ನಟ ಕಮಲ್ ಹಾಸನ್ ಅವರ ಭಾಷಾ ವಿವಾದದ ನಂತರ ಕರ್ನಾಟಕದಲ್ಲಿ ವ್ಯಾಪಕ ವಿರೋಧ ಎದುರಿಸಿದ ನಂತರ ಥಗ್ ಲೈಫ್ ತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸಧ್ಯ ಇತ್ತೀಚಿನ ಬೆಳವಣಿಗೆಯಂತೆ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ಸುಪ್ರೀಂಕೋರ್ಟ್, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ತಿಳಿಸುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು, ರಾಜ್ಯ ಸರ್ಕಾರವು ನಿನ್ನೆ (ಜೂನ್ 18) ಸುಪ್ರೀಂಕೋರ್ಟ್ಗೆ ತನ್ನ ಪ್ರತಿಕ್ರಿಯೆ ತಿಳಿಸಿದೆ. ರಾಜ್ಯ ಸರ್ಕಾರ ನೇರವಾಗಿ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾದ ಮೇಲೆ ನಿಷೇಧ ಹೇರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೆಯೇ ಸಿನಿಮಾವನ್ನು ನಿರ್ಮಾಪಕರು ರಾಜ್ಯದಲ್ಲಿ ಬಿಡುಗಡೆ ಮಾಡಲು ಇಚ್ಛಿಸಿದರೆ, ಅದಕ್ಕೆ ಸೂಕ್ತ ಭದ್ರತೆಯನ್ನು ನೀಡುವುದಾಗಿಯೂ ಸಹ ರಾಜ್ಯ ಸರ್ಕಾರ ಹೇಳಿದೆ.
“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ನಾಗರೀಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಯಾವುದೇ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದಿರುವ ರಾಜ್ಯ ಸರ್ಕಾರ, ಒಂದೊಮ್ಮೆ ‘ಥಗ್ ಲೈಫ್’ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆದರೆ ಸಿನಿಮಾ ಮತ್ತು ಅದರ ತಂಡಕ್ಕೆ ಸೂಕ್ತ ಭದ್ರತೆ ಒದಗಿಸುವುದಾಗಿ ಸ್ಪಷ್ಟಪಡಿಸಿದೆ.
ಈ ನಡುವೆ ವಿತರಕರು ರಾಜ್ಯದಲ್ಲಿ ಥಗ್ ಲೈಫ್ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ನಿನ್ನೆಯಷ್ಟೇ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಾವು ಟಿಕೆಟ್ ಕೊಂಡು ಸಿನಿಮಾ ನೋಡುತ್ತೇವೆ ಎಂಬ ಹೇಳಿಕೆ ಹಲವು ರೀತಿಯಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ.
ಸರ್ಕಾರ ಥಿಯೇಟರ್ ಹೊರಗೆ ಭದ್ರತೆ ಕೊಡಬಹುದು. ಆದರೆ ಸಿನಿಮಾ ಥಿಯೇಟರ್ ಒಳಗೆ ರಕ್ಷಣೆ ನೀಡುವುದು ಹೇಗೆ ಎಂಬ ಅನುಮಾನ ಈಗ ರಕ್ಷಣಾ ವೇದಿಕೆ ಮುಖ್ಯಸ್ಥರ ಹೇಳಿಕೆಯಿಂದ ಹೊಸದಾಗಿ ಹುಟ್ಟಿದೆ.