Monday, June 23, 2025

ಸತ್ಯ | ನ್ಯಾಯ |ಧರ್ಮ

‌SC/ST ಸಮುದಾಯದ ಪತ್ರಕರ್ತರಿಗೆ ಉಚಿತ ಟ್ಯಾಬ್ ವಿತರಣೆ: ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡಮಿಯಿಂದ 2022-23ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪತ್ರಕರ್ತರಿಗೆ ಉತ್ತೇಜನ ನೀಡುವ ಸಲುವಾಗಿ ಉಚಿತವಾಗಿ ಟ್ಯಾಬ್‌ಗಳನ್ನು ನೀಡಲು ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಾಗಿರಬೇಕು ಅಥವಾ ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು.

ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಅನುಭವವಿರಬೇಕು. ಪತ್ರಿಕೆಯ ಸಂಪಾದಕರಾಗಿದ್ದಲ್ಲಿ ಪತ್ರಿಕೆಯು ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರಿರಬೇಕು. ಪತ್ರಿಕೆಯು ನಿರಂತರವಾಗಿ ಪ್ರಕಟಗೊಳ್ಳುತ್ತಿದ್ದು, ಪತ್ರಿಕೆ ಮೇಲಾಗಲಿ ಹಾಗೂ ಸಂಪಾದಕರ ಮೇಲಾಗಲಿ ಯಾವುದೇ ರೀತಿಯ ಕ್ರಿಮಿನಲ್‌ ಅಪರಾಧ ಮೊಕದ್ದಮೆಗಳು ಇರಬಾರದು ಎಂಬುದು ಮಾನದಂಡವಾಗಿದೆ.

ಈ ಹಿಂದೆ ಕರ್ನಾಟಕ ಮಾಧ್ಯಮ ಅಕಾಡಮಿ, ವಾರ್ತಾ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳಿಂದ ಸೌಲಭ್ಯ ಪಡೆದ ಫಲಾನುಭವಿಗಳಾಗಿದ್ದರೆ ಅವರುಗಳು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ.

ಅಭ್ಯರ್ಥಿಗಳು ಸ್ವಯಂ ಅರ್ಜಿಯೊಂದಿಗೆ 10 ವರ್ಷ ಸೇವಾ ಅನುಭವ, ಜಾತಿ ಪ್ರಮಾಣ ಪತ್ರ, ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮುಖ್ಯಸ್ಥರಿಂದ ಪಡೆದ ಸೇವಾ ದೃಢೀಕರಣ ಪತ್ರ ಹಾಗೂ ಇನ್ನಿತರ ಪೂರಕ ದಾಖಲೆಗಳನ್ನು ಲಗತ್ತಿಸಿ ಅಕಾಡಮಿಯ ಇಮೇಲ್ ವಿಳಾಸ karnatakamediaacademy@gmail. comಗೆ ಸಲ್ಲಿಸಬೇಕು ಅಥವಾ ಕಾರ್ಯದರ್ಶಿಗಳು, ಕರ್ನಾಟಕ ಮಾಧ್ಯಮ ಅಕಾಡಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-01 ಇಲ್ಲಿಗೆ ಅಂಚೆ ಮೂಲಕ ನ.10ರ ಒಳಗಾಗಿ ಸಲ್ಲಿಸಬಹುದೆಂದು ಅಕಾಡಮಿ ಕಾರ್ಯದರ್ಶಿ ಸಿ.ರೂಪಾ ಅವರು ತಿಳಿಸಿದ್ದಾರೆ.

ಸೌಲಭ್ಯ ಪಡೆದ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page