Monday, June 9, 2025

ಸತ್ಯ | ನ್ಯಾಯ |ಧರ್ಮ

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡುವುದಲ್ಲ; ರದ್ದಾಗಬೇಕು: ಡಾ.ವಾಸು

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡುವುದಲ್ಲ; ರದ್ದಾಗಬೇಕು: ಡಾ.ವಾಸು

‘ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ; ಸಂವಿಧಾನ ಬದಲಾಯಿಸುವ ಬಗ್ಗೆ ಹುನ್ನಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಹಿಂದಿ ಭಾಷಿಕ ರಾಜ್ಯಗಳಲ್ಲಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಆದ್ದರಿಂದ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನೇ ಶಾಶ್ವತವಾಗಿ ಮುಂದೂಡಬೇಕು’ ಎಂದು ಹಲವು ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ 2025 ಮಾರ್ಚ್ 3ರಂದು ‘ಜಾಗೃತ ಕರ್ನಾಟಕ’ ಸಂಘಟನೆ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯಲ್ಲಿ ರಾಜ್ಯದ ಹಲವು ಸಂಘಟನೆಗಳ ಮುಖಂಡರು, ಚಿಂತಕರು, ವಕೀಲರು ಹಾಗೂ ಕಾನೂನು ತಜ್ಞರು ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಗೃತ ಕರ್ನಾಟಕ ಸಂಘಟನೆಯ ಬಿ.ಸಿ. ಬಸವರಾಜು ಮಾತನಾಡಿ, “ಈಗಿರುವ 543 ಲೋಕಸಭಾ ಸೀಟುಗಳಲ್ಲಿ ದಕ್ಷಿಣ ಭಾರತದ ಪಾಲು ಶೇ.24ರಷ್ಟಿದೆ. ಕ್ಷೇತ್ರ ಮರುವಿಂಗಡಣೆಯಾದರೆ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಪಾಲು ಶೇ.19 ಕ್ಕೆ ಇಳಿಕೆ ಆಗುತ್ತವೆ. ‘ಡಿಲಿಮಿಟೇಷನ್‌ನಿಂದ ದಕ್ಷಿಣ ರಾಜ್ಯಗಳಿಗೆ ಒಂದೇಒಂದು ಸೀಟು ಕಡಿಮೆಯಾಗುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ. ಆದರೆ, ಉತ್ತರ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳು ಹೆಚ್ಚಾಗುವ ಬಗ್ಗೆ ಅವರು ಮಾತನಾಡುತ್ತಿಲ್ಲ” ಎಂದರು.

“ಶೇ.24 ರಷ್ಟು ಸಂಸದರಿದ್ದರೂ ದಕ್ಷಿಣದ ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಪಾಲು ಸಿಗುತ್ತಿಲ್ಲ; ಬರ ಪರಿಹಾರ ಪಡೆಯಲು ಸುಪ್ರೀಂ ಕೋರ್ಟಿಗೆ ಹೋಗಬೇಕಾಯಿತು. ಈಗಲೇ ಪರಿಸ್ಥಿತಿ ಹೀಗಿದೆ; ಇನ್ನು ಕ್ಷೇತ್ರ ಮರುವಿಂಗಡಣೆಯಿಂದ ನಮ್ಮ ಪ್ರಾತಿನಿಧ್ಯ ಕಡಿಮೆಯಾದರೆದ ನಮ್ಮ ಮುಂದಿನ ಪರಿಸ್ಥಿತಿ ಏನಾಗಬಹುದು ಊಹಿಸಿ. ನಮ್ಮ ತೆರಿಗೆ ಪಾಲು ಬಿಡಿ, 15 ನೇ ಹಣಕಾಸು ಆಯೋಗದ ನಿರ್ಧಾರದಂತೆ ನಮ್ಮ ರಾಜ್ಯಕ್ಕೆ ಕೊಡಬೇಕಾದ ಅನುದಾನವನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಈ ಎಲ್ಲ ಅಪಾಯಗಳನ್ನು ನಾವು ಆರ್ಥ ಮಾಡಿಕೊಳ್ಳಬೇಕು; ಈವರೆಗಿನ ಎಲ್ಲ ಅಪಾಯಗಳ ತಾಯಿಯೇ ಈ ಕ್ಷೇತ್ರ ಮರುವಿಂಗಡಣೆ” ಎಂದು ವಿವರಿಸಿದರು.

“ಕ್ಷೇತ್ರ ಮರುವಿಗಂಡಣೆ ಮಾಡಿದ ಬಳಿಕ ತೆರಿಗೆ ಹಾಗೂ ಸೆಸ್‌ನಲ್ಲಿ ಸಮಾನ ಪಾಲು ಹಂಚಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಬಹುದು. ಒಕ್ಕೂಟ ಸರ್ಕಾರದಲ್ಲಿ ರಾಜ್ಯಕ್ಕೆ ಹೆಚ್ಚಿನ ಅಧಿಕಾರ ನೀಡಿದ ಬಳಿಕವೂ, ನೇರವಾಗಿ ದುಷ್ಪರಿಣಾಮ ಬೀರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಯೇ ತೀರುತ್ತದೆ. ಲೋಕಸಭಾ ಸಂಸದರು ಹೆಚ್ಚಿಗೆ ಇಲ್ಲ ಎಂಬ ಕಾರಣಕ್ಕೆ ಕರ್ನಾಟಕಕ್ಕೆ ಬರಬೇಕಿರುವ ಒಳ್ಳೆಯ ಕೈಗಾರಿಕೆಯೊಂದನ್ನು ಹಿಂದಿ ರಾಜ್ಯಕ್ಕೆ ನೀಡಬಹುದು. ಈ ಎಲ್ಲ ಸಂಭವನೀಯ ಅಪಾಯ ಗೊತ್ತಿದ್ದೂ ಸುಮ್ಮನಿದ್ದರೆ, ಮುಂದಿನ ಅಪಾಯಕ್ಕೆ ನಾವೆಲ್ಲರೂ ಹೊಣೆಯಾಗುತ್ತೇವೆ” ಎಂದು ಹೇಳಿದರು.

ಹಿರಿಯ ರಾಜಕಾರಣಿ ಹಾಗೂ ಸಾಮಾಜಿಕ ಹೋರಾಟಗಾರರಾದ ರಮೇಶ್ ಬೆಲ್ಲಂಕೊಂಡ ಮಾತನಾಡಿ, “ಕ್ಷೇತ್ರ ಮರುವಿಂಗಡಣೆ ಬಳಿಕ ಕೇಂದ್ರ ಸರ್ಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸದೇ ಇರಬಹುದು; ದಕ್ಷಿಣ ಭಾರತದ ಪಾಲಿಗೆ ಇದು ಬಹಳ ಆತಂಕಕಾರಿ ನಿರ್ಧಾರ. ಒಕ್ಕೂಟ ಸರ್ಕಾರದ ಆಡಳಿತ ಸಂಪೂರ್ಣ ವಿಕೇಂದ್ರೀಕರಣ ಆಗಬೇಕು. ಎಲ್ಲ ಪಕ್ಷಗಳಲ್ಲಿ ಹೈಕಮಾಂಡ್ ಸಂಸ್ಕೃತಿ ಹೋಗಬೇಕು; ಹಿಂದಿ ಕೇಂದ್ರಿತ ರಾಜಕೀಯವನ್ನು ಕೊನೆಗಾಣಿಸಬೇಕು” ಎಂದು ಹೇಳಿದರು.

ರಾಜ್ಯಗಳ ಸ್ವಾತಂತ್ರ್ಯದ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡಬೇಕು

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾತಂತ್ರ್ಯದ ಬಗ್ಗೆ ನಾವು ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು ಎಂದು ಹೋರಾಟಗಾರ ನಾಗೇಶ್ ಅರಳಕುಪ್ಪೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

“ನಾವು ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸಬೇಕು. ಜೊತೆಗೆ, ರಾಜ್ಯಗಳ ಸ್ವಾತಂತ್ರ್ಯದ ಬಗ್ಗೆ ಮಾತನಾಡಬೇಕು. ಈ ಬಗ್ಗೆ ತಮಿಳುನಾಡು ಸಂಸದರು ಹಾಗೂ ಸರ್ಕಾರ ಮಾತನಾಡುತ್ತಿದೆ; ನಾವು ಅವರಿಗೆ ಬೆಂಬಲ ನೀಡಬೇಕು” ಎಂದರು.

“ಬಿಜೆಪಿಯ ಕೋಮುವಾದ ಹಾಗೂ ಬಂಡವಾಳಶಾಹಿ ಕಡೆಗೆ ದೇಶ ಸಾಗುತ್ತಿದ್ದು, ಈ ಬಗ್ಗೆಯೂ ನಾವು ಎಚ್ಚರದಿಂದ ಇರಬೇಕು. ತನಿಳುನಾಡು ನೀಟ್ ವಿರೋಧಿಸಿದೆ, ಕರ್ನಾಟಕವೂ ಈ ಬಗ್ಗೆ ಮಾತನಾಡಬೇಕು. ತ್ರಿಭಾಷಾ ವಿವಾದದ ಬಗ್ಗೆ ನಾವು ನಮ್ಮ ಹೋರಾಟದಲ್ಲಿ ಒತ್ತು ನೀಡಬೇಕು; ಇದು ಬಹಳ ಮುಖ್ಯವಾಗುತ್ತದೆ” ಎಂದರು.

ಜನಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಮರುವಿಂಗಡಣೆ ಮಾಡಬೇಕಾಗಿಲ್ಲ

“ಜನಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಕ್ಷೇತ್ರ ಮರುವಿಂಗಡಣೆ ಮಾಡಬೇಕಾಗಿಲ್ಲ; ಈ ಬಗ್ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣ ಸೂಕ್ತವಾಗಿಲ್ಲ” ಎಂದು ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಡಾ.ಸುನಿಲ್ ಪ್ರತಿಪಾದಿಸಿದರು.

ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ಕ್ಷೇತ್ರ ಮರುವಿಂಗಡಣೆ ಮಾಡಬೇಕಾಗಿಲ್ಲ. ಮುಂದಿನ 25 ವರ್ಷ ಮರುವಿಂಗಡಣೆ ಮಾಡಬಾರದ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಶಾಶ್ವತವಾಗಿ ಇದನ್ನು ಇಷ್ಟಕ್ಕೇ ನಿಲ್ಲಿಸಬೇಕು” ಎಂದರು.

“ಕ್ಷೇತ್ರ ಮರುವಿಂಗಡಣೆಗೆ ಜನಸಂಖ್ಯೆ ಹೆಚ್ಚಳ ಮಾತ್ರ ಮಾನದಂಡವಲ್ಲ; ತೆರಿಗೆ ಸಂಗ್ರಹ ಹಾಗೂ ಒಟ್ಟಾರೆ ರಾಜ್ಯಗಳ ಅಭಿವೃದ್ಧಿಯೂ ಮಾನದಂಡವಾಗಬೇಕು. ಜನಸಂಖ್ಯೆ ಜಾಸ್ತಿ ಆಗಿರುವುದಕ್ಕಾಗಿ ಮರುವಿಂಗಡಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣ ಸೂಕ್ತವಾಗಿಲ್ಲ” ಎಂದರು.

“848 ಸೀಟು ಹೆಚ್ಚಳ ಮಾಡುವುದಕ್ಕೆ ದೇಶದಲ್ಲಿ ಇನ್ನೂ ಜನಗಣತಿ ಆಗಿಲ್ಲ. ಆದರೆ, ಕೇಂದ್ರ ಸರ್ಕಾರ ಅದಕ್ಕಾಗಿ ಒಂದು ಸಮೀಕ್ಷೆ ಮಾಡಿದೆ. ಅದರ ಆಧಾರದಲ್ಲಿ ಸೀಟು ಹೆಚ್ಚಳ ಮಾಡಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಚುರುಕಾಗಿ ಕೆಲಸ ಮಾಡುತ್ತಿದೆ; ಲೋಕಸಭಾ ಸೀಟುಗಳ ಹೆಚ್ಚಳಕ್ಕೆ ಅವರು ಈಗಾಗಲೇ ಸೂಕ್ತ ತಯಾರಿ ಮಾಡಿಕೊಂಡಿದ್ದು, ಅದಕ್ಕಾಗಿಯೇ ದೊಡ್ಡ ಪಾರ್ಲಿಮೆಂಟ್ ಭವನ ಕಟ್ಟಿದ್ದಾರೆ. ಇದರಿಂದ ದಕ್ಷಿಣ ಭಾರತಕ್ಕೆ ಅನ್ಯಾಯ ಆಗೇ ಆಗುತ್ತದೆ. ಒಕ್ಕೂಟ ಸರ್ಕಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ನಾವು ಎರಡನೇ ದರ್ಜೆ ಪ್ರಜೆಗಳು ಎಂದುಕೊಂಡಿದ್ದೇವೆ. ಆದರೆ, ನಾವೀಗಾಗಲೇ ಮೂರನೇ ದರ್ಜೆ ಪ್ರಜೆಗಳಾಗಿದ್ದು, 4ನೇ ದರ್ಜೆಗೆ ಹೋಗುತ್ತೇವೆ” ಎಂದು ಆತಂಕ ವ್ಯಕ್ತಪಡಿಸಿದರು.

“ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಮಾತ್ರವಲ್ಲ, ಹಲವು ಸಣ್ಣಸಣ್ಣ ಜಾತಿಗಳಿಗೆ ನೇರ ಅನ್ಯಾಯ ಆಗುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ಅನುಕೂಲ ಆಗುವಂತೆ ಕ್ಷೇತ್ರ ಮರುವಿಂಗಡಣೆ ಮಾಡುತ್ತಾರೆ. ನಂತರ, ಸಂವಿಧಾನ ತಿದ್ದುಪಡಿ ಮಾಡುತ್ತಾರೆ. ಆದ್ದರಿಂದ, ಈ ಪ್ರಕ್ರಿಯೆಯನ್ನು ಶಾಶ್ವತವಾಗಿ ಮುಂದೂಡಬೇಕು” ಎಂದು ಆಗ್ರಹಿಸಿದರು.

300 ಜನ ಸಂಸದರನ್ನು ಹೆಚ್ಚಿಸಿ ಸಾಧಿಸುವುದೇನೂ ಇಲ್ಲ: ನಗರಗೆರೆ ರಮೇಶ್

“ಈಗಿನ ಲೆಕ್ಕಾಚಾರದ ಪ್ರಾಕಾರ, ಕ್ಷೇತ್ರ ಮರುವಿಂಗಡಣೆಯಾದರೆ 300 ಕ್ಕೂ ಹೆಚ್ಚು ನೂತನ ಸದಸ್ಯರು ಸಂಸತ್ ಪ್ರವೇಶ ಮಾಡುತ್ತಾರೆ. ಯಾವ ಜನಪ್ರತಿನಿಧಿ ಜನರ ಜೊತೆ ನಿಕಟ ಸಂಪರ್ಕದಲ್ಲಿ ಇರುತ್ತಾರೆ ಎಂಬುದು ಮುಖ್ಯ. ಶಾಸಕರು, ಜಿಲ್ಲಾ-ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಜನರ ಜೊತೆಗೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಲೋಕಸಭಾ ಸದಸ್ಯರು ಕೇಂದ್ರದಲ್ಲಿ ಶಾಸನಗಳನ್ನು ರಚಿಸುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಆದ್ದರಿಂದ, 300 ಜನ ಸಂಸದರರನ್ನು ಹೆಚ್ಚಿಸಿ ಸಾಧಿಸುವುದು ಏನು ಇಲ್ಲ” ಎಂದು ಪ್ರಗತಿಪರ ಚಿಂತಕ ನಗರಗೆರೆ ರಮೇಶ್ ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಹೊಸ ಸಂಸದರಿಗೆ ಹೆಚ್ಚಿನ ವೇತನ ಹಾಗೂ ಸೌಲಭ್ಯ ನೀಡುವುದರಿಂದ ದೇಶಕ್ಕೆ ಆರ್ಥಿಕ ಹೊರೆಯಾಗುತ್ತದೆ. ಇದರಿಂದ ಜನರ ತೆರಿಗೆ ಹಣ ಪೋಲಾಗುತ್ತದೆ. ಕ್ಷೇತ್ರ ಮರು ವಿಂಗಡಣೆಯಿಂದ ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡುವುದು ಸರಿಯಲ್ಲ” ಎಂದರು.

ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹಮದ್ ಮಾತನಾಡಿ, “ದೇಶದ ಈಗಿನ ಜನಸಂಖ್ಯೆ ಅಂದಾಜು 140 ಕೋಟಿ, ಈ ಜನಸಂಖ್ಯೆ 280 ಕೋಟಿ ಆದರೂ ಅವರಿಗೆಲ್ಲಾ ಒಬ್ಬರೇ ಪ್ರಧಾನಿ ಇರುತ್ತಾರೆ. ಉತ್ತರ ಪ್ರದೇಶದ 20 ಕೋಟಿ ಜನಸಂಖ್ಯೆಗೆ ಒಬ್ಬರೇ ಸಿಎಂ ಇದ್ದಾರೆ. ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ಗೋವಾ ಜನರಿಗೆ ಕೂಡಾ ಒಬ್ಬರೇ ಮುಖ್ಯಮಂತ್ರಿ ಇದ್ದಾರೆ. 20 ಕೋಟಿ ಜನಸಂಖ್ಯೆಯನ್ನು ನಿಭಾಯಿಸುವ ಶಕ್ತಿ ಯುಪಿ ಸಿಎಂಗೆ ಇದೆ. ಆದ್ದರಿಂದ, ಯಾವುದೇ ಕಾರಣಕ್ಕೂ ಲೋಸಕಭಾ ಕ್ಷೇತ್ರಗಳ ಮರುವಿಂಗಡಣೆ ಬೇಡ” ಎಂದರು.

“ಒಕ್ಕೂಟ ವ್ಯವಸ್ಥೆಯನ್ನು ನಾವು ಜೀವಂತ ಇಡಬೇಕೆಂದರೆ, ಯಾವುದೇ ಕಾರಣಕ್ಕೂ ಕ್ಷೇತ್ರ ಮರುವಿಂಗಡಣೆ ಮಾಡಬಾರದು. ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚಾದರೆ ದಕ್ಷಿಣ ರಾಜ್ಯಗಳ ಪರಿಸ್ಥಿತಿ ಭೀಕರವಾಗಲಿದೆ. ಸ್ಥಳೀಯಸಂಸ್ಥೆ ಜನಪ್ರತಿನಿಧಿಗಳು ಜನರ ಸಮಸ್ಯೆ ಆಲಿಸುತ್ತಾರೆ. ಪಾರ್ಲಿಮೆಂಟ್ ಸದಸ್ಯರು ಸಂವಿಧಾನ ಕಾಪಾಡುವ ಕೆಲಸ ಮಾಡಲಿ” ಎಂದು ಅವರು ಸಲಹೆ ನೀಡಿದರು.

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡುವುದಲ್ಲ; ರದ್ದಾಗಬೇಕು: ಡಾ.ವಾಸು

‘ಲೋಕಸಭೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡಬೇಕು ಎಂಬುದು ನಮ್ಮ ಅಂತಿಮ ವಾದವಲ್ಲ. ಇಡೀ ಪ್ರಕ್ರಿಯೆ ರದ್ದಾಗಬೇಕು. ಏಕೆಂದರೆ, 25 ವರ್ಷ ಕಳೆದ ಬಳಿಕವೂ ಈ ದೇಶ ಒಕ್ಕೂಟ ವ್ಯವಸ್ಥೆಯೇ ಆಗಿರುತ್ತದೆ’ ಎಂದು ‘ಜಾಗೃತ ಕರ್ನಾಟಕ’ ಡಾ.ವಾಸು ಹೇಳಿದರು.

ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, “ಕ್ಷೇತ್ರ ಮರುವಿಂಗಡಣೆ ಸಮರ್ಥನೆಗೆ ‘ಒಂದು ಮತ-ಒಂದು ಮೌಲ್ಯ’ವನ್ನ ಅರ್ಥ ಮಾಡಿಕೊಳ್ಳುತ್ತಿರುವ ರೀತಿಯೇ ತಪ್ಪಿದೆ. ಒಂದು ಮತ-ಒಂದು ಮೌಲ್ಯ ವಿಚಾರ ಬಂದಿರೋದು ಯಾಕೆ ಎಂದರೆ, ಶ್ರೀಮಂತರಿಗೆ ಜಾಸ್ತಿ, ಬಡವರಿಗೆ ಕಡಿಮೆ ಮೌಲ್ಯವಲ್ಲ. ಪ್ರಜಾಪ್ರಭುತ್ವದಲ್ಲಿ ಬಡವರು, ಶ್ರೀಮಂತರ ಮತಕ್ಕೆ ಒಂದೇ ಮೌಲ್ಯ ಇರಬೇಕು ಎನ್ನುವ ಕಾರಣಕ್ಕೆ. ಒಕ್ಕೂಟ ವ್ಯವಸ್ಥೆ ಒಳಗಡೆ ಒಂದೊಂದು ರಾಜ್ಯ ತನಗೆ ಬೇಕಾದ ರೀತಿಯಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡನೆ ಮಾಡಿಕೊಳ್ಳುವುದಕ್ಕೆ ಈ ಒಂದು ಮತ-ಒಂದು ಮೌಲ್ಯವನ್ನ ಪರಿಗಣಿಸಬೇಕು. ನಾವು ಭಾರತವನ್ನು ಒಕ್ಕೂಟ ಎಂದು ಕರೆದುಕೊಂಡಾಗ, ಅದರ ಮೂಲ ಉದ್ದೇಶವನ್ನು ಬದಲಾಯಿಸುವ ರೀತಿಯಲ್ಲಿ ಇರಬಾರದು” ಎಂದರು.

“ಉತ್ತರ ಪ್ರದೇಶದವರು ಜನಸಂಖ್ಯೆ ನಿಯಂತ್ರಣ ಮಾಡಲಿಲ್ಲ, ಹಾಗಾಗಿ ಅವರು ಅನುಭವಿಸಲಿ ಎಂದು ಹೇಳುವುದು ಸರಿಯಲ್ಲ. ವಿರೋಧಿಸುವುದಕ್ಕೂ ಕೂಡಾ ಈ ವಾದ ಮಾಡುವುದು ತಪ್ಪು. ಏಕೆಂದರೆ, ನಮ್ಮಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯ 1951ರಿಂದ 2011ವರೆಗೆ ಇರುವ ಸೆನ್ಸಸ್ ನೋಡಿದರೆ. ಈ ಎರಡು ಸಮುದಾಯಗಳ ಜನಸಂಖ್ಯೆ ಜಾಸ್ತಿ ಆಗಿದೆ. ಅಂದ್ರೆ, ಬೇರೆ ಕಮ್ಯುನಿಟಿಗಿಂತ ಅವರ ಜನಸಂಖ್ಯೆ ಜಾಸ್ತಿ ಇದೆ. ಏಕೆಂದರೆ, ಬಡವರಿಗೆ ಮಕ್ಕಳು ಜಾಸ್ತಿ, ಇದೇ ವಾಸ್ತವ. ಸ್ಥಿತಿವಂತಿಕೆ ಮತ್ತು ಸಾಕ್ಷರತೆ ಜಾಸ್ತಿ ಆದಾಗ ಮಕ್ಕಳನ್ನು ಪಡೆಯುವ ಸಂಖ್ಯೆ ಕಡಿಮೆ ಆಗುತ್ತೆ. ನಾವು ಉತ್ತರ ಪ್ರದೇಶದ ವಿರುದ್ಧ ಯಾವ ವಾದ ಬಳಸುತ್ತಿದ್ದೇವೋ ಆ ವಾದ ತಪ್ಪು. ನೀವು ಜಾಸ್ತಿ ಮಕ್ಕಳನ್ನ ಮಾಡಿಕೊಂಡಿದ್ದೀರ ಎಂದು ದೂರಿದರೆ, ನಾವು ಕೂಡಾ ಬಡವರ ವಿರುದ್ಧ ಮಾತನಾಡಿದ ಹಾಗೆ ಆಗುತ್ತೆ. ಇದು ದಲಿತ ಸಮುದಾಯದ ವಿರುದ್ಧ, ಮುಸ್ಲಿಂ ಸಮುದಾಯದ ವಿರುದ್ಧ ಆಗುತ್ತೆ; ಈ ವಾದ ಮಾಡಬಾರದು. ಬದಲಿಗೆ ಒಕ್ಕೂಟದ ತತ್ವ ಏನಿದೆ, ನೀವು ಲಡಾಕ್ ಗೆ ಅಥವಾ ಪಾಂಡಿಚೆರಿಗೆ, ಅಥವಾ ಅಂಡೋಮಾನ್ ನಿಕೋಬಾರಿನ ಐವತ್ತು ಸಾವಿರ ಜನಕ್ಕೂ ಒಂದು ಲೋಕಸಭಾ ಕ್ಷೇತ್ರ ಕೊಡುತ್ತೀವಿ ಅನ್ನೋದರ ಹಿಂದೆ ಒಂದು ಒಕ್ಕೂಟದ ತತ್ವ ಇದೆ. ಏಕೆಂದರೆ, ಅದು ಪ್ರಾತಿನಿಧ್ಯಕ್ಕಾಗಿ ಬೇಕು. ನಾವೀಗ 1951ಗೆ ವಾಪಸ್ ಹೋಗುವುದು ಬೇಡ, 1971ಗೆ ಫ್ರೀಜ್ ಆಗಬೇಕು. ಎಲ್ಲ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಈಗ ಫ್ರೀಜ್ ಆಗ್ಬೇಕು” ಎಂದರು.

ಕ್ಷೇತ್ರ ಮರುವಿಂಗಡಣೆ ಮುಂದೂಡುವುದಲ್ಲ, ಆ ಇಡೀ ಪ್ರಕ್ರಿಯೆಯನ್ನೇ ರದ್ದು ಮಾಡಬೇಕು. ಏಕೆಂದರೆ, 25 ವರ್ಷ ಕಳೆದ ಮೇಲೂ ಈ ದೇಶ ಒಕ್ಕೂಟ ವ್ಯವಸ್ಥೆಯೇ ಆಗಿರುತ್ತದೆ. ಕೇಂದ್ರದ ಪಟ್ಟಿಗೆ 545 ಜನ ಯಾಕೆ ಬೇಕು? ಅವರೆಲ್ಲಾ ಮುನ್ಸಿಪಾಲಿಟಿ ಪ್ರತಿನಿಧಿಗಳಲ್ಲ. ಅವರೆಲ್ಲಾ ದಿನಾ ದಿನ ಹೋಗಿ ರಸ್ತೆ ಹೇಗಿದೆ, ಚರಂಡಿ ಸ್ಥಿತಿ ಏನು ಎಂದು ನೋಡಬೇಕಿರುವುದಿಲ್ಲ. ಸಂಸದರೆಲ್ಲಾ ಕೇಂದ್ರ ಪಟ್ಟಿಯಲ್ಲಿರುವ ವಿಚಾರಗಳ ಬಗ್ಗೆ ಶಾಸನ ಮಾಡೋದಕ್ಕೆ ಮಾತ್ರ ಸೀಮಿತ. ಕೇಂದ್ರ ಪಟ್ಟಿಯಲ್ಲಿರುವ ಸಂಗತಿಗಳನ್ನ ಕಡಿಮೆ ಮಾಡಬೇಕು; ಅಷ್ಟೊಂದು ಯಾಕಿವೆ ಅದರೊಳಗಡೆ. ಶಿಕ್ಷಣಕ್ಕೆ ಕೇಂದ್ರ ಸರ್ಕಾರ ದುಡ್ಡನ್ನು ಯಾಕೆ ಕೊಡಬೇಕು? ಕೇಂದ್ರ ಅದನ್ನೆಲ್ಲಾ ಬಿಟ್ಟುಬಿಟ್ಟರೆ ರಾಜ್ಯ ಸರ್ಕಾರಗಳು ನಿರ್ವಹಿಸುತ್ತವೆ. ನಮ್ಮ ಸಂವಿಧಾನದಲ್ಲಿ ಒಂದಷ್ಟು ಕೇಂದ್ರೀಕರಣ ಇದೆ. ಏಕೆಂದರೆ, ಕೇಂದ್ರದ ಬಳಿ ಅಧಿಕಾರ ಇಲ್ಲವಾದರೆ ದೇಶ ಛಿದ್ರ ಆಗಿಬಿಡುತ್ತೆ. ಹಾಗಾಗಿ, ಒಂದಷ್ಟು ಕೇಂದ್ರೀಕರಣವಾಗಿರಬೇಕು ಎಂಬ ಕಾರಣಕ್ಕೆ. ಆದರೆ, ಇವತ್ತು ಆ ಸ್ಥಿತಿ ಇಲ್ಲ, ಸ್ವಾತಂತ್ರ್ಯ ದೇಶ ಒಂದಾಗಿದೆ. ಇನ್ನಷ್ಟು ವಿಚಾರಗಳನ್ನ ರಾಜ್ಯ ಪಟ್ಟಿಯಲ್ಲಿ ತರಬೇಕು ಎಂದು ನಾವೆಲ್ಲರೂ ಒತ್ತಾಯ ಮಾಡಬೇಕು” ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page