ನಟ, ರಾಜಕಾರಣಿ ಕಮಲ್ ಹಾಸನ್ ಇದೀಗ ಇನ್ನೊಂದು ಸುತ್ತಿನ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕನ್ನಡ ಭಾಷೆಯ ವಿಷಯದಲ್ಲಿ ಅವರು ಆಡಿದ ಮಾತಿಗೆ ಕ್ಷಮೆ ಕೇಳಿದರೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನೆಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಇದಕ್ಕೆ ಚಲನಚಿತ್ರ ನಿರ್ಮಾಪಕರ ಸಂಘವೂ ಸ್ಪಂದಿಸಿದೆ ಎಂದು ಅವರು ಹೇಳಿದ್ದಾರೆ.
ಈ ಮೊದಲೇ ಅವರಿಗೆ ಕ್ಷಮೆ ಕೇಳುವುದಕ್ಕೆ ಹಲವು ಅವಕಾಶಗಳನ್ನುನೀಡಲಾಗಿತ್ತು, ಆದರೆ ಅದಕ್ಕೆ ಅವರು ಸರಿಯಾಗಿ ಸ್ಪಂದಿಸಿರಲಿಲ್ಲ. ಕನ್ನಡ ಹಾಗೂ ಕನ್ನಡದ ವಿಚಾರದಲ್ಲಿ ಯಾವ ರೀತಿಯ ಅಪಮಾನವನ್ನೂ ನಾವು ಸಹಿಸಲು ಸಿದ್ಧರಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಕುರಿತು ಚಲನಚಿತ್ರ ಮಂಡಳಿ ಮತ್ತು ನಿರ್ಮಾಪಕರ ಸಂಘದವರಿಗೆ ಪತ್ರವನ್ನೂ ಬರೆದಿದ್ದು, ಅವರೂ ನಮ್ಮ ಜೊತೆ ಮಾತನಾಡಿ ಸ್ಪಷ್ಟ ತೀರ್ಮಾನಕ್ಕೆ ಬಂದಿದ್ದಾರೆ. ಕಮಲ್ ನಟನೆಯ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಹೇಳಿದ್ದಾರೆ.
ತನ್ನ ಒಂದು ಹೇಳಿಕೆಯಿಂದ ಸಾಕಷ್ಟು ವಿರೋಧವನ್ನು ಎದುರಿಸಿದ್ದ ಕಮಲ ಹಾಸನ್, ಕರ್ನಾಟಕದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದರು. ಆದರೆ ಅವರಿಗೆ ಅಲ್ಲೂ ಹಿನ್ನೆಡೆ ಉಂಟಾಗಿದೆ. ರಾಜಕಾರಣಿಯೂ ಆಗಿರುವ ಕಮಲ್ ಆಗಾಗ ತಮ್ಮ ಮಾತುಗಳಿಂದ ತಮಿಳುನಾಡಿನಲ್ಲಿ ವಿವಾದಕ್ಕೆ ಈಡಾಗುತ್ತಲೇ ಇರುತ್ತಾರೆ. ಇವರ ಹಿಂದಿನ ಇಂಡಿಯನ್ – 2 ಸಿನೆಮಾ ಗಲ್ಲಾ ಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡಿತ್ತು.
ತಮಿಳು ಚಿತ್ರಗಳಿಗೆ ಬೆಂಗಳೂರು ಸಹ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ತಮಿಳು ಸಿನೆಮಾಗಳು ಕೋಟಿಗಟ್ಟಲೆ ಮೊತ್ತದಲ್ಲಿ ವ್ಯವಹಾರ ಮಾಡುತ್ತವೆ. ಕಮಲಹಾಸನ್ ಈಗ ತನ್ನ ಮಾತುಗಳಿಂದ ತನ್ನ ಚಿತ್ರ ಬೆಂಗಳೂರಿನಲ್ಲಿ ವ್ಯವಹಾರ ಮಾಡಬಹುದಾದ ಸಾಧ್ಯತೆಯನ್ನು ಇಲ್ಲವಾಗಿಸಿಕೊಂಡಿದ್ದಾರೆ.