Saturday, June 21, 2025

ಸತ್ಯ | ನ್ಯಾಯ |ಧರ್ಮ

ಮಲ್ಲತ್ತಹಳ್ಳಿ ಕೆರೆಯ ಬಳಿ ಟಾಯ್ ಟ್ರೈನ್ ಟ್ರ್ಯಾಕ್ ಹಾಕುವಂತಿಲ್ಲ : BBMPಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಬೆಂಗಳೂರು ನಗರದ ಮಲ್ಲತ್ತಹಳ್ಳಿ ಕೆರೆ ಪ್ರದೇಶದಲ್ಲಿ ಮನರಂಜನಾ ಉದ್ಯಾನ ನಿರ್ಮಿಸಲು ಕೈಗೊಂಡಿದ್ದ ಗಾಜಿನ ಮನೆ, ತೂಗು ಸೇತುವೆ ಮತ್ತು ಮಕ್ಕಳ ಆಟಕ್ಕೆ ರೈಲಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಕಳೆದವಾರ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಇಂದು ಕೆರೆಯ ಹೊರ ಗಡಿಯಿಂದ 30 ಮೀಟರ್‌ ಅಂತರದಲ್ಲಿ ಟಾಯ್‌ ಟ್ರೈನ್‌ಗೆ ಟ್ರ್ಯಾಕ್‌ ಹಾಕದಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಪೌರ ಸಂಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನಿರ್ದೇಶನ ನೀಡಿದೆ.

ಸಮಾಜ ಸೇವಕಿ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಕಾಯಿದೆ 2014ರ ಸೆಕ್ಷನ್ 12(3)ರ ಪ್ರಕಾರ ಕೆರೆ/ಕೆರೆಗಳ ಹೊರ ಗಡಿಯಿಂದ 30 ಮೀಟರ್‌ಗಳ ಒಳಗೆ ಇಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ, ಹೀಗಾಗಿ ಬಿಬಿಎಂಪಿಯು ಈ ನಿಯಮವನ್ನು ಉಲ್ಲಂಘಿಸುವಂತಿಲ್ಲ ಎಂದು ಪೀಠ ಸೂಚಿಸಿದೆ.

ಕಾಯಿದೆಯ ಸೆಕ್ಷನ್ 12 (6)ರ ಅಡಿಯಲ್ಲಿ ಕೆಟಿಸಿಡಿಎ ಮತ್ತು ರಾಜ್ಯ ಸರ್ಕಾರದಿಂದ ಟ್ರ್ಯಾಕ್ ಹಾಕಲು ಅನುಮೋದಿಸಲಾಗಿದೆ ಎಂದು ಬಿಬಿಎಂಪಿ ವಾದಿಸಿದೆ. ಆದರೆ ಹೈಕೋರ್ಟ್‌, ಟಾಯ್ ಟ್ರೈನ್‌ಗಾಗಿ ಟ್ರ್ಯಾಕ್ ನಿರ್ಮಾಣದ ಕಾಮಗಾರಿ ಎಂದು ಪರಿಗಣಿಸಲಾಗುವುದಿಲ್ಲ. ಇದು ಕಾನೂನು ಬಾಹಿರ ನಿರ್ಮಾಣವಾಗುತ್ತದೆ. “ಆದ್ದರಿಂದ, ಪ್ರಶ್ನೆಯಲ್ಲಿರುವ ಸರೋವರದ ಹೊರಗಿನ ಗಡಿಯಿಂದ 30 ಮೀಟರ್ ಒಳಗೆ ಇದನ್ನು ಅನುಮತಿಸಲಾಗುವುದಿಲ್ಲ” ಎಂದು ಪೀಠ ಹೇಳಿದೆ.

ಮಳೆನೀರು ಚರಂಡಿ ನಿರ್ಮಿಸಿ ಮಲ್ಲತ್ತಹಳ್ಳಿ ಕೆರೆಗೆ ಹರಿಯುವ ಘನತ್ಯಾಜ್ಯ, ಲೀಚೆಟ್/ಕೊಳಚೆ ನೀರು ಬೇರೆಡೆಗೆ ಹರಿಸಲು ಬಿಬಿಎಂಪಿಗೆ ನ್ಯಾಯಾಲಯ ಅನುಮತಿ ನೀಡಿದ್ದು, ತೂಗು ಸೇತುವೆ, ಗಾಜಿನ ಮನೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು BBMPಗೆ ಕೋರ್ಟ್ ತಡೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page