ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು ಇಲ್ಲವಾದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರಾಂಚ್ ಮೂವರನ್ನು ಬಂಧಿಸಿದೆ.
ಗುಜರಾತ್ನ ವಡೋದರಾದಲ್ಲಿ ಈ ಮೂವರನ್ನು ಬಂಧಿಸಲಾಗಿದೆ. ಒಬ್ಬನನ್ನು ಆದಿಲ್ ರಫೀಕ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬನನ್ನು ಆತನ ಸೋದರ ಸಂಬಂಧಿ ಮತ್ತು ಇನ್ನೊಬ್ಬನನ್ನು ಆತನ ಸ್ನೇಹಿತ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆದರಿಕೆ ಇಮೇಲ್ಗಳ ಹಿಂದಿನ ಉದ್ದೇಶವನ್ನು ತಿಳಿಯಲು ಅಧಿಕಾರಿಗಳು ಬಂಧಿತ ವ್ಯಕ್ತಿಗಳನ್ನು ಪ್ರಶ್ನಿಸಿದ್ದಾರೆ. ಸೀತಾರಾಮನ್ ರಾಜೀನಾಮೆ ನೀಡದಿದ್ದರೆ ಆರ್ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಕಚೇರಿಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಇಮೇಲ್ಗಳನ್ನು ಕಳುಹಿಸಲು ಬಳಸಿದ ಸಾಧನವನ್ನು ವಶಕ್ಕೆ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಬೆದರಿಕೆ ಈ ಮೇಲ್ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಮುಂಬೈನ ಆರ್ಬಿಐ ಕಚೇರಿ, ಎಚ್ಡಿಎಫ್ಸಿ ಮತ್ತು ಐಸಿಐಸಿಐ ಸೇರಿದಂತೆ 11 ಸ್ಥಳಗಳಲ್ಲಿ ಬಾಂಬ್ಗಳನ್ನು ಸ್ಫೋಟಿಸಲಾಗುವುದು ಎಂದು ಮೇಲ್ ಕಳುಹಿಸಿ ಬೆದರಿಸಲಾಗಿತ್ತು. ಇ-ಮೇಲ್ನಲ್ಲಿ ನಮೂದಿಸಲಾದ ಎಲ್ಲಾ ಸ್ಥಳಗಳನ್ನು ಅಧಿಕಾರಿಗಳು ನಿಕಟವಾಗಿ ಪರಿಶೀಲಿಸಿದ್ದಾರೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ ಎಂಬುದು ದೃಢಪಟ್ಟಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಖಿಲಾಫತ್ ಇಂಡಿಯಾ’ ಹೆಸರಿನಲ್ಲಿ ಬೆದರಿಕೆ ಇ-ಮೇಲ್ ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.