Monday, June 17, 2024

ಸತ್ಯ | ನ್ಯಾಯ |ಧರ್ಮ

ಬ್ರಾಹ್ಮಣಶಾಹಿ ಯಜಮಾನ್ಯದ ಸರ್ವಾಧಿಕಾರ ಸ್ಥಾಪನೆಯೇ ಆರೆಸ್ಸೆಸ್ ಗುರಿ – ಬೊಗಸೆಗೆ ದಕ್ಕಿದ್ದು… 19

ದೇಶದಲ್ಲಿ ಆರೆಸ್ಸೆಸ್ಸಿನ, ಬ್ರಾಹ್ಮಣ್ಯದ ಕುಟಿಲ ಸಂಚುಗಳನ್ನು ವಿಫಲಗೊಳಿಸಬೇಕಾದರೆ, ಸಂವಿಧಾನವನ್ನು, ಕಾನೂನಿನ ಆಡಳಿತವನ್ನು, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಉಳಿಸಬೇಕಾದರೆ ಇರುವ ಒಂದೇ ಒಂದು ದಾರಿಯೆಂದರೆ, ಮುಂದಿನ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಕೆಳಗಿಳಿಸುವುದು

ಹಿಟ್ಲರ್‌ನ ನಾಝಿ ಪಕ್ಷದ ಸಂಘಟನೆಯ ಮಾದರಿಯಲ್ಲಿಯೇ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ, ಆರೆಸ್ಸೆಸ್- ಹಿಟ್ಲರನಂತೆ ಒಂದೊಂದು ಕೆಲಸಕ್ಕೂ ಒಂದೊಂದು ಅಡಿಯಾಳು ಸಂಘಟನೆಯನ್ನು ಹೊಂದಿದೆ. ಕೆಲವು ಪರಮ ಭ್ರಷ್ಟ ಅತಿಶ್ರೀಮಂತರು ಅದರ ಬೆನ್ನಿಗಿದ್ದರೆ, ಆದು ಅವರ ಬೆನ್ನಿಗಿದೆ. ಜೊತೆಗೆ ತನ್ನದು ಸಾಂಸ್ಕೃತಿಕ, ಸಮಾಜಸೇವಾ ಸಂಘಟನೆ ಎಂದು ಹೇಳುತ್ತಾ ಬಂದಿರುವ ಅದು, ಆಳುವ ಬಿಜೆಪಿಯನ್ನೇ ನಿಯಂತ್ರಿಸುತ್ತಿದೆ. ಇದೀಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಆರೆಸ್ಸೆಸ್ಸಿನ ಸುಪ್ತ ಕನಸುಗಳನ್ನು ಸಾಕಾರಗೊಳಿಸುತ್ತಿದೆ. ಆ ಸುಪ್ತ ಕನಸುಗಳಾದರೂ ಏನು?

ಈ ಕನಸುಗಳೆಂದರೆ, ಬ್ರಾಹ್ಮಣ್ಯದ ಪ್ರಾಬಲ್ಯ ಮತ್ತು ನೇತೃತ್ವದ ವರ್ಣಾಶ್ರಮವನ್ನು ಗಟ್ಟಿಗೊಳಿಸುವುದು, ದೇಶ ಮತ್ತು ಸಮಾಜದ ನಿಯಂತ್ರಣ, ಸಂವಿಧಾನದ ಬದಲು ಮನುವಾದವನ್ನು ತರುವುದು, ನ್ಯಾಯಾಂಗವನ್ನು ನಿಯಂತ್ರಿಸುವುದು, ಶೂದ್ರವರ್ಗವನ್ನು ಸೇವಕರನ್ನಾಗಿ ಮಾಡುವುದು, ಸನಾತನ ಮೌಲ್ಯ ಆಥವಾ ಕಂದಾಚಾರಗಳನ್ನು ಮರುಸ್ಥಾಪಿಸುವುದು; ದಲಿತರು ಮುಸ್ಲಿಮರು, ಕ್ರೈಸ್ತರನ್ನು ಸಾಮಾಜಿಕವಾಗಿ ಅಡಿಗೆ ತಳ್ಳುವುದು ಅಥವಾ ಬದಿಗೆ ಸರಿಸುವುದು ಮತ್ತು ಅಂತಿಮವಾಗಿ ಹಿಂದೂತ್ವದ, ಆಂದರೆ ಬ್ರಾಹ್ಮಣಶಾಹಿ ನಿಯಂತ್ರಣದ ಸರ್ವಾಧಿಕಾರ ಸ್ಥಾಪಿಸುವುದು. ಮೋದಿ ಸರಕಾರ ವಿಧೇಯ ಸೇವಕನಂತೆ ಈ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆ ಇಡುತ್ತಿರುವುದನ್ನು ಅಂತರರಾಷ್ಟ್ರೀಯವಾಗಿಯೂ ಗಮನಿಸಲಾಗಿದೆ. ಈ ಎಲ್ಲಾ ನಡೆಗಳನ್ನು ಮತ್ತೊಮ್ಮೆ ವಿವರಿಸಬೇಕಾಗಿಲ್ಲ.

ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹೊತ್ತಿನಲ್ಲೇ  ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಮತ್ತು ಕಾಂಗ್ರೆಸ್ ಮತ್ತು ತೆರಿಗೆ ಇಲಾಖೆಯ ನಡುವಿನ ಸದ್ಯ ನ್ಯಾಯಾಲಯದಲ್ಲಿರುವ ಹಳೆಯ ಪ್ರಕರಣದಲ್ಲಿ ತೆರಿಗೆ ವಂಚನೆಯ ಆರೋಪ ಹೊರಿಸಿ ಮುಖ್ಯ ಪ್ರತಿಪಕ್ಷದ ಬ್ಯಾಂಕ್ ಖಾತೆಯನ್ನೇ ಸ್ಥಂಬನಗೊಳಿಸಿರುವುದು ಇತ್ತೀಚಿನ ಉದಾಹರಣೆಗಳು. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ಸಿನ ಒಳಹೊರಗನ್ನು ಸ್ವಲ್ಪ ತಿಳಿದುಕೊಳ್ಳಬೇಕಾದ ಅಗತ್ಯವಿದೆ.

1925ರ ಸೆಪ್ಟೆಂಬರ್ 27ರಂದು ಸ್ಥಾಪನೆಯಾದ ಆರೆಸ್ಸೆಸ್ ರಾಷ್ಟ್ರಪ್ರೇಮದ ಹೆಸರಿನಲ್ಲಿ ಪ್ರತಿಪಾದಿಸುತ್ತಾ ಬಂದಿರುವ ರಾಷ್ಟ್ರ ಯಾವುದು, ಅದಕ್ಕಾಗಿ ಬಳಸಿಕೊಳ್ಳುತ್ತಿರುವ ನಾಜಿ ತಂತ್ರಗಳು ಯಾವುವು, ಅದನ್ನು ಸ್ಥಾಪಿಸಿದ ಕೇಶವರಾವ್ ಬಲಿರಾಮ ಹೆಡಗೆವಾರ್ ಯಾರು ಮತ್ತು ಆತನ ವಿಚಾರಗಳೇನು ಎಂಬುದನ್ನು ತಿಳಿದುಕೊಳ್ಳುವುದು ಇಂದಿಗೆ ಪ್ರಸ್ತುತವಾಗಿದೆ.

ಆರೆಸ್ಸಿಗರು ಡಾಕ್ಟರ್ ಜೀ ಎಂದು ಕರೆಯುವ ಈ ವ್ಯಕ್ತಿ- ಜೀವ ಉಳಿಸುವ ವೈದ್ಯನಾಗದೆ ಸಮಾಜದಲ್ಲಿ ಪ್ರಾಣ ಹರಣಕ್ಕೆ ಕಾರಣವಾಗುವ ಕೋಮುವಾದ ಹರಡುವ ವೈದ್ಯನಾದದ್ದನ್ನು ನಾವು ಮನಗಾಣಬೇಕು. ಇಂದು ಈ ವ್ಯಕ್ತಿ ಪಠ್ಯ ಪುಸ್ತಕಗಳಲ್ಲಿ ಪಾಠವಾಗಿ ಮಕ್ಕಳ ಎಳೆ ಮನಸ್ಸುಗಳನ್ನು ಪ್ರವೇಶಿಸುತ್ತಿರುವಾಗ, ಕರಾವಳಿ, ಮಲೆನಾಡಿನ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಶಾಖೆಗಳಲ್ಲಿ ಕುಟಿಲವಾಗಿ ರೂಪಿಸಿದ ಆಟಗಳ ಮೂಲಕ ಈತನ ವಿಚಾರಗಳನ್ನು ಹರಡಲಾಗುತ್ತಿರುವಾಗ ಇದು ಇನ್ನಷ್ಟು ಪ್ರಸ್ತುತ.

ಆರೆಸ್ಸೆಸ್ಸಿಗೆ ಮೂಲ ಪ್ರೇರಣೆಯಾಗಿದ್ದದ್ದು ಕಾಂಗ್ರೆಸಿನ ಒಳಗೇ ಇದ್ದ “ಮೇಲ್ಜಾತಿ”ಯ ಹಿಂದೂ ಮಹಾಸಭಾ ಎಂಬ ಒಂದು ಸಮಾನಾಸಕ್ತಿ ಗುಂಪು. 1923ರಲ್ಲಿ ಇದು ಮದನ ಮೋಹನ ಮಾಳವೀಯ ಎಂಬವರ ನೇತೃತ್ವದಲ್ಲಿ ಒಂದು ಸ್ವಯಂ ಆಸ್ತಿತ್ವ ಇರುವ ಸಂಘಟನೆಯಾಗಿ ಹುಟ್ಟಿತು. ಇಂದು ಈತನನ್ನೂ ಒಬ್ಬ ರಾಷ್ಟ್ರೀಯ ನಾಯಕನಾಗಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ಹಿಂದೂ’ ಹೆಸರಿನಲ್ಲಿ ಬ್ರಾಹ್ಮಣವಾದಿ ಮೇಲ್ಜಾತಿಗಳ ಹಿತರಕ್ಷಣೆಗಾಗಿಯೇ ಇದ್ದ ಈ ಸಂಘಟನೆ ತಳವರ್ಗದವರನ್ನು ಸೇರಿಸಿಕೊಳ್ಳಲೂ ಇಲ್ಲ. ತಳವರ್ಗದವರು ಅದನ್ನು ಮೂಸಿ ನೋಡಲೂ ಇಲ್ಲ. ಅದು ವರ್ಣಾಶ್ರಮ ಧರ್ಮ, ಬ್ರಾಹ್ಮಣ್ಯದ ಮೇಲ್ಮೆಯನ್ನು ಉಳಿಸಿಕೊಳ್ಳಲು ಬಯಸುವ ಒಂದು ಪಿತೂರಿಗಾರರ, ಪ್ರಚೋದಕರ ಹಲ್ಲಿಲ್ಲದ ಸಂಘಟನೆಯಾಗಿ ಉಳಿದುಕೊಂಡಿತ್ತು. ಇದೇ ವ್ಯಕ್ತಿಗಳು ಪಂಜಾಬ್ ಹಿಂದೂ-ಸಿಖ್ ನೆಲೆಯಲ್ಲಿ ವಿಭಜನೆಯಾಗಿ “ಹಿಂದೂ” ಹರ್ಯಾಣ ಹುಟ್ಟಲು ಕಾರಣರಾದವರು. ದೇಶವನ್ನು ಕೋಮು ನೆಲೆಯಲ್ಲಿ ವಿಭಜಿಸಲು ಮುಸ್ಲಿಂ ಲೀಗ್ ಜೊತೆ ಕೈ ಜೋಡಿಸಿ ಪಾಕಿಸ್ತಾನ, ಬಾಂಗ್ಲಾ ದೇಶ ಹುಟ್ಟಲು ಕಾರಣರಾದವರು.

ಮಾಳವೀಯರ ವಿಚಾರಗಳಿಂದ ಪ್ರಭಾವಿತರಾದ ಕೇಶವರಾವ್ ಬಲಿರಾಮ ಹೆಡಗೆವಾರ್ ಅವರ ಎಳೆ ಮನಸ್ಸಿಗೆ ಹೊಕ್ಕಿದ್ದೂ ಇದೇ ಬಾಲಿಶ ವಿಚಾರಗಳೇ ಆಗಿದ್ದವು. ಕೇವಲ 5000 ಸಾವಿರ ಸೈನಿಕರನ್ನು ಹೊಂದಿದ್ದ ರಾಬರ್ಟ್ ಕ್ಲೈವ್ ಹೇಗೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಗಲ್ಲು ಹಾಕಿದ? ಅಲ್ಲಾವುದ್ದೀನ್ ಖಿಲ್ಜಿ ಹೇಗೆ ಹದಿನೇಳು ಬಾರಿ ದಂಡಯಾತ್ರೆ ಮಾಡಿ ಸೋಮನಾಥ ಸಹಿತ ಹಲವಾರು ದೇವಾಲಯಗಳಿಗೆ ದಾಳಿ ಮಾಡಿ ಸಂಪತ್ತು ಲೂಟಿ ಮಾಡಿದ? ಇತ್ಯಾದಿ ವಿಚಾರಗಳು ಅವರ ತಲೆಯಲ್ಲಿದ್ದವು. ಆದರೆ, ಸೋಮನಾಥಪುರದಲ್ಲಿ ಬ್ರಾಹ್ಮಣರ ಅಪಾರ ಪ್ರಮಾಣದ ಸಂಪತ್ತನ್ನು ಬಚ್ಚಿಡಲಾಗಿತ್ತು; ಅದಕ್ಕಾಗಿ ಹಿಂದೂ ರಾಜರುಗಳೂ ಅದಕ್ಕೆ ಮತ್ತು ಅಂತಹಾ ಬೇರೆ ದೇವಾಲಯಗಳಿಗೆ ದಾಳಿ ಮಾಡಿದ್ದರು; ಇದರಿಂದ ಬಡ ಜನರಿಗಾಗಲೀ ದೇವಾಲಯ ಪ್ರವೇಶ ಇಲ್ಲದ ದಲಿತರಿಗಾಗಲೀ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ; ಖಿಲ್ಜಿಯ ಸೇನಾನಾಯಕ ಮಲ್ಲಿಕ್ ಕಾಫರ್ ಒಬ್ಬ ಮತಾಂತರಗೊಂಡ ಹಿಂದೂವಾಗಿದ್ದ; ಅವನು ಮತಾಂತರವಾಗಲು ಕಾರಣವೇನು? ದಾಳಿಗಳು ನಡೆದಾಗ ಹಿಂದೂ ರಾಜರುಗಳೇನು ಮಾಡುತ್ತಿದ್ದರು? ಭಾರತ ಎಂಬ ದೇಶ ಇತ್ತೆ? ಕ್ಲೈವ್ ಆದಿಯಾಗಿ ಬ್ರಿಟಿಷರ ವಿರುದ್ಧ ಎರಡು ಮೂರು ಶತಮಾನ ಕಾಲ ಹಿಂದೂಗಳಾಗಲಿ, ಮುಸ್ಲಿಮರಾಗಲೀ- ಭಾರತೀಯರು ಎಂಬ ನೆಲೆಯಲ್ಲಿ ಯಾಕೆ ಒಟ್ಟಾಗಲಿಲ್ಲ? ಬ್ರಿಟಿಷರೂ, ಮೊಗಲರೂ, ಅವರೂ, ಇವರೂ- ಎಲ್ಲಾ ಆಡಳಿತಗಾರರು ಒಂದೇ ಎಂಬ ಭಾವನೆ- ಮೇಲು ಕೀಳಿನ ಜಾತಿವ್ಯವಸ್ಥೆಗೆ ಒಗ್ಗಿಕೊಂಡಿದ್ದ ಭಾರತೀಯರಲ್ಲಿ ಇರಲಿಲ್ಲವೆ? ಎಲ್ಲರ ಸೇವೆ ಮಾಡಿ ಬದುಕಿದವರಾದ ಶೂದ್ರರು, ದಲಿತರನ್ನು, ಒಟ್ಟಾಗಿ ಹೇಳುವುದಾದರೆ ಕೆಳವರ್ಗಗಳ ಜನರನ್ನು ಆಳಿದವರು ಇದೇ ಬ್ರಾಹ್ಮಣರಲ್ಲವೆ?

ಈ ಪ್ರಶ್ನೆಗಳು ಬಹುಶಃ ಬ್ರಾಹ್ಮಣರಾಗಿದ್ದ ಹೆಡಗೆವಾರ್ ತಲೆಗೆ ಹೊಳೆದಿರಲಾರದು. ಆತ ಹಿಂದೂ ಏಕತೆಯನ್ನು ಪ್ರತಿಪಾದಿಸಿದಾಗ, ಆ ಹಿಂದೂತ್ವ- ಸಮಾನತೆಯ ಹಿಂದೂತ್ವ ಆಗಿರಲಿಲ್ಲ. ಬದಲಾಗಿ ಬಹುಸಂಖ್ಯಾತರು ಬ್ರಾಹ್ಮಣ್ಯವನ್ನು ಒಪ್ಪಿಕೊಂಡು, ಅವರ ಅಡಿಯಾಳುಗಳಾಗಿ ಉಳಿದವರು ಬದುಕುವ ಹಿಂದೂತ್ವವಾಗಿತ್ತು. ಅವರ ಹಿಂದೂತ್ವ ವೇದ-ಉಪನಿಷದ್‌ಗಳಲ್ಲಿ ಇದ್ದ ಕೆಲವು ಉದಾತ್ತ ತತ್ವಗಳು (ಋಗ್ವೇದದ ಸಹಾನುಭವತು, ಸಹಾನೌಭುನತ್ತು… ಜತೆಗೆ ಬಾಳುವ, ಜೊತೆಗೆ ಉಣ್ಣುವ..) ಮತ್ತು ಸರ್ವೇ ಜನಾ ಸುಖಿನೋ ಭವಂತು ಎಂಬಂತಹ ಆದರ್ಶಗಳ ಮೇಲೆ ನಿಂತಿರಲಿಲ್ಲ. ಮುಖ್ಯವಾಗಿ, ಮುಸ್ಲಿಮರ ವಿರುದ್ಧ ಹಿಂದೂಗಳು ಭೇದಭಾವವನ್ನು ಒಪ್ಪಿಕೊಂಡು ಒಂದಾಗಬೇಕು ಎಂಬ ಆಗ್ರಹದ ಮೇಲೆ ನಿಂತಿತ್ತು!

ವೈದ್ಯಕೀಯ ಕಲಿಯುತ್ತಿದ್ದಾಗ ಕಲ್ಕತ್ತಾದಲ್ಲಿ ಹೆಡಗೇವಾರ್ ಅವರಿಗೆ ಬಲಪಂಥೀಯ ಭೂಗತ ಗುಪ್ತ ಸಮಾಜಗಳ ಸಂಪರ್ಕ ಸಿಕ್ಕಿತು. ಅವರ ತಂತ್ರ-ಕುತಂತ್ರಗಳನ್ನು ಬಹುಶಃ ಚೆನ್ನಾಗಿಯೇ ಕಲಿತುಕೊಂಡರು. ಅವರು ಆರೆಸ್ಸೆಸ್ ಸ್ಥಾಪಿಸುವ ಕೆಲವರ್ಷ ಮೊದಲಷ್ಟೇ ಜರ್ಮನಿಯ ಜರ್ಮನ್ ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಪಾರ್ಟಿ ಸ್ಥಾಪನೆಯಾಗಿತ್ತು. ಅದರ ಸಂಘಟನಾ ಸಂರಚನೆ (Organisational structure) ವಿದ್ಯಾವಂತರಾಗಿದ್ದ ಹೆಡಗೇವಾರ್ ಅವರ ಗಮನಕ್ಕೆ ಬಂದಿರುವ ಎಲ್ಲಾ ಸಾಧ್ಯತೆಗಳಿವೆ. ಆ ಪಕ್ಷದಲ್ಲಿ ಮುಂದೆ ಎಸ್‌ಎಸ್ (ಸ್ಟ್ರೂಮ್ಸ್  ಸ್ಷ್ರಾಫೆಲ್- ಭದ್ರತಾ ಸಿಬ್ಬಂದಿ ಅಥವಾ ಚೌಕಿದಾರ್!) ಎಂದು ಕರೆಸಿಕೊಂಡ ಸಮವಸ್ತ್ರಧಾರಿ ಗೂಂಡಾ ವಿಭಾಗವಿತ್ತು. ಅದು ಮುಂದೆ ಭಯಾನಕ ಹಿಂಸಾಚಾರಕ್ಕೆ ಅಸ್ತ್ರವಾಯಿತು. ಅದೇ ಮಾದರಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಗೆ ಬ್ರಿಟಿಷ್ ಕಾಲದ ಆಗಿನ ಪೊಲೀಸರ ಸಮವಸ್ತ್ರದ ಮಾದರಿಯಲ್ಲಿ (ವಿದೇಶಿ!) ಖಾಕಿ ಚಡ್ಡಿ, ಬೆಲ್ಟು-ಬೂಟುಗಳನ್ನು ನೀಡಿದ್ದಲ್ಲದೆ, ಕೈಗೊಂದು ದಂಡವನ್ನೂ ನೀಡಲಾಯಿತು! ಇದೀಗ ಉತ್ತರದ ರಾಜ್ಯಗಳಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡಲಾಗುತ್ತಿದೆ. ಮಕ್ಕಳ ಕೈಗೆ ತ್ರಿಶೂಲ, ಖಡ್ಗಗಳನ್ನು ನೀಡಲಾಗುತ್ತಿದೆ.

ಆರೆಸ್ಸೆಸ್‌ನ ಸಂಘಟನೆಯಲ್ಲಿ ನಾಜಿ ಸಂರಚನೆ ಇರುವುದನ್ನು ಗಮನಿಸಬಹುದು. ಒಬ್ಬ ಸರಸಂಘಚಾಲಕ (ಪರಮೋಚ್ಛ ನಾಯಕ- ಹಿಟ್ಲರನಂತೆ ಫ್ಯುರರ್) ಇರುತ್ತಾನೆ. ಆತ ಪ್ರಶ್ನಾತೀತ! ನಂತರ ಸಂಘಚಾಲಕರು, ಪ್ರಾದೇಶಿಕ ಸಂಚಾಲಕರು, ಪ್ರಾಂತ ಸಂಚಾಲಕರು, ತಳಮಟ್ಟದಲ್ಲಿ ಪ್ರಚಾರಕರು ಇರುತ್ತಾರೆ. ಇವರು ಈ ಸಂಘಟನೆಗೆ ಜನರನ್ನು, ಅದರಲ್ಲೂ ಬುದ್ಧಿ ಬೆಳೆಯದ ಎಳೆಯ ಬಾಲಕರನ್ನು ಸೇರಿಸುತ್ತಾರೆ. ಸಂಘದ ಶಾಖೆಗಳಲ್ಲಿ ಭಗವಾಧ್ವಜವನ್ನು ಇಟ್ಟುಕೊಂಡು ವ್ಯಾಯಾಮ ಮತ್ತಿತರ ಕವಾಯತುಗಳನ್ನು ಅರೆಮಿಲಿಟರಿ ಮಾದರಿಯಲ್ಲಿ ನಡೆಸಲಾಗುತ್ತದೆ. (ದಕ್ಷ-ಎಟೆನ್ಷನ್, ವಿಶ್ರಮ್- ಸ್ಟ್ಯಾಂಡ್ ಎಟ್ ಈಸ್, ವಿಸರ್ಜನ್- ಡಿಸ್‌ಪರ್ಸ್ ಇತ್ಯಾದಿ).

ಪ್ರತೀ ಶಾಖೆಯಲ್ಲಿ ಒಬ್ಬ ಬೌದ್ಧಿಕ್ ಪ್ರಮುಖ್ ಇರುತ್ತಾನೆ. ಪೊಲಿಟಿಕಲ್ ಕಮಿಸ್ಸಾರ್ ರೀತಿಯಲ್ಲಿ. ಆತ ಆರೆಸ್ಸೆಸ್ ಸಿದ್ಧಾಂತಗಳನ್ನು ಹೇಳಿಕೊಟ್ಟು ಬ್ರೈನ್‌ವಾಶ್ ಮಾಡುತ್ತಾನೆ. ಆತ ಮೇಲಿನವರ ನೇರ ನಿಯಂತ್ರಣದಲ್ಲಿದ್ದು ಉಳಿದವರಿಗಿಂತ ಮೇಲಿರುತ್ತಾನೆ. ಇಲ್ಲಿ ‘ಆತ’ ಎಂಬುದಕ್ಕೆ ಮಹತ್ವ ಇದೆ. ಆರೆಸ್ಸೆಸ್‌ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ದೇಶವನ್ನು ಭಾರತ ಮಾತೆ ಎನ್ನುವ ಆರೆಸ್ಸೆಸ್ ಬಳಗದಲ್ಲಿ ರಾಷ್ಟ್ರ ಸೇವಿಕಾ ಸಂಘ ಎಂಬ ಪ್ರತ್ಯೇಕ ಸಂಘಟನೆ ಇದೆ. ಇದು ಸ್ವಯಂಸೇವಕನೊಬ್ಬನ ತಾಯಿ ಲಕ್ಷ್ಮೀಬಾಯಿ ಕೇಳ್ಕರ್ ಎಂಬವರಿಂದ ಪ್ರಾರಂಭವಾಯಿತು. 1936ರಲ್ಲಿ ಆಕೆ ಸಂಘದಲ್ಲೇ ಸ್ತ್ರೀಯರ ವಿಭಾಗ ಒಂದನ್ನು ಸ್ಥಾಪಿಸುವಂತೆ ಹೆಡಗೆವಾರರನ್ನು ಭೇಟಿ ಮಾಡಿದಾಗ, ಆತ ಸುತಾರಾಂ ಒಪ್ಪಲಿಲ್ಲ. ಕೊನೆಗೆ ಆರೆಸ್ಸೆಸ್ ಮಾದರಿಯಲ್ಲೇ ಪ್ರತ್ಯೇಕ ಸಂಘಟನೆ ಮಾಡಿಕೊಳ್ಳಿ ಎಂದರು.

ಬೌದ್ಧಿಕ್ ಪ್ರಮುಖ್‌ಗಳು ಶಾಖೆಯಲ್ಲಿ ಆಟ, ಕತೆಗಳ ಮೂಲಕ ಹೇಗೆ ದ್ವೇಷಭಾವನೆಯನ್ನು ಗೊತ್ತೇ ಆಗದಂತೆ ಬಿತ್ತುತ್ತಾರೆ ಎಂಬುದನ್ನು ಹಿಂದೆ ಜನಸಂಘದಲ್ಲಿ ಇದ್ದು ಶಾಸಕರೂ ಆಗಿದ್ದ ಎ.ಕೆ.ಸುಬ್ಬಯ್ಯ ಅವರು ತಮ್ಮ ಆರ್.ಎಸ್.ಎಸ್ ಅಂತರಂಗ ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ. (1988, ಸಂಗಾತಿ ಪ್ರಕಾಶನ. ಈಗ ಬೇರೆ ಪ್ರಕಾಶನಗಳೂ ಮರುಮುದ್ರಣ ಮಾಡಿವೆ.)

“ಒಂದು ಉದಾಹರಣೆ ಮಾತ್ರ ಇಲ್ಲಿಡುತ್ತೇನೆ. ‘ಮೈ ಶಿವಾಜಿ ಹೂಂ’ ಎನ್ನುವ ಆಟವನ್ನು ಶಾಖೆಗಳಲ್ಲಿ ಆಡಿಸುತ್ತಾರೆ. ಮಕ್ಕಳೆಲ್ಲರೂ ‘ಮೈ ಶಿವಾಜಿ ಹೂಂ, ಮೈ ಶಿವಾಜಿ ಹೂಂ’ ಎಂದು ಓಡಾಡುತ್ತಾರೆ. ಮಧ್ಯದಲ್ಲಿ ಒಬ್ಬ ‘ಮೈ ಔರಂಗಜೇಬ್ ಹೂಂ’ ಎನ್ನುತ್ತಾನೆ. ಉಳಿದ ಮಕ್ಕಳು ಮಕ್ಕಳೆಲ್ಲರೂ ಹೋಗಿ ‘ಮೈ ಔರಂಗಜೇಬ್ ಹೂಂ’ ಎಂದವನ ಮೇಲೆ ಬೀಳುತ್ತಾರೆ – ಅವನನ್ನು ಥಳಿಸುತ್ತಾರೆ.” ಎಂದು ಸುಬ್ಬಯ್ಯ ಬರೆದಿದ್ದಾರೆ. ಇಂತದ್ದೇ ಬ್ರೈನ್ ವಾಷಿಂಗ್ ಕೆಲಸವನ್ನು ನಾಜಿಗಳು ‘ಹಿಟ್ಲರ್ ಯೂತ್’ ಎಂಬ ಸಂಘಟನೆಯ ಹೆಸರಲ್ಲಿ ಮಾಡಿದ್ದರು.

ಹಿಂದೂ ಮಹಾಸಭಾದಲ್ಲಿ ಎರಡು-ಮೂರು ವರ್ಷ ಸಕ್ರಿಯರಾಗಿದ್ದ ಹೆಡಗೆವಾರ್ ಬ್ರಿಟಿಷ್ ಗುಲಾಮ ವಿನಾಯಕ ದಾಮೋದರ ಸಾವರ್ಕರ್ ಅವರ ವಿಚಾರಗಳಿಂದಲೂ ಪ್ರಭಾವಿತರಾಗಿದ್ದರು. ಅಂಡಮಾನ್ ಜೈಲಿನಲ್ಲಿದ್ದು, ನಂತರ ಬ್ರಿಟಿಷರಿಗೆ ‘ಕ್ಷಮಾಪಣಾ’ ಪತ್ರ ಬರೆದಿದ್ದ ಸಾವರ್ಕರ್ ಅವರನ್ನು ಈಗ ವೀರ ಸಾವರ್ಕರ್ ಎಂದು ಹೊಗಳುತ್ತಿರುವ ಹಿಂದೂತ್ವದ ಬೆಂಬಲಿಗರು, ಗೋಹತ್ಯೆ ಬಗ್ಗೆ ಸಾವರ್ಕರರ ವಿಚಾರಗಳನ್ನು ತಿಳಿದರೆ  ಕಂಗಾಲಾಗಿಬಿಡಬಹುದು. ತಿನ್ನುವವರನ್ನು ಅವರ ಪಾಡಿಗೆ ಬಿಟ್ಟರೆ ಒಳ್ಳೆಯದು ಎಂಬುದು ಅವರ ನಿಲುವು.

ಆರಂಭದಲ್ಲಿ ಹೆಡಗೆವಾರ್ ಅವರು ಬ್ರಿಟಿಷರ ವಿರುದ್ಧ ಪ್ರತಿರೋಧದಲ್ಲಿ ಭಾಗವಹಿಸಿ ಒಂದು ವರ್ಷ ಜೈಲು ಅನುಭವಿಸಿದ್ದರೂ, ನಂತರ ಬ್ರಿಟಿಷರ ವಿರುದ್ಧ ಒಂದು ಗಟ್ಟಿಯಾದ ನಿಲುವು ತಳೆಯಲು ಅಸಮರ್ಥವಾಗಿದ್ದರು ಎಂಬುದು ವಾಸ್ತವ. ಇದೀಗ ಭಗತ್‌ ಸಿಂಗ್ ಅವರಂತಹ ಕಮ್ಯುನಿಸ್ಟ್ ಒಲವಿದ್ದ ಕ್ರಾಂತಿಕಾರಿಗಳನ್ನು ತಮ್ಮವರೆಂದು ಹೇಳಿಕೊಳ್ಳುತ್ತಿರುವವರು, ಆಗ ಬ್ರಿಟಿಷರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದ್ದರು ಎಂಬುದಕ್ಕೆ ಲಿಖಿತ ಸಾಕ್ಷ್ಯಾಧಾರಗಳಿದ್ದರೂ, ಒಂದು ಅಂಕಣದ ಸೀಮಿತತೆಯಲ್ಲಿ ಅದನ್ನು ಪ್ರಸ್ತುತಪಡಿಸಲಾಗದು. ಆರೆಸ್ಸೆಸ್ಸನ್ನು ಕೇವಲ ಒಂದು ಬಾರಿ ಮಾತ್ರ ನಿಷೇಧಿಸಿದ್ದ ಬ್ರಿಟಿಷರು, ಈ ಸಂಘಟನೆಯು ತಮ್ಮ ಆಡಳಿತಕ್ಕೆ ‘ಉಪಯೋಗಿ’ ಎಂದು ಬರೆದ ಪತ್ರಗಳು ಕೂಡ ಲಭ್ಯವಿವೆ.

‘ಧರ್ಮ-ಸಂಸ್ಕೃತಿ ರಕ್ಷಣೆ ಮೂಲಕ ಸ್ವಾತಂತ್ರ್ಯ’ ಇದು ಅವರ ಘೋಷಣೆ! ಅರ್ಥವೇನು?
ನಂತರ ಬಂದ ‘ಗುರೂಜಿ’ ಅಥವಾ ಎಂ.ಎಸ್. ಗೋಲ್ವಾಲ್ಕರ್ ಎಂಬ ಸರಸಂಘಚಾಲಕರು ಸ್ವಾತಂತ್ರ್ಯ  ಚಳವಳಿಯಿಂದ ಇನ್ನಷ್ಟು ದೂರ ಸರಿದರು. ಬ್ರಿಟಿಷರಿಗೆ ಪರವಾದ ನಿಲುವುಗಳನ್ನು ಕುರಿತು 1940ರಲ್ಲಿ ಎಲ್ಲಾ ಪ್ರಾದೇಶಿಕ ಸಂಘ ಚಾಲಕರಿಗೆ ಕಳುಹಿಸಲಾಗಿತ್ತು. ಗೋಲ್ವಾಲ್ಕರ್ ಅವರ ‘ಶ್ರೀ ಗುರೂಜಿ ದರ್ಶನ’ ಸಂಪುಟ 4ರಲ್ಲಿ (ಭಾರತೀಯ ವಿಚಾರ ಸಾಧನ ಪ್ರಕಾಶನ, 1974) ಇಂತಹ ಹಲವಾರು ವಿಚಾರಗಳನ್ನು ನೋಡಬಹುದು. (‘ವೇಬ್ಯಾಕ್ ಮೆಷಿನ್’ ಎಂಬ ನೆಟ್‌ನಲ್ಲಿ ಲಭ್ಯವಿರುವ ಪಿಡಿಎಫ್‌ನಲ್ಲಿ ಕೂಡಾ ಇಂತಹ ವಿಚಾರಗಳಿವೆ). ಶಂಶುಲ್ ಇಸ್ಲಾಂ ಅವರ ‘ರಿಲೀಜಿಯಸ್ ಡೈಮೆನ್ಷನ್ಸ್’ ಎಂಬ ಪುಸ್ತಕದಲ್ಲೂ ಬಹಳಷ್ಟು ವಿವರ –ದಾಖಲೆಗಳಿವೆ.

ಅದಿರಲಿ, ದೇಶಪ್ರೇಮಿ ಎಂದು ಕರೆದುಕೊಳ್ಳುತ್ತಿರುವ ಆರೆಸ್ಸೆಸ್- ಬ್ರಿಟಿಷ್ ಆಡಳಿತದಲ್ಲಿ ಒಂದು ಬಾರಿ ಮಾತ್ರ ನಿಷೇಧಕ್ಕೆ ಗುರಿಯಾಗಿತ್ತು. ಅದು 1947ರ ಮೊದಲ ಭಾಗದಲ್ಲಿ – ಅದೂ ಕೂಡ ಪಂಜಾಬ್ ಪ್ರಾಂತ್ಯದಲ್ಲಿ! ಕಾರಣ- ಸ್ವಾತಂತ್ರ್ಯ ಹೋರಾಟವಲ್ಲ – ಅವಿಭಜಿತ ಪಂಜಾಬಿನಲ್ಲಿ ಕೋಮುಗಲಭೆ ಹಬ್ಬಿಸಲು ಯತ್ನಿಸಿದ್ದು. ಆದರೆ, ಸ್ವಾತಂತ್ರ್ಯದ ಬಳಿಕ ಆರೆಸ್ಸೆಸ್ ಮೂರು ಭಾರಿ ನಿಷೇಧಿತವಾಯಿತು!. ಯಾವುದೇ ಜನಪರ ಹೋರಾಟದ ಕಾರಣಗಳಿಗಲ್ಲ!, ದೇಶದ ಶಾಂತಿಯನ್ನು ಕದಡಿದ ಕಾರಣಕ್ಕಾಗಿ! ‘ಕದಡಿದ ನೀರಲ್ಲಿ ಮೀನು ಹಿಡಿಯುವುದು’ ಎಂಬ ಮಾತು ಆರೆಸ್ಸೆಸ್ಸಿಗೆ ಚೆನ್ನಾಗಿ ಅನ್ವಯವಾಗುತ್ತದೆ.

ಮೊದಲ ಬಾರಿಗೆ 1948ರಲ್ಲಿಯೇ ಗೃಹ ಸಚಿವ, ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಅದನ್ನು ನಿಷೇಧಿಸಿದ್ದರು- ಕಾರಣ? ಗಾಂಧೀಜಿ ಹತ್ಯೆಯ ನಂತರ- ನಾಗಪುರ ಆದಿಯಾಗಿ ಎಲ್ಲೆಡೆ ಅದು ಸಿಹಿಹಂಚಿದ್ದು!. ಈಗ ಬಿಜೆಪಿಯೇ ಅವರ ಪ್ರತಿಮೆ ನಿರ್ಮಿಸಿ ತಮ್ಮವರೆಂದು ಹೇಳಿಕೊಳ್ಳುತ್ತಿದೆ. ಎರಡನೇ ಬಾರಿ 1975-77ರಲ್ಲಿ ತುರ್ತು ಪರಿಸ್ಥಿತಿ ವೇಳೆ. ಇದಕ್ಕೆ ಕಾರಣ -ಬಲಪಂಥೀಯರು ಬಿತ್ತುತ್ತಿದ್ದ ವಿಷಬೀಜವಾಗಿದ್ದರೆ (ಸಿಪಿಐ ಇದಕ್ಕಾಗಿ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿತ್ತು), ಇನ್ನೊಂದು ಕಡೆಯಲ್ಲಿ ಕಮ್ಯುನಿಸ್ಟರು ಪ್ರಬಲವಾಗಿ ಸಂಸತ್ತಿನಲ್ಲೂ ಗಣನೀಯ ಸ್ಥಾನ ಪಡೆದದ್ದು. ಮತ್ತೊಂದು ಕಡೆಯಲ್ಲಿ ನಕ್ಸಲೀಯರು ಕಲ್ಕತ್ತಾವನ್ನೇ ಪ್ರತಿಭಟನಕಾರರಿಂದ ತುಂಬುವಂತಹ ಪ್ರಭಾವಿ ಮಟ್ಟಕ್ಕೆ ಬೆಳೆದದ್ದು. ಮೂವರು ತದ್ವಿರುದ್ಧ ಗುಣಲಕ್ಷಣಗಳ ವಿರೋಧಿಗಳನ್ನು ಒಂದೇ ಏಟಿಗೆ ಮಟ್ಟಹಾಕುವ ದುಸ್ಸಾಹಸಕ್ಕೆ ಇಂದಿರಾ ಗಾಂಧಿಯವರು ಕೈಹಾಕಿದ್ದರು.

ಮೂರನೇ ಬಾರಿ ಅದು ಅಲ್ಪಕಾಲದ ನಿಷೇಧಕ್ಕೆ ಒಳಗಾದದ್ದು, 1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ ಮುಸ್ಲಿಮರ ವಿರುದ್ಧ ಶೂದ್ರರನ್ನು, ಅಷ್ಟೇ ಏಕೆ ಇವರಿಂದ ದಮನಿತರಾದ ದಲಿತರನ್ನು ಎತ್ತಿ ಕಟ್ಟಿ-‘ಹಿಂದೂ’ ಎಂಬುದಕ್ಕೆ ಒಂದು ವಂಚಕ ವ್ಯಾಖ್ಯಾನ ಬರೆದಾಗ!.

ಇದೀಗ ಹಿಜಾಬ್, ಹಲಾಲ್ ಇತ್ಯಾದಿ ವಿವಾದಗಳನ್ನು ಎಬ್ಬಿಸುವಾಗ ಇಂದೂ ಮುಸುಕಿನಲ್ಲಿ ಕುಳಿತ ಹಿಂದೂ-ರಾಜಪೂತ ಮಹಿಳೆಯರು ನೆನಪಾಗದೆ ಮುಸ್ಲಿಂ ಮಹಿಳೆಯರ ಹಿಜಾಬ್, ಬುರ್ಖಾ ನೆನಪಾಗುತ್ತದೆ. ದಲಿತರಿಗೆ ಸತ್ತ ದನವನ್ನು ಕೊಂಡೊಯ್ದು ತಿನ್ನಿ ಎಂಬ “ಉದಾರತೆ” ತೋರಿಸಿದ ಈ ದನ ತಿನ್ನುತ್ತಿದ್ದ ಬ್ರಾಹ್ಮಣ್ಯಕ್ಕೆ ಇಂದು ದನ ತಿನ್ನುವ ಮುಸ್ಲಿಮರು, ಕ್ರೈಸ್ತರು, ದಲಿತರು ಪಾಪಿಗಳಂತೆ ಕಾಣುತ್ತಿದ್ದಾರೆ.

ಕೊನೆಗೆ ಒಂದೇ ಮಾತು: ದೇಶದಲ್ಲಿ ಆರೆಸ್ಸೆಸ್ಸಿನ, ಬ್ರಾಹ್ಮಣ್ಯದ ಕುಟಿಲ ಸಂಚುಗಳನ್ನು ವಿಫಲಗೊಳಿಸಬೇಕಾದರೆ, ಸಂವಿಧಾನವನ್ನು, ಕಾನೂನಿನ ಆಡಳಿತವನ್ನು, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಉಳಿಸಬೇಕಾದರೆ ಇರುವ ಒಂದೇ ಒಂದು ದಾರಿಯೆಂದರೆ, ಮುಂದಿನ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಕೆಳಗಿಳಿಸುವುದು.

Related Articles

ಇತ್ತೀಚಿನ ಸುದ್ದಿಗಳು