ದೆಹಲಿ: ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿ ವೈ ಚಂದ್ರಚೂಡ್ ಅವರು “ನನಗೆ ಮುಂದಿನ ಇತಿಹಾಸ ನನ್ನನ್ನು ಹೇಗೆ ನೆನಪಿಸಿಕೊಳ್ಳಬಹುದು, ಮುಂದಿನ ನ್ಯಾಯಾಧೀಶರಿಗೆ ಎಂತಹ ಪರಂಪರೆಯನ್ನು ನಾನು ಬಿಟ್ಟು ಹೋಗಲಿದ್ದೇನೆ” ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ನ್ಯಾಯವಾದಿ ದುಷ್ಯಂತ್ ದವೆಯವರು “ಜಸ್ಟೀಸ್ ಚಂದ್ರಚೂಡ್ ಅವರನ್ನು ಇತಿಹಾಸ ನೆನಪಿಟ್ಟುಕೊಳ್ಳದೆ, ಮರೆತುಬಿಡುವುದೇ ಒಳ್ಳೆಯದು” ಎಂದು ಹೇಳಿದ್ದಾರೆ.
ದಿ ವೈರ್ ವೆಬ್ಸೈಟಿನ ಪರವಾಗಿ ಕರಣ್ ಥಾಪರ್ ನಡೆಸಿಕೊಟ್ಟ ಸಂಸದರ್ಶನದಲ್ಲಿ ಮಾತನಾಡುತ್ತಿದ್ದ ಅವರು ಮೇಲಿನ ಮಾತುಗಳನ್ನು ಹೇಳಿದ್ದಾರೆ. ಸಂದರ್ಶನದ ನಡುವೆ ಥಾಪರ್ ಜಸ್ಟೀಸ್ ಚಂದ್ರಚೂಡ್ ಅವರ ಕುರಿತು ಕೇಳಿದ ಪ್ರಶ್ನೆಗೆ ದುಷ್ಯಂತ್ ದವೆ ಹೀಗೆ ಉತ್ತರಿಸಿದ್ದಾರೆ.
ಮುಂದುವರೆದು ಮಾತನಾಡಿದ ದುಷ್ಯಂತ್ ದವೆ, “ಚಂದ್ರಚೂಡ್ ನನಗೂ ಒಳ್ಳೆಯ ಸ್ನೇಹಿತ ಹಾಗೂ ಸಹೋದ್ಯೋಗಿ. ಅವರ ಕೆಲಸಗಳ ಕುರಿತು ನನಗೆ ಹೆಮ್ಮೆಯಿದೆ. ಆದರೆ ಅವರು ಮುಖ್ಯ ನ್ಯಾಯಾಧೀಶರಾದ ನಂತರ ನಡೆದುಕೊಂಡು ರೀತಿ ಸರಿಯಿಲ್ಲ.
ಕೆಲವು ಪ್ರಕರಣಗಳಲ್ಲಿ ಅವರು ಧೈರ್ಯ ತೋರಿಸುವಲ್ಲಿ ಅವರು ಹಿಂಜರಿದಿದ್ದಾರೆ, ಕೆಲವು ತೀರ್ಪುಗಳು ಕಳವಳ ಹುಟ್ಟಿಸುವಂತಿವೆ.
ಅವರು ಇತಿಹಾಸ ನೆನಪಿಟ್ಟುಕೊಳ್ಳುವಂತಹದ್ದು ಏನೂ ಮಾಡಿಲ್ಲ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಮರೆತುಬಿಡುವುದೇ ಒಳ್ಳೆಯದು” ಎಂದು ಅವರು ಹೇಳಿದ್ದಾರೆ.
ಇದೇ ತಿಂಗಳ ಒಂಬತ್ತನೇ ತಾರೀಖಿನಂದು ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಡಿವೈ ಚಂದ್ರಚೂಡ್ ನಿವೃತ್ತರಾಗಲಿದ್ದು, ಅವರ ಜಾಗಕ್ಕೆ ಜಸ್ಟೀಸ್ ಸಂಜೀವ್ ಖನ್ನಾ ಬರಲಿದ್ದಾರೆ.
ಹುದ್ದೆಗೆ ಏರುವ ಮೊದಲು ಬಹಳ ನಿರೀಕ್ಷೆಯನ್ನು ಹುಟ್ಟಿಸಿದ್ದ ಜಸ್ಟೀಸ್ ಚಂದ್ರಚೂಡ್ ಅವರು ನಂತರ ಹಲವು ಪ್ರಕರಣಗಳಲ್ಲಿ ದೇಶದ ಜನರಿಗೆ ನಿರಾಶೆ ಹುಟ್ಟಿಸಿದ್ದರು.
ಇತ್ತೀಚೆಗೆ ಗಣೇಶ ಚತುರ್ಥಿಯ ದಿನ ಪ್ರಧಾನಿ ಮೋದಿ ಜಸ್ಟೀಸ್ ಚಂದ್ರಚೂಡ್ ಅವರ ಮನೆಗೆ ಹೋಗಿದ್ದು ಸಹ ವಿವಾದಕ್ಕೆ ಕಾರಣವಾಗಿತ್ತು. ಆದರೆ ಮುಖ್ಯ ನ್ಯಾಯಾಧೀಶರು ಇದನ್ನು ಸಮರ್ಥಿಸಿಕೊಂಡು, ಅವರ ಭೇಟಿ ನ್ಯಾಯ ತೀರ್ಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ನಾವು ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಗಳ ಸಂದರ್ಭದಲ್ಲಿ ಭೇಟಿಯಾಗುತ್ತಿರುತ್ತೇವೆ ಎಂದು ಹೇಳಿದ್ದರು.