Home ಕರ್ನಾಟಕ ಚುನಾವಣೆ - 2023 ಸುಳ್ಯದ ರಾಜಕಾರಣ | ಇತಿಹಾಸ ಸೃಷ್ಟಿಸಲು ಹೊರಟ ಇಬ್ಬರು ಮಹಿಳೆಯರು

ಸುಳ್ಯದ ರಾಜಕಾರಣ | ಇತಿಹಾಸ ಸೃಷ್ಟಿಸಲು ಹೊರಟ ಇಬ್ಬರು ಮಹಿಳೆಯರು

0

ಈ ಏಳು ದಶಕಗಳಲ್ಲಿ 2013ರ ವಿಧಾನಸಭಾ ಚುನಾವಣೆ ವೇಳೆಗೆ ಕೇವಲ ಒಬ್ಬ ಮಹಿಳೆಗೆ ಮಾತ್ರ ಚುನಾವಣಾ ಸ್ಪರ್ಧೆಗೆ ಅವಕಾಶ ಲಭಿಸಿತ್ತು. ಅದರ ನಂತರದಲ್ಲಿ ಈ ಸರ್ತಿ ಇಬ್ಬರು ಮಹಿಳಾಮಣಿಗಳು ಟಿಕೆಟ್ ಪಡೆದ ಅದೃಷ್ಟಶಾಲಿಗಳಾಗಿದ್ದಾರೆ. ಭಾಗೀರಥಿ ಅಥವಾ ಸುಮನಾ ಯಾರು ಗೆದ್ದರೂ ಒಬ್ಬ ಮಹಿಳೆಯಾಗಿ ನನಗೆ ಹಾಗೂ ನನ್ನಂತ ಅನೇಕರಿಗೆ ಅದು ಸ್ವಾಗತಾರ್ಹ ಸಂಗತಿ – ಚಂದ್ರಾವತಿ ಬಡ್ಡಡ್ಕ, ಪತ್ರಕರ್ತೆ

ಈ ಬಾರಿಯ ಸುಳ್ಯ ವಿಧಾನ ಸಭಾ ಕ್ಷೇತ್ರ ಚುನಾವಣಾ ವಿಶೇಷವೆಂದರೆ ಇಬ್ಬರು ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿರುವುದು. ಸುಳ್ಯ ಕ್ಷೇತ್ರವು ಪರಿಶಿಷ್ಠ ಜಾತಿಯ ಅಭ್ಯರ್ಥಿಗೆ ಮೀಸಲಾಗಿರುವ ಕ್ಷೇತ್ರ. ಸುಳ್ಯದ ಒಟ್ಟಾರೆ ಚುನಾವಣಾ ಇತಿಹಾಸವನ್ನು ಗಮನಿಸಿದರೆ, ಇದುವರೆಗೆ, ಈ ಏಳು ದಶಕಗಳಲ್ಲಿ 2013ರ ವಿಧಾನಸಭಾ ಚುನಾವಣೆ ವೇಳೆಗೆ ಕೇವಲ ಒಬ್ಬ ಮಹಿಳೆಗೆ ಮಾತ್ರ ಚುನಾವಣಾ ಸ್ಪರ್ಧೆಗೆ ಅವಕಾಶ ಲಭಿಸಿತ್ತು. ಅದರ ನಂತರದಲ್ಲಿ ಈ ಸರ್ತಿ ಇಬ್ಬರು ಮಹಿಳಾಮಣಿಗಳು ಟಿಕೆಟ್ ಪಡೆದ ಅದೃಷ್ಟಶಾಲಿಗಳಾಗಿದ್ದಾರೆ.

ಪ್ರಬಲ ಪಕ್ಷವಾಗಿರುವ, ಸತತ ಆರು ಬಾರಿಗೆ ಶಾಸಕರನ್ನು ನೀಡಿರುವ ಭಾರತೀಯ ಜನತಾ ಪಕ್ಷದಿಂದ ಭಾಗೀರಥಿ ಮುರುಳ್ಯ ಹಾಗೂ ರಾಜ್ಯದಲ್ಲಿ ತಲೆ ಎತ್ತಲು ಹವಣಿಸುತ್ತಿರುವ ಆಮ್ ಆದ್ಮಿ ಪಕ್ಷದಿಂದ ಸುಮನಾ ಬೆಳ್ಳಾರ್ಕಾರ್ ಸುಳ್ಯದಲ್ಲಿ ಇತಿಹಾಸ ಸೃಷ್ಟಿಸಲು ಹೊರಟವರು.

2013ರ ಚುನಾವಣೆ ವೇಳೆಗೆ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರ್ನಾಟಕ ಜನತಾ ಪಕ್ಷ ಹುಟ್ಟುಹಾಕಿದ್ದರು. ಆ ಸಂದರ್ಭದಲ್ಲಿ ಸುಳ್ಯದ ಬೆಟ್ಟಂಪಾಡಿಯವರಾದ ಚಂದ್ರಾವತಿ ಅವರು ಕೆಜೆಪಿಯಿಂದ ಸ್ಪರ್ಧಿಸಿ ಸುಳ್ಯ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ ಮೊದಲ ಮಹಿಳಾ ಅಭ್ಯರ್ಥಿ ಎಂಬ ಇತಿಹಾಸ ಸೃಷ್ಟಿಸಿದ್ದರು. ಆ ಸರ್ತಿ ಬಿಜೆಪಿಯ ಎಸ್ ಅಂಗಾರ ಅವರು ಗೆದ್ದು ಶಾಸಕರಾಗಿದ್ದರು. ಚಂದ್ರಾವತಿಯವರು ಆರನೇ ಸ್ಥಾನದಲ್ಲಿ 1001 ಮತಕ್ಕೆ ತೃಪ್ತಿ ಪಡಬೇಕಾಗಿತ್ತು.

ಭಾಗೀರಥಿ

ಈ ಸರ್ತಿ 2023ರ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಭಾಗೀರಥಿ ಹಾಗೂ ಸುಮನ ಇಬ್ಬರು ಮಹಿಳೆಯರೂ ರಾಜಕೀಯ ಹಿನ್ನೆಲೆ ಇರುವವರು. ರಾಜಕೀಯದ ಕುಟುಂಬದಿಂದ ಬಂದವರು. ಭಾಗೀರಥಿಯವರು ಈ ಹಿಂದೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾಪಂಚಾಯತ್ ಸದಸ್ಯರಾಗಿದ್ದವರು. ಅವರ ಅಪ್ಪ-ಅಮ್ಮಂದಿರಿಬ್ಬರೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದವರು. ಆದಿದ್ರಾವಿಡ ಸಮುದಾಯಕ್ಕೆ ಸೇರಿದ ಇವರು ಕಡುಕಷ್ಟದ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಿಂದ ಬಂದವರು. ಇವರ ಪಕ್ಷನಿಷ್ಠೆ ಹಾಗೂ ಸೇವಾ ಮನೋಭಾವ ಪಕ್ಷದ ಮುಖಂಡರ ಮೆಚ್ಚುಗೆಗೆ ಪಾತ್ರವಾಗಿದ್ದು ಇದೀಗ ವಿಧಾನಸಭಾ ಚುನಾವಣಾ ಸ್ಪರ್ಧೆಗಾಗಿ ಟಿಕೆಟ್ ಲಭಿಸುವಂತೆ ಮಾಡಿದೆ. ಟಿಕೆಟ್ ಘೋಷಣೆಗೂ ಮುಂಚಿತವಾಗಿ ಪಕ್ಷವು ನಡೆಸಿದ ಆಂತರಿಕ ಸಮೀಕ್ಷೆಯಲ್ಲೂ ಭಾಗೀರಥಿಯವರ ಹೆಸರು ಗಟ್ಟಿಯಾಗೇ ರಿಂಗಣಿಸಿತ್ತು ಎಂಬುದು ಪಕ್ಷದೊಳಗಿಂದ ಹೊರಟಿದ್ದ ಸುದ್ದಿ.

ಅದೇನೇ ಇರಲಿ ಟಿಕೆಟ್ ಲಭಿಸಿದ್ದರಿಂದ ಸಹಜವಾಗಿಯೇ ಸಂತೋಷಗೊಂಡಿರುವ ಭಾಗೀರಥಿಯವರು ತಮ್ಮ ಕಷ್ಟಗಳನ್ನು ನೆನೆಯುತ್ತಾ ಕಣ್ಣೀರು ಸುರಿಸುತ್ತಾ ತಾನು ಪಕ್ಷದ ಸಲಹೆಸೂಚನೆಗಳಿಗೆ ಕಟಿಬದ್ಧರಾಗಿರುವುದಾಗಿ ಹೇಳುತ್ತಾರೆ. ಬಹಳ ಹಿಂದುಳಿದ ಪಂಗಡದಿಂದ ಬಂದಿರುವ ತೀರಾ ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಗಳನ್ನು ಅನುಭವಿಸಿಕೊಂಡೇ ಬೆಳೆದಿರುವ ಅವರು ಜಾತಿಧರ್ಮದ ಬೇಧವಿಲ್ಲದಂತೆ ಎಲ್ಲ ಹಿಂದುಳಿದವರ ಸಹಾಯಕ್ಕಾಗಿ, ಅಂತವರ ಬೆಂಬಲಕ್ಕಾಗಿ ಪಣತೊಟ್ಟಿದ್ದಾರೆ. ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೂ ತನ್ನ ಗುರಿ ಎಂದು ಹೇಳಿಕೊಂಡಿದ್ದಾರೆ. ಪಿಯುಸಿ ತನಕ ಓದಿರುವ ಇವರು ವಿವಿಧ ಹಂತಗಳಲ್ಲಿ, ಕೂಲಿ ಕೆಲಸ ಮಾಡಿ, ಶಿಕ್ಷಕಿಯಾಗಿ, ಟೈಲರಿಂಗ್ ಮಾಡಿ, ಹೈನುಗಾರಿಕೆಯಲ್ಲಿ ತೊಡಗಿದ್ದವರು. ರಾಜಕಾರಣಿಯಾಗಿ ಪಕ್ಷ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದವರು.

ತಮ್ಮ ಅನುಭವಗಳನ್ನು ಹೇಳುತ್ತಾ, ತಮಗೆ ಕೇಳಲಾಗುವ ಪ್ರಶ್ನೆಗಳಿಗೆ ಬಹಳ ಜಾಗರೂಕತೆಯಿಂದ ಸಮತೋಲಿತವಾದ ಉತ್ತರಗಳನ್ನು ನೀಡುತ್ತಾ, ಪಕ್ಷದ ಹಿರಿಯರ ಸಲಹೆ ಸೂಚನೆಯೊಂದಿಗೆ ಎಲ್ಲರ ಪ್ರೀತಿವಿಶ್ವಾಸಗಳೊಂದಿಗೆ ಮುಂದಡಿ ಇಡುವುದಾಗಿ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ತಮ್ಮ ಅತಿಭಾವುಕತೆಯನ್ನು ಮೆಟ್ಟಿನಿತ್ತು ಸದೃಢತೆಯನ್ನು ಮೈಗೂಡಿಸಿಕೊಂಡಾರು.

ಸುಮನಾ

ಇತ್ತ ಆಪ್ ಪಕ್ಷದ ಸುಮನಾ ಬೆಳ್ಳಾರ್ಕಾರ್ ಎಂಬಿಎ ಪದವೀಧರೆ. ಸುಳ್ಯಕ್ಷೇತ್ರದಿಂದ ಎರಡುಬಾರಿ ಗೆದ್ದು ಶಾಸಕರಾಗಿದ್ದ ಶ್ರೀಯುತ ಕುಶಲ ಅವರ ಪುತ್ರಿ. ಬೆಂಗಳೂರಿನಲ್ಲಿದ್ದ ಕೆಲಸವನ್ನು ತೊರೆದು ಸುಳ್ಯದಲ್ಲಿ ನೆಲೆಸಿದ್ದಾರೆ. ಇವರ ಅಭ್ಯರ್ಥಿತನವು ಸಾಕಷ್ಟು ಮೊದಲಾಗಿಯೇ ನಿರ್ಧರಿತವಾಗಿದ್ದರಿಂದ ಆಗಿಂದಲೇ ಅವರು ಹೋಂವರ್ಕ್, ಫೀಲ್ಡ್ ವರ್ಕ್ ಆರಂಭಿಸಿದ್ದರು. ಮನೆಯಲ್ಲಿ ರಾಜಕೀಯ ವಾತಾವರಣದಲ್ಲಿ ಬೆಳೆದು ಬಂದುದರಿಂದ ಇವರಲ್ಲೂ ಸಹಜವಾಗಿಯೇ ಇದರ ಪ್ರಭಾವ ಇದೆ. ಕ್ಷೇತ್ರದ ಜನತೆಯ ನಾಡಿಮಿಡಿತವನ್ನು ಅರಿತು ಈ ನಿಟ್ಟಿನಲ್ಲಿ ತಾನು ಮುಂದುವರಿಯುವುದಾಗಿ ಹೇಳುತ್ತಾರೆ. ಸ್ಪಷ್ಟ ನಿಲುವು, ದೃಢತೆ ಇವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಇವರು ಇದೀಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತು ತಿರುಗಾಟ ಮುಗಿಸಿದ್ದಾರೆ.

ಬಿಜೆಪಿಯ ಭದ್ರಕೋಟೆ ಎಂಬ ಬಿರುದಾಂಕಿತ ಸುಳ್ಯ ಕ್ಷೇತ್ರದಿಂದ ಭಾಗೀರಥಿ ಮುರುಳ್ಯ ಅವರಿಗೆ ಸುಲಭ ಜಯ ಎಂದು ಹೇಳಲಾಗುತ್ತಿದ್ದರೂ, ಕಾಂಗ್ರೆಸ್‌ನೊಳಗಿನ ಅಸಮಾಧಾನ ಶಮನಗೊಂಡಿದ್ದು, ಒಗ್ಗಟ್ಟು ಪ್ರದರ್ಶಿತವಾಗಿರುವ ಹಿನ್ನೆಲೆಯಲ್ಲಿ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದರೂ ಮಾಡೀತು ಎಂಬುದು ಇನ್ನೊಂದು ಲೆಕ್ಕಾಚಾರ.

ಭಾಗೀರಥಿಯವರ ಹಿನ್ನೆಲೆ ಕಂಡವರು ಅವರನ್ನು ಕರ್ನಾಟಕದ ಮುರ್ಮು ಎಂದೂ ಹೇಳುತ್ತಿದ್ದಾರೆ! ಅದೇನೇ ಇರಲಿ ಭಾಗೀರಥಿ ಅಥವಾ ಸುಮನಾ ಯಾರು ಗೆದ್ದರೂ ಒಬ್ಬ ಮಹಿಳೆಯಾಗಿ ನನಗೆ ಹಾಗೂ ನನ್ನಂತ ಅನೇಕರಿಗೆ ಸ್ವಾಗತಾರ್ಹ ಸಂಗತಿ. ಸುಳ್ಯ ಕ್ಷೇತ್ರದಿಂದ ಒಬ್ಬ ಮಹಿಳೆ ಆಯ್ಕೆಯಾಗಿ ಹೊಸ ಇತಿಹಾಸ ಬರೆಯುವಂತಾಗಲಿ.

ಚಂದ್ರಾವತಿ ಬಡ್ಡಡ್ಕ

ಪತ್ರಕರ್ತೆ, ಅನುವಾದಕಿ

ಇದನ್ನೂ ಒದಿ-http://ಕಲಬುರಗಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು : ಮರಳಿ ‘ಕೈ’ವಶಗೊಳ್ಳುವುದೇ ಕಾಂಗ್ರೆಸ್ಸಿನ ಕೋಟೆ?

You cannot copy content of this page

Exit mobile version