Home ಬ್ರೇಕಿಂಗ್ ಸುದ್ದಿ ಅಭಿಮಾನಿಗಳ “ಡಾಲಿಗೆ” ಬೆಂಬಲದ ಮಹಾಪೂರ

ಅಭಿಮಾನಿಗಳ “ಡಾಲಿಗೆ” ಬೆಂಬಲದ ಮಹಾಪೂರ

0

ಡಾಲಿ ಧನಂಜಯ ಅಭಿನಯದ ಹೆಡ್‌ ಬುಶ್‌ ಚಿತ್ರದ ವಿವಾದದ ಹಿನ್ನೆಲೆಯಲ್ಲಿ ಅವರಿಗೆ ಅಭಿಮಾನಿಗಳ ಬೆಂಬಲದ ಮಹಾಪೂರವೇ ಹರಿದುಬರುತ್ತಿದ್ದು. ಸೋಷಿಯಲ್‌ ಮೀಡಿಯಾದ ತುಂಬಾ #westandwithdhananjay ಎನ್ನುವ ಹೆಸರಿನ ಹ್ಯಾಷ್‌ ಟ್ಯಾಗ್‌ ಟ್ರೆಂಡ್‌ ಮಾಡಲಾಗಿದೆ. ಜೊತೆಗೆ “ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ” ಎನ್ನುವ ಡಯಲಾಗ್‌ ಕೂಡಾ ವೈರಲ್‌ ಆಗುತ್ತಿದೆ.

ಚಲನಚಿತ್ರಗಳನ್ನು ಧಾರ್ಮಿಕ ಆಯಾಮದಿಂದ ನೋಡುತ್ತಾ ಚಿತ್ರಗಳಿಗೆ ಬಹಿಷ್ಕಾರ ಹಾಕುವ ಕೆಟ್ಟ ಸಂಪ್ರದಾಯ ಆರಂಭಗೊಂಡಿರುವ ಕುರಿತು ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಹಿದೆಯೂ ಸಾಕಷ್ಟು ಚಿತ್ರಗಳಲ್ಲಿ ಇಂತಹ ದೃಶ್ಯಗಳಿದ್ದರೂ ಆಗ ಆಗಿರದ ವಿವಾದಗಳು ಈಗ ತಲೆಯೆತ್ತುತ್ತಿರುವುದು ನಾವು ಸಾಮಾಜಿಕವಾಗಿ ಹಿಮ್ಮುಖ ಚಲನೆಗೆ ತೊಡಗಿರುವುದರ ಸಂಕೇತವಾಗಿದೆ ಎನ್ನುವುದು ಬಹುತೇಕ ಜನರ ಅಭಿಪ್ರಾಯವಾಗಿದೆ.

ಸೋಷಿಯಲ್‌ ಮೀಡಿಯಾಗಳಲ್ಲಿ ಇಂತಹ ಟ್ರೆಂಡುಗಳು ಸರ್ವೇ ಸಾಮಾನ್ಯವಾಗಿದ್ದರೂ ಇದುವರೆಗೆ ಚಿತ್ರಗಳ ಮೇಲೆ ಅದರ ಪರಿಣಾಮ ಶೂನ್ಯವೆಂದೇ ಹೇಳಬೇಕಾಗುತ್ತದೆ. ಯಾಕೆಂದರೆ ಇಂತಹ ಬಾಯ್ಕಾಟ್‌ ಕಲ್ಚರ್‌ ಎದುರಿಸಿದ ಸಿನೆಮಾಗಳು ಈ ಹಿಂದೆ ಸಾಕಷ್ಟು ಗೆದ್ದಿವೆ. ಕೆಲವು ಚಿತ್ರಗಳು ಸೋತಿವೆಯಾದರೂ ಅದರ ಹಿಂದಿನ ಕಾರಣಗಳು ಬೇರೆಯವೇ ಇವೆ. ವಿಚಾರವಂತಿಕೆಯನ್ನು ಮರೆತ ಸಮಾಜ ಮಾತ್ರವೇ ಹೀಗೆ ಬಹಿಷ್ಕಾರದ ಸಂಸ್ಕೃತಿಯನ್ನು ಪೋಷಿಸಲು ಸಾಧ್ಯ, ಪ್ರಸ್ತುತ ಇನ್ನೂ ನಮ್ಮ ಸಮಾಜ ಆ ಮಟ್ಟಕ್ಕಿಳಿದಿಲ್ಲದಿರುವುದು ಸಮಧಾನಕರ ವಿಷಯ ಎಂದು ಸಿನೆಮಾ ಕರ್ಮಿಯೊಬ್ಬರು ಪೀಪಲ್‌ ಮೀಡಿಯಾಕ್ಕೆ ತಿಳಿಸಿದ್ದಾರೆ.

ಹೆಡ್‌ ಬುಶ್‌ ಚಿತ್ರಕ್ಕೆ ಬಂದಿರುವ ವಿರೋಧವೂ ಆ ಚಿತ್ರಕ್ಕೆ ಬೆಂಬಲವಾಗಲಿದೆ ಎನ್ನುವುದು ಕೆಲವು ತಜ್ಞರ ಅಭಿಪ್ರಾಯವಾಗಿದೆ. ಏಕೆಂದರೆ ಇದರಿಂದ ಚಿತ್ರವು ಚರ್ಚೆಯಾಗಿ ಒಂದಷ್ಟು ಪ್ರಚಾರದಲ್ಲಿರಲು ಸಹಾಯವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಇದು ಕೆಲವು ಚಿತ್ರಗಳ ವಿಷಯದಲ್ಲಿ ನಿಜವಾಗಿದೆ ಕೂಡ.

ಇನ್ನು ಚಿತ್ರ ನಿರ್ದೇಶಕ, ಕವಿ, ಗೀತರಚನೆಕಾರ ಕವಿರಾಜ್‌ ಅವರು ಧನಂಜಯ್‌ ಮತ್ತು ಚಿತ್ರ ತಂಡವನ್ನು ಬೆಂಬಲಿಸಿ ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದು, “ಯಶ್ , ರಿಷಭ್ ಶೆಟ್ಟಿ ಅವರಂತೆ ಡಾಲಿ ಧನಂಜಯ್ ಕೂಡಾ ಇಡೀ ಸಿನಿಮಾ ಉದ್ಯಮಕ್ಕೆ ತಿರುವು ಕೊಡಬಲ್ಲ ತುಡಿತ ಮತ್ತು ಸಾಮರ್ಥ್ಯವಿರುವ ಕ್ರಿಯಾಶೀಲ , ಸೃಜನಶೀಲ ಯುವ ನಟ . ಈಗಾಗಲೇ ಉದ್ಯಮಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡುವ ಹೆಜ್ಜೆಯಿಟ್ಟಿದ್ದಾರೆ. ಇದೀಗ ಪ್ರದರ್ಶನ ಗೊಳ್ಳುತ್ತಿರುವ ಅವರ ಹೆಡ್ ಬುಷ್ ಚಿತ್ರವು ಉತ್ತಮವಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ಒಂದು ಕಲೆ. ನಿರ್ದೇಶಕನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ‌.

ಬಣ , ಪಂಥಗಳ ಆಧಾರದ ದ್ವೇಷದಲ್ಲಿ

ಭಾವನೆಗೆ ಧಕ್ಕೆ ಎಂಬ ಹುಸಿ ಆರೋಪದಡಿ ಸಿನಿಮಾವನ್ನು ವಿರೋಧಿಸುವುದು ತಪ್ಪು. ಜನರಲ್ ಆಗಿ‌, ಗೈಡ್ ಲೈನ್ಸ್ ಅನುಸಾರ ಅಸಮ್ಮತ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸದಂತೆ ತಡೆಯಲು ಸರ್ಕಾರವೇ ನೇಮಿಸಿರುವ ಸೆನ್ಸಾರ್ ಮಂಡಳಿ ಇದೆ.

ವೀರಗಾಸೆ ಕುಣಿತದವರ ಮಾರುವೇಷದಲ್ಲಿ ಬಂದವರನ್ನು ಥಳಿಸುವ ದೃಶ್ಯಗಳ ಕುರಿತು ಧನಂಜಯ್ ಅವರ ವಿವರಣೆಯು ಸಮಂಜಸವಾಗಿದೆ. ಯಾವುದೋ ಪರಭಾಷಾ‌ ಹಾಡಿನ ಟ್ಯೂನಿಗೆ ಹೋಲಿಕೆ ಇರುವ ಕಾರಣಕ್ಕೆ ಕಾಂತಾರ ಚಿತ್ರದ ಹಾಡಿಗೆ ಅಪಪ್ರಚಾರ ಮಾಡುತ್ತಿರುವವರಿಗೂ ಇದೇ ಮಾತು ಅನ್ವಯಿಸುತ್ತೆ . ಆ ಹಾಡುಗಳಲ್ಲಿ ಕೆಲವು ಸಾಮ್ಯತೆ ಇರಬಹುದೇ ಹೊರತು , ಇದು ಅದರ ನಕಲು ಖಂಡಿತಾ ಅಲ್ಲ ಎಂಬುದು ಎರಡು ದಶಕಕ್ಕು ಹೆಚ್ಚು ಕಾಲ ಗೀತರಚನೆಯ ಅನುಭವವಿರುವ ನನ್ನ ಖಚಿತ ನಿಲುವು.

ಧನಂಜಯ್ ಕನ್ನಡ ಚಿತ್ರರಂಗದ ಆಸ್ತಿ. ಧನಂಜಯ್ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಶೀಲ ,ಕಲಾ ಪ್ರೇಮಿ. ಅವರಿಂದ ಯಾವ ಕಲೆಗೂ ಅಪಚಾರ ಆಗಿಲ್ಲ ,ಆಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಮತ್ತು ಹೆಡ್ ಬುಷ್ ನಿರ್ದೇಶಕರ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸದಾ ಬೆಂಬಲಿಸುತ್ತೇನೆ.” ಎಂದು ಹೇಳಿದ್ದಾರೆ.

ಸಾಮಾಜಿಕ ಚಿಂತಕರಾದ ನಾಗೇಗೌಡ ಕೀಲಾರ ಅವರೂ ಈ ಕುರಿತು ಪೋಸ್ಟ್‌ ಮಾಡಿದ್ದು ಒಂದು ಪೋಸ್ಟಿನಲ್ಲಿ “ಹಲ್ಕಾಗಳನ್ನು ನಿಜವಾಗಿಯೂ ಚಾಲೆಂಜ್ ಮಾಡುವ ಸಮಯ ಬಂದಿದೆ.ಇವರುಗಳ ಸಾಂಸ್ಕ್ರತಿಕ ಗೋಂಡಾಗಿರಿಗೆ ತಕ್ಕ ಉತ್ತರ ನೀಡಬೇಕು….” ಎಂದಿದ್ದಾರೆ

ಅವರು ಈ ಕುರಿತು ವ್ಯಂಗ್ಯವಾದ ಆದರೆ ಮೊನಚಾದ ಪೋಸ್ಟರ್‌ ಒಂದನ್ನು ಶೇರ್‌ ಮಾಡಿದ್ದು ಅದರ ಲಿಂಕ್‌ ಕೆಳಗಿದೆ

ಇನ್ನಷ್ಟು ಈ ಕುರಿತು ಪೋಸ್ಟುಗಳನ್ನು ಈ ಹ್ಯಾಶ್‌ ಟ್ಯಾಗ್‌ಗಳ ಮೇಲೆ ಕ್ಲಿಕ್‌ ಮಾಡುವ ಮೂಲಕ ನೋಡಬಹುದು.

#HeadBush

#WeStandWithDhananjaya

ಟ್ವಿಟರ್‌ನಲ್ಲೂ ಈ ವಿಷಯ ಟ್ರೆಂಡ್‌ ಆಗುತ್ತಿದ್ದು ಹಲವರು ಈ ಕುರಿತು ಟ್ವೀಟ್‌ ಮಾಡುತ್ತಿದ್ದಾರೆ.

You cannot copy content of this page

Exit mobile version