ವಿವಿಧ ಬೇಡಿಕೆಗಳ ಅಡಿಯಲ್ಲಿ ಸೋಮವಾರದ ವಿಚಾರವಾದಿಗಳು, ಸಾಹಿತಿಗಳು ಹಾಗೂ ಪ್ರಮುಖ ಜನಪರ ಸಂಘಟನೆಗಳ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೇ ವಿಚಾರವಾದಿಗಳು ಸಾಕಷ್ಟು ನಿರೀಕ್ಷೆಗಳನ್ನು ಈ ಸರ್ಕಾರದ ಮೇಲೆ ಇಟ್ಟಿದ್ದು, ಅವರು ತುರ್ತುಗತಿಯಲ್ಲಿ ತೋರಿಸಲು ಮನವಿ ಮಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದಂತಹ ಪ್ರಮುಖ ಜನವಿರೋಧಿ ನಿಲುವುಗಳನ್ನು ತಗೆದು ಹಾಕಿ, ಜನಪರವಾದ, ವೈಚಾರಿಕ ಹಿನ್ನೆಲೆಯ ನಡೆಯಲ್ಲಿ ಸರ್ಕಾರ ಮುನ್ನಡೆಯಬೇಕು ಎಂಬುದಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ವಿಶೇಷವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತಂದಂತಹ ಅಪಾಯಕಾರಿ ಯೋಜನೆಗಳು, ಬದಲಾವಣೆಗಳನ್ನು ಈ ಶೈಕ್ಷಣಿಕ ವರ್ಷದಲ್ಲೇ ಬದಲಾವಣೆ ತರಬೇಕು. ಇದು ಬೆಳೆಯುವ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಆಗಿರುವ ದೊಡ್ಡ ಅನ್ಯಾಯ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳನ್ನು ಭೇಟಿಯಾದ ಚಿಂತಕರು ವ್ಯಕ್ತಪಡಿಸಿದ ಅಭಿಪ್ರಾಯ ಈ ಕೆಳಗಿನಂತಿದೆ.
* ಹಿಂದಿನ ಸರ್ಕಾರ ಕೋಮುವಾದವನ್ನು ನಿರ್ಲಜ್ಜ ರೀತಿಯಲ್ಲಿ ಜಾರಿಗೆ ತರಲು ಮುಂದಾಗಿದ್ದು ನಿಜಕ್ಕೂ ಭಯ ಹುಟ್ಟಿಸುವಂತಿತ್ತು. ಆದರೆ ಇವರ ಪ್ರೊಪಗಾಂಡಾ ಅಜೆಂಡಾದಿಂದ ರೋಸಿ ಹೋದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದರು.
* ಈ ನಿಟ್ಟಿನಲ್ಲಿ ಸಂವಿಧಾನ ವಿರೋಧಿ, ಕೋಮುವಾದಿ ಪಠ್ಯಪುಸ್ತಕಕ್ಕೆ ಕೂಡಲೇ ತಿದ್ದುಪಡಿ ಮಾಡಿ, ಮಕ್ಕಳ ಮನಸಿನ ಮೇಲೆ ಬೀರುವ ದುಷ್ಪರಿಣಾಮವನ್ನು ತಡೆಯಬೇಕು. ಮುಂದಿನ ವರ್ಷದ ವೇಳೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು.
* ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು.
* ಪ್ರೌಢಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಯನ್ನು ಮುಂದುವರೆಸಬೇಕು. ಬೈಸಿಕಲ್ ವಿತರಣೆ ಯೋಜನೆಯನ್ನು ಮುಂದುವರೆಸಬೇಕು.
* ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ DERA ವನ್ನು ಸಕ್ರಿಯಗೊಳಿಸಬೇಕು.
* ರದ್ದಾಗಿರುವ ವಿದ್ಯಾರ್ಥಿವೇತನ ಯೋಜನೆ ಮರುಜಾರಿಯಾಗಬೇಕು.
* UUCMS ವ್ಯವಸ್ಥೆಯ ಮರುಪರಿಶೀಲನೆ ಮಾಡಬೇಕು.
* ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಸಮ ಸಮಾಜಕ್ಕಾಗಿ ಸಮಾನ ಶಿಕ್ಷಣ ಆಶಯವನ್ನು ಸಾಕಾರಗೊಳಿಸಬೇಕು.
* ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ NEET ವ್ಯವಸ್ಥೆಯಿಂದ ಹೊರ ಬರುವ ಅಗತ್ಯವಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ಅನುಷ್ಠಾನ ಸಮರ್ಪಕವಾಗಿ ಆಗಬೇಕು.
* ವಿವಿಧ ಸಾಂಸ್ಕೃತಿಕ ಪ್ರತಿಷ್ಠಾನಗಳಲ್ಲಿ ಹೊಸ ಪ್ರತಿಭಾವಂತರಿಗೆ ಅವಕಾಶ ನೀಡಬೇಕು.
* ಗ್ರಂಥಾಲಯ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಪುಸ್ತಕ ಖರೀದಿ ಆಗಿಲ್ಲ. ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಬೇಕು.
* ಹೆಣ್ಣುಮಕ್ಕಳ ದೌರ್ಜನ್ಯ ಅಧ್ಯಯನ ಸಮಿತಿಯ ವರದಿಯ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಬೇಕು.
* ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ರಕ್ಷಣೆ ಮಾಡಲು ಮಸೂದೆ ಮಂಡಿಸಬೇಕು.
* ಹಿಜಾಬ್ ವಿವಾದದಿಂದಾಗಿ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಕುರಿತ ಸರ್ಕಾರಿ ಆದೇಶವನ್ನು ಪರಿಷ್ಕರಿಸಬೇಕು.
* ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು.
* ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಮೇಲ್ವಿಚಾರಣಾ ಸಮಿತಿ ಪ್ರತಿ ತಿಂಗಳೂ ಈ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಸಮರ್ಪಕ ಅನುಷ್ಠಾನ ಖಾತರಿಪಡಿಸಬೇಕು.
- * ಹಲವಾರು ಸಾಹಿತಿ, ಚಿಂತಕರಿಗೆ ನಿರಂತರವಾಗಿ ಬೆದರಿಕೆ ಪತ್ರಗಳು ಬರುತ್ತಿದ್ದು, ಭಯದ ವಾತಾವರಣ ನಿರ್ಮಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- * ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಗಳಲ್ಲಿ ನಿರ್ದಿಷ್ಟ ಸಮುದಾಯದ ಜನರೇ ನೇಮಕಗೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು.
- * ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಪೂರಕವಾದ ಪುಸ್ತಕಗಳನ್ನಷ್ಟೇ ಖರೀದಿಸಲು ಕ್ರಮ ವಹಿಸಬೇಕು. ಕೆಲವೆಡೆ ಅಪ್ರಸ್ತುತ ಪುಸ್ತಕಗಳನ್ನು ಖರೀದಿಸಲಾಗುತ್ತಿದೆ.
* ಗ್ರಾಮೀಣ ಪ್ರದೇಶದ ಸಮುದಾಯ ಭವನಗಳಲ್ಲಿ ಸಂವಿಧಾನದ ಬಗ್ಗೆ, ಸಾಮರಸ್ಯದ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.