ಬೆಂಗಳೂರು : ಇದು ನಮ್ ದೇಶ ಕಣ್ರೀ.. ದೇಶಕ್ಕಾಗಿ ನಾನು ಈಗಲೂ ಸಾಯಲು ಸಿದ್ಧ ಎಂದು ಸಚಿವ ಜಮೀರ್ ಅಹಮ್ಮದ್ ಅವರು ಪುನರುಚ್ಚರಿಸಿದರು.
ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಭಾರತ ಆರಂಭಿಸಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಒಳಿತಿಗಾಗಿ ಶೇಷಾದ್ರಿಪುರಂ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದರು. ನಮ್ಮ ಸೈನಿಕರಿಗೆ ಇನ್ನು ಹೆಚ್ಚಿನ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಲಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದ ಎಲ್ಲಾ ಮಸೀದಿಗಳಲ್ಲೂ ಯೋಧರಿಗಾಗಿ ಹಾಗೂ ನಾವು ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ ಎಂದರು.
ಬಾಂಬ್ ಕಟ್ಟಿಕೊಂಡು ಪಾಕ್ ವಿರುದ್ಧ ಯುದ್ಧಕ್ಕೆ ಹೋಗುತ್ತೇನೆ ಎಂಬ ಹೇಳಿಕೆಗೆ ಬಿಜೆಪಿಯವರು ಟೀಕಿಸುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿಯವರಿಗೆ ಟೀಕೆ ಬಿಟ್ಟು ಬೇರೆ ಒಳ್ಳೆಯ ಕೆಲಸ ಮಾಡಲು ಸಮಯವಿಲ್ಲ. ದೇಶಕ್ಕಾಗಿ ನಾನು ಬಲಿಯಾಗಲು ಸಿದ್ಧ ಎಂದಿದ್ದೇನೆ. ಈಗಲೂ ಸಿದ್ಧವಾಗಿದ್ದೇನೆ. ನನ್ನ ಹೇಳಿಕೆಗೆ ನಾನು ಸದಾ ಬದ್ಧ. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಪ್ರಧಾನಿಯವರು ಆದೇಶ ಮಾಡಲಿ. ನಾನು ಪಾಕ್ಗೆ ಹೋಗಲು ರೆಡಿಯಾಗಿದ್ದೇನೆ ಎಂದು ಮಗದೊಮ್ಮ ತಿಳಿಸಿದರು.
ವಕ್ಫ್ ಬೋರ್ಡ್ ವ್ಯಾಪ್ತಿಯ ಮಸೀದಿಗಳು ಸೇರಿದಂತೆ ರಾಜ್ಯದ ಎಲ್ಲ ಮಸೀದಿಗಳಲ್ಲೂ ದೇಶದ ಹೆಮ್ಮೆಯ ಸೈನಿಕರ ಶ್ರೇಯಸ್ಸಿಗಾಗಿ ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು. ನಾನು ಬೇರೆ ಕಾರ್ಯಕ್ರಮದಲ್ಲಿ ಇದ್ದೆ. ಹೀಗಾಗಿ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಆಗಲಿಲ್ಲ ಇದೇ ವೇಳೆ ಸ್ಪಷ್ಟಪಡಿಸಿದರು.