ತಮಿಳುನಾಡಿನಲ್ಲಿ ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ತಲೆಬುರುಡೆ ಇಟ್ಟು ವಿಶಿಷ್ಟವಾಗಿ ತಮಿಳುನಾಡು ರೈತರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳು ಕೊಟ್ಟ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬೆಳೆಗೆ ಉತ್ತಮ ಬೆಲೆ ನಿಗದಿ, ನದಿ ಜೋಡಣೆ ವಿಚಾರ ಕುರಿತು ನಡೆಸಿದ ಪ್ರತಿಭಟನೆಯಲ್ಲಿ ತಮಿಳುನಾಡಿನ 200 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೃಷಿಯಲ್ಲಿ ಆದಾಯ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ ಬೆಳೆಗಳ ಬೆಲೆ ಏರಿಕೆ ಮಾಡಿಲ್ಲ ಎಂದು ರೈತರು ಪ್ರಶ್ನಿಸಿದರು. 2019ರಲ್ಲಿ ಪ್ರಧಾನಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ, ನದಿಗಳನ್ನು ಪರಸ್ಪರ ಜೋಡಿಸುವುದಾಗಿ ಕೂಡ ಮಾತುಕೊಟ್ಟಿದ್ದರು ಅನ್ನು ಕೂಡ ಮಾಡಿಲ್ಲ ಎಂದು ನ್ಯಾಷನಲ್ ಸೌತ್ ಇಂಡಿಯಾ ರಿವರ್ ಇಂಟರ್ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಶನ್ನ ಅಧ್ಯಕ್ಷ ಅಯ್ಯಕಣ್ಣು ಹೇಳಿದ್ದಾರೆ.
ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ಅಥವಾ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಸಂಬಂಧವೂ ಹೊಂದಿಲ್ಲ. ನಮ್ಮ ಬೇಡಿಕೆ ಪ್ರಾಮಾಣಿಕವಾದದ್ದು ಹಾಗೂ ಅವಶ್ಯಕ ಕೂಡ. ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದೆ ಇದ್ದರೆ, ಸೀದಾ ವಾರಣಾಸಿಗೆ ತೆರಳಿ ಮೋದಿಯವರ ವಿರುದ್ಧ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ.