Home ಬ್ರೇಕಿಂಗ್ ಸುದ್ದಿ ಕರ್ನಾಟಕದ ನಂತರ ತಮಿಳುನಾಡಿನಲ್ಲಿ ಸದ್ದಾದ ಕೇಂದ್ರದ ತೆರಿಗೆ ನೀತಿ ; ’28 ಪೈಸೆ ಪಿಎಂ’ ಎಂದ...

ಕರ್ನಾಟಕದ ನಂತರ ತಮಿಳುನಾಡಿನಲ್ಲಿ ಸದ್ದಾದ ಕೇಂದ್ರದ ತೆರಿಗೆ ನೀತಿ ; ’28 ಪೈಸೆ ಪಿಎಂ’ ಎಂದ ಉದಯನಿಧಿ ಸ್ಟಾಲಿನ್

0

ಕೇಂದ್ರ ಬಿಜೆಪಿ ಸರ್ಕಾರದ ತೆರಿಗೆ ಹಂಚಿಕೆ ವಿರುದ್ಧ ಕರ್ನಾಟಕದಲ್ಲಿ ಎದ್ದ ದನಿಯ ನಂತರ ಈಗ ತಮಿಳುನಾಡಿನಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಕೇಂದ್ರದ ತೆರಿಗೆ ಹಂಚಿಕೆಯ ವಿರುದ್ಧ ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಶನಿವಾರ(ಮಾ.23 ರಂದು) ವಾಗ್ದಾಳಿ ನಡೆಸಿದ್ದಾರೆ.

ರಾಮನಾಥಪುರಂ ಮತ್ತು ಥೇಣಿಯಲ್ಲಿ ಪ್ರತ್ಯೇಕ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯವು ತೆರಿಗೆಯಾಗಿ ಪಾವತಿಸುವ ಪ್ರತಿ ರೂಪಾಯಿಗೆ ಕೇವಲ 28 ಪೈಸೆಗಳನ್ನು ಮಾತ್ರ ಕೇಂದ್ರ ರಾಜ್ಯಕ್ಕೆ ಪಾವತಿಸಿದೆ. ಬಿಜೆಪಿ ಆಡಳಿತದ ರಾಜ್ಯಗಳು ಇದಕ್ಕಿಂತ ಹೆಚ್ಚು ಹಣವನ್ನು ಪಡೆಯುತ್ತವೆ ಎಂದು ಆರೋಪಿಸಿದ್ದಾರೆ.

ಹೀಗಾಗಿ ಇನ್ನು ಮುಂದೆ ನಾವು ಪ್ರಧಾನಿಯನ್ನು 28 ಪೈಸೆ ಪಿಎಂ ಎಂದು ಕರೆಯಬೇಕು ಎಂದು ಸ್ಟಾಲಿನ್‌ ವ್ಯಂಗ್ಯವಾಡಿದ್ದಾರೆ. ತಮಿಳುನಾಡಿನಲ್ಲಿ ಮಕ್ಕಳ ಭವಿಷ್ಯವನ್ನು ನಾಶಮಾಡಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ತಂದಿದ್ದಾರೆ. ಹಣ ಹಂಚಿಕೆ, ಅಭಿವೃದ್ಧಿ ಯೋಜನೆಗಳು ಮತ್ತು ರಾಜ್ಯದಲ್ಲಿ ನೀಟ್‌ ಅನ್ನು ನಿಷೇಧಿಸುವ ವಿಷಯದಲ್ಲಿ ತಮಿಳುನಾಡು ವಿರುದ್ಧ ತಾರತಮ್ಯ ಮಾಡಲಾಗಿದೆ ಎಂದರು.

ಚುನಾವಣೆ ಹತ್ತಿರವಿರುವಾಗ ಮಾತ್ರ ಪ್ರಧಾನಿ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

39 ಲೋಕಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆ ನಡೆಯಲಿದೆ.

You cannot copy content of this page

Exit mobile version