Sunday, June 22, 2025

ಸತ್ಯ | ನ್ಯಾಯ |ಧರ್ಮ

ಕನಸುಗಳಿಗೆ ಕಾವು ನೀಡಿ, ಯೋಚಿಸಿ ಮತನೀಡಿ

ಮತ್ತೊಂದು ಚುನಾವಣೆ ಬಂದಿದೆ.  ಈ ಹೊತ್ತು ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ಸದಾಶಯಗಳನ್ನು ಅರ್ಥಮಾಡಿಕೊಂಡು ಅದರ ಮೂಲಕ ಬಡವನ ನಿಟ್ಟುಸಿರು, ಅಸಹಾಯಕರ ನೋವು, ದುಡಿವ ಮೈಕೈಗಳ ಆಯಾಸ, ಆಶಕ್ತರ ಆಶಯಗಳಿಗೆ ಹೇಗೆ ಧ್ವನಿಯಾಗಬೇಕು ಎಂಬ ವ್ಯಕ್ತಿ ನಮಗೆ ಮುಖ್ಯವಾಗಬೇಕು. ಜಾತಿ ಧರ್ಮಗಳನ್ನು ಮೀರಿ ರಸಋಷಿ ಕುವೆಂಪು ನೀಡಿದ ವಿಶ‍್ವಮಾನವತೆಯ ಸಂದೇಶ ಮತ್ತೆ ನಮ್ಮೆದೆಯಲ್ಲಿ ಮಾರ್ದನಿಸಬೇಕು. ಯೋಚಿಸಿ ಮತ ನೀಡಿ – ಡಾ. ಉದಯಕುಮಾರ್‌ ಇರ್ವತ್ತೂರು

ಮಾಧ್ಯಮ, ಸಾಮಾಜಿಕ ಮಾಧ್ಯಮಗಳು ನಮ್ಮ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಸಂವಿಧಾನದ ಆಶಯಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತಿದ್ದಾರೋ, ನಡೆದುಕೊಳ್ಳುತ್ತಿಲ್ಲವೋ ಎನ್ನುವುದನ್ನು ಜನಸಾಮಾನ್ಯರಿಗೆ ಹೇಳುವ ಬಹಳ ಪವಿತ್ರವಾದ ಕೆಲಸವನ್ನು ಮಾಡಬೇಕು. ಆದ್ದರಿಂದಾಗಿಯೇ ಮಾ‍ಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಯಲಾಗುತ್ತದೆ. ಆದರೆ, ಇಂದು ಆ ಎಲ್ಲ ಅಂಗಾಂಗಗಳು ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿವೆ. ಸಂವಿಧಾನದ ಬಗೆಗಿನ ಬದ್ಧತೆಯ ಪೌಷ್ಠಿಕಾಂಶದ ಕೊರತೆ ತೀವ್ರವಾಗಿ ಕಾಡುತ್ತಿರುವ ಕಾರಣ, ಸಾಮಾಜಿಕ ಹಿತಾಸಕ್ತಿಯ, ಸತ್ಯದ ಮರಣದ ಪ್ರಮಾಣದಲ್ಲಿ ತೀವ್ರಗತಿಯ ಏರಿಕೆ ಕಂಡುಬರುತ್ತಿರುವುದು ಅಭಿವೃದ್ಧಿಯ ಅವಲಕ್ಷಣ. ಸಾಮಾಜಿಕ ಹಿತವನ್ನು, ಎಚ್ಚರದಿಂದ ಕಾಯಬೇಕಿರುವ, ಸಂವಿಧಾನದ ಹಿತಾಸಕ್ತಿಯನ್ನು ಕಾಯುವ ಸಾಕು ನಾಯಿಗಳಾಗಬೇಕಿದ್ದ ಮಾಧ್ಯಮ, ಹಣ, ಅಧಿಕಾರ, ತೋಳುಬಲ, ಧರ್ಮಾಂಧತೆಯ ಗರ್ಭಗುಡಿಯನ್ನು ಕಾಯುವ ಸಾಕುನಾಯಿಗಳಾಗಿ ಬದಲಾಗಿರುವುದನ್ನು ಕಾಣಬಹುದಾಗಿದೆ. ಅಂಗೈ ಹುಣ್ಣಿಗೆ ಕನ್ನಡಿಯ ಅವಶ್ಯಕತೆ ಏನೂ ಇಲ್ಲ.

ಒಂದು ಚಾನಲ್ ನಡೆಸುವವರು ಯಾರು? ಅದಕ್ಕೆ ಅಗತ್ಯವಿರುವ ಸಂಪನ್ಮೂಲ ಹೂಡಿರುವವರು ಯಾರು? ಅಲ್ಲಿ ಕೆಲಸ ನಿರ್ವಹಿಸುವ ವರದಿಗಾರರ ಹಿನ್ನೆಲೆಯೇನು? ಅವರ ಸಾಮಾಜಿಕ ಬದ್ಧತೆ ಏನು? ಎಂಬಿತ್ಯಾದಿ ವಿವರಗಳನ್ನು ತಿಳಿದುಕೊಂಡರೆ ನಾವೆತ್ತ ಸಾಗುತ್ತಿದ್ದೇವೆ ಎನ್ನುವುದನ್ನು ತಿಳಿಯಬಹುದು. ಇಂತಹ ಕಾಲದಲ್ಲಿ ಜನಸಾಮಾನ್ಯರ ನೋವಿಗೆ, ಹತಾಶೆಗೆ, ನಿಟ್ಟುಸಿರಿಗೆ ಕರಗುವ, ಮರುಗುವ ಒಂದಷ್ಟು ಮನಸುಗಳು ಉಳಿದಿರುವುದು ನಮ್ಮ ಅದೃಷ್ಟ. ಅಂತಹ ಜನರ ಸಂತತಿ ಸಾವಿರವಾಗಲಿ ಎನ್ನುವುದು ನನ್ನ ನಿತ್ಯದ, ಸತ್ಯದ ಹರಕೆ ಮತ್ತು ಹಾರೈಕೆ.

ಇದನ್ನೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ, ಈ ಚುನಾವಣೆಯ ಕಾಲದಲ್ಲಿ ನಾವು ನಮ್ಮನ್ನು ಆಳಿಕೊಳ್ಳಲು ಯಾರನ್ನು ಆರಿಸಬೇಕು, ಹೀಗೆ ಆರಿಸಿಕೊಳ್ಳುವ ಹಂತದಲ್ಲಿ ಏನೆಲ್ಲ ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು, ಈ ಚುನಾವಣೆಯ ಪ್ರಕ್ರಿಯೆಯಲ್ಲಿ ಯಾರ್ಯಾರ ಜವಾಬ್ದಾರಿಗಳು ಏನು ಎನ್ನುವುದನ್ನು ಚರ್ಚಿಸಬೇಕಾದ ಉಮೇದುವಾರರು, ಮಾಧ್ಯಮಗಳು ಇದೆಲ್ಲವನ್ನು ಬಿಟ್ಟು ಚಾಣಕ್ಯರ ಬಗ್ಗೆ, ಬಾಡೂಟದ ಬಗ್ಗೆ, ಮುಂದೆ ಹುಟ್ಟಬೇಕಾದ ಕೂಸಿನ ಕುಲಾವಿಯ ಬಗ್ಗೆ, ಯಾರಿಗೆ ಯಾವ ಜಾತಿಯ ಬೆಂಬಲ, ಯಾರ ಮಾತಿನಿಂದ ಯಾವ ಜಾತಿಯ ಜನರ ಮತ ಬರುತ್ತೆ ಯಾ ಹೋಗುತ್ತೆ…. ಇತ್ಯಾದಿ ವಿಷಯಗಳನ್ನು ಚರ್ಚೆ ಮಾಡಿ ಬಹುಜನರ ದಿನನಿತ್ಯದ ಬದುಕಿನ ಸಮಸ್ಯೆಗಳ ಬಗ್ಗೆ, ಈ ನಾಡಿನ ಸಂಪನ್ಮೂಲ ಸದ್ಬಳಕೆ ಆಗದಿರುವ ಬಗ್ಗೆ, ಆಡಳಿತ ಯಂತ್ರದ ಅಮಾನವೀಯ ಅದಕ್ಷತೆಯ ಬಗ್ಗೆ, ನಿದ್ರೆಹೋದ ಕಾವಲುಗಾರರ ಬಗ್ಗೆ, ಮಾತಿನಲ್ಲಿಯೇ ಮಂಡಿಗೆ ಬಡಿಸಿದವರ ಬಗ್ಗೆ, ಮಾತನಾಡಿ ಮಾತುಗಳು ತೂಕ ಕಳೆದುಕೊಂಡು ಕನ್ನಡ ನಾಡಿನ ಸಾಂಸ್ಕೃತಿಕ ಸಿರಿತನಕ್ಕೆ ಗರಬಡಿಸುವ ಕೆಲಸದಲ್ಲಿ ತೊಡಗಿ ಕೊಂಡಿರುವುದು ಕಣ್ಣೆದುರಿಗಿದ್ದರೂ ನಾವು ಈ ಬಗ್ಗೆ ಮೌನವಾಗಿರುವುದು ಇಂದಿನ ವಾಸ್ತವ. ಇಂತಹ ಗೊಂದಲದ ವಾತಾವರಣದಲ್ಲಿ ಮೈಮರೆಯುವ ಮೊದಲೇ ನಾವು ನಮ್ಮನ್ನು ಎಚ್ಚರಿಸಿಕೊಳ್ಳುವ ಕಾರ್ಯ ಮಾಡಲೇಬೇಕಿದೆ.

ನಮ್ಮ ಸರಕಾರ ಕಳೆದ ಐದು ವರ್ಷದಲ್ಲಿ ತಾನು ಏನು ಮಾಡುತ್ತೇನೆ ಎಂದು ವಾಗ್ದಾನ ಮಾಡಿದೆ? ಅದರಲ್ಲಿ ಎಷ್ಟನ್ನು ಸಾಧಿಸಿದೆ? ಇದರಿಂದ ಜನಸಾಮಾನ್ಯರ ಬದುಕಿನಲ್ಲಿ ಯಾವ ಬದಲಾವಣೆಯಾಗಿದೆ? ನಮ್ಮ ಜನಪ್ರತಿನಿಧಿಗಳ ಆಸ್ತಿಯಲ್ಲಿ ಆದ ಹೆಚ್ಚಳದ ಮೂಲ ಯಾವುದು? ನಮ್ಮ ತೆರಿಗೆಯಲ್ಲಿ ಎಷ್ಟು ಪಾಲು ಕೇಂದ್ರ ಸರಕಾರಕ್ಕೆ ಹೋಯಿತು? ಅದರಲ್ಲಿ ನಿಜವಾಗಿಯೂ ರಾಜ್ಯಕ್ಕೆ ಬರಬೇಕಾದ ಪಾಲು ಎಷ್ಟು? ಅದು ಬಂದಿದೆಯೇ? ಬಂದಿದ್ದರೆ ಅದರ ವಿನಿಯೋಗ ಆಗಿದೆಯೇ? ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆಯಾಗಬೇಕು. ಈ ಚರ್ಚೆಗಳು ಶಾಸನಸಭೆಯಲ್ಲಿ ಆಗಬೇಕು. ಆಡಳಿತ ನಡೆಸುವವರಿಗೆ ಇರುವಷ್ಟೇ ಜವಾಬ್ದಾರಿ ವಿರೋಧಪಕ್ಷಗಳಿಗೂ ಇರುತ್ತದೆ. ಸರಕಾರದ ವೈಫಲ್ಯವನ್ನು ಗುರುತಿಸಿ ಸಾರ್ವಜನಿಕರಿಗೆ ತಿಳಿಸುವುದು, ಸರಕಾರದ ಕಿವಿ ಹಿಂಡುವುದು, ವಿರೋಧ ಪಕ್ಷದ ಕೆಲಸ. ಸ್ವಲ್ಪ ಸಮಯದ ಹಿಂದಿನವರೆಗೂ ಈ ಕೆಲಸವನ್ನು ಅವು ಶಿಸ್ತಾಗಿಯೇ ಮಾಡುತ್ತಿದ್ದವು. ಆದರೆ, ಇತ್ತೀಚೆಗೆ ಯಾಕೋ ಮಾಧ್ಯಮಗಳು ಸರಕಾರವನ್ನು ಎಚ್ಚರಿಸುವ ಬದಲಿಗೆ ವಿರೋಧ ಪಕ್ಷಗಳನ್ನು ಚುಚ್ಚುವುದರಲ್ಲಿಯೇ ಆಸಕ್ತಿ ವಹಿಸುತ್ತಿವೆ. ಬಹು ಪತ್ರಿಕಾರಂಗದಲ್ಲಿ ಇರುವವರೂ ತಮ್ಮ ಆಸ್ತಿ ವಿವರ ಘೋಷಿಸಿಕೊಂಡರೆ ಬಹಳಷ್ಟು ವಿಷಯಗಳು ಬೆಳಕಿಗೆ ಬರಬಹುದೇನೋ.

ಜನಸಾಮಾನ್ಯರು ಅವಲಂಬಿಸಿರುವ ಸಾರ್ವಜನಿಕ ಶಿಕ್ಷಣ, ಆರೋಗ್ಯ, ಆಹಾರ ಪಡಿತರ, ಸರಕಾರದ ಸವಲತ್ತುಗಳು, ಕೆಳ ಮತ್ತು ಬಡವರ್ಗದ ಜನರಿಗೆ ಬದುಕಲು ಅಗತ್ಯ ಕೂಡಾ. ಈ ಬಗ್ಗೆ ಕಲ್ಯಾಣ ರಾಜ್ಯದ ಕಲ್ಪನೆಗೆ ಅನುಗುಣವಾಗಿ ಸರಕಾರ ಏನಾದರೂ ಕ್ರಮ ಕೈಗೊಂಡರೆ ಅಮಾನುಷವಾಗಿ ಪ್ರತಿಕ್ರಿಯೆ ನೀಡುವ ಮಂದಿಗೆ ಮಂತ್ರಿ ಮಾಗಧರನ್ನು ಎದುರುಗೊಳ್ಳಲು, ಜನರ ಪ್ರತಿನಿಧಿಯಾಗಿರುವ ಜನಸೇವಕರನ್ನುಸಾಕಲು ತಗಲುವ ಕೋಟಿಗಟ್ಟಲೆ ಹಣದ ಬಗ್ಗೆ ತಿಳಿಯದೇ ಹೋಗುತ್ತಿರುವುದು ವಿಷಾದನೀಯ. ಸಾರ್ವಜನಿಕರಿಂದ ಸಂಗ್ರಹಿಸುವ ಹಣದ ಬಗ್ಗೆ ಸಾಮಾಜಿಕ ಉತ್ತರದಾಯಿತ್ವದ ಪ್ರಶ್ನೆ ಎತ್ತಿದರೆ ಒಂದೋ ದಿವ್ಯ ನಿರ್ಲಕ್ಷ್ಯ, ಇಲ್ಲವಾದರೆ ಹಿಂಬಾಲಕರ ಆಕ್ರಮಣ.

ಈ ದೇಶದ ಜನರಿಗೆ ಘನತೆಯಿಂದ ಬದುಕುವ ಅವಕಾಶಗಳು ಲಭ್ಯವಿರಬೇಕು ಎಂದು ಆಶಿಸುವ ಸಂವಿಧಾನದ ಆಶಯವನ್ನು ಅನುಷ್ಠಾನಗೊಳಿಸುವ ಎಷ್ಟು ಕೆಲಸಗಳು ಸರಕಾರಗಳ ಮೂಲಕ ಆಗಿವೆ, ಆಗಲಿವೆ ಎನ್ನುವ ಬಗ್ಗೆ ಚರ್ಚೆಗಳು ಯಾಕೋ ಬಹಳ ಅಪರೂಪವಾಗಿಬಿಟ್ಟಿವೆ. ಜನರನ್ನು ಪ್ರತಿನಿಧಿಸುವ ಒಬ್ಬ ಉಮೇದುವಾರ ಒಂದು ಚುನಾವಣೆಗೆ ಜನಾಭಿಪ್ರಾಯ ರೂಪಿಸಲು ಕೋಟ್ಯಂತರ ರುಪಾಯಿ ಸುರಿಯುತ್ತಾರೆ. ಅದರ ಮೂಲ ಯಾವುದು? ಯಾರಾದರೊಬ್ಬ ತನ್ನ ನಂಬಿಕೆಯಂತೆ ನಿಜದ ಹಾದಿ ತುಳಿಯಲು ನಿರ್ಧರಿಸಿದರೆ, ಅಂತಹವನನ್ನು ತುಳಿಯಲು ಸಿಂಹಾಸನಾಧೀಶರು ಮತ್ತು ಭಾವೀ ಸಿಂಹಾಸನಾಧೀಶರೆಲ್ಲ ಸೇರಿ ನಡೆಸುವ ಮಸಲತ್ತುಗಳಿಗೆ ನಾವೆಲ್ಲರೂ ಈ ಕ್ಷಣದ ಸಾಕ್ಷಿಯಾಗಿದ್ದೇವೆ. ಉತ್ತರಕರ್ನಾಟಕದಲ್ಲಿ ಆಧುನಿಕ ಚಾಣಕ್ಯರ, ಸಾಹುಕಾರರ, ಮಹಾನಾಯಕರ ನಡೆಯ ಹಿಂದೆ, ನುಡಿಯ ಅಡಿಯಲ್ಲಿ ಅಡಗಿರುವ ಸತ್ಯಗಳು ಜನಸಾಮಾನ್ಯರ ಕಣ್ಣಿಗೆ ಕಾಣದಿರಬಹುದು. ಆದರೆ, ಮನಸಿಗೆ ತಿಳಿಯದ್ದೇನಲ್ಲ. ಹಸಿವು, ಮೈಥುನ, ದುಃಖ ಅರಿಯಲು ಅಕ್ಷರ ಜ್ಞಾನಕ್ಕಿಂತಲೂ ವಿವೇಕ ಮುಖ್ಯ. ಅದನ್ನು ಕರ್ನಾಟಕದ ಜನ ಕಳೆದುಕೊಳ್ಳದಿರಲಿ ಎನ್ನುವುದು ನಮ್ಮ ಆಶಯ.

ನಮ್ಮ ಜನಪ್ರತಿನಿಧಿಗಳಾದವರು ಪ್ರಜಾಪ್ರಭುತ್ವ ವ್ಯವಸ್ಥೆಯ ಚೈತನ್ಯವನ್ನು, ಶಕ್ತಿಯನ್ನು ಆಶಯವನ್ನು ಅರ್ಥಮಾಡಿಕೊಂಡು, ಕಾರ್ಯಾಂಗದ ಮೂಲಕ ಜನರಿಗೆ ನೆಮ್ಮದಿಯ ಜೀವನ ನಡೆಸಲು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಕೆಲಸ ಮಾಡಬೇಕು. ಕಾರ್ಯಾಂಗದ ಕಾರ್ಯದಕ್ಷತೆಯನ್ನು ಹೆಚ್ಚಿಸುವ ಮೂಲಕ ಕಾರ್ಯಾಂಗದಲ್ಲಿ ಸರಿಯಾಗಿ ಕೆಲಸ ಮಾಡಲು ಯೋಗ್ಯರನ್ನು ನೇಮಕ ಮಾಡಿಕೊಳ್ಳಬೇಕಿದೆ. ಒಂದೊಮ್ಮೆ ಇದಕ್ಕೆ ತೊಡಕುಗಳಿದ್ದರೆ ಅಗತ್ಯವಿರುವ ಕಾನೂನುಗಳನ್ನು ರೂಪಿಸಬೇಕಿರುವುದು ಶಾಸನಸಭೆಯ ಜವಾಬ್ದಾರಿ. ಶಾಸಕಾಂಗ, ಕಾರ್ಯಾಂಗ ನ್ಯಾಯಯುತವಾಗಿ ಜನಪರವಾಗಿ ನಡೆದುಕೊಳ್ಳದಿದ್ದರೆ ಅದನ್ನುಸರಿಪಡಿಸಲು ನ್ಯಾಯಾಂಗ ಮತ್ತು ಮಾಧ್ಯಮಗಳು ಕೆಲಸ ಮಾಡಬೇಕಿದೆ. ಆದರೆ, ನಮ್ಮ ಶಾಸನಸಭೆಯ ಮಹತ್ವ, ಪಾವಿತ್ರ್ಯವನ್ನೇ ತಿಳಿದುಕೊಳ್ಳದ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದರೆ ಅವರಿಂದ ಏನನ್ನು ನಿರೀಕ್ಷಿಸಬಹುದು? ಪ್ರತಿನಿಧಿಯೊಬ್ಬ ಯಾವ ಜಾತಿ, ಧರ್ಮಕ್ಕೆ ಸೇರಿದವ ಎನ್ನುವುದು ಮುಖ್ಯವಾಗಬಾರದು. ಬದಲಿಗೆ ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ಸದಾಶಯಗಳನ್ನು ಅರ್ಥಮಾಡಿಕೊಂಡು ಅದರ ಮೂಲಕ ಬಡವನ ನಿಟ್ಟುಸಿರು, ಅಸಹಾಯಕರ ನೋವು, ದುಡಿವ ಮೈಕೈಗಳ ಆಯಾಸ, ಆಶಕ್ತರ ಆಶಯಗಳಿಗೆ ಹೇಗೆ ಧ್ವನಿಯಾಗಬೇಕು ಎಂಬ ವ್ಯಕ್ತಿ ಮುಖ್ಯವಾಗಬೇಕು. ಇದೊಂದು ಕನಸಾಗಿರಬಹುದು. ಆದರೆ, ಕನಸುಗಳೇ ಇಲ್ಲದ ನಾಡಲ್ಲಿ ಹೊಸ ಹಾಡು ಹುಟ್ಟುವುದಿಲ್ಲ. ಕನಸನ್ನು ನೀಡದವನು ಎಂದಿಗೂ ನಾಯಕನಾಗಲು ಯಾವ ಮಾನದಂಡದಿಂದ ನೋಡಿದರೂ ಅನರ್ಹನೇ. ಆದರೆ, ಕನಸಿಗೆ ಕೊಳ್ಳಿ ಇಕ್ಕುವವರ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ಜಾತಿ ಧರ್ಮಗಳನ್ನು ಮೀರಿ ರಸಋಷಿ ಕುವೆಂಪು ನೀಡಿದ ವಿಶ‍್ವಮಾನವತೆಯ ಸಂದೇಶ ಮತ್ತೆ ನಮ್ಮೆದೆಯಲ್ಲಿ ಮಾರ್ದನಿಸಬೇಕಿದೆ. ‘ಏಳಿ, ಕನಸುಗಳಿಗೆ ಕಾವು ನೀಡಿ… ಯೋಚಿಸಿ ಮತ ನೀಡಿ’.

ಡಾ. ಉದಯಕುಮಾರ ಇರ್ವತ್ತೂರು, ಮಂಗಳೂರು

ಲೇಖಕರು.

ಇದನ್ನೂ ಓದಿhttps://peepalmedia.com/new-parliament-building-dont-be-a-godless-temple/ ಹೊಸ ಸಂಸತ್ ಕಟ್ಟಡ: ದೇವರಿಲ್ಲದ ಗುಡಿಯಾಗದಿರಲಿ

ಪುಲ್ವಾಮಾ | ಆ ನಲವತ್ತು ಧೀರ ಯೋಧರ ಸಾವಿಗೆ ಯಾರು ಹೊಣೆ?

Related Articles

ಇತ್ತೀಚಿನ ಸುದ್ದಿಗಳು

You cannot copy content of this page