Wednesday, May 1, 2024

ಸತ್ಯ | ನ್ಯಾಯ |ಧರ್ಮ

ಎತ್ತಿನ ಭುಜ ಚಾರಣವೂ ನೂರು ರೂಪಾಯಿಯೂ

ಕೆಲವರ ಕತೆ ಹಲವರ ವ್ಯಥೆ ಆಲಿಸಿಕೊಂಡು ಸಕಲೇಶ ಪುರ ತಲುಪಿದೆವು. ನಾವು ಬುಕ್ ಮಾಡಿದ ರೆಸಾರ್ಟ್ ಒಳಗೆ ನಾವು ಹೋಗಬೇಕಿದ್ದುದು ಬೆಳಗ್ಗಿನ 11 ರ ಹೊತ್ತಿಗೆ. ಆದರೆ ನಾವು ತಲುಪಿದ್ದು ಬೆಳಗಿನ 3 ಗಂಟೆಯ  ಸುಮಾರಿಗೆ. 11 ಗಂಟೆಯವರೆಗೆ ಏನು ಮಾಡುವುದೆಂದು ಯಾರೊಬ್ಬರಿಗೂ ಗೊತ್ತಿರಲಿಲ್ಲ – ರಾಹುಲ್‌ ಆರ್‌ ಸುವರ್ಣ, ಪತ್ರಿಕೋದ್ಯಮ ವಿದ್ಯಾರ್ಥಿ

ಅದೆಷ್ಟೋ ಸಾರಿ ನಾವು ಅಲ್ಲಿ‌ ಇಲ್ಲಿ ಹೋಗಬೇಕು ಎಂದು ಯೋಚನೆ ಮಾಡಿರುತ್ತೇವೆ. ಆದರೆ ಯೋಚನೆ, ಯೋಜನೆಯಾಗಿ ಪರಿಣಮಿಸದೆ ಅಲ್ಲೆ ಮುಳುಗುವುದೇ ಹೆಚ್ಚು. ಹತ್ತು ಕಲ್ಲು ಹೊಡೆದರೆ ಒಂದಾದರೂ ತಗುಲೀತು ಎನ್ನುತ್ತಾರಲ್ಲ ಆ ರೀತಿಯಲ್ಲಿಯೇ ರೂಪುಗೊಂಡದ್ದು ನಮ್ಮ ಡಿಗ್ರಿ ಬದುಕಿನ ಕೊನೆಯ ಪ್ರವಾಸ. ಹೋಗುವುದಕ್ಕೆ ಸಾಕಷ್ಟು ದಿನಗಳ ಮುಂಚೆಯೇ ಎಲ್ಲರಂತೆ ನಮ್ಮದೂ ಒಂದು ವಾಟ್ಸಾಪ್ ಗ್ರೂಪ್ ಕೂಡ ಜಾರಿಗೆ ಬಂದಿತ್ತು. ಆದರೆ ಕೊನೆಗೂ ವಾಟ್ಸಾಪ್ ಗ್ರೂಪ್ ನಲ್ಲಿ ಬರದೆ ಇರುವವರ ಗುಂಪು  ದೊಡ್ಡದಾಗಿ ಆ  ಗುಂಪಿಗೆ ಸೇರದ ನಾವು ಹದಿನಾರು ಹುಡುಗರು ಸೇರಿಕೊಂಡು ಎರಡು ದಿನಕ್ಕೆ ಸಾಲುವಷ್ಟು ಬಟ್ಟೆ ಬರಿಗಳನ್ನು ತುಂಬಿಕೊಂಡು ಹೊರಟೇ ಬಿಟ್ಟೆವು. ಎಲ್ಲಿಗೆ? ಸಕಲೇಶ ಪುರದ ಎತ್ತಿನಭುಜ ಬೆಟ್ಟಕ್ಕೆ.

ರಾತ್ರಿ 9 ಕ್ಕೆ ರೈಲು ಎಂದು ಎಲ್ಲರಿಗೂ ಗೊತ್ತಿದ್ದರಿಂದ ಯಾರೂ ತಡಮಾಡದೆ ಎಂಟರ ಆಸುಪಾಸಿನಲ್ಲಿ ಬಂದು ಸ್ಟೇಷನ್ ತಲುಪಿದ್ದೆವು. ಆ ಹೊತ್ತಿಗೆ ನಮ್ಮನ್ನು ಯಾರಾದರೂ ಕಳುಹಿಸಿ ಕೊಡಲು ಬಂದಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಮಳೆಯಂತೂ ನಮ್ಮನ್ನಪ್ಪಿ ವಿದಾಯ ಹೇಳಿತು. ಅಷ್ಟರಲ್ಲಿ “ಕೃಪಯ ಧ್ಯಾನ್ ದೀಜಿಯೇ” ಎನ್ನುವ ಆಕರ್ಷಣೀಯ ಸ್ವರದಿಂದ ಸೂಚನೆಯೊಂದು ಬಂತು. ಸೂಚನೆಗೆ ತಕ್ಕಂತೆ ನಮ್ಮ ಕಾಲುಗಳು ಕೆಲಸ ಆರಂಭಿಸಿದವು. ಎಂದಿನಂತೆ ರೈಲು ತಡವಾಗಿಯೇ ಬಂದು ಸ್ಟೇಷನ್ ತಲುಪಿತು. ಅಂದು ಶನಿವಾರವಾದ್ದರಿಂದ ರೈಲು ಉದ್ದಕ್ಕೂ ಭರ್ತಿ ಕಾಣುತಿತ್ತು. ಕೆಲವರ ಕತೆ ಹಲವರ ವ್ಯಥೆ ಆಲಿಸಿಕೊಂಡು ಸಕಲೇಶ ಪುರ ತಲುಪಿದೆವು. ನಾವು ಬುಕ್ ಮಾಡಿದ ರೆಸಾರ್ಟ್ ಒಳಗೆ ನಾವು ಹೋಗಬೇಕಿದ್ದುದು ಬೆಳಗ್ಗಿನ 11 ರ ಹೊತ್ತಿಗೆ. ಆದರೆ ನಾವು ತಲುಪಿದ್ದು ಬೆಳಗಿನ 3 ಗಂಟೆಯ  ಸುಮಾರಿಗೆ. 11 ಗಂಟೆಯವರೆಗೆ ಏನುಮಾಡುವುದು ಎಂದು ಯಾರೊಬ್ಬರಿಗೂ ಗೊತ್ತಿರಲಿಲ್ಲ. ನಮ್ಮ ಅದೃಷ್ಟಕ್ಕೆ ಸ್ಟೇಷನ್ ನ ವೈಟಿಂಗ್‌ ರೂಂ ನಮಗಾಗಿಯೇ ಎಂಬಂತೆ ಖಾಲಿಯಾಗಿತ್ತು. ತಡ ಮಾಡದೆ ಹೋಗಿ ನಮ್ಮ ಬ್ಯಾಗ್ ಗಳನ್ನು ತಲೆಯಡಿಗೆ ಸೇರಿಸಿ ಅಲ್ಲೇ ಕಣ್ಣು ಮುಚ್ಚಿದೆವು.

ಮತ್ತೆ ಕಣ್ಣು ಬಿಡುವಾಗ ಬೆಳಕು ಹರಿದು, ಮಳೆ ಸುರಿದು ಸ್ವಾಗತ ಕೋರಿ ಸಮಯ 7 ಆಗಿತ್ತು. ಸ್ಟೇಷನ್ ನಲ್ಲೆ ಇದ್ದ ಸು – ವ್ಯವಸ್ಥೆ ಬಳಸಿಕೊಂಡು ಸ್ಟೇಷನ್ ನಿಂದ ಜಾಗ ಖಾಲಿ ಮಾಡಿದೆವು. ತಿಂಡಿ ತಿನ್ನುವುದಕ್ಕೆಂದು ಸಿಟಿಗೆ ಬಂದರೆ ಎಲ್ಲವು ಬಂದ್‌ ಆಗಿ ಸಕಲೇಶ ಪುರದ ಶ್ರೀಗಂಧ ಹೋಟೆಲ್ ಹಾಗೂ ಸಣ್ಣದಾದ ಮತ್ತೊಂದು ಹೋಟೆಲ್ ತೆರದಿತ್ತು. ರಾತ್ರಿಯಿಂದ ಖಾಲಿಯಿದ್ದ ಹೊಟ್ಟೆಗೆ ಏನೇ ಬಿದ್ದರೂ ಸಾಕಾಗಿತ್ತು, ಹಾಗಾಗಿ ಕೆಲವರು ಸಣ್ಣ ಹೋಟೆಲ್,  ಕೆಲವರು ಶ್ರೀಗಂಧಕ್ಕೆ ಹೋಗಿ ಹೊಟ್ಟೆ ಗಟ್ಟಿ ಮಾಡಿಕೊಂಡು ಬಸ್ ಸ್ಟಾಂಡ್ ಕಡೆಗೆ ಬಂದೆವು. ಅದು ಸರ್ಕಾರಿ ಬಸ್ಸುಗಳ ನಿಲ್ದಾಣವಾಗಿ, ಭಾನುವಾರವಾಗಿದ್ದರೂ ಹೆಂಗಸರ ಸಂಖ್ಯೆ ಕಡಿಮೆ ಇದ್ದುದೆ ಆಶ್ಚರ್ಯ! ನೋಡ ನೋಡುತ್ತಲೇ ನಾವು ಹತ್ತ ಬೇಕಾಗಿದ್ದ ಬಸ್ಸ್ ಬಂದಾಗಿತ್ತು, ಕೂಡಲೆ ಮೇಲೇರಿ ಡ್ರೈವರ್ ಪಕ್ಕದ ಸೀಟಿಗೆ ಒರಗಿಕೊಂಡೆವು. ಕಣ್ಣಲ್ಲೆ ಕಾಫಿ ತೋಟದ ಉದ್ದಳತೆ ಮಾಡುತ್ತಿರುವಾಗ, ಡ್ರೈವರ್ ತಾನಾಗಿಯೇ ನಮ್ಮೊಂದಿಗೆ ಮಾತು ಶುರು ಮಾಡಿದರು. ಆದ್ದರಿಂದ ಆ ಅರ್ಧ ಗಂಟೆಯ  ಪ್ರಯಾಣ ಹೋಗಿದ್ದೆ ಗೊತ್ತಾಗಲಿಲ್ಲ.

ಅಂತೂ ರೆಸಾರ್ಟ್  ತಲುಪಿದೆವು. ಸುತ್ತಲೂ ಕಾಫಿ ತೋಟ, ಅಲ್ಲಲ್ಲಿ ಒಂದೊಂದು ಜಿಗ್ಗಿನ ಮರ (ಅಂದರೆ ಮಲೆನಾಡಿನಲ್ಲಿ ಒಲೆಗೆ ಹಾಕಲು ಬಳಸುವ ಒಣ ಎಲೆಯ ಮರ) ಮತ್ತು ಕುಳಿರ್ಗಾಳಿ ಮಲೆನಾಡನ್ನು ಪರಿಚಯಿಸಿದವು. ರೆಸಾರ್ಟ್‌ ಪ್ರವೇಶಿಸುತ್ತಿದ್ದ ಹಾಗೆ  ಮೊದಲು ಎಲ್ಲರ ಕಣ್ಣು ತಿರುಗಿದ್ದೆ ಸ್ವಿಮ್ಮಿಂಗ್ ಫೂಲ್‌ ಕಡೆಗೆ. ಉಟ್ಟ ಬಟ್ಟೆ ಬದಿಗೆಸೆದು ತಡಮಾಡದೆ ನೀರಿಗೆ ಹಾರಿದೆವು. ಮಲೆನಾಡಿನವನಾದ ನನಗೆ ವಾತಾವರಣ ಹೊಸದೆನಿಸದಿದ್ದರೂ, ಅವರಂತೆ ನಾನೂ ಒಬ್ಬನಾಗಿ ಬಿಟ್ಟೆ. ಆನಂತರ ಊಟ ಮುಗಿಸಿ ಇನ್ನೇನು ನಿದ್ರೆಗೆ ಜಾರಿದ್ದಷ್ಟೇ ಅಷ್ಟರಲ್ಲೇ ಅಲ್ಲಿದ್ದ ಸೌಂಡ್ ಬಾಕ್ಸ್ ಗೆಳೆಯರ ಕೈ ಸೇರಿ ನಿದ್ದೆ ಹಾಳು ಗೆಡಿಸಿತು. ಸಮಯ ಸಂಜೆಯಾದ್ದರಿಂದ ಮಲೆನಾಡಿನದೆ ಕಾಫಿ ಬಂತು, ಮಲೆನಾಡಿನಲ್ಲಿ ಕಾಫಿ ಕುಡಿಯುವುದಕ್ಕೂ ಪುಣ್ಯ ಮಾಡಿರಬೇಕು. ಕಾಫಿ ಮುಗಿಸಿ ತೋಟ ಸುತ್ತಲು ಹೊರಟೆವು. ಮಲೆನಾಡಿನ ಜೀರುಂಡೆ ಸದ್ದು ಮಾಡಲು ಶುರುಮಾಡಿತು. ತೋಟ ಸುತ್ತಿದವರಿಗೆ ಊರನ್ನೊಮ್ಮೆ ನೋಡೋಣ ಎಂದು ಮನಸ್ಸಾಯಿತು, ಹಾಗಾಗಿ ತೋಟದ ಕಾಲುದಾರಿಯನ್ನೇ ಹಿಡಿದು ತೋಟದಿಂದ ಹೊರ ಹೋಗಿ ಊರಿನ ರಸ್ತೆಯಲ್ಲಿ ಹೆಜ್ಜೆ ಹಾಕಿದೆವು. ಸುತ್ತಲೂ ಹಸಿರೇ ಕಾಣುವ ಊರಿಗೆ ಅಲ್ಲಲ್ಲಿ ಬಹು ಅಂತಸ್ತಿನ ಕಟ್ಟಡಗಳು ಏರಿ ಕಪ್ಪು ಚುಕ್ಕಿಯಂತೆ ಗೋಚರವಾಗುತಿತ್ತು.

ರಾತ್ರಿಯಾಗುತ್ತಿದ್ದಂತೆ ನಿಧಾನಕ್ಕೆ ಚಳಿ ಮೈ ಸವರಲು ಶುರುಮಾಡಿತು. ಫೈರ್ ಕ್ಯಾಂಪ್ಗೆಂದೇ ತಂದಿಟ್ಟ ಅರೆ ಬರೆ ನೆನೆದ ಕಟ್ಟಿಗೆಗಳನ್ನು ಎರಡೆರಡು ತುಂಡು ಮಾಡಿ ಬೆಂಕಿ ಹಚ್ಚಿದೆವು. ಅಲ್ಲಿಂದ ಒಂದೊಂದೇ ಕಥೆಗಳು ಆರಂಭವಾದವು, ಕಾಲೇಜು ಮತ್ತು ನಮ್ಮ ನಡುವಿನ ಸಂಬಂಧ ಇನ್ನಷ್ಟು ಹೆಚ್ಚಿನದು ಎಂದು ಅನಿಸತೊಡಗಿತು. ಏಕೆಂದರೆ ಡಿಗ್ರಿ ಇದ್ದದ್ದು 3 ವರ್ಷವಾದರೂ ನಾವು ಕಾಲೇಜಿನ ವಿದ್ಯಾರ್ಥಿಗಳಾಗಿದ್ದು 5 ವರ್ಷ. ಎಲ್ಲವೂ ಕೊರೋನದ ಪ್ರಭಾವ. ಮೊದ ಮೊದಲು ಮುಗಿದರೆ ಸಾಕೆನ್ನುವ ಕಾಲೇಜು ಈಗ ಇನ್ನೂ ಒಂದಷ್ಟು ದಿನ ಇರಬೇಕಿತ್ತು ಎಂದನಿಸುವಷ್ಟು ನಾವು ಕಾಲೇಜಿಗೆ ಹತ್ತಿರವಾಗಿದ್ದೆವು. ಮಾತುಕಥೆ, ಡ್ಯಾನ್ಸ್, ಗತ್ತು, ಗಮ್ಮತ್ತು ಎಲ್ಲವೂ ಮುಗಿದ ಬಳಿಕ ಊಟ ಮುಗಿಸಿ ಚಳಿ ಗಾಳಿ ಒಳ ಬರದ ಹಾಗೆ ಚಾದರ ಮುಚ್ಚಿಕ್ಕೊಂಡು ಮಲಗಿದೆವು.

ಬೆಳಗ್ಗೆ 9 ರ ಹೊತ್ತಿಗೆ ಬರಬೇಕಿದ್ದ ನಮ್ಮ ತಿರುಗಾಟದ ಗಾಡಿ ಸ್ವಲ್ಪ ತಡವಾಗಿ ಬಂತು. ಅದಾಗಲೇ ಹೊರಟು ನಿಂತಿದ್ದ ನಾವು ರೆಸಾರ್ಟ್‌ ನಿಂದ  ದೂರಾಗಿ ಎತ್ತಿನ ಭುಜದ ಬುಡಕ್ಕೆ ತಲುಪಿದೆವು. ಹೋಗುತ್ತಿದ್ದಂತೆ ಚಿರಿಪಿರಿ ಮಳೆಯಾಯಿತು. ಕೆಲವರು ರೈನ್ ಕೋಟ್ ಹಾಕಿಕೊಂಡರೆ ಇನ್ನು ಕೆಲವರು ಹಾಕಿದ ಬಟ್ಟೆಯನ್ನು ರೈನ್ ಕೋಟ್ ಮಾಡಿಕೊಂಡರು. ಆ ಗುಂಪಿನಲ್ಲಿ ನಾನೂ ಇದ್ದೆ. ಒಬ್ಬರ ಹಿಂದೊಬ್ಬರು ಬೆಟ್ಟ ಹತ್ತಲು ಮುಂದೆ ಬಂದೆವು. ಮೇಲೆ ಹೋಗುತ್ತಿದ್ದಂತೆ ಇದೇಕೋ ಬೇಡವಿತ್ತೇನೋ ಅನಿಸಿದ್ದೂ ಉಂಟು, ಸ್ವಲ್ಪವೇ ಸ್ವಲ್ಪ ಕಾಲು ಜಾರಿದ್ದರೂ ಇಂದು ಆಧಾರ್ ಕಾರ್ಡ್ನಲ್ಲಿ ಫೋಟೊ ನೋಡಬೇಕಾಗಿತ್ತು. ಕಷ್ಟವೋ, ಇಷ್ಟವೋ ಅಂತೂ ಬೆಟ್ಟದ ತುತ್ತ ತುದಿಗೆ ತಲುಪಿದೆವು. ದಣಿವಾಗಿದ್ದರೂ ಅಲ್ಲಿ ಕುಡಿಯಲು ನೀರಿರಲಿಲ್ಲ, ತಿನ್ನಲು ತಿಂಡಿಯ ಪೊಟ್ಟಣ ಇರಲಿಲ್ಲ. ಅಲ್ಲಿದ್ದುದು ಪ್ರಕೃತಿಯ ಸೌಂದರ್ಯ ಹಾಗೂ ಆಗ ತಾನೆ ಅದನ್ನು ಹಾಳು ಮಾಡಲಾರಂಭಿಸಿದ ಪ್ಲಾಸ್ಟಿಕ್. ಮನುಷ್ಯರು ಹೋದಲ್ಲೆಲ್ಲಾ ಹಾಳು ಮಾಡುವುದು ಬಿಟ್ಟರೆ ಅವರಿಗೆ ಹಾಳಾಗಿದ್ದನ್ನು ಸರಿ ಪಡಿಸಿ ಗೊತ್ತಿಲ್ಲ!

ಈಗ ನೂರು ರೂಪಾಯಿ ಕಥೆಗೆ ಬರೋಣ. ಫೋಟೊ ತೆಗೆಯುವುದಕ್ಕೆಂದು ಒಬ್ಬೊಬ್ಬರು ಅವರವರದೇ ಸ್ಟೈಲಲ್ಲಿ  ಒಂದೊಂದು ಕಲ್ಲಿನ ಮೇಲೆ ಒಂದೊಂದು ರೀತಿಯಲ್ಲಿ ತಪಸ್ಸಿಗೆ ಕುಳಿತಂತೆ ಕುಳಿತರು. ನಾನು ಹಾಗೆ ಮೈ ಮೇಲಿದ್ದ ಜಾಕೆಟನ್ನು ತೆಗೆದು ಗೆಳೆಯನ ಕೈಗಿಟ್ಟು ನಾಲ್ಕೈದು ಫೋಟೊ ತೆಗಿಸಿಕೊಂಡೆ. ನಾವು ನೋಡಲು ಇನ್ನೂ ಎರಡು ಜಾಗ ಬಾಕಿ ಇದ್ದದ್ದರಿಂದ  ಬಂದ ದಾರಿಯಲ್ಲೇ ಕಾಲು ಜಾರದಂತೆ, ಕಾಲಿಗೆ ಜಿಗಣೆ ಹಿಡಿಯದಂತೆ  ಕೆಳಗಿಳಿದೆವು. ಇಳಿದು  ನಾವು ಮೂವರು ಕಾಲು ದಾರಿಯಲ್ಲಿ ನಡೆಯುತ್ತಿರುವಾಗ ಒಂದು ಜಿಗಣೆ ಜೊತೆಗಾರರಿಲ್ಲದೆ ರಸ್ತೆ ಮಧ್ಯದಲ್ಲಿ ತಿಣುಕಾಡುತ್ತಿತ್ತು, ಅದನ್ನು ನೋಡಿದ ನಮ್ಮಲ್ಲೊಬ್ಬ ಅದರ ಫೋಟೊ ತೆಗೆಯುವ ಸಾಹಸಕ್ಕೆ ಕೂತ. ಈತ ಫೋಟೊ ತೆಗೆಯುವಾಗ ನಾನು ಯಾಕೋ ಸುಮ್ಮನೆ ಬಂದ ದಾರಿಯ ಕಡೆಗೆ ನೋಡುತ್ತಿದ್ದಾಗ ಬಲಿಷ್ಠವಾದ ಎರಡು ಕೊಂಬುಗಳುಳ್ಳ ಎತ್ತು ನಮ್ಮನ್ನೆ ದಿಟ್ಟಿಸಿ ನೋಡುತ್ತ ನಾವಿದ್ದಲ್ಲಿಗೆ ಓಡಿ ಬರುತಿತ್ತು. ಗೊತ್ತಿರುವುದು ಅಷ್ಟೆ. ಮುಂದೇನಾಯಿತು ಎಂಬುದು ನಮ್ಮ ನಮ್ಮ ಕಾಲುಗಳಿಗೇ ಗೊತ್ತು. ಒಮ್ಮೆ ಮನೆ ನೆನಪಾಗಿದ್ದಂತೂ ಹೌದು. ನಾವು ಓಡಿ ಬಂದ ರಭಸಕ್ಕೆ ನಮ್ಮೆದುರಿಗೆ ಓಡುತಿದ್ದವರು ನಮಗಿಂತ ಹಲವು ಹೆಜ್ಜೆ ಹಿಂದುಳಿದಿದ್ದರು, ಪುಣ್ಯಕ್ಕೆ ಯಾರಿಗೂ ಏನೂ ಆಗಲಿಲ್ಲ.

ಗಾಡಿ ಒಳಗೆ ಬಂದು ಏನಾದರೂ ತಿನ್ನೋಣವೆಂದು ಜಾಕೆಟ್ ಜೇಬಿಗೆ ಕೈ ಹಾಕುತ್ತೇನೆ ರು. 100  ಕಾಣೆಯಾಗಿತ್ತು. ಏನೂ ಆಗದ ಖುಷಿಯಲ್ಲಿ ಆ ನೂರು ರೂಪಾಯಿಗೆ ಹೆಚ್ಚಿಗೆಯೇನು ತಲೆ ಕೆಡಿಸಿಕೊಳ್ಳಲಿಲ್ಲ. ಗೆಳೆಯನೊಬ್ಬನ ಬಳಿ ಹೀಗಾಯಿತು ಎಂದು ಹೇಳಿಕೊಂಡಾಗ ಆತ ಮತ್ತೊಬ್ಬ ಗೆಳೆಯನಲ್ಲಿ ಕೇಳು ಎಂದ. ಆತನಲ್ಲಿ ಕೇಳಿದಾಗ “ಹಾ.. ನಿನ್ನದ” ಎನ್ನುತ್ತ  ಹಾಸ್ಯವಾಗಿ ನಕ್ಕು ಅದನ್ನು ಹಿಂದಿರುಗಿಸಿದ. ಆತನ ಕೈಗೆ ನಾನು ಜಾಕೆಟ್ ಕೊಟ್ಟಾಗ ಆ ಹಣ ಕೆಳಗೆ ಬಿದ್ದಿದೆ, ಆತ ಅದನ್ನು ಫೋಟೊ ತೆಗೆಯಲು ದೂರದಲ್ಲಿ ನಿಂತ ನನ್ನನ್ನು ಕೇಳಿದ್ದಾನೆ, ಆದರೆ ನಾನು ನನಗರಿಯದಂತೆ ನನ್ನದಲ್ಲ ಎಂದಿದ್ದೇನೆ. ಏನೇ ಇರಲಿ ನನ್ನ ಹಣ ನನ್ನ ಕೈಗೆ ಸೇರಿತು.

ಅಲ್ಲಿಂದ ನೇರವಾಗಿ ನೋಡ ಬೇಕಿದ್ದ ಎರಡು ಜಾಗಗಳನ್ನು ನೋಡಿ ಮೂಡಿಗೆರೆಯ ಮಸಾಲೆ ತಿಂದು ರೈಲು ಹತ್ತಿದೆವು. ಇಂತಹದೊಂದು ಪ್ರವಾಸಕ್ಕೆ ನಾವೆಲ್ಲ ಒಟ್ಟು ಗೂಡಿ ಹೋಗಿರದೆ ಇದ್ದಿದ್ದರೆ ಡಿಗ್ರಿ ಬದುಕಿಗೆ  ಪೂರ್ಣ ವಿರಾಮವಿಟ್ಟರೂ ಅಲ್ಪ ವಿರಾಮದ ಅನುಭವವಾಗುತಿತ್ತೊ ಏನೋ.!

ರಾಹುಲ್‌ ಆರ್‌ ಸುವರ್ಣ

ಪತ್ರಿಕೋದ್ಯಮ ವಿಭಾಗ, ಎಂ ಜಿ ಎಂ ಕಾಲೇಜು, ಉಡುಪಿ

ಇದನ್ನೂ ಓದಿ-ಫ್ರೀ ಬಸ್ಸಿನ ಸುತ್ತಾ..

Related Articles

ಇತ್ತೀಚಿನ ಸುದ್ದಿಗಳು