ಹಾಸನ: ಆರೋಗ್ಯಕರವಾದ ಜೀವನ ಮಾಡುವುದು ಎಲ್ಲರ ಹಕ್ಕು, ದೊಡ್ಡ ಪಿಡುಗಾಗಿರುವ ಏಡ್ಸ್ ಕಾಯಿಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರು ಸಹಕಾರ ನೀಡುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಜಿ ಕೆ ಎಂದು ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾರ್ವಜನಿಕರಲ್ಲಿ ಈ ಕಾಯಿಲೆಯ ಕುರಿತು ಅರಿವು ಮೂಡಿಸಲು ಹೆಚ್ಚಿನ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಹೆಚ್ಐವಿ ಪೀಡಿತರನ್ನು ಸಮಾಜದಲ್ಲಿ ಬೇರೆ ರೀತಿಯಲ್ಲಿ ನೋಡುವಂತಹ ಪರಿಸ್ಥಿತಿ ಬಂದಿದೆ. ಅವರು ಕೂಡ ಎಲ್ಲರ ಹಾಗೆ ಮನುಷ್ಯರು ಸರಿಯಾದ ಚಿಕಿತ್ಸೆ ನೀಡಿ ಅವರು ಒಳ್ಳೆಯ ಜೀವನ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಶಿವಸ್ವಾಮಿ ಅವರು ಮಾತನಾಡಿ ಈ ಕಾಯಿಲೆ ಹೆಚ್ಚು ಯುವಜನರಲ್ಲಿ ಬರುವುದರಿಂದ ನಮ್ಮ ಪ್ರಗತಿ ಕುಂಠಿತವಾಗುತ್ತಿದೆ. ಈ ಕಾಯಿಲೆ ಯಾವ ರೀತಿ ಬರುತ್ತದೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿವಹಿಸಲು ಹದಿಹರೆಯದ ಮಕ್ಕಳಿಗೆ ಶಾಲಾ ಕಾಲೇಜು ಸಮುದಾಯ ಮಟ್ಟದಲ್ಲಿ ಅರಿವು ಮೂಡಿಸುವುದರಿಂದ ಈ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮೊದಲು ನಗರದ ಜಿಲ್ಲಾಧಿಕಾರಿ ಕಛೇರಿಯಿಂದ ಆಕರ್ಷಕ ಮೆರವಣಿಗೆಗೆ ಚಾಲನೆ ನೀಡಿದರು.
ಇದೆ ವೇಳೆ ಜಿಲ್ಲಾ ಏಡ್ಸ್ ಕ್ಷಯ ರೋಗದ ನಿಯಂತ್ರಣಾಧಿಕಾರಿಗಳಾದ ಡಾ||ವಿಜಯ್ ಗೊರೂರು ಎನ್.ಡಿ, ಜಿಲ್ಲಾ ಅಂಧತ್ವ ನಿವಾರಣಾ ಮತ್ತು ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಡಾ||ಪಿ. ನಾಗೇಶ್ ಆರಾಧ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ, ಕಲಾವಿದರಾದ ಬಿ.ಟಿ ಮಾನವ ಮತ್ತಿತರರು ಹಾಜರಿದ್ದರು.