ಬೆಂಗಳೂರು, ಚುನಾವಣಾ ಬಾಂಡ್ಗಳ ಲಾಭ ಯಾರಿಗೆ ಹೋಗುತ್ತದೆ, ಆ ಐಡಿಯಾ ಹಿಂದಿನ ಕಿಂಗ್ಪಿನ್ ಯಾರು ಎಂಬುದನ್ನು ಈ ದೇಶದ ಸಣ್ಣ ಮಕ್ಕಳು ಹೇಳಬಲ್ಲರು ಎಂದು ನಟ ಕಿಶೋರ್ ಅವರು ತಮ್ಮ ಫೇಸಬುಕ್ ಪೋಸ್ಟ್ ಮೂಲಕ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ಚುನಾವಣಾ ಆಯೋಗಕ್ಕೆ ‘ಎಲೆಕ್ಟೊರಲ್ ಬಾಂಡಿನ’ ಲೆಕ್ಕ ಸಲ್ಲಿಸಲು ಮೂರು ತಿಂಗಳು ಸಮಾಯವಾಕಾಶ ಕೇಳಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತು ಕೇಂದ್ರ ಸರ್ಕಾರದ ಕ್ರಮದ ಕುರಿತು ನಟ ಕಿಶೋರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಎಸ್ಬಿಐ ನಡೆಯನ್ನು ನಾಚಿಕೆಗೇಡಿನದ್ದು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಭಿಕ್ಷುಕರೂ ಡಿಜಿಟಲ್ ಬ್ಯಾಂಕಿಂಗ್ ಮಾಡುವ ಈ ಭಾರತದಲ್ಲಿ, ದೇಶದ ಅತಿ ದೊಡ್ಡಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಅಸಂವಿಧಾನಿಕ ಹಫ್ತಾ ವಸೂಲಿ ಹಗರಣ ಎಲೆಕ್ಟೊರಲ್ ಬಾಂಡಿನ ಲೆಕ್ಕವನ್ನು ಕೈಯಲ್ಲಿ ಬರೆದಿಟ್ಟಿದೆಯಂತೆ. ಎಷ್ಟು ಹಾಸ್ಯಾಸ್ಪದ.. ಹಾಗಾಗಿ 22 ಸಾವಿರ ಎಂಟ್ರಿ ವಿವರ ಕೊಡೋಕೆ ಮೂರು ತಿಂಗಳು ಬೇಕಂತೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.
‘ಸದಾ ಸುಳ್ಳು ಬೊಗಳುವ ರಾಜ ನಮ್ಮ ದೇಶಕ್ಕೆ ದೊರೆಯಾಗಿದ್ದಾರೆ, ಆದರೆ ಅವನ ಪಡೆ ಸುಳ್ಳು ಹೇಳಲೂ ಬಾರದ ದಡ್ಡ ಗೂಂಡಾಪಡೆ. ಇವರೆಲ್ಲ ಸೇರಿ ಯಾರ ಕಿವಿಯ ಮೇಲೆ ಹೂವಿಡಲು ಪ್ರಯತ್ನಿಸುತ್ತಿದ್ದಾರೆ? ಚಿಕ್ಕ ಮಕ್ಕಳೂ ಹೇಳಬಲ್ಲರು ಇದರ ಹಿಂದಿನ ಕೈವಾಡ ಯಾರದೆಂದು.. ಬರೀ ಸುಳ್ಳೇ ಬೊಗಳುತ್ತಾ ಮತ್ತು ಧರ್ಮಾಂಧತೆಯ ಮಂಕುಬೂದಿ ಎರಚುತ್ತಾ ಯಾಮಾರಿಸುವ ಕಲೆ ಕರಗತ ಮಾಡಿಕೊಂಡ ಹಗರಣದ ಕಿಂಗ್ ಪಿನ್, ಅತೀ ಭ್ರಷ್ಟ ಖೈದಿ ನಂ.56 ಇಲ್ಲೂ ತಪ್ಪಿಸಿಕೊಳ್ಳುವರೇ ಎಂದು ಅವರು ವ್ಯಂಗ್ಯವಾಡಿದ್ದಾರೆ.
‘ಅವನಿ’ದ್ದರೆ ಇದೂ ಸಾಧ್ಯವೆಂದು (ಸಬ್ ಕುಚ್ ಮುಮ್ಕಿನ್ ಹೈ)’ ಈ ಮೂರ್ಖಾತಿರೇಕದಿಂದ ಕೂಗಿ ಬಿಡಿ. ದೇಶವನ್ನು, ಪ್ರಜಾಪ್ರಭುತ್ವವನ್ನು ಬಲಿಕೊಟ್ಟು ಸುಮ್ಮನೇ ಒಮ್ಮೆ ಕಣ್ಣುಮುಚ್ಚಿ ಹೇಳಿಬಿಡಿ… ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಹೇಳದೆ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಎಸ್ಬಿಐ ನಡೆಗೆ ಪ್ರಶಾಂತ್ ಭೂಷಣ್ ವಿರೋಧ
ಎಸ್ಬಿಐ ನಡೆಯ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರೋಧದ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸಂಪೂರ್ಣ ದುರುದ್ದೇಶಪೂರಿತವಾಗಿದೆ. ಎಸ್ಬಿಐ ಈ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ವಿಧಾನ ಸಭಾ ಚುನಾವಣೆಗಳಿಗೆ ಮೊದಲೇ ಸಲ್ಲಿಸಬೇಕಿತ್ತು. ಮೂರು ದಿನಗಳ ಕಾಲ ಅವರು ಏನೂ ಮಾಡಲಿಲ್ಲ, ಮತ್ತು ಈಗ ಅವರು ಚುನಾವಣೆ ಕಳೆದ ಬಳಿಕ ಅಂದರೆ ಜೂನ್ 30ರವರೆಗೆ ವಿಸ್ತರಣೆಗೆ ಕೋರಿರುವುದು ಏಕೆ? ಏಕೆಂದರೆ ಸರ್ಕಾರ ಅವರನ್ನು ಈ ಅರ್ಜಿಯನ್ನು ಸಲ್ಲಿಸುವಂತೆ ಕುತಂತ್ರ ಮಾಡಿದೆ ಎಂದು ಅವರು ದೂರಿದ್ದಾರೆ.
ಎಸ್ಬಿಐಯ ಅರ್ಜಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿಯವರು ದೇಣಿಗೆ ವ್ಯವಹಾರವನ್ನು ಮರೆಮಾಚಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಚುನಾವಣಾ ಬಾಂಡ್ಗಳ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವುದು ದೇಶವಾಸಿಗಳ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿರುವಾಗ, ಎಸ್ಬಿಐ ಈ ಮಾಹಿತಿಯನ್ನು ಚುನಾವಣೆಯ ಮೊದಲು ಸಾರ್ವಜನಿಕಗೊಳಿಸಬಾರದು ಎಂದು ಏಕೆ ಬಯಸುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.