ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ದಿನದಂದು ರಾಜ್ಯದ ವಿವಿಧ ಕಡೆಗಳಲ್ಲಿ ಇರುವ 81 ಕೈದಿಗಳ ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಇಂದು ರಾಜ್ಯಪಾಲರು ಸಹಿ ಹಾಕಿದ್ದಾರೆ. ಸನ್ನಡತೆ ಹಿನ್ನೆಲೆಯಲ್ಲಿ ಈ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಸನ್ನಡತೆಯ ಹಿನ್ನೆಲೆಯಲ್ಲಿ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಅದರಂತೆ ಈ ಬಾರಿ 81 ಮಂದಿ ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರಕಿದೆ.
ತಮ್ಮ ಶಿಕ್ಷೆಯ ಪ್ರಮಾಣದಲ್ಲಿ ಶೇ 50 ರಷ್ಟು ಪೂರ್ಣಗೊಳಿಸಿರುವ, ಶಿಕ್ಷೆಯ ಅವಧಿ ಪೂರ್ಣಗೊಳಿಸಿದ್ದರೂ ದಂಡ ಪಾವತಿಸಲಾಗದೇ ಇನ್ನೂ ಜೈಲಿನಲ್ಲೇ ಇರುವ ಕೈದಿಗಳು, ನಿರಂತರ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಕೈದಿಗಳು,, 18 ರಿಂದ 21 ವರ್ಷಗಳ ಒಳಗಿನ ಕೈದಿಗಳು, ದೈಹಿಕ ಅಂಗವಿಕಲ ಕೈದಿಗಳನ್ನು ಅವರ ಸನ್ನಡತೆಯನ್ನು ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ ಪ್ರಮುಖವಾಗಿ ಗೃಹ ಇಲಾಖೆ, ಕಾನೂನು ಇಲಾಖೆ ಅಧಿಕಾರಿಗಳು ಮತ್ತು ಜೈಲಿನ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುತ್ತದೆ. ನಂತರ ಬಿಡುಗಡೆ ಹೊಂದಬಹುದಾದ ಕೈದಿಗಳ ಆಯ್ಕೆ ಮಾಡಲಾಗುತ್ತದೆ. ನಂತರ ಸಂಪುಟದಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳ ಮೂಲಕ ಆದೇಶ ಹೊರಡಿಸಲಾಗುತ್ತದೆ.
ಇಡೀ ರಾಜ್ಯದಲ್ಲಿ ಒಟ್ಟು ಸುಮಾರು 15,000 ಕ್ಕೂ ಹೆಚ್ಚು ಕೈದಿಗಳು ಕೇಂದ್ರ, ಜಿಲ್ಲಾ, ಮುಕ್ತ ಮತ್ತು ತಾಲ್ಲೂಕು ಮಟ್ಟದ ಜೈಲುಗಳಲ್ಲಿ ಬಂಧಿಗಳಾಗಿದ್ದಾರೆ. ಅದರಲ್ಲಿ 10,000 ಕೈದಿಗಳು ವಿಚಾರಣಾಧೀನ ಕೈದಿಗಳಾಗಿದ್ದಾರೆ. ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯ ದಿನದ 75 ನೇ ವರ್ಷದ ಅಮೃತ ಮಹೋತ್ಸವಕ್ಕೆ ಈ ಕೈದಿಗಳು ಬಿಡುಗಡೆ ಆಗುತ್ತಿದ್ದಾರೆ.