ಸಾಮಾನ್ಯವಾಗಿ ದೇವರ ವಿಗ್ರಹ, ಹಾವಿನ ಹುತ್ತಕ್ಕೆ ಭಕ್ತಿಯಿಂದ ಹಾಲಿನ ಅಭಿಷೇಕ ಮಾಡುವುದನ್ನು ನೋಡಿದ್ದೇವೆ. ಆದರೆ ಬಳ್ಳಾರಿ ಜಿಲ್ಲೆಯ ಉಜ್ಜಯಿನಿ ಗ್ರಾಮದಲ್ಲಿ ಪುರಾತನ ದೇವಸ್ಥಾನದ ಗರ್ಭಗುಡಿ ಮತ್ತು ಅದರ ಗೋಪುರಕ್ಕೆ ತೈಲದಿಂದ ಅಭಿಷೇಕ ಮಾಡುವ ವಿಶಿಷ್ಟ ಸಂಪ್ರದಾಯ ಆಚರಣೆಯಲ್ಲಿದೆ. ಈ ಬಾರಿಯ ತೈಲಾಭಿಷೇಕ ಇಂದು (ಏಪ್ರಿಲ್ 26) ನಡೆಯಿತು. ಈ ವಿಶಿಷ್ಟ ಸಂಪ್ರದಾಯದ ಬಗ್ಗೆ ಬರೆದಿದ್ದಾರೆ ಉಜ್ಜಯಿನಿಯ ರಾಜ ಮುಗಲಳ್ಳಿ.
ಬಳ್ಳಾರಿಯಿಂದ ಹೊಸಪೇಟೆಯನ್ನು ವಿಭಜಿಸಿ, ವಿಜಯನಗರ ಜಿಲ್ಲೆ ಎಂದು ನಾಮಕರಣ ಮಾಡಲಾಯಿತು. ವಿಜಯನಗರ ಜಿಲ್ಲೆ ಪ್ರಸಿದ್ದಿ ಪಡೆದಿರುವುದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿದ್ದ ವಜ್ರ, ವೈಢೂರ್ಯ, ಮುತ್ತು, ರತ್ನಗಳ ವೈಭವದಿಂದ ಮೆರೆದ ಹಂಪಿಯಿಂದ. ಮತ್ತೊಂದು ಉಜ್ಜಯಿನಿ ಪೀಠವಿರುವ ಕಾರಣಕ್ಕೆ. ಅಖಂಡ ಭಾರತದಲ್ಲಿ ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕಾಶಿ, ಕೇದಾರ ಎಂಬ ಒಟ್ಟು ಐದು ಪಂಚಪೀಠಗಳಿವೆ. ಕರ್ನಾಟಕದಲ್ಲಿ ಎರಡು ಪೀಠಗಳನ್ನು ಕಾಣಬಹುದು. ಒಂದು ಚಿಕ್ಕಮಗಳೂರು ಜಿಲ್ಲೆಯ ರಂಭಾಪುರಿ ಪೀಠ (ಬಾಳೆ ಹೊನ್ನೂರು). ಇನ್ನೊಂದು ವಿಜಯನಗರ ಜಿಲ್ಲೆಯ ಉಜ್ಜಯಿನಿ ಪೀಠ. “ದಾರುಕಾಚಾರ್ಯರು” ವೀರಶೈವ ಧರ್ಮದ ರಕ್ಷಣೆಗಾಗಿ “ಉಜ್ಜಯಿನಿ ಪೀಠ” ವನ್ನು ಸ್ಥಾಪನೆ ಮಾಡುತ್ತಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದು ಶ್ರೀ ಪೀಠದ ಸಂದೇಶವಾಗಿದೆ.
ಸಾಮಾನ್ಯವಾಗಿ ದೇವಾಲಯಗಳಲ್ಲಿ ದೇವರ ಮೂರ್ತಿಗಳಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಎಳನೀರಿನ ಅಭಿಷೇಕ, ತುಪ್ಪದ ಅಭಿಷೇಕ ಸೇರಿದಂತೆ ವಿವಿಧ ರೀತಿಯಲ್ಲಿ ಅಭಿಷೇಕಗಳನ್ನು ಮಾಡುವುದನ್ನು ನೋಡಬಹುದು. ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ಮೂರ್ತಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭೀಷೇಕ ಮಾಡುವುದನ್ನು ನೋಡಿದ್ದೇವೆ. ಆದರೆ ದೇವಸ್ಥಾನದ ಇಡೀ ಶಿಖರಕ್ಕೆ ತೈಲಾಭಿಷೇಕ ಮಾಡುವುದು “ಉಜ್ಜಯಿನಿ ಪೀಠ”ದಲ್ಲಿ ಮಾತ್ರ! ಇಂತಹ ಸಂಪ್ರದಾಯ ಜಗತ್ತಿನ ಎಲ್ಲಿಯೂ ಕಂಡುಬರುವುದಿಲ್ಲ ಎಂಬ ಕೂಗು ಸಹ ಇದೆ. ಪ್ರತಿ ವರ್ಷ ವೈಶಾಖ ಷಷ್ಠಿಯಂದು ಉಜ್ಜಯಿನಿಯ ಆರಾಧ್ಯ ದೈವ “ಶ್ರೀ ಮರುಳಸಿದ್ದೇಶ್ವರನ ರಥೋತ್ಸವ” ಜರಗುತ್ತದೆ. ಆನಂತರದ ದಿನ ಗರ್ಭಗುಡಿಯ ಶಿಖರಕ್ಕೆ ತೈಲಾಭಿಷೇಕ ನಡೆಯುತ್ತದೆ. ಗರ್ಭಗುಡಿಯ ಮೇಲಿರುವ ಶಿಖರವು ಸುಂದರ ಬಳಪದ ಕಲ್ಲಿನಿಂದ ಕೆತ್ತಲ್ಪಟ್ಟಿದೆ. ಶಿಲ್ಪಿ ಜಕಣಾಚಾರಿಯ ಕೈಚಳಕ ನೋಡುಗರನ್ನ ಆಕರ್ಷಿಸುತ್ತದೆ. ಇಲ್ಲಿ ನಡೆಯುವ ತೈಲಾಭಿಷೇಕಕ್ಕೂ ಹಲವಾರು ಕಾರಣಗಳಿವೆ.
ಶನಿಕಾಟಕ್ಕೆ ತೈಲಾಭಿಷೇಕ

ರಾಜ ವಿಕ್ರಮಾದಿತ್ಯ ತನ್ನ ಶನಿದೋಷದಿಂದ ರಾಜಭ್ರಷ್ಟನಾಗಿ ಸಂಕಷ್ಟಗಳನ್ನು ಎದುರಿಸುತ್ತಿರುತ್ತಾನೆ. ಮಧ್ಯಪ್ರದೇಶದ ಉಜ್ಜಯಿನಿ ಪೀಠವನ್ನು ಅಲಂಕರಿಸಿದ್ದ ಮರುಳಸಿದ್ದೇಶ್ವರ ಜಗದ್ಗುರುಗಳ ಬಳಿಬಂದ ರಾಜ ವಿಕ್ರಮಾದಿತ್ಯನ ಧರ್ಮಪತ್ನಿ ಅತನ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥಿಸುತ್ತಾಳೆ. ಪೂಜ್ಯ ಸ್ವಾಮಿಗಳು ತಡಮಾಡದೆ ವಿಕ್ರಮಾದಿತ್ಯನ ಹೆಸರಿನಲ್ಲಿ ಶಿವ ಸಂಕಲ್ಪವನ್ನು ಮಾಡಿ, ತಮ್ಮ ಇಷ್ಟ ಲಿಂಗಕ್ಕೆ ತೈಲಾಭಿಷೇಕವನ್ನು ಮಾಡುತ್ತಾರೆ. ಕೂಡಲೇ ಸೆಡೆಸಾತ್ ಹೆಗಲಿಗೇರಿದ್ದ ಶನೀಶ್ವರ ಸ್ವಾಮಿಯು ಸಂತುಷ್ಟನಾಗಿ ವಿಕ್ರಮಾದಿತ್ಯನಿಗೆ ಒದಗಿದ್ದ ಸಂಕಷ್ಟವನ್ನು ಪಾರು ಮಾಡುತ್ತಾನೆ. ಆನಂತರ ಸುಖಾಂತ್ಯದಿಂದ ರಾಜ್ಯವನ್ನು ಸೇರಿದ ರಾಜನು ಗುರುಗಳ ಬಳಿ ಬಂದು ಶರಣಾಗುತ್ತಾನೆ. ಆಗ ಪೂಜ್ಯ ಸ್ವಾಮಿಗಳು ಆದೇಶ ಮಾಡುತ್ತಾರೆ- ಕೇವಲ ನಿನ್ನ ಸಂಕಷ್ಟ ನಿವಾರಣೆಗೆ ಆದರೆ ಸಾಲದು, ರಾಜ್ಯದ ಜನತೆಯ ಹಿತಕ್ಕಾಗಿ ಪ್ರತಿ ವರ್ಷ ಮರುಳಸಿದ್ದೇಶ್ವರನ ಶಿಖರಕ್ಕೆ ತೈಲಾಭಿಷೇಕ ನಡೆಸು ಎನ್ನುತ್ತಾರೆ. ಗುರುಗಳ ಆಜ್ಞೆಯಂತೆ ರಾಜನು ತೈಲಾಭಿಷೇಕ ಮಾಡಿ ಪುನೀತನಾಗುತ್ತಾನೆ. ಅಂದಿನಿಂದ ಅವಂತಿಕ ರಾಜ್ಯದ ಉಜ್ಜಯಿನಿಯು ಸುರಕ್ಷಿತವಾಗುತ್ತದೆ. ಅಂದಿನ ವಿಕ್ರಮ ಶಕೆಯಿಂದ ಆರಂಭವಾಗಿ ಇಲ್ಲಿಯವರೆಗೂ ಕರ್ನಾಟಕದ ಉಜ್ಜಯಿನಿಯಲ್ಲಿ ಪ್ರತಿವರ್ಷ ವೈಶಾಖ ಷಷ್ಟಿಯಂದು ಶಿಖರಕ್ಕೆ ತೈಲಾಭಿಷೇಕ ಜರುಗುತ್ತಾ ಬಂದಿದೆ ಎಂಬ ಐತಿಹ್ಯವಿದೆ.
ಇನ್ನೊಂದೆಡೆ, ಜರಿಮಲೆಯ ಪಾಳೇಗಾರರು ಬೇಟೆ ಅರಸುತ್ತ ಹೊರಟಿರುತ್ತಾರೆ. ಈಗಿನ ಉಜ್ಜಯಿನಿಯ ದೇವಾಲಯವು ಅಡವಿಯಾಗಿತ್ತು. ಪೊದೆಯೊಂದರಲ್ಲಿ ಅಡಗಿದ್ದ ಬಿಳಿ ಹಂದಿಯನ್ನು ಬೇಟೆಯಾಡಲು ಬಾಣ ಹೂಡಿದರು. ಆ ಬಾಣ ಅದೇ ಪೊದೆಯೊಳಗಿದ್ದ ಋಷಿವರ್ಯರಿಗೆ ನಾಟಿತು. ಆ ಋಷಿವರ್ಯರೇ ಮರುಳರಾದ್ಯರು. ಪಾಳೇಗಾರ ಅವರ ತಲೆಗೆ ಎಣ್ಣೆ ಹಚ್ಚಿ ತಂಪು ಮಾಡಿದರು. ಅಂದಿನಿಂದ ಧಡಿಯ ಎಣ್ಣೆ ಕಳಿಸುತ್ತಿದ್ದಾರೆ. (ಸದ್ಧರ್ಮ ಶ್ರೀ ಪೀಠ ದರ್ಶನ,- ಡಾ. ರೇವಯ್ಯ ಒಡೆಯರ್ ಕೃತಿಯಿಂದ) ಮತ್ತೊಂದು ಐತಿಹ್ಯ ತಿಳಿದು ಬರುತ್ತದೆ.
ತೈಲಾಭಿಷೇಕದ ಪ್ರಕ್ರಿಯೆ
ಈಗಲೂ ಕೂಡ ಪ್ರತಿವರ್ಷ ಜರಿಮಲೆ ಪಾಳೇಗಾರರ ಮನೆತನದವರು ಪಾದಯಾತ್ರೆಯ ಮೂಲಕ ಎಣ್ಣೆಯನ್ನು ತರುವ ಸಂಪ್ರದಾಯವಿದೆ. ತೈಲಾಭಿಷೇಕದ ದಿನವೇ ಮಧ್ಯಾಹ್ನದ ಹೊತ್ತಿಗೆ ಜರಿಮಲೆ ಪಾಳೇಗಾರರ ಮನೆತನದವರು ಎಣ್ಣೆಯ ಕುಂಭವನ್ನು ಹೊತ್ತು, ಊರಿನ ಪದಾಗಟ್ಟೆಯ ಹತ್ತಿರ (ಊರಿನ ಹೊರಗೆ) ಬಂದು ತಲುಪುತ್ತಾರೆ. ಆದರೆ ಜರಿಮಲೆಯವರು ಊರಿನ ಒಳಗೆ ಬರುವುದಿಲ್ಲ. ಶಿಖರ ತೈಲಾಭಿಷೇಕವನ್ನು ನೋಡುವುದಿಲ್ಲ. ಆನಂತರ ಊರಿನ ಪೂಜಾರಿ ಬಳಗದವರು ಎಣ್ಣೆಯ ಕುಂಭವನ್ನು ಹೊತ್ತು ಅದ್ದೂರಿ ಮೆರವಣಿಗೆಯ ಮೂಲಕ ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಪರಂಪರಾಗತವಾಗಿ ನಡೆದುಕೊಂಡು ಬಂದ ಹಾಗೆ ಜರಿಮಲೆ ಪಾಳೇಗಾರರು ತಂದ ತೈಲವನ್ನು ಶಿಖರಕ್ಕೆ ಧಾರೆಯೆರೆಯುತ್ತಾರೆ. ಶಿಖರದ ತುತ್ತ ತುದಿಯಲ್ಲಿ ನಾಲ್ಕರಿಂದ ಐದು ಜನ, ಒಟ್ಟಾರೆ ಶಿಖರದಲ್ಲಿ 20 ಮಂದಿ ಪೂಜಾರಿ ಬಳಗದವರು ಭಾಗವಹಿಸುತ್ತಾರೆ. ಕೆಳಗಡೆಯಿಂದ ಸಾಲಾಗಿ ಒಬ್ಬರಿಗೊಬ್ಬರು, ಶಿಖರದ ಮೇಲಿರುವ ನಾಲ್ವರಿಗೆ ಎಣ್ಣೆಯ ಡಬ್ಬಿಗಳನ್ನು ಸಾಗಿಸುತ್ತಾರೆ. ಸುಮಾರು 300 ರಿಂದ 400 ಡಬ್ಬಿಗಳಷ್ಟು ಎಣ್ಣೆಯನ್ನು ನೀರಿನಂತೆ ಸಂಪೂರ್ಣ ಶಿಖರಕ್ಕೆ ಧಾರೆಯೆರೆಯುತ್ತಾರೆ. ಶಿಖರ ಸಂಪೂರ್ಣ ತೊಯ್ದು ಹೋಗುತ್ತದೆ.
ಈ ಸುಂದರ ದೃಶ್ಯ ನೋಡುಗರ ಕಣ್ಮನವನ್ನು ಸೆಳೆಯುತ್ತದೆ. ಇದನ್ನು ನೋಡಲು ನಾಡಿನ, ಹೊರ ನಾಡಿನ ವಿವಿಧ ಭಾಗಗಳಿಂದ ಸುಮಾರು ಮೂರು ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಹರಿದು ಬರುತ್ತದೆ. ಪ್ರತಿವರ್ಷ ತೈಲಾಭಿಷೇಕಾದ ಸಂದರ್ಭದಲ್ಲಿ ಮಳೆ ಬರುವುದು ವಿಶೇಷವಾಗಿದೆ. ಇದು ವರ್ಷದ ಮೊದಲ ಹಬ್ಬವಾಗಿದ್ದು ಕ್ಷೇತ್ರದಲ್ಲಿ ಮಳೆ, ಬೆಳೆ, ರೈತರಿಗೆ ಉತ್ತಮ ಫಲ ನೀಡುವ ಸಂದೇಶವೆಂಬುದು ಇಲ್ಲಿನ ಜನರ ನಂಬಿಕೆ. ಪ್ರಸ್ತುತ “ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಶ್ರೀಪೀಠ, ಉಜ್ಜಯಿನಿ” ಇವರ ದಿವ್ಯ ಸಾನಿಧ್ಯದಲ್ಲಿ (ಇಂದು) ಇದೇ ಏಪ್ರಿಲ್ 26 ಬುಧವಾರ (ವೈಶಾಖ ಷಷ್ಠಿ) ದಂದು ಶಿಖರ ತೈಲಾಭಿಷೇಕ ಜರುಗುತ್ತದೆ.
ರಾಜ ಮುಗಲಳ್ಳಿ.
ಉಜ್ಜಯಿನಿ, ವಿಜಯನಗರ ಜಿಲ್ಲೆ.
ಇದನ್ನೂ ಓದಿ-http://ಕರ್ನಾಟಕದ ಗ್ರಾಮಜಗತ್ತಿನ ಬಹುರೂಪಿ ದೀಪಾವಳಿಗಳು https://peepalmedia.com/dipavali-as-agricultral-festival-by-arun-joladakudligi/