ಟಿಕೆಟ್‌ಗಾಗಿ 5 ಕೋಟಿ ರೂಪಾಯಿ ಬೇಡಿಕೆ: ಟಿಎಂಸಿ ನಾಯಕತ್ವದ ವಿರುದ್ಧ ಮಾಜಿ ಸಚಿವ ಮನೋಜ್ ತಿವಾರಿ ಗಂಭೀರ ಆರೋಪ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರಾಜಯಗೊಂಡ ಬೆನ್ನಲ್ಲೇ ಪಕ್ಷದೊಳಗೆ ಹಿಂದೆಂದೂ ಕಾಣದ ಮಟ್ಟದ ಅಸಮಾಧಾನ ಸ್ಫೋಟಗೊಂಡಿದೆ.

ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರ ಸಂಬಂಧಿ ಅಭಿಷೇಕ್ ಬ್ಯಾರ್ನಜಿ ಸೇರಿದಂತೆ ಪಕ್ಷದ ಹಿರಿಯ ನಾಯಕತ್ವದ ವಿರುದ್ಧವೇ ಸ್ವಪಕ್ಷೀಯ ನಾಯಕರು ಈಗ ಬಹಿರಂಗವಾಗಿ ಬಂಡಾಯ ಎದ್ದಿದ್ದಾರೆ.

ಪಕ್ಷದ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕಾಗಿ ಶನಿವಾರ ಮೂವರು ಅಧಿಕೃತ ವಕ್ತಾರರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಆದರೂ ನಾಯಕರ ಬಂಡಾಯದ ಧೋರಣೆ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ.

ಟಿವಿ ಚರ್ಚೆಗಳಲ್ಲಿ ಪಕ್ಷದ ಪರವಾಗಿ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದ ವಕ್ತಾರ ರಿಜು ದತ್ತಾ ಅವರು ‘ಎಕ್ಸ್’ (ಟ್ವಿಟರ್) ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿದ್ದ ಸುವೇಂದು ಅಧಿಕಾರಿ ವಿರುದ್ಧ ತಾವು ಈ ಹಿಂದೆ ಮಾಡಿದ್ದ ಅವಹೇಳನಕಾರಿ ಕಾಮೆಂಟ್‌ಗಳು ಟಿಎಂಸಿ ನಾಯಕತ್ವದ ಒತ್ತಡ ಮತ್ತು ಬೆದರಿಕೆಯಿಂದ ಮಾಡಿದ್ದು ಎಂದು ಅವರು ಬಹಿರಂಗಪಡಿಸಿದ್ದಾರೆ.

ಈ ಕುರಿತು ವಿವರಣೆ ನೀಡಲು ಶಿಸ್ತು ಸಮಿತಿಯ ಮುಂದೆ ಹಾಜರಾಗುವಂತೆ ಟಿಎಂಸಿ ಸೂಚನೆ ನೀಡಿದ್ದರೂ, ರಿಜು ದತ್ತಾ ಅವರು ಸಮಿತಿಯ ಮುಂದೆ ಹಾಜರಾಗಲು ನಿರಾಕರಿಸಿದ್ದಾರೆ.

ಮತ್ತೊಂದೆಡೆ, ಮಾಜಿ ಕ್ರಿಕೆಟಿಗ ಹಾಗೂ ಮಮತಾ ಕ್ಯಾಬಿನೆಟ್‌ನಲ್ಲಿ ಸಚಿವರಾಗಿದ್ದ ಮನೋಜ್ ತಿವಾರಿ ಕೂಡ ಪಕ್ಷದ ನಾಯಕತ್ವದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 2026ರ ವಿಧಾನಸಭಾ ಚುನಾವಣೆಯ ಟಿಕೆಟ್‌ಗಾಗಿ ಪಕ್ಷವು ಪ್ರತಿಯೊಬ್ಬ ಅಭ್ಯರ್ಥಿಯಿಂದ 5 ಕೋಟಿ ರೂಪಾಯಿ ಬೇಡಿಕೆಯಿಟ್ಟಿತ್ತು. ಅಷ್ಟು ಹಣ ನೀಡಲು ನಾನು ನಿರಾಕರಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು