ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಪದೇ ಪದೇ ಹೊಗಳುವ ಮೂಲಕ ತನ್ನ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುತ್ತಿರುವ ಶಶಿ ತರೂರ್ ಇದೀಗ ಮಾಧ್ಯಮಗಳ ಪಾಲಿನ ಆಸಕ್ತಿಯ ಕೇಂದ್ರವಾಗಿ ಬದಲಾಗಿದ್ದಾರೆ.
ಇದೀಗ ತನ್ನ ಮೋದಿ ಹೊಗಳಿಕೆಯ ಕುರಿತಾಗಿ ಪ್ರತಿಕ್ರಿಯಿಸಿರುವ ತರೂರ್ ತನ್ನ ಹೊಗಳಿಕೆಗಳನ್ನು ತಾನು ಬಿಜೆಪಿ ಸೇರುವುದರ ಸಂಕೇವಾಗಿ ಭಾವಿಸಬಾರದು ಎಂದು ಹೇಳಿದ್ದಾರೆ.
ಇತ್ತೀಚೆಗೆ, ಮೋದಿ ಸರ್ಕಾರದ ವಿದೇಶಾಂಗ ನೀತಿಗಳನ್ನು ಹೊಗಳಿ ಅವರು ಇಂಗ್ಲಿಷ್ ನಿಯತಕಾಲಿಕೆಯಲ್ಲಿ ಬರೆದ ಲೇಖನವು ಚರ್ಚೆಯ ವಿಷಯವಾಗಿದೆ. ಅವರು ಬಿಜೆಪಿ ಸೇರುವುದು ಖಚಿತ ಎಂಬ ಊಹಾಪೋಹಗಳು ಜೋರಾಗಿವೆ. ಅದರಲ್ಲೂ ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಅದರ ನಾಯಲ ರಾಹುಲ್ ಗಾಂಧಿ ಕಟುವಾಗಿ ಟೀಕಿಸುತ್ತಿರುವಾಗಲೇ ತರೂರ್ ಇಂತಹದದ್ದೊಂದು ಲೇಖನ ಬರೆದಿದ್ದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ತರೂರ್ “ಆಪರೇಷನ್ ಸಿಂಧೂರ್ನ ಯಶಸ್ಸನ್ನು ಆ ಲೇಖನ ವಿವರಿಸಿದೆ. ಇದು ಎಲ್ಲಾ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತದೆ. ಪ್ರಧಾನಿ ಮೋದಿ ಇತರ ದೇಶಗಳೊಂದಿಗೆ ಸಂಬಂಧಗಳನ್ನು ಬಲಪಡಿಸುವಲ್ಲಿ ಶಕ್ತಿ ಮತ್ತು ಚೈತನ್ಯವನ್ನು ತೋರಿಸಿದ್ದಾರೆ ಎಂದು ನಾನು ಹೇಳಿದೆ. ನಾನು ಕಾಂಗ್ರೆಸ್ ಅಥವಾ ಬಿಜೆಪಿಯ ವಿದೇಶಾಂಗ ನೀತಿಯ ಕುರಿತು ಮಾತನಾಡಿಲ್ಲ. ನಾನು ಮಾತನಾಡಿದ್ದು ಭಾರತದ ವಿದೇಶಾಂಗ ನೀತಿಯ ಕುರಿತು. 11 ವರ್ಷಗಳ ಹಿಂದೆ ನಾನು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷನಾಗಿದ್ದಾಗಲೂ ಇದೇ ವಿಷಯವನ್ನು ಉಲ್ಲೇಖಿಸಿದ್ದೆ” ಎಂದು ಹೇಳಿದ್ದಾರೆ.