ಲಿಂಗಾಯತ ಸಮುದಾಯವು ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯವರಂತಹ ಮಹನೀಯರನ್ನು ಜಾತಿ ಕಾರ್ಡ್ ಆಗಿ ಪ್ಲೇ ಮಾಡುವ ಮೂಲಕ ವಿಶ್ವ ಮಾನವ ಕುವೆಂಪು ಅವರನ್ನು ನಿರ್ದಾಕ್ಷಿಣ್ಯವಾಗಿ ಅವಮಾನಿಸುತ್ತಿದ್ದಾರೆ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಕುರಿತಂತೆ ನಡೆದ ಚರ್ಚೆಯ ಸುತ್ತ ಬರೆದಿದ್ದಾರೆ ಯುವ ಪತ್ರಕರ್ತ ಆಕಾಶ್ ಆರ್.ಎಸ್.
ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗಕ್ಕೆ ತನ್ನದೆ ಆದ ಇತಿಹಾಸ ಇದೆ. ಶರಣರಿಂದ ಹಿಡಿದು ರಾಜಕೀಯದ ವರೆಗೆ ತನ್ನದೇ ವಿಶಿಷ್ಟವಾದ ಛಾಪನ್ನು ನಾಡಿನಾದ್ಯಂತ ಪಸರಿಸುತ್ತ ಬಂದಿದೆ. ನಾಡಿನ ಯಾವುದೇ ಕ್ಷೇತ್ರವನ್ನು ಬಿಡದೆ ಎಲ್ಲವನ್ನೂ ಆವರಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗ ಅಂತಹ ಶಿವಮೊಗ್ಗ ಮರೆಯಾಗಿ ಹೋಗುವ ಸ್ಥಿತಿ ತಲುಪಿರುವುದು ದುರಂತವೇ ಸರಿ. ಶಿವಮೊಗ್ಗ ತನ್ನದೆ ಆದ ತತ್ವ ಸಿದ್ಧಾಂತಗಳಿಗೆ ಹೋರಾಡಿಕೊಂಡು ಬಂದಿದ್ದು, ಈಗ ಎಲ್ಲೋ ಒಂದು ಕಡೆ ಧೂಳಿಡಿದು ಕುಂತಿದೆ ಎನ್ನಿಸುತ್ತಿದೆ. ಬರೀ ರಕ್ತಸಿಕ್ತ ಘಟನೆಗಳು, ಜಾತಿ ಧರ್ಮದ ಪ್ರಹಾರ ಇಷ್ಟೇ ಅಲ್ಲದೆ ಇದರಿಂದಾಚೆಗೆ ಇದು ರಾಜಕೀಯಕ್ಕೆ ಬೃಹತ್ ರಣರಂಗವಾಗಿ ಪರಿಣಮಿಸಿದೆ.
ಕಳೆದು ಎರಡು ವರ್ಷಗಳಿಂದ ಶಿವಮೊಗ್ಗ ನೆಮ್ಮದಿಯಿಂದ ಮಲಗಿದ್ದು ಬೆರಳೆಣಿಕೆ ದಿನಗಳಲ್ಲಷ್ಟೇ. ಕೋಮುದಳ್ಳುರಿಯಲ್ಲಿ ಬೆಂದ ಜಿಲ್ಲೆ ತನ್ನ ಮೊದಲ ಸ್ಥಿತಿಗೆ ಮರಳಲು ಹರಸಾಹಸ ಪಡುತ್ತಿರುವುದು ಈಗ ಇತಿಹಾಸ. ದಿನೇ ದಿನೇ ಒಂದಲ್ಲಾ ಒಂದು ಕೆಟ್ಟ ಘಟನೆಗೆ ಅನುವುಮಾಡಿಕೊಡುವ ಮೂಲಕ ಇದು ಹಾಟ್ ಸಿಟಿಯಾಗಿ ಪರಿಣಮಿಸುತ್ತಿದೆ. ಕೊಲೆಯಾದ ಹಿಂದೂ ಸಂಘಟನೆಯ ಹರ್ಷನ ಪ್ರಕರಣದಿಂದ ಹಿಡಿದು ಹಿಂದೂ ಜಾಗರಣ ವೇದಿಕೆ ಪ್ರಾಂತ್ಯ ಸಮ್ಮೇಳನದಲ್ಲಿ ಸಂಸದೆ ಪ್ರಜ್ಞಾಸಿಂಗ್ ಭಾಷಣದವರೆಗೂ ಜಿಲ್ಲೆಯೂ ಧರ್ಮ ದಂಗಲ್ಗೆ ವೇದಿಕೆಯಾಗಿದೆ. ಈಗ ಅದಕ್ಕೆ ಪರ್ಯಾಯವಾಗಿ ಮತ್ತೊಂದು ವೇದಿಕೆ ಸಜ್ಜಾಗಿದ್ದು, ಅದು ವಿಶ್ವಮಾನವನ ಕಡೆಗೆ ತಿರುಗಿದೆ.
ಶಿವಮೊಗ್ಗದಲ್ಲಿ ನೂತನವಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾಗಿ ಘೋಷಣೆಯಾದ ಕಾಲದಿಂದಲೇ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎನ್ನುವ ಪುಕಾರು ಶುರುವಾಯಿತು. ಅಭಿವೃದ್ಧಿ ಎಷ್ಟರ ಮಟ್ಟಿಗೆ ನಡೆದಿದೆ ಎಂಬುದು ಜನರ ದೃಷ್ಟಿಕೋನಕ್ಕೆ ಬಿಟ್ಟಿದ್ದು, ಆದರೆ ಈಗ ಶಿವಮೊಗ್ಗ ಮತ್ತೊಂದು ಚರ್ಚೆಗೆ ಗ್ರಾಸವಾಗುವ ಮೂಲಕ ಹಾಟ್ ಸಿಟಿ ಆಗಿ ಮಾರ್ಪಾಡಾಗುತ್ತಿರುವುದಂತೂ ಸತ್ಯ. ಧರ್ಮದಂಗಲ್ ನ ಕಾವು ಆರಿದ ಬೆನ್ನಲ್ಲೆ ವಿಮಾನ ನಿಲ್ದಾಣಕ್ಕೆ ಹೆಸರು ಸೂಚಿಸುವ ವಿವಾದಗಳು ಮೆಲ್ಲಗೆ ಹೊಗೆಯಾಡುತ್ತಿವೆ.

ವಿಮಾನ ನಿಲ್ದಾಣವು ಫೆ.೨೭ ರಂದು ಉದ್ಘಾಟನೆಯಾಲಿದೆ ಎಂಬ ಸುದ್ದಿ ಹೊರ ಬಿದ್ದಾಗಿನಿಂದ ಅದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರೇ ಖಚಿತ ಎಂಬ ನಿರ್ಧಾರಕ್ಕೆ ಜಿಲ್ಲೆಯಲ್ಲಿನ ಜನರು ಬಂದಿದ್ದರು. ಆದರೂ ಕೂಡ ಅನೇಕ ಸಂಘಟನೆಗಳು, ಸಮುದಾಯಗಳು ಸಾಲು ಸಾಲಾಗಿ ಸರ್ಕಾರಕ್ಕೆ ಮಹನೀಯರ ಹೆಸರನ್ನು ಸೂಚಿಸಲು ಮುಂದಾದರು. ಅದರಲ್ಲೂ ಲಿಂಗಾಯತ ಸಮುದಾಯವಂತೂ ಯಡಿಯೂರಪ್ಪ ಅವರ ಹೆಸರೇ ಇಡಬೇಕೆಂಬ ಒತ್ತಾಯವನ್ನು ಕೂಡ ಮಾಡಿತು. ಇದೆಲ್ಲದರ ನಡುವೆ ಶಿವಮೊಗ್ಗದಲ್ಲಿ ನಡೆದ ಸರ್ಕಾರದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಮಾನ ನಿಲ್ದಾಣದ ಕುರಿತು ಮಾತನಾಡಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಶಿಫಾರಸು ಮಾಡಿ ಕೇಂದ್ರಕ್ಕೆ ಪಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಲಿಂಗಾಯತ ಸಮುದಾಯದ ಆಸೆಗೆ ಮತ್ತಷ್ಟು ಪುಷ್ಟಿ ಕೊಟ್ಟರು. ಆದರೆ ಇದರ ಬೆನ್ನಲ್ಲಿ ಯಡಿಯೂರಪ್ಪನವರು ಪತ್ರಿಕಾಗೋಷ್ಠಿ ಕರೆದು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರನ್ನು ಇಡುವುದಾಗಿ ಸೂಚಿಸಲಾಗಿದೆ ಎಂದು ಹೇಳಿಕೆ ನೀಡಿ ಲಿಂಗಾಯತರ ಆಸೆಗೆ ತಣ್ಣೀರು ಎರಚಿದರು. ಈ ಮೂಲಕ ಬಿಎಸ್ ವೈ ಓರ್ವ ಜನನಾಯಕನಾಗಿ ಮುತ್ಸದ್ದಿತನದಿಂದ ನಡೆದುಕೊಂಡರು ಕೂಡಾ ಸಮುದಾಯದ ಕಣ್ಣಿಗೆ ಮಾತ್ರ ವಿಲನ್ ಆಗಿ ಕಂಡರು ಎಂದರೆ ತಪ್ಪಾಗಲಾರದು. ಅವರ ಈ ಒಂದೇ ಒಂದು ಹೇಳಿಕೆ ಮನುಷ್ಯತ್ವದ ಬಿಲದಲ್ಲಿ ಅಡಗಿದ ಜಾತಿವಾದಿಗಳು ಆಚೆ ಬರುವಂತೆ ಮಾಡಿದೆ.
ವೀರಶೈವ ಲಿಂಗಾಯತ ಸಮುದಾಯದ ಮಠಾಧಿಪತಿಗಳು ಹಾಗೂ ಮುಖಂಡರೆಲ್ಲಾ ಸಾಮೂಹಿಕವಾಗಿ ಕುವೆಂಪು ಹೆಸರನ್ನು ತೆಗೆದು ಹಾಕಬೇಕು ಎನ್ನುವ ಮೂಲಕ ಯಡಿಯೂರಪ್ಪ ವಿರುದ್ಧ ಸೆಟೆದು ನಿಂತಿದ್ದಾರೆ. ಶಿವಮೊಗ್ಗದ ಜಾತಿವಾರುಗಳಲ್ಲಿ ಗಮನಿಸಿದರೆ ಹೆಚ್ಚಾಗಿ ಲಿಂಗಾಯತ ಮತ್ತು ಬ್ರಾಹ್ಮಣ ಸಮುದಾಯದ ಕೈಗಳೆ ಹೆಚ್ಚು. ಈಗ ಅಂತಹ ಲಿಂಗಾಯತ ಸಮುದಾಯವೇ ರಾಜಕೀಯ ಪೋಷಾಕು ತೊಟ್ಟು ಅಖಾಡಕ್ಕೆ ಇಳಿದಿದೆ. ಕುವೆಂಪು ಅವರ ಹೆಸರಿಡಲು ಯಾವುದೇ ಆಕ್ಷೇಪಣೆ ಇಲ್ಲ ಆದರೆ ಅವರ ಬದಲು ಯಡಿಯೂರಪ್ಪ ಅವರ ಹೆಸರಿಡಿ ಇಲ್ಲವೇ ಕೆಳದಿ ಅರಸರ ಅಥವಾ ಶರಣರ ಹೆಸರಿಡಿ ಎನ್ನುವ ಮೂಲಕ ಲಿಂಗಾಯತ ಹೆಸರನ್ನು ಮುನ್ನಲೆಗೆ ತಂದು ಕುವೆಂಪು ಅವರನ್ನು ನಾಜೂಕಾಗಿ ತಿರಸ್ಕರಿಸುತ್ತಿದ್ದಾರೆ. ಇದರ ಜತೆಗೆ ಕಾವಿಯೊಳಗಿನ ರಾಜಕಾರಣವೂ ಕೂಡ ರಾಜಕೀಯ ಅಖಾಡಕ್ಕೆ ದಾಪುಗಾಲಿಟ್ಟಿದೆ.
ಯಡಿಯೂರಪ್ಪ ಸ್ವತಃ ತಮ್ಮ ಹೆಸರನ್ನು ತಿರಸ್ಕರಿಸಿದ ಕಾರಣ ತಳಮಳಕ್ಕೊಳಗಾದ ಲಿಂಗಾಯತ ಸಮುದಾಯ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲೇ ಬೇಕಾದ ನಿಟ್ಟಿನಲ್ಲಿ ಹಾಗೂ ಸಮುದಾಯಕ್ಕೊಂದು ಹೆಗ್ಗುರುತು ಬೇಕೆಂದು ಶರಣರ ಹೆಸರಿಗೆ ಜೋತು ಬಿದ್ದಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅರಿಯಲು ಜಾತಿ ಮನಸ್ಥಿತಿಗಳಿಂದ ಹೊರಬರಬೇಕಾಗಿದೆ. ಕುವೆಂಪು ಹೆಸರನ್ನು ಸೂಚಿಸಿದ ಸಂಘಟನೆಗಳಾಲಿ, ರಾಜಕಾರಣಿಗಳಾಗಲಿ ಅವರನ್ನು ಜಾತಿ ಆಧಾರದ ಮೇಲೆ ಅಳೆದು ತೂಗಿಲ್ಲ. ಅವರು ಈ ನಾಡಿಗೆ ಕೊಟ್ಟ ವಿಶ್ವಮಾನವ ಸಂದೇಶವೇ ಅವರ ಹೆಸರಿಡಲು ಪ್ರೇರಣೆಯಾಗಿರಬಹುದು. ಆದರೆ ನಾವೆಲ್ಲಾ ಗಮನಿಸಿದ ಸಂಗತಿಯೆಂದರೆ ಈ ಬಗ್ಗೆ ಯಡಿಯೂರಪ್ಪ ಆಗಲಿ, ಇಲ್ಲಾ ಇನ್ಯಾವುದೇ ಲಿಂಗಾಯತ ಸಮುದಾಯದ ನಾಯಕರಾಗಲಿ ಸೊಲ್ಲೆತ್ತುತ್ತಿಲ್ಲ. ಸಮುದಾಯಕ್ಕೆ ತಿಳಿ ಹೇಳುವ ಮೂಲಕ ಈ ನಡೆ ಸರಿಯಲ್ಲ ಎಂಬ ತಾಕೀತು ಕೂಡ ಮಾಡುತ್ತಿಲ್ಲ ಯಾಕೆ? ಕುವೆಂಪು ಹೆಸರನ್ನು ಜನರಿಂದಲೇ ತಿರಸ್ಕರಿಸುವ ಹುನ್ನಾರವೇ? ಇಲ್ಲ ಯಡಿಯೂರಪ್ಪ ಅವರ ಪ್ರಾಬಲ್ಯವನ್ನು ಸರ್ಕಾರಕ್ಕೆ ತೋರಿಸುವ ಚಾಣಾಕ್ಷತನವೇ?
ಒಟ್ಟಾರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜಾತಿ ಸೂಚಕದ ಕಿರೀಟ ತೊಡಿಸಲು ಮುಂದಾದ ಲಿಂಗಾಯತ ಸಮುದಾಯವೂ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯವರಂತಹ ಮಹನೀಯರನ್ನು ಜಾತಿ ಕಾರ್ಡ್ ಆಗಿ ಪ್ಲೇ ಮಾಡುವ ಮೂಲಕ ವಿಶ್ವ ಮಾನವನನ್ನು ನಿರ್ದಾಕ್ಷಿಣ್ಯವಾಗಿ ಅವಮಾನಿಸುತ್ತಿದ್ದಾರೆ.
ಆಕಾಶ್ ಆರ್ ಎಸ್
ಯುವ ಪತ್ರಕರ್ತ.