Friday, June 20, 2025

ಸತ್ಯ | ನ್ಯಾಯ |ಧರ್ಮ

ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ತೆರವು ; ನಿರಂತರ ಹೋರಾಟದ ಫಲ

ನಿರಂತರ ಮನವಿ, ಹೋರಾಟ, ಪ್ರತಿಭಟನೆಯ ಮೂಲಕ ಒತ್ತಾಯದ ನಂತರ ಅಂತೂ ಸುರತ್ಕಲ್ ನ ರಾಷ್ಟ್ರೀಯ ಹೆದ್ದಾರಿ 66ರ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

ವಿಧಾನಸಭಾ ಕಲಾಪದ ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ಉಪನಾಯಕರಾದ ಯು.ಟಿ.ಖಾದರ್ ಈ ಬಗ್ಗೆ ಪ್ರಸ್ತಾಪಿಸಿ ಪ್ರಸ್ತುತ ಈಗಲೂ ಮೂರು ದಿನಗಳಿಂದ ಅಕ್ರಮ ಟೋಲ್ ತೆರವಿಗೆ ಧರಣಿ ಕೂತದ್ದನ್ನು ಉಲ್ಲೇಖಿಸಿ ಪ್ರಶ್ನಿಸಿದ್ದಾರೆ. ನಂತರ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ 60 ಕಿ.ಮೀ ಅಂತರದ ಒಳಗೆ ಇರುವ ಟೋಲ್ ತೆರವಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಹಾಗಾಗಿ ಶೀಘ್ರದಲ್ಲೇ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲಾಗುವುದು ಎಂದು ಉತ್ತರಿಸಿದ್ದಾರೆ.

ಟೋಲ್ ವಿರೋಧಿ ಹೋರಾಟದ ಹಿನ್ನೆಲೆ : 2015 ಡಿಸೆಂಬರ್ ನಲ್ಲಿ ಸುರತ್ಕಲ್ ಟೋಲ್ ನಲ್ಲಿ ಸುಂಕ ಸಂಗ್ರಹ ಶುರುವಾಯಿತು. ಆ ಸಂದರ್ಭದಲ್ಲೇ ಇದಕ್ಕೆ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ವಿರೋಧ ವ್ಯಕ್ತವಾಗಿತ್ತು. ಕಾರಣ ಏನೆಂದರೆ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ಪಟ್ಟಣದ ಮಧ್ಯ ಭಾಗದಲ್ಲಿ ಇರುವುದು; ಇದರಿಂದ ಸಂಚಾರಕ್ಕೆ ಹೆಚ್ಚಿನ ಅಡ್ಡಿ ಉಂಟಾಗುವುದು ಮತ್ತು ಅಲ್ಲಿಂದ ಕೇವಲ 9 ಕಿಲೋಮೀಟರ್ ಅಂತರದಲ್ಲಿ ಹೆಜಮಾಡಿಯಲ್ಲಿ ನವಯುಗ ಟೋಲ್ ಶುರುವಾಗುವುದು ಖಾತ್ರಿ ಇತ್ತು. ಹಾಗಾಗಿ ಕೇವಲ 9 ಕಿಲೋಮೀಟರ್ ಅಂತರದಲ್ಲಿ 2 ಟೋಲ್ ಗೆ ನಾವು ಹಣ ಕೊಡುವುದು ನಾಗರೀಕರಿಗೆ ಹೊರೆ ಎಂಬ ಕಾರಣದಿಂದ ಸ್ಥಳೀಯ ಮಟ್ಟದಲ್ಲಿ ದೊಡ್ಡ ಮಟ್ಟದ ವಿರೋಧ ಹುಟ್ಟಿಕೊಂಡಿತ್ತು.

ನಂತರ ಅಧಿಕಾರಿಗಳು ‘ಹೆಜಮಾಡಿಯಲ್ಲಿ ಇನ್ನು 6 ತಿಂಗಳಲ್ಲಿ ಟೋಲ್ ಸಂಗ್ರಹ ಕೇಂದ್ರ ಶುರುವಾಗುವ ವರೆಗೂ ಸುರತ್ಕಲ್ ಸುಂಕ ಸಂಗ್ರಹ ಕೇಂದ್ರ ಇರಲಿದೆ. ಹೆಜಮಾಡಿಯಲ್ಲಿ ಶುರುವಾದ ನಂತರ ಇದನ್ನು ತೆರವುಗೊಳಿಸಲಾಗುವುದು. ಅಲ್ಲಿಯವರೆಗೂ ತಾಂತ್ರಿಕವಾಗಿ ಸುಂಕ ಸಂಗ್ರಹಕ್ಕೆ ಅನುಮತಿ ಕೊಡಬೇಕೆಂದು’ ಸ್ಥಳೀಯರಲ್ಲಿ ಮನವಿ ಮಾಡಿಕೊಂಡ ಪರಿಣಾಮ ಆಗ ಎದ್ದಿದ್ದ ಪ್ರತಿಭಟನೆ ಕಿಚ್ಚನ್ನು ಸ್ವಲ್ಪ ಮಟ್ಟಿಗೆ ತಣ್ಣಗೆ ಮಾಡಲಾಗಿತ್ತು.

ಆರು ತಿಂಗಳ ನಂತರ 2016 ಏಪ್ರಿಲ್ ನಲ್ಲಿ ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಕೇಂದ್ರ ಪ್ರಾರಂಭವಾಯಿತು. ಆದರೆ ಅದರ ನಂತರವೂ ಸುರತ್ಕಲ್ ಟೋಲ್ ನ್ನು ಹೆದ್ದಾರಿ ಪ್ರಾಧಿಕಾರ ತೆರವುಗೊಳಿಸಿರಲಿಲ್ಲ. ಅಲ್ಲಿಯವರೆಗೆ ಸುಂಕ ಸಂಗ್ರಹದ ವಿರುದ್ಧ ಅಸಂಘಟಿತರಾಗಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರು ಟೋಲ್ ಸಂಗ್ರಹದ ವಿರುದ್ಧ ಹೋರಾಟ ಸಮಿತಿಯನ್ನು ರಚಿಸಿ ಹೋರಾಟಕ್ಕೆ ಇಳಿಯಬೇಕಾಯಿತು. ಪ್ರತಿಭಟನೆ, ಜಾಥಾ, ಪಾದಯಾತ್ರೆ, ನಿರಂತರ ಮನವಿ, ರಸ್ತೆ ತಡೆ…. ಹೀಗೆ ನಾನಾ ರೀತಿಯಲ್ಲಿ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ತೆರವಿಗೆ ಪ್ರತಿಭಟನೆ ನಡೆದರೂ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಜಗ್ಗಲಿಲ್ಲ.

ನಂತರ ಪ್ರತಿಭಟನೆ ಕಾವು ಏರಿದ ಪರಿಣಾಮ ಹಳದಿ ನಂಬರ್ ಪ್ಲೇಟ್ ಹೊರತುಪಡಿಸಿ KA 19 ಸಂಖ್ಯೆಯ (ಮಂಗಳೂರು ರಿಜಿಸ್ಟರೇಷನ್) ಎಲ್ಲಾ ವಾಹನಗಳಿಗೆ ಟೋಲ್ ಸಂಗ್ರಹಕ್ಕೆ ವಿನಾಯಿತಿ ನೀಡಲಾಯಿತು. ಇದು ಸ್ಥಳೀಯ ಹೋರಾಟಗಾರರ ಕಣ್ಣೊರೆಸುವ ತಂತ್ರ ಎಂದು ಅರಿತ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿ ತಮ್ಮ ಪ್ರತಿಭಟನೆಯನ್ನೂ ಹಿಂತೆಗೆದುಕೊಳ್ಳಲಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಸ್ಥಳೀಯ ಮಟ್ಟದಲ್ಲಿ ವಿನಾಯಿತಿ ಮುಂದುವರೆದರೂ ಈ ನಡುವೆ ಸ್ಥಳೀಯ ಗುತ್ತಿಗೆದಾರರು ಮೇಲಿಂದ ಮೇಲೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ, ಅಲ್ಲಿನ ಚೀಫ್ ಡೈರೆಕ್ಟರ್ ಕಡೆಯಿಂದ ಟೋಲ್ ಸಂಗ್ರಹ ಕೇಂದ್ರಕ್ಕೆ ಪೊಲೀಸ್ ರಕ್ಷಣೆ ಮೂಲಕವೂ ಟೋಲ್ ಸಂಗ್ರಹ ಮುಂದುವರೆಸಿತು.

ನಿರಂತರವಾಗಿ ಹೋರಾಟ ಮುಂದುವರೆದರೂ 2019 ಅಂತ್ಯದಲ್ಲಿ ಕೊರೋನಾ ಪ್ರಾರಂಭದ ನಂತರ ಪ್ರತಿಭಟನೆ, ಬೀದಿ ಹೋರಾಟಕ್ಕೆ ಸ್ವಲ್ಪ ತಡೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಸಂಚಾರ ದಟ್ಟಣೆ ಕೂಡಾ ಅಷ್ಟಕ್ಕಷ್ಟೇ ಇದ್ದ ಕಾರಣ ಹೋರಾಟ ಸಮಿತಿ ಮುಂದಿನ ಹೋರಾಟದ ಹಾದಿಯ ಕಾರ್ಯಯೋಜನೆಯನ್ನು ಸಿದ್ದಪಡಿಸಿತ್ತು. ಆ ನಂತರದ ದಿನಗಳಲ್ಲಿ ಕೊರೋನಾ ಸ್ವಲ್ಪ ತಗ್ಗಿದ ದಿನಗಳಲ್ಲಿ ಮತ್ತೆ ನಿರಂತರ ಪ್ರತಿಭಟನೆ, ಜನಾಭಿಪ್ರಾಯ ಸಂಗ್ರಹಣೆ ಕಾರ್ಯ ಕೂಡಾ ನಡೆಯಿತು.

ಹೋರಾಟದ ಇನ್ನೊಂದು ಭಾಗವಾಗಿ ಲಾರಿ ಮತ್ತು ಬಸ್ ಮಾಲಿಕರ ಸಂಘಗಳ ವತಿಯಿಂದ ಜಿಲ್ಲಾಧಿಕಾರಿ ಭೇಟಿ ಮಾಡಿತ್ತು. ಆದರೂ ಟೋಲ್ ಸಂಗ್ರಹ ಕೇಂದ್ರ ಅಕ್ರಮ ಅಲ್ಲ ಎಂದೇ ಸ್ಥಳೀಯ ಆಡಳಿತ ವಾದಿಸಿಕೊಂಡು ತನ್ನ ಸಂಗ್ರಹ ಮುಂದುವರಿಸಿತ್ತು. ಆದರೆ ಯಾವಾಗ ಗುತ್ತಿಗೆ ನವೀಕರಣ ಪ್ರಾರಂಭವಾಯಿತೋ ಆಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಸಧ್ಯ ಕೇಂದ್ರ ಸರ್ಕಾರ ಈ ಸುಂಕ ಸಂಗ್ರಹ ರಾಜಕೀಯವಾಗಿಯೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಅರಿತ ಹಿನ್ನೆಲೆಯಲ್ಲಿ ಈಗ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಅನುಮತಿ ನೀಡಿದೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು, DYFI ರಾಜ್ಯಾಧ್ಯಕ್ಷರು ಹಾಗೂ ಸುರತ್ಕಲ್ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿ ಮುಖ್ಯಸ್ಥರೂ ಆದ ಮುನೀರ್ ಕಾಟಿಪಳ್ಳ ಅವರನ್ನು ಪೀಪಲ್ ಮೀಡಿಯಾ ಸಂಪರ್ಕಿಸಿ ಅಭಿಪ್ರಾಯ ಕೇಳಿದಾಗ “ಸ್ಥಳೀಯ ಜನಪ್ರತಿನಿಧಿಗಳಿಗೆ ಜನಗಳ ಹಿತಾಸಕ್ತಿಗಿಂತ ಕಾರ್ಪೊರೇಟ್ ಕುಳಗಳ, ಗುತ್ತಿಗೆದಾರರ ಹಿತಾಸಕ್ತಿಯೇ ಮುಖ್ಯವಾದಾಗ ಇಷ್ಟು ದೀರ್ಘಕಾಲದ ಹೋರಾಟ ನಡೆಸಲೇಬೇಕಾಗುತ್ತದೆ. ಲೋಕೋಪಯೋಗಿ ಸಚಿವರ ಹೇಳಿಕೆ ಅಥವಾ ಹೆದ್ದಾರಿ ಸಚಿವಾಲಯದ ಹೇಳಿಕೆಯ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ಹಿಂತೆಗೆದುಕೊಳ್ಳಲು ಆಗುವುದಿಲ್ಲ. ಈ ಹಿಂದೆ ಕೂಡಾ ಇದೇ ರೀತಿಯ ಭರವಸೆ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸಕ್ಕೆ ಸರ್ಕಾರ ಮುಂದಾಗಿತ್ತು. ಹಾಗಾಗಿಯೇ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ DISHA ಸಮಿತಿ ಸಭೆಯಲ್ಲೂ ಕೂಡಾ ಜಿಲ್ಲಾಧಿಕಾರಿ, ಸಂಸದರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ನಮ್ಮ ಬೇಡಿಕೆಯನ್ನು ಇಟ್ಟು, ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ದಿನಾಂಕದ ಗಡುವು ಕೇಳಿದ್ದೆವು. ಆಗಲೂ ಸಹ ಅಧಿಕಾರಿಗಳು ಈಗ ಆಗ ಎಂದು ಮೀನಾಮೇಷ ಎಣಿಸಿದ ಹಿನ್ನೆಲೆಯಲ್ಲಿ ಅಕ್ಟೋಬರ್ 18 ನಾವು ನಿಮಗೆ ಕೊಡುವ ಕೊನೆಯ ದಿನಾಂಕ. ಅದರ ಒಳಗೆ ನೀವು ತೆರವುಗೊಳಿಸಿದರೆ ಸಂತೋಷ.. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸಿ, ನಾವೇ ಟೋಲ್ ಸಂಗ್ರಹ ಕೇಂದ್ರ ತೆರವುಗೊಳಿಸುತ್ತೇವೆ ಎಂದು ಗಡುವು ಕೊಡಲಾಗಿದೆ. ಹಾಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಕಾರಿಗಳೇ ಇದನ್ನು ತೆರವುಗೊಳಿಸಿಲ್ಲ ಎಂದರೆ ನಾವು ಹೋರಾಟದ ಇನ್ನೊಂದು ಹೆಜ್ಜೆಗೆ ಮುಂದಡಿ ಇಡಲಾಗುವುದು” ಎಂದು ತಿಳಿಸಿದ್ದಾರೆ.

ಮುಂದುವರಿದು “ಇತ್ತೀಚೆಗೆ ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತಿಭಟನೆ ಸಂದರ್ಭದಲ್ಲೂ ಟೋಲ್ ಸಂಗ್ರಹದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಛೀಮಾರಿ ಹಾಕಿಸಿಕೊಂಡ ನಂತರ ಇದು ರಾಜಕೀಯವಾಗಿ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇದರಿಂದ ತಪ್ಪಿಸಿಕೊಳ್ಳಲು ಆಡಳಿತ ಪಕ್ಷ ಈ ಕೆಲಸಕ್ಕೆ ಮುಂದಾಗಿದೆ. ಇದರಿಂದ ಬಿಜೆಪಿ ತನಗೆ ಕ್ರೆಡಿಟ್ ತಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಸುಂಕ ಸಂಗ್ರಹ ಕೇಂದ್ರ ತೆರವಾದರೆ ಅದರ ಸಂಪೂರ್ಣ ಯಶಸ್ಸು ಸಿಗಬೇಕಿರುವುದು ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿಗೇ ಹೊರತು, ಬಿಜೆಪಿ ಪಕ್ಷಕ್ಕಲ್ಲ. 2018 ರಲ್ಲೂ ಸಹ ಇದೇ ರೀತಿ ಭರವಸೆ ನೀಡಿದ್ದರು. ಹಾಗಾಗಿ ಕೊನೆಯ ದಿನದ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಹೋರಾಟ ಸಮಿತಿಯ ಪರವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಸಧ್ಯ ನಿರಂತರ ಹೋರಾಟದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ತೆರವಿಗೆ ಮುಂದಾಗಿದೆ. ಆದರೆ ಇದೊಂದು ಮೂಗಿಗೆ ತುಪ್ಪ ಸವರುವ ಕೆಲಸವೋ ಅಥವಾ ತೆರವು ಕಾರ್ಯ ನಡೆಯಲಿದೆಯೋ ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page