Home ಜನ-ಗಣ-ಮನ ಹೆಣ್ಣೋಟ ಅಪರಾತ್ರಿಯಲ್ಲಿ ಮಸೀದಿಯ ಮುಂದೆ ಮಂಡಿಯೂರಿದ ಅಪ್ಪ

ಅಪರಾತ್ರಿಯಲ್ಲಿ ಮಸೀದಿಯ ಮುಂದೆ ಮಂಡಿಯೂರಿದ ಅಪ್ಪ

0

(ಈ ವರೆಗೆ….)

ಅಸ್ಪತ್ರೆಯಿಂದ ಮನೆಗೆ ಬಂದ ಲಕ್ಷ್ಮಿ ಚಿತ್ರ ವಿಚಿತ್ರವಾಗಿ ವರ್ತಿಸುತ್ತಾಳೆ. ಅವಳ ಮೈಗೆ ದೆವ್ವ ಸೇರಿದುದು ಎಲ್ಲರಿಗೂ ತಿಳಿಯುತ್ತದೆ. ಅದು ಹೇಗೆ ಮೈಗೆ ಬಂತೆಂಬುದನ್ನು ಹೇಳಿ ಲಕ್ಷ್ಮಿ ನಿದ್ದೆಗೆ ಜಾರುತ್ತಾಳೆ. ಮುಂದಿನದು ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಹದಿನೇಳನೆಯ ಕಂತಿನಲ್ಲಿದೆ.

ತಲೆ ತುಂಬಾ ಮುಸುಕೊದ್ದು ಮಲಗಿದ್ದ ಮಗಳ ಉಸಿರಾಟದ ಏರಿಳಿತವನ್ನೇ ತದೇಕ ಚಿತ್ತದಿಂದ ಗಮನಿಸುತ್ತಾ ಕುಳಿತ ಅಪ್ಪ ಅವ್ವನ ಒಳಗೆ ಆತಂಕ ಮಡುಗಟ್ಟಿತ್ತು. ಇಡೀ ರಾತ್ರಿ ಕಣ್ಣು  ಮಿಟುಕಿಸದೆ ಮಗಳ ಜೀವ ಎಲ್ಲಿ ಕೈ ಜಾರಿ ಬಿಡುವುದೋ  ಎಂಬ ಭಯದಲ್ಲೇ ಪತರುಗುಟ್ಟುತ್ತಾ ಕಾಯ ತೊಡಗಿದರು. ಒಬ್ಬರಿಗೊಬ್ಬರು ಬಾಯಿ ಬಿಟ್ಟು ಮಾತಾಡಿ ಹಗುರಾಗಬೇಕು, ಮುಂದಿನ ದಾರಿ ಏನು  ಎಂಬುದನ್ನು ಕಂಡು ಕೊಳ್ಳಬೇಕು ಎಂದು ಬಲವಾಗಿ ಅನ್ನಿಸುತ್ತಿದ್ದರು ಬಾಯಿ ತೆರೆಯಲಾರದಂತಹ ಪರಿಸ್ಥಿತಿ. ಮಗಳು ಯಾವ ಕ್ಷಣದಲ್ಲಿ ಯಾವ ರೂಪದಲ್ಲಿ  ಕೆರಳಿ ನಿಂತು ಏನು ಅವಾಂತರ ಎಬ್ಬಿಸಿ ಬಿಡುವಳೋ ಎಂಬ ಚಡಪಡಿಕೆಯಲ್ಲೇ ಇಬ್ಬರೂ ಸದ್ದಾಗದಂತೆ ನಿಧಾನವಾಗಿ ಅಡಿಗೆ ಕೋಣೆ ಸೇರಿದರು. ಒಂದಷ್ಟು ಕಾಫಿ ಗುಟುಕರಿಸಿ ಗುಸಪಿಸದಲ್ಲಿಯೇ ತಮ್ಮ ಹರಕು ಮುರುಕು ಮಾತು ಮುಗಿಸಿ ಮತ್ತೆ ಮಗಳ ಬಳಿ ಬಂದು ಕುಳಿತರು.

ಮಧ್ಯರಾತ್ರಿ  ಸುಮಾರು ಎರಡು ಗಂಟೆ ಸರಿಯುತ್ತಾ ಬಂದಿತ್ತು. ಚಿಟ್ಟನೆ ಚಿರುತ್ತ ಎದ್ದು ಕುಳಿತ ಲಕ್ಷ್ಮಿ, “ಅಪ್ಪ ಆ ಕ್ವಾರೆವಯ್ಯ ನನ್ನ ತೊಡೆನ ಹೆಂಗೆ ಜಿಂಗುಟ್ ಬುಟ್ಟ ನೋಡ್ರಪ್ಪ” ಎಂದು ತನ್ನ ಸೀರೆಯನ್ನು ಹಿಂದೆ ಸರಿಸಿ ತೊಡೆ ತೋರಿಸಿದಳು. ಅವಳು ತೋರಿಸಿದ ಜಾಗದಲ್ಲಿ ರಕ್ತ ಚಿಳ್ಳನೆ ಚಿಮ್ಮುತ್ತಿತ್ತು. ಅದನ್ನು ಕಂಡು ಗಾಬರಿಯಾದ ಅವ್ವ “ಇದ್ರು ಮನೆಹಾಳಾಗ” ಎಂದು ಬಯ್ಯುತ್ತಾ  ಅಡಿಗೆ ಕೋಣೆಗೆ ಓಡಿ ಅರಿಶಿಣ ಮತ್ತು ಕಾಫಿ ಪುಡಿ  ತಂದು ಲಕ್ಷ್ಮಿಯ ತೂತುಕೊರೆದುಕೊಂಡಿದ್ದ ತೊಡೆಗೆ ತುಂಬಿ ತನ್ನ ಒಂದು ಹಳೆ ಸೀರೆ ಹರಿದು ಸುತ್ತಿ ಸುತ್ತಿ ಬಿಗಿಯಾಗಿ ಕಟ್ಟಿದಳು. ಆದರೂ ರಕ್ತ ಒಸರುತ್ತಲೇ ಇತ್ತು.  ಲಕ್ಷ್ಮಿ ಅಪ್ಪನನ್ನು ಗಟ್ಟಿಯಾಗಿ ತಬ್ಬಿ ಹಿಡಿದು “ಅಪ್ಪ ಅಪ್ಪ ನೋಡ್ರಪ್ಪ ನಿನ್ನ ಕರ್ಕೊಂಡೇ ಹೊಯ್ತೀನಿ ಅಂತ ಹೆಂಗೆ ತನ್ ದಡೂತಿ ಮೀಸೆ ತಿರುವ್ತಾ ನನ್ ಕಡೀಕೆ ಬತ್ತಾವ್ನೆ. ನನ್ ಕಳುಸ್ಬೇಡಿ ಕನಪ್ಪ ನಾನು ನಿಮ್ಮುನ್ನು ಬುಟ್ಟು ಎಲ್ಲೂ ಹೋಗಕ್ಕಿಲ್ಲ” ಎಂದು ನಡುಗುತ್ತಾ ಕೂತಳು. 

ಅವ್ವನಿಗಾಗಲಿ ಅಪ್ಪನಿಗಾಗಲಿ ಅಲ್ಲಿ ಯಾವ ಕೋರೆ ದಾಡೆಯವನು ಕಾಣಲಿಲ್ಲ. ಆದರೂ ಲಕ್ಷ್ಮಿಯನ್ನು ಸಮಾಧಾನಿಸಲೆಂಬಂತೆ ಅಪ್ಪ ದಡ್ಡನೆಮೇಲೆದ್ದು “ನನ್ನ ಮಗ್ಳುನ್ನ್ ಮುಟ್ಟಿದ್ರೆ ನಿನ್ನ ಕತೆ ನೆಟ್ಟಗಿರಕಿಲ್ಲ ನೋಡು” ಎಂದು ಜೋರು ಮಾಡುತ್ತಾ  ಹೊಡೆಯುವವನಂತೆ  ಗಾಳಿಯಲ್ಲಿ ಬಿರುಸಾಗಿ ಕೈ ಬೀಸತೊಡಗಿದ. ಮರುಗಳಿಗೆಯೇ ನಗಲು ತೊಡಗಿದ ಲಕ್ಷ್ಮಿ”ಅಪ್ಪ  ಆ ದಾಸಯ್ಯ ಬಂದು  ಕ್ವಾರೆವಯ್ಯುಂಗೆ ನಾವು ಇವ್ಳುನ್ನ ಕಳಸಕ್ಕಿಲ್ಲ ಹೋಗು ಅತ್ಲಗಿ ಅಂತ ದರದರನೇ ಆಚೆಗೆ ಎಳ್ಕೊಂಡು ಹೋದ ಬುಡಿ” ಎಂದು  ಬೀಸುತ್ತಿದ್ದ ಅಪ್ಪನ ಕೈ ಹಿಡಿದುಕೊಂಡಳು.  “ಅಪ್ಪ ಈಗ ಆ ದಾಸಯ್ಯ ಮನೆತಕ್ಕೆ ಭಿಕ್ಷುಕ್ ಬತ್ತಿನಿ ಅಂತ ಹೇಳ್ ಹೋಗವ್ನೆ    ನನಗೊಂದು ಹೊಸ ಸೀರೆ ತನ್ನಿ.  ಅದುನ್ನುಟ್ಕೊಂಡು ನಾನು ಆ ದಾಸಯ್ಯುಂಗೆ ಭಿಕ್ಷ ಹಾಕ್ ಬೇಕು ಎಂದು ಹಠ ಹಿಡಿದು ಕೂತಳು. ” ಈ ಅಪರಾತ್ರಿಲಿ  ಯಾವ ಅಂಗ್ಡಿ ತಗ್ದಿರ್ತದವ್ವ? ಹಿಂಗ್ ಚಂಡಿ ಹಿಡ್ಕೊಂಡು ಕೂತಿದ್ದಿಯಲ್ಲ” ಎಂದ ಅವ್ವನ ಮಾತಿಗೆ “ಆ ಮನೋಬಣ್ಣನ ಅಂಗಡಿಗೋಗ್ರಪ್ಪ ಇವತ್ತು ಆ ವಣ್ಣ ಅಂಗಡಿಲೇ ಮಲಗೈತೆ” ಎಂದು ಹೇಳಿದಳು. ಮಗಳ ಮಾತಿಗೆ ಎದಿರಾಡಲಾರದ ಅಪ್ಪ  ಅಂಗಳದ ಗೋಡೆಗೆ ಒರಗಿಸಿ ನಿಲ್ಲಿಸಿದ್ದ  ಸೈಕಲ್ ಏರಿ ಹೊಸ ನಾರಿ ಪುರದ ಕಡೆ ಹೊರಟ.

ಎರಡು ಕಿಲೋಮೀಟರ್ ದೂರ ಇರುವ ಹೊಸ ನಾರಿಪುರ ಸೇರುವುದರೊಳಗೆ ಅಪ್ಪನ ತಲೆಯಲ್ಲಿ ದೊಡ್ಡ ಕೋಲಾಹಲವೇ ಎದ್ದುಬಿಟ್ಟಿತ್ತು. ಚಿಳ್ಳನೆ ಚಿಮ್ಮಿದ ಮಗಳ ತೊಡೆಯ ರಕ್ತ ಉತ್ತರವೇ ಸಿಗದ ದೊಡ್ಡ ಪ್ರಶ್ನೆಯಾಗಿ ಕಾಡುವುದರ  ಜೊತೆಗೆ ಅವಳು ಹೇಳುತ್ತಿದ್ದ ಕೋರೆಯವನ ದಡೋತಿ ಮೀಸೆಯ ಚಿತ್ರ ಆ ಕಾರ್ಗತ್ತಲ ಅಮಾವಾಸ್ಯೆಯ ಕಪ್ಪಿನೊಳಗೆ ಬೃಹದಾಕಾರವಾಗಿ ಬೆಳೆದು ತನ್ನ ಮುಂದೆಯೇ ನಿಂತಂತೆ ಭಾಸವಾಯಿತು. ಅಪ್ಪ ತನಗರಿವಿಲ್ಲದೆ ಸೈಕಲ್  ಇಳಿದು “ನಡಿ ಬಂಚತ್” ಎಂದು ಜೋರು ದನಿಯಲ್ಲಿ  ಘರ್ಜಿಸಿಯೇ ಬಿಟ್ಟ. ಗಾಳಿಯ ಒಂದು ಸಣ್ಣ ಸದ್ದು ಕೇಳದ ಆ ನೀರವತೆಯ ರಾತ್ರಿಯಲ್ಲಿ ಅವನ  ದನಿಯೇ ಅವನಿಗೆ ಭಯ ಹುಟ್ಟಿಸುವಂತೆ ಕೇಳಿ ಸಣ್ಣಗೆ ಬೆವೆತು ಹೋದ. ಎಷ್ಟು ಧೈರ್ಯ ತಂದುಕೊಳ್ಳಬೇಕೆಂದರೂ ಸಾಧ್ಯವಾಗದೆ ಕೈಕಾಲಿನ ಶಕ್ತಿಯೇ ಉಡುಗಿ ಹೋದಂತಾಯಿತು. ಹಾಗೂ ಹೀಗೂ ಕಷ್ಟ ಪಟ್ಟು ಸೈಕಲ್ ನೂಕಿಕೊಂಡು ಮಸೀದಿ ಮುಂದೆ ಬಂದು ನಿಲ್ಲಿಸಿದ. ತುಸು ಹೊತ್ತು ಅಲ್ಲಾಹುವಿನ ಮೇಲೆ ಭಾರಹಾಕಿ  ಮಂಡಿಗಾಲೂರಿ ಕಣ್ಮುಚ್ಚಿದ. ಹಾಗೆ ಕುಳಿತವನಿಗೆ ಅಲ್ಲಿ ಇಲ್ಲಿ ಕೇಳಿದ ಯಮಧೂತರ ಹಲವು ಕತೆಗಳು ಮನಃ ಪಟದಲ್ಲಿ ಮೂಡಿ ತನ್ನ ಜೀವವನ್ನೇ  ಅಲುಗಿಸಿದಂತಾಯಿತು. ಕಣ್ಣಿನಲ್ಲಿ ಧಾರಾಕಾರವಾಗಿ ನೀರು ಸುರಿಸುತ್ತಾ ” ಅಯ್ಯೋ ದೇವ್ರೆ ನನ್ನ ಮಗ್ಳು ಆಯಸ್ ಗಟ್ಟಿ ಮಾಡಪ್ಪ” ಎಂದು ಉದ್ದಂಡ ನಮಸ್ಕಾರ ಹಾಕಿ ಪಂಚೆಯ ತುದಿಯಿಂದ ಕಣ್ಣೊರೆಸಿ ಕೊಳ್ಳುತ್ತಾ ಬಟ್ಟೆ ಅಂಗಡಿ ಕಡೆ ಹೊರಟ. 

ಮನೋಬಣ್ಣನ ಅಂಗಡಿ ಮುಂದೆ ಬಂದು ನಿಂತ ಅಪ್ಪನಿಗೆ, ಒಳಗಿನಿಂದ ಕೇಳಿ ಬರುತ್ತಿದ್ದ ಕರ್ಕಶವಾದ ಗೊರಕೆಯ ಸದ್ದು ತುಸು ಧೈರ್ಯ ತುಂಬಿ ಸ್ವಾಗತಿಸಿತು. “ಇವತ್ತು ಅವಣ್ಣ ಅಂಗಡಿಲೇ ಮಲಗೈತೆ” ಎಂದು ಹೇಳಿದ ಮಗಳ ಮಾತು ಮತ್ತೆ ಕಿವಿಗೆ ಅಪ್ಪಳಿಸಿದಂತಾಗಿ ಅಪ್ಪ ಮತ್ತೆ ಗೊಂದಲದ ಗೂಡಾದ “ಅವ್ಳಗೆಂಗ್ ಗೊತ್ತಾಯ್ತು ಇದು” ಎಂದು ತನಗೆ ತಾನೇ ಗುನುಗಿಕೊಳ್ಳುತ್ತಾ ಮೆಲ್ಲಗೆ ಅಂಗಡಿ ಬಾಗಿಲು ತಟ್ಟಿದ. ಆ ಕಡೆಯಿಂದ ಗೊರಕೆ ಸದ್ದಿನ ಹೊರತು ಯಾವ ಉತ್ತರವೂ ಬರಲಿಲ್ಲ. ಅಪ್ಪ ಮತ್ತೆ ಜೋರಾಗಿ ಬಾಗಿಲು ಬಡಿಯುತ್ತಾ  ಓ.. ಮನೋಬಯ್ಯ‌ ಎಂದು ಗಟ್ಟಿಯಾಗಿ ಕೂಗು ಹಾಕಿದ. ಒಳಗಿನಿಂದ “ಯಾರು ಯಾರದು” ಎನ್ನುವ ಗಾಬರಿಯ ದನಿ ಕೇಳಿ ಬಂದಿತು. ಅಪ್ಪ ಸಮಾಧಾನದ ದನಿಯಲ್ಲಿ “ಗಾಬ್ರಿಯಾಗ್ಬೇಡ ಮನೋಬಯ್ಯ ನಾನು ಬೋಪಯ್ಯ ವಸಿ ಬಾಗ್ಲು ತಗಿ” ಎಂದು ಹೇಳಿದ. 

ಹೆಂಡತಿಯ ರೌದ್ರಾವತಾರಕ್ಕೆ ಹೆದರಿ ತರಗುಟ್ಟುತ್ತಿದ್ದ ಮನೋಬಣ್ಣ, ಹೆಂಡಕ್ಕೆ ಗಂಟಲು ಒಡ್ಡಿದ ದಿನಗಳಲ್ಲೆಲ್ಲ  ಹೀಗೆ ಅಂಗಡಿಯಲ್ಲಿಯೇಉಳಿದು ಅವಳ ಕೆಂಗಣ್ಣಿನಿಂದ ಪಾರಾಗುತ್ತಿದ್ದ.  ರಾತ್ರಿ ಕುಡಿದ ಅಮಲು ಇನ್ನೂ ಇಳಿದಿರಲಿಲ್ಲ ವಾದ್ದರಿಂದ  ಬಾಗಿಲು ತೆಗೆದ ಕೂಡಲೇ ಅವನ ಕಣ್ಣಿಗೆ ಅಪ್ಪ ಎರಡೆರಡು ದೇಹವಾಗಿ ಕಂಡು ಬಂದ. ತುಸು ಗಾಬರಿಯಾಗಿ ಕಣ್ಣುಜ್ಜಿಕೊಂಡ ಮನೋಬಣ್ಣ “ಇದೇನು ಬೋಪಣ್ಣ ಎರೆಡೆರಡಾಗಿ ಕಾಣ್ತೀರಿ” ಎಂದು ತೊದಲಿದ. ಮನೋಬಣ್ಣನ ಈ ಕರಾಮತ್ತು ಬಲ್ಲ ಅಪ್ಪ “ಹಂಗಾದ್ರೆ  ಕುಡ್ದಿದ್ದು ಇನ್ನು ಇಳ್ದಿಲ್ಲ ಅನ್ನು.. ಹೋಗಿ ಮಕುಕ್ ಒಂದಿಷ್ಟು ನೀರ್ ಹಾಕೋ ಸರಿಯಾಯ್ತದೆ” ಎಂದು ಹೇಳಿ ಮುಖ ತೊಳೆಸಿ ಮಾತಿಗೆ ಕೂತ. 

ಅದಾಗಲೇ ಲಕ್ಷ್ಮಿಯ ವಿಚಾರವನ್ನೆಲ್ಲ ತಿಳಿದುಕೊಂಡಿದ್ದ ಮನೋಬಯ್ಯ ತನಗೆ ತಿಳಿದ ಒಂದಿಷ್ಟು ಸಲಹೆಯನ್ನು ಅಪ್ಪನಿಗೆ ನೀಡಿ ಒಂದು ಹೊಸ ಸೀರೆ  ಕೈಗಿಟ್ಟ. ದುಡ್ಡು ಕೊಡಲು ಹೋದ ಅಪ್ಪನನ್ನು ತಡೆದು “ಸಣ್ಣ ಮಗಿನಿಂದ ಎತ್ತಾಡ್ಸಿದ್ ಮಗ ಬೇಗ ಹುಷಾರಾದ್ರೆ ಸಾಕು ಯಾವ ದುಡ್ಡು ಬೇಡ ಹೋಗ್ಬನ್ನಿ ಬೋಪಣ್ಣ” ಎಂದು ಹೇಳಿ ಕಳುಹಿಸಿದ. ಮನೋಬಯ್ಯನೊಂದಿಗಿನ ಮಾತುಕತೆ ಅಪ್ಪನಿಗೆ ಮುಂದೇನು ಮಾಡಬೇಕೆಂಬುದರ ಬಗ್ಗೆ ಇನ್ನಷ್ಟು ಸ್ಪಷ್ಟತೆ ನೀಡಿ ತುಸು ಧೈರ್ಯ ತುಂಬಿತು.

ಒಲೆಗೆ ಉರಿ ಹಾಕಿಸಿ ಮೈ ತುಂಬಾ ಅರಳೆಣ್ಣೆ ಅರಿಶಿಣ ಹಚ್ಚಿಸಿಕೊಂಡ ಲಕ್ಷ್ಮಿ, ಅವ್ವನಿಂದ ಸುಡು ಸುಡುವ ನೀರೆರೆಸಿಕೊಂಡು ಮುದಗೊಂಡಳು. ಅಪ್ಪ ತಂದ ಕೆಂಪಂಚಿನ ಹಸಿರು ಸೀರೆಯುಟ್ಟು, ಮೊರದ ತುಂಬಾ ರಾಗಿ ತುಂಬಿಸಿಕೊಂಡು ಗೇಟಿನ ಬಳಿ ದಾಸಯ್ಯನಿಗಾಗಿ ಕಾಯ ತೊಡಗಿದಳು. ಅವ್ವ ” ಸೀತ್ ಗೀತ ಆದತು.. ಈಟೊತ್ತಿಗೆ ಯಾವ ದಾಸಯ್ಯ ಬಂದಾನು.. ಒಳಗ್ ಬಾವ್ವ  ಲಕ್ಷ್ಮಿ” ಎಂದು ಎಷ್ಟು ಗೋಗರೆದು ಕೊಂಡರು ಕೇಳದೆ “ದಾರಿಲ್ ಬತ್ತಾವ್ನೆ ಸುಮ್ನಿರವ್ವ ಪಾಪ ಅವನು ಅಷ್ಟು ದೂರದಿಂದ ನಡ್ಕೊಂಡು ಬರ್ಬಾರದ ಹೇಳು”. ಎಂದು ಅವ್ವನ ಬಾಯಿ ಮುಚ್ಚಿಸಿ “ದಾಸಯ್ಯ  ಬರತನ್ಕ ನನಗೆ ಕರಿದಿಮ್ಮಿ ಕತೆ ಹೇಳವ್ವ” ಎಂದು ಸಣ್ಣವಯಸ್ಸಿನಿಂದಲೂ ತಾನು ಇಷ್ಟ ಪಟ್ಟು ಹೇಳಿಸಿ ಕೊಳ್ಳುತ್ತಿದ್ದ ಕತೆಗಾಗಿ ಚಿಕ್ಕ ಮಗುವಿನಂತೆ ಕಿವಿ ಆನಿಸಿ ಕೂತಳು.

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

You cannot copy content of this page

Exit mobile version