Sunday, June 23, 2024

ಸತ್ಯ | ನ್ಯಾಯ |ಧರ್ಮ

ಕೇರಳ ಸ್ಟೋರಿʼ ಉಚಿತ ವೀಕ್ಷಣಾ ಸುತ್ತೋಲೆಗೆ ಜಾಗೃತ ನಾಗರಿಕರ ಖಂಡನೆ

ಇಳಕಲ್ ನ ಶ್ರೀವಿಜಯ ಮಹಾಂತೇಶ್ವರ ವಿದ್ಯಾ ವರ್ಧಕ ಸಂಚಾಲಿತ ಆರ್ಯುವೇದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಕೇರಳ ಸ್ಟೋರಿ ಚಲನಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಸುತ್ತೋಲೆ ಹೊರಡಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ 24-5-23 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀನಿವಾಸ್ ಚಿತ್ರಮಂದಿರದಲ್ಲಿ ಉಚಿತ ಪ್ರದರ್ಶನ ಆಯೋಜಿಸಿರುವ ಬಗ್ಗೆ ಪ್ರಾಂಶುಪಾಲ ಡಾ.ಕೆ ಸಿ ದಾಸ್‌ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಸಿನೇಮಾ ನೋಡಬೇಕೆಂದು ಬರೆಯಲಾಗಿರುವ ಈ ಸುತ್ತೋಲೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕಾಗಿ ಅರ್ಧ ದಿನದ ತರಗತಿಗಳನ್ನೂ ಸಸ್ಪೆಂಡ್ ಮಾಡಲಾಗಿದೆ.

ಕೇರಳ ಸ್ಟೋರಿ ಸಿನೇಮಾ ಪ್ರದರ್ಶನ ಕಾಣುತ್ತಿದ್ದಂತೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು ಇದರಲ್ಲಿ ಇರುವ ಕಪೋಲಕಲ್ಪಿತ ಅಂಶಗಳ ಬಗ್ಗೆ ಟೀಕೆಗಳು ಬಂದಿವೆ. ಅನೇಕರು ಈ ಸಿನೇಮಾವನ್ನು ವಿರೋಧಿಸಿ ಕೋರ್ಟ್‌ ಮೆಟ್ಟಿಲು ಏರಿದ್ದಾರೆ. ಈ ಮಧ್ಯೆ ಶ್ರೀ ವಿಜಯ ಮಹಾಂತೇಶ್ವರ ಆರ್ಯುವೇದ ವೈದ್ಯಕೀಯ ಕಾಲೇಜಿನ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕಾಲೇಜಿನ ಈ ಸುತ್ತೋಲೆಯನ್ನು ವಿರೋಧಿಸಿ ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ಖಂಡನೆ ವ್ಯಕ್ತಪಡಿಸಿದ್ದು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದೆ.

ಸಂಪೂರ್ಣ ಸುಳ್ಳು ವಿವರಗಳಿಂದ ಕೂಡಿರುವ ವಿವಾದಿತ ಮತ್ತು ದ್ವೇಷ ಪ್ರಚೋದಿತ ಚಲನಚಿತ್ರ ” ದಿ ಕೇರಳ ಸ್ಟೋರಿ” ಸಿನಿಮಾವನ್ನು ಉಚಿತವಾಗಿ ತೋರಿಸುವ ಅಗತ್ಯ ಏನಿದೆ ಎಂಬುದು ನಮ್ಮ ಪ್ರಶ್ನೆಯಾಗಿದೆ. ಹೀಗೊಂದು ಸುತ್ತೋಲೆ ಹಾಕಿ ಸಿನಿಮಾ ತೋರಿಸುವ ಸಂಗತಿ ಆಘಾತಕಾರಿ ಅಷ್ಟೇ ಅಲ್ಲ ರಾಜ್ಯದಲ್ಲಿ ಕೋಮು ದಳ್ಳುರಿ ಹಚ್ಚುವ ಹುನ್ನಾರು ಎಂಬುದರಲ್ಲಿ ಯಾವ ಸಂಶಯವೂ ಬೇಕಿಲ್ಲ. ಸಿನಿಮಾ ನೋಡಲು ಜನರಿಗೆ ನಿರ್ಬಂಧ ವಿಧಿಸಬೇಕಿಲ್ಲ. ಆದರೆ ಸಮಾಜದಲ್ಲಿ ಅಶಾಂತಿ,ಹಿಂಸೆಗಳನ್ನು ಪ್ರಚೋದಿಸುವ ಸಿನಿಮಾಗಳನ್ನು ಕಡ್ಡಾಯವಾಗಿ, ‌ಉಚಿತವಾಗಿ ನೋಡಲು ಉತ್ತೇಜನ ನೀಡುವುದು ಎಷ್ಟು ಸರಿ ಎಂದು ಈ ಪತ್ರದಲ್ಲಿ ಪ್ರಶ್ನಿಸಲಾಗಿದೆ.

ದೇಶದ ಸೌಹಾರ್ದ ಪರಂಪರೆಯನ್ನು ಹಾಳು ಮಾಡುವ ಹಲವಾರು ಪ್ರಯತ್ನಗಳ ಮುಂದುವರೆದ ವ್ಯವಸ್ಥಿತ ಸಂಚು
ಎಂಬುದು ಈಗಾಗಲೆ ಜಗಜ್ಜಾಹೀರಾಗಿದೆ. ಶಿಕ್ಷಣ, ಆರೋಗ್ಯ ಮುಂತಾದ ಸಾಮಾಜಿಕ ನೈಜ ಪ್ರಗತಿಯನ್ನು ಸಾರುವ ಕ್ಷೇತ್ರಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ ಎಂಬುದನ್ನು ನೀತಿ ಆಯೋಗದಂತಹ ಒಕ್ಕೂಟ ಸರಕಾರದ ಅಧೀನದಲ್ಲಿ ಕಾರ್ಯ‌ನಿರ್ವಹಿಸುವ ಸಂಸ್ಥೆ ಗಳೇ ದೃಢೀಕರಿಸಿವೆ. ಅವುಗಳನ್ನು ಮರೆ ಮಾಚಿ, ಧರ್ಮ ದ್ವೇಷ ಹುಟ್ಟಿಸುವ, ಸಮಾಜದ ಶಾಂತಿಗೆ ಭಂಗ ತರಲೆಂದೇ ಹಸಿ ಹಸಿ ಸುಳ್ಳುಗಳನ್ನು ತುಂಬಿ, ಅವು ನೈಜ ಘಟನೆಗಳೆಂದು ಹೇಳಲಾಗಿದೆ.

ಸರಕಾರ ತಕ್ಷಣವೇ ಆ ಶಿಕ್ಷಣ ಸಂಸ್ಥೆ ಮತ್ತು ಕಾಲೇಜಿನ ಪ್ರಾಂಶುಪಾಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಂತಹ ಕೆಲಸಕ್ಕೆ ಇನ್ನು ಮುಂದೆ ಯಾರೂ ಕೈಗೊಳ್ಳದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸಬೇಕು. ಈ ಕಾಲೇಜಿಗೆ ಮಾನ್ಯತೆ ನೀಡಿರುವ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ದೇಶದ ಸಂವಿಧಾನ, ನೆಲದ ಸೌಹಾರ್ದ ಪರಂಪರೆಗೆ ಧಕ್ಕೆ ತರುವ ಕಾರ್ಯಚಟುವಟಿಕೆಗಳನ್ನು ನಡೆಸದಂತೆ ಆ ಶಿಕ್ಷಣ ಸಂಸ್ಥೆಗೆ ಸೂಚನೆ ನೀಡಬೇಕು.ಈಗಾಗಲೇ ಹಲವಾರು ಸಂದರ್ಭಗಳಲ್ಲಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಮಕ್ಕಳನ್ನು ತಮ್ಮ ಅಂಗೈಯಲ್ಲಿ ಆಡುವ ಬುಗುರಿಯಾಗಿಸಿ ಬಲಿ‌ಹಾಕಿದ ಘಟನೆಗಳಿಗೆ ಈ ನೆಲ ಸಾಕ್ಷಿಯಾಗಿದೆ. ಅದಕ್ಕೆ ಇನ್ನು ಮುಂದೆ ಅವಕಾಶ ಇಲ್ಲ ಎಂಬ ಸಂದೇಶವನ್ನು ರವಾನಿಸಲು ಸರಕಾರ ಮುಂದಾಗಬೇಕು ಎಂದು ಈ ಪತ್ರದಲ್ಲಿ ಆಗ್ರಹಿಸಲಾಗಿದೆ.

ಡಾ.ಕೆ.ಮರುಳಸಿದ್ದಪ್ಪ,ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಡಾ.ವಿಜಯಾ, ಡಾ. ರಾಜೇಂದ್ರ ಚೆನ್ನಿ, ವಿಮಲಾ.ಕೆ.ಎಸ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಮೀನಾಕ್ಷಿ ಬಾಳಿ, ಟಿ.ಸುರೇಂದ್ರ ರಾವ್, ಬಿ.ಶ್ರೀಪಾದ ಭಟ್, ಡಾ.ವಸುಂಧರಾ ಭೂಪತಿ, ಮೂಡ್ನಾಕೂಡು ಚಿನ್ನಸ್ವಾಮಿ, ರುದ್ರಪ್ಪ ಹುನಗವಾಡಿ, ವಾಸುದೇವ ಉಚ್ಚಿಲ, ಡಾ.ನಿರಂಜನ ಆರಾಧ್ಯ ಮೊದಲಾದ ನಾಡಿನ ಚಿಂತಕರು ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಕೋಮು ದ್ವೇಷ ಬಿತ್ತುವ ಯಾವುದೇ ಚಟುವಟಿಕೆಗಳಿಗೂ ಅವಕಾಶ ನೀಡಬಾರದೆಂದು ಮತ್ತುಕೋಮು ಸಾಮರಸ್ಯ ಕಾಪಾಡಲು, ದ್ವೇಷ ರಾಜಕಾರಣವನ್ನು ಹತ್ತಿಕ್ಕಲು‌ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು