ಕರಾವಳಿಯ ಸಮಕಾಲೀನ ರಾಜಕಾರಣದಲ್ಲಿ ಭಾಷೆ ಎಂಬುದು ಚುನಾವಣೆಯ ಸಂದರ್ಭದಲ್ಲಿ ಮೂಗಿಗೆ ಸವರುವ ತುಪ್ಪವಾಗಿ ಪರಿಣಮಿಸುತ್ತಿದೆ. ಇದರ ಜೊತೆ ಜೊತೆಗೆ ತುಳು ಮತ್ತು ಕನ್ನಡ ಭಾಷೆಗಳ ನಡುವೆ ಒಡಕು ಮೂಡುತ್ತಿರುವ ಅರಿವಿದ್ದೂ ಈ ಸಮಸ್ಯೆಗಳನ್ನು ಬಗೆ ಹರಿಸಲು ಸರಕಾರ ಕೂಡ ಸಿದ್ಧವಿಲ್ಲ! ಚರಣ್ ಐವರ್ನಾಡು ಬರೆಯುತ್ತಿರುವ ತುಳು ಭಾಷಾ ಚಳುವಳಿಯ ಕೊನೆಯ ಸರಣಿ ಲೇಖನ ಇದು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ತುಳುನಾಡು ಪ್ರತ್ಯೇಕ ರಾಜ್ಯಕ್ಕಾಗಿ ದನಿ ಎತ್ತಿತ್ತು. ಆದರೆ ಇದು ಅಷ್ಟೊಂದು ಪ್ರಬಲ ಹೋರಾಟ ಆಗಿರಲಿಲ್ಲ. ಏಕೀಕರಣದ ಸಂದರ್ಭದಲ್ಲಿ ತುಳು ಭಾಷಿಕ ಕಾಸರಗೋಡು ಕೇರಳದ ತೆಕ್ಕೆಯನ್ನು ಸೇರಿತು. ಕೆಲವೇ ವರ್ಷಗಳಲ್ಲಿ ದಕ್ಷಿಣ ಕನ್ನಡವೂ ಉಡುಪಿ ಮತ್ತು ದಕ್ಷಿಣ ಕನ್ನಡ ಎಂದು ವಿಭಜನೆಯಾಯಿತು. ಸಾಂಸ್ಕೃತಿವಾಗಿ ಒಂದೇ ಆಗಿದ್ದ ತುಳುನಾಡು ರಾಜಕೀಯವಾಗಿ ಪ್ರತ್ಯೇಕಗೊಂಡು ಅನಿವಾರ್ಯವಾಗಿ ತಮ್ಮನ್ನು ಕನ್ನಡದ ಮೂಲಕ ಗುರುತಿಸಿಕೊಳ್ಳಬೇಕಾಯಿತು.
ತಮ್ಮ ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬ ತುಳುವರ ಹೋರಾಟದ ವೈಫಲ್ಯಕ್ಕೆ ಅದರ ಹಿಂದಿರುವ ಭಾಷಾ ರಾಜಕಾರಣವೇ ಕಾರಣ. ಇತ್ತೀಚೆಗೆ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಭಾಷೆಗಾಗಿ ಪ್ರಾಣವನ್ನೇ ಕೊಟ್ಟೇನು ಎಂಬ ಪ್ರತಾಪ ತಣ್ಣಗಾಗಿ ಈ ಮಾನ್ಯತೆ ನೀಡಲು ತಾಂತ್ರಿಕ ಸಮಸ್ಯೆಗಳು ಇವೆ ಎಂಬಲ್ಲಿಗೆ ಬಂದು ನಿಂತಿದ್ದಾರೆ.
2011ರ ಜನಗಣತಿಯಲ್ಲಿ 19,569 ಭಾಷೆಗಳನ್ನು ತಮ್ಮ ಮಾತೃ ಭಾಷೆಗಳನ್ನಾಗಿ ದೇಶದ ಜನತೆ ಮಾನ್ಯ ಮಾಡಿದ್ದಾರೆ. 2001 ರ ಜನಗಣತಿಯ ಪ್ರಕಾರ 1,636 ಭಾಷೆಗಳು ಮಾತೃ ಭಾಷೆಗಳು ಎಂದು ಪರಿಗಣಿಸಲ್ಪಟ್ಟಿದ್ದವು. ಜನಗಣತಿಯ ಮಾನದಂಡಗಳಲ್ಲಿ ಬದಲಾವಣೆ ತಂದದ್ದೇ ಈ ಸಂಖ್ಯೆ ಹೆಚ್ಚಲು ಕಾರಣ. 2001 ರ ಜನಗಣತಿಯಲ್ಲಿ ಇರುವ ಸ್ವತಂತ್ರ ಭಾಷೆಗಳ ಸಂಖ್ಯೆ 122. ಗಣೇಶ್ ದೇವಿಯವರು ತಯಾರಿಸಿದ ಭಾರತದ ಭಾಷಿಕ ನಕ್ಷೆಯಲ್ಲಿ 780 ಸ್ವತಂತ್ರ ಭಾಷೆಗಳು ಇವೆ. ಸ್ವತಃ ಗಣೇಶ್ ದೇವಿಯವರು ಸರಿ ಸುಮಾರು 850 ಭಾಷೆಗಳು ಭಾರತದಲ್ಲಿವೆ ಎನ್ನುತ್ತಾರೆ.
ಇಷ್ಟೊಂದು ಭಾಷೆಗಳು ಇರುವ ದೇಶವನ್ನು ಪ್ರತಿನಿಧಿಸುತ್ತಿರುವುದು ಕೇವಲ 22 ಭಾಷೆಗಳು! ಇಂದು 99 ಭಾಷೆಗಳು ತುಳುವಿನ ಜೊತೆಗೆ ಸಾಂವಿಧಾನಿಕ ಮಾನ್ಯತೆಗಾಗಿ ಕಾಯುತ್ತಿವೆ. ಮೂವತ್ತು ವರ್ಷಗಳ ಹಿಂದೆ ತುಳುವರು ಸಾಂವಿಧಾನಿಕ ಮಾನ್ಯತೆ ಕೇಳುವ ಸಂದರ್ಭದಲ್ಲಿ ಇಷ್ಟು ಸ್ಪರ್ಧೆ ಇರಲಿಲ್ಲ.
ಎಂಟನೇ ಪರಿಚ್ಛೇದದಲ್ಲಿ ಸೇರಲು ಒಂದು ಭಾಷೆಗೆ ಅದು ರಾಜ್ಯದ ಅಧಿಕೃತ ಭಾಷೆಯಾಗಿರಬೇಕು. ಸಂವಿಧಾನ ಜಾರಿಯಾದಾಗ 14 ಭಾಷೆಗಳು ಈ ಪಟ್ಟಿಗೆ ಸೇರಿದ್ದವು. 1967 ರಲ್ಲಿ ಸಿಂಧಿ ಭಾಷೆ, 1992 ರಲ್ಲಿ ಮಣಿಪುರಿ, ನೇಪಾಳಿ, ಕೊಂಕಣಿ ಭಾಷೆಗಳನ್ನು ಅಧಿಕೃತ ಭಾಷೆಗಳ ಪಟ್ಟಿಯಲ್ಲಿ ಸೇರಿಸಲಾಯಿತು. 2003 ರಲ್ಲಿ ಸಂವಿಧಾನದಲ್ಲಿ 92ನೇ ತಿದ್ದುಪಡಿ The Constitution (Ninety Second Amendment) Act, 2003, ತಂದು 8ನೇ ಪರಿಚ್ಛೇದದಲ್ಲಿ ರಾಜ್ಯ ಭಾಷೆಗಳಲ್ಲದ ಬೋಡೋ, ಡೋಗ್ರೀ, ಮೈಥಿಲಿ ಮತ್ತು ಸಂತಾಲಿ ಭಾಷೆಗಳನ್ನು ಸೇರಿಸಲಾಯಿತು.
ಇವುಗಳಿಗೆ ಎಂಟನೇ ಪರಿಚ್ಛೇದಕ್ಕೆ ಸೇರುವ ಅರ್ಹತೆ, ಲಕ್ಷಣ ಎಲ್ಲವೂ ಇವೆ ಎಂಬುದು ಕಾರಣವಲ್ಲ. ಕಾಶ್ಮೀರದ ಸಮಸ್ಯೆ ತಣ್ಣಗಾಗಿಸಲು ಡೋಗ್ರಿ ಭಾಷೆಯನ್ನು ಸೇರಿಸಲಾಯಿತು. ಆಗಸ್ಟ್ 18, 2003 ರಂದು ಈ ಬಿಲ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ ಅಂದಿನ ಗೃಹ ಸಚಿವ ಮತ್ತು ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಮಾತೃ ಭಾಷೆ ಮೈಥಿಲಿ ಕೂಡ ಸೇರಿತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರತ್ಯೇಕ ಬೋಡೋ ಲ್ಯಾಂಡ್ ಕೇಳುತ್ತಿದ್ದ ಬೋಡೋ ಬುಡಕಟ್ಟನ್ನು ಸಂತೈಸಲು ಮತ್ತು ಪಶ್ಚಿಮ ಬಂಗಾಳ ಸರಕಾರದ ಒತ್ತಡಗಳ ಕಾರಣಕ್ಕೆ ಕ್ರಮವಾಗಿ ಬೋಡೋ ಮತ್ತು ಸಂತಾಲಿ ಭಾಷೆಗಳೂ ಅಧಿಕೃತ ಭಾಷೆಗಳಾಗಿ ಮಾನ್ಯತೆ ಪಡೆದವು.
2003ರಲ್ಲಿ ಎಸ್ ಎಂ ಕೃಷ್ಣ ಸರಕಾರ ಕೇಂದ್ರಕ್ಕೆ ಮನವಿಯನ್ನು ಕೊಟ್ಟಿದ್ದರೂ ತುಳುವನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿತು. 2004 ರಲ್ಲಿ ಇತರ ಭಾಷೆಗಳು ಸಾಂವಿಧಾನಿಕ ಮಾನ್ಯತೆಗಾಗಿ ಹೋರಾಟ ನಡೆಸುತ್ತಿದ್ದರಿಂದ 39 ಭಾಷೆಗಳನ್ನು ಪರಿಶೀಲಿಸಲು ಸೀತಾಕಾಂತ್ ಮಹಾಪಾತ್ರ ಸಮಿತಿ ರಚಿಸಿತು. ಈ ಸಮಿತಿ ಎಂಟನೇ ಪರಿಚ್ಛೇದದಲ್ಲಿ ಹೆಚ್ಚಿನ ಭಾಷೆಗಳನ್ನು ಸೇರಿಸಲು ಶಿಫಾರಸ್ಸು ಮಾಡಿತ್ತು. ಆದರೆ ಇಷ್ಟು ವರ್ಷಗಳಾದರೂ ಈ ವರದಿಯ ಪರಿಶೀಲನೆ ಆಗದೆ ಸಮಿತಿಯೇ ಕೈಚೆಲ್ಲಿ ಕುಳಿತಿದೆ.
ಭಾಷೆಗಳ ಬಗ್ಗೆ ಸರಕಾರಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ತಾಳಿವೆ. ಇಂದು ತುಳುವಿನ ಜೊತೆಗೆ ಸ್ಪರ್ಧಿಸಲು ನೂರಾರು ಭಾಷೆಗಳು ಸಿದ್ಧವಾಗಿವೆ. ಎಂಟನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳಲ್ಲಿ ದೂರದರ್ಶನ ಆರಂಭಿಸುವುದು ಆರ್ಥಿಕ ಸವಾಲು ಎಂದು ಪ್ರಸಾರ ಭಾರತಿ ತಿಳಿಸಿದೆ. ಈ ಎಲ್ಲಾ ಭಾಷೆಗಳಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಲೋಕ ಸೇವಾ ಆಯೋಗಕ್ಕೆ ಅನುಮಾನವಿದೆ. ಹೀಗಿರುವಾಗ ತುಳುವಿನ ಹೋರಾಟಕ್ಕೆ ಪ್ರತಿಫಲ ಸಿಗುತ್ತದೆಯೇ ಎಂಬ ಅನುಮಾನದ ಹೊರತಾಗಿ ಹೋರಾಟದ ಸ್ವರೂಪವೂ ಬದಲಾಗಬೇಕಿದೆ.
ತುಳು, ಕೊಡವ ಮೊದಲಾದ ಕರ್ನಾಟಕದ ಭಾಷೆಗಳಿಗೆ ರಾಜ್ಯ ಭಾಷಾ ಸ್ಥಾನಮಾನ ಯಾಕೆ ನೀಡಬಾರದು?
ಅಖಿಲ ಭಾರತ ಮಟ್ಟದಲ್ಲಿ ತುಳುವಿಗೆ ಸ್ಥಾನಮಾನವನ್ನು ಕಲ್ಪಿಸುವ ಮುನ್ನ ಕರ್ನಾಟಕದಲ್ಲಿ ಅದರ ಸ್ಥಾನ ಏನು ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಇದು ಕೊಡವ ಮತ್ತಿತರ ಕರ್ನಾಟಕದಲ್ಲಿ ಆಡುವ ಭಾಷೆಗಳ ಪ್ರಶ್ನೆ ಕೂಡ ಹೌದು. ಕರ್ನಾಟಕದಲ್ಲಿ ಕೊಡವ, ತುಳು, ಅರೆಭಾಷೆಗಳಿಗೆ ಅಕಾಡೆಮಿಗಳಿವೆ. ಆದರೆ ಇವಾವುಗಳಿಗೂ ರಾಜ್ಯದ ಅಧಿಕೃತ ಭಾಷೆಗಳು ಎಂಬ ಸ್ಥಾನಮಾನ ಸಿಕ್ಕಿಲ್ಲ. ಬಿಹಾರದಲ್ಲಿ ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾ, ಅಂಧ್ರದಲ್ಲಿ ತೆಲುಗಿನ ಜೊತೆಗೆ ಉರ್ದು, ದೆಹಲಿಯಲ್ಲಿ ಹಿಂದಿಯೊಂದಿಗೆ ಉರ್ದು ಮತ್ತು ಪಂಜಾಬಿ, ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ಹಿಂದಿ, ನೇಪಾಳಿ ಮತ್ತು ಒರಿಯಾ ಅಧಿಕೃತ ಭಾಷೆಗಳು ಎಂದು ಘೋಷಿಸಲ್ಪಟ್ಟಿವೆ. ಹಾಗಾದರೆ ಕರ್ನಾಟಕದಲ್ಲಿ ತುಳು, ಕೊಡವ ಮೊದಲಾದ ಭಾಷೆಗಳಿಗೆ ನೀಡಲು ಯಾಕೆ ಸಾಧ್ಯವಿಲ್ಲ?
ಸರಕಾರಕ್ಕೆ ಭಾಷೆಗಳ ಉಳಿವು ಮುಖ್ಯವಲ್ಲ! ಕರಾವಳಿಯ ಸಮಕಾಲೀನ ರಾಜಕಾರಣದಲ್ಲಿ ಭಾಷೆ ಎಂಬುದು ಚುನಾವಣೆಯ ಸಂದರ್ಭದಲ್ಲಿ ಮೂಗಿಗೆ ಸವರುವ ತುಪ್ಪವಾಗಿ ಪರಿಣಮಿಸುತ್ತಿದೆ. ಇದರ ಜೊತೆ ಜೊತೆಗೆ ತುಳು ಮತ್ತು ಕನ್ನಡ ಭಾಷೆಗಳ ನಡುವೆ ಒಡಕು ಮೂಡುತ್ತಿರುವ ಅರಿವಿದ್ದೂ ಈ ಸಮಸ್ಯೆಗಳನ್ನು ಬಗೆ ಹರಿಸಲು ಸರಕಾರ ಕೂಡ ಸಿದ್ಧವಿಲ್ಲ!
ತುಳುವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಮತ್ತು ತುಳು ಸಂಬಂಧಿ ಹೋರಾಟಗಳು ಕೂಡ ರಾಜಕೀಯ ಪ್ರೇರಿತ ಮತ್ತು ತಾತ್ಕಾಲಿಕವಾಗುತ್ತಿವೆ. ಒಮ್ಮೆ ಪ್ರಾಣ ಕೊಡಲು ಸಿದ್ಧ ಎನ್ನುವ ನಾಯಕ ಪ್ರಾಣ ಕೊಡುವುದು ಬೇಡ, ಕನಿಷ್ಟ ಭಾಷೆಯನ್ನು ಪ್ರತಿನಿಧಿಸುವ ಕೆಲಸವಾದರೂ ಮಾಡಬೇಕು.
ಚರಣ್ ಐವರ್ನಾಡು