬೆಳಗಿನ 11 ಗಂಟೆ 20 ನಿಮಿಷಕ್ಕೆ ಆರಂಭಗೊಂಡಿತು. ಕಾರ್ಯಕ್ರಮ ಮುಗಿಯುವಾಗ ಗಡಿಯಾರದ ಮುಳ್ಳು ಮಧ್ಯಾಹ್ನದ ಒಂದು ಗಂಟೆಯನ್ನು ದಾಟಿ ಹೋಗಿತ್ತು.

ಜ್ಞಾನಪ್ರಕಾಶ ಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದಲ್ಲಿ ಮಹಿಷಾ ದಸರಾ ಆಚರಣೆಗೆ ಬಂದಿದ್ದ ಸದಸ್ಯರು ಟೌನ್ ಹಾಲ್ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಬೆಳಗ್ಗೆ 11.30ಕ್ಕೆ ಭೀಮ ಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮ ಆರಂಭಗೊಂಡಿದ್ದು, ನಿವೃತ್ತ ಪ್ರಾಧ್ಯಾಪಕರಾದ ಮಹೇಶ್ ಚಂದ್ರಗುರು, ಕೆ ಎಸ್ ಭಗವಾನ್, ಭಂತೆ ಬೋಧಿ ದತ್ತ ಕೃಷ್ಣಮೂರ್ತಿ ಚಾಮರಂ ಸೇರಿದಂತೆ ಎಂಡಿಎಎಸ್ ಸದಸ್ಯರು ವೇದಿಕೆ ಮೇಲಿದ್ದ ಬುದ್ಧ, ಅಂಬೇಡ್ಕರ್ ಮತ್ತು ಮಹಿಷಾ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದರು.

ಕೊಲೆ ಮಾಡಿದವರನ್ನು ನೀವು ಸ್ಮರಿಸುತ್ತೀರಾದರೆ ನಾವು ಕೊಲೆಯಾದವರನ್ನು ಸ್ಮರಿಸಬಾರದೆ? ಎಂದು ಪ್ರಶ್ನಿಸಿದ ಜ್ಞಾನಪ್ರಕಾಶ ಸ್ವಾಮಿಜೀ ನಮಗೆ ಮನುವಾದಿಗಳ ಹಬ್ಬ ಆಚರಣೆಗಳು ಬೇಕಿಲ್ಲ, ನಮಗೆ ಬೇಕಿರುವುದು ಸಂವಿಧಾನ ಎಂದು ಹೇಳಿದರು.

ಸಭೆಯಲ್ಲಿದ್ದ ಜನರೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಅವರು ಭಾರತೀಯ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಭಂತೆ ಬೋಧಿ ದತ್ತ ಅವರು ಧಮ್ಮೋಪದೇಶ ನೀಡಿದರು. ಬಳಿಕ ನೂರಾರು ಜನರು ಧಮ್ಮ ದೀಕ್ಷೆ ಪಡೆದರು.

ತಲಕಾಡು ಚಿಕ್ಕರಂಗೇಗೌಡ, ಬಿಜಾಪುರದ ಎಚ್.ಎಸ್.ಪಾಟೀಲ್, ಭಂತೆ ಬೋಧಿ ದತ್ತ, ಟಿ.ನರಸೀಪುರದ ಬಿ.ಸಿ.ಇಂದ್ರಮ್ಮ, ನಂಜರಾಜ್ ಅರಸ್ ಮುಂತಾದವರು ಮಹಿಷನ ಇತಿಹಾಸವನ್ನು ಸಭೆಗೆ ತಿಳಿಸಿದರು.

ಮಹಿಷ ಮಹಿಳೆಯರನ್ನು ಗೌರವಿಸುತ್ತಿದ್ದ ರಾಜ. ನಾವು ಚಾಮುಂಡಿಯನ್ನು ಅಪಮಾನಿಸಲು ಈ ಕಾರ್ಯಕ್ರಮ ಮಾಡುತ್ತಿಲ್ಲ. ಮೈಸೂರಿಗೆ ಆ ಹೆಸರು ಹೇಗೆ ಬಂತೆನ್ನುವುದಕ್ಕೆ ಬೌದ್ಧ ಸಾಹಿತ್ಯದಲ್ಲಿ ಸಾಕ್ಷಿಗಳಿವೆಯೆಂದು ಚಿಕ್ಕರಂಗೇಗೌಡ ತಿಳಿಸಿದರು.

“ಮಹಿಷಾಸಕ ಭಿಕ್ಕು ಸಂಘವು ಉತ್ತರ ಭಾರತದಿಂದ ಮೈಸೂರು ಪ್ರದೇಶಕ್ಕೆ ಬಂದಿತು. ಮಹಿಷನ ಹೆಸರನ್ನು 278 ಮಹಿಷ (ಪಾಲಿ ಪದ) ಜಾತಕದಲ್ಲಿ ಕಾಣಬಹುದು. ಈ ಕಾರ್ಯಕ್ರಮ ಯಾರ ವಿರುದ್ಧವೂ ಅಲ್ಲ, ಸೌಹಾರ್ದ, ಕರುಣೆಯ ಸಂದೇಶವನ್ನು ಸಾರಲು ಮಾಡಲಾಗುತ್ತಿದೆ” ಎಂದು ಅವರುಪುನರುಚ್ಛರಿಸಿದರು

ಕಾರ್ಯಕ್ರಮದಲ್ಲಿ ಹಲವು ಸಂಘಟನೆಗಳು ಮತ್ತು ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

You cannot copy content of this page

Exit mobile version