Sunday, June 22, 2025

ಸತ್ಯ | ನ್ಯಾಯ |ಧರ್ಮ

ಮತ್ತೆ ಹೈಕೋರ್ಟ್ ಮೆಟ್ಟಿಲು ಹತ್ತಿದ ಉಪೇಂದ್ರ – ಉಪೇಂದ್ರ ಫ್ಯಾನುಗಳ ಮೇಲೂ ಬೀಳಲಿದೆಯಾ ಕೇಸು?

ಬೆಂಗಳೂರು : ಅವಹೇಳನಾಕಾರಿ ಪದಬಳಕೆ ಮಾಡಿ ದಲಿತ ಸಮುದಾಯದ ಜನಾಂಗಕ್ಕೆ ಭಾವನಾತ್ಮಕವಾಗಿ ನೋವು ಕೊಟ್ಟ ಆರೋಪದಡಿ ದಾಖಲಾಗಿರುವ ಎರಡನೇ ಎಫ್​ಐಆರ್ ರದ್ದು ಕೋರಿ ನಟ ಉಪೇಂದ್ರ ಇಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡುವ ಸಂದರ್ಭದಲ್ಲಿ ಗಾದೆ ಮಾತೊಂದು ಬಳಸಿದ್ದು, ಇದು ಪರಿಶಿಷ್ಟ ಜಾತಿಯ ಒಂದು ಸಮುದಾಯವನ್ನು ಕೆಟ್ಟವರು ಎಂಬುದಾಗಿ ಬಿಂಬಿಸುವಂತೆ ಬಳಸಲಾಗಿದೆ ಎನ್ನುವ ಆರೋಪದಲ್ಲಿ, ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್​ಗೆ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್​ ಚಂದನಗೌಡರ್​ ಅವರಿದ್ದ ನ್ಯಾಯಪೀಠ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಇದರ ಬೆನ್ನಲ್ಲೇ ಎರಡನೇ ಎಫ್‌ಐಆರ್ ರದ್ದು ಕೋರಿ ಮತ್ತೊಮ್ಮೆ ಉಪೇಂದ್ರ ಹೈಕೋರ್ಟ್ ಮೊರೆ ಹೋಗಿದ್ದಾರೆ. ರಣಧೀರ ಪಡೆಯ ಹರೀಶ್ ಎನ್ನುವವರು ಕೊಟ್ಟ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಉಪೇಂದ್ರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಮೊದಲ ಎಫ್‌ಐಆರ್ ರದ್ದುಗೊಳಿವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ಉಪೇಂದ್ರ ಪರ ವಕೀಲರು, ಉಪೇಂದ್ರ ಅವರು ನೀಡಿದ್ದ ಹೇಳಿಕೆಯಲ್ಲಿ ಯಾವುದೇ ಜಾತಿ, ಪಂಗಡಗಳನ್ನು ಅವಮಾನಿಸುವ ಉದ್ದೇಶವಿರಲಿಲ್ಲ. ಸಾಮಾನ್ಯ ಪದವನ್ನಾಗಿ ಬಳಕೆ ಮಾಡಿದ್ದಾರೆ. ಈ ಪದ ಬಳಕೆ ಕೆಲವರಿಗೆ ನೋವುಂಟಾಗಿದೆ ಎಂದು ತಿಳಿಯುತ್ತಿದ್ದಂತೆ ಕ್ಷಮೆ ಕೇಳಿದ್ದರು. ವಿಡಿಯೋ ಡಿಲಿಟ್ ಮಾಡಿದ್ದರು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅಲ್ಲದೆ, ಶಿವಮೊಗ್ಗ ಜಿಲ್ಲೆಯಲ್ಲಿ ಹೊಲಗೇರಿ ಎಂಬ ಸ್ಥಳವಿದೆ. ಹೊಲಗೇರಿ ಎಂಬ ರೀತಿಯಲ್ಲಿ ಉಪನಾಮ ಹೊಂದಿರುವವರೂ ಇದ್ದಾರೆ. ಹಾಗಾಗಿ ಹಳೆಯ ಗಾದೆಯನ್ನು ಉಲ್ಲೇಖಿಸಿರುವ ಅಂಶ ಯಾವುದೇ ಜಾತಿಯನ್ನು ನಿಂದನೆ ಮಾಡಿದಂತೆ ಎಂಬ ಅರ್ಥವಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡ (ಎಸ್‌ಸಿ,ಎಸ್‌ಟಿ) ದೌರ್ಜನ್ಯ ತಡೆ ಕಾಯ್ದೆಯಡಿ ಯಾವುದೇ ಅಪರಾಧ ಎಸಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಅದೇ ರೀತಿ ಎರಡನೇ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿಯೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇರುವ ಹೊಲಗೇರಿ ಎನ್ನುವ ಊರಿನ ಸರ್ಕಾರಿ ದಾಖಲೆಗಳ ಅಡಕಗಳನ್ನು ಸೇರಿಸಿದ್ದು, ಎಫ್‌ಐಆರ್ ರದ್ದು ಮಾಡಲು ಮನವಿ ಮಾಡಿದ್ದಾರೆ.

ಈ ನಡುವೆ ಹೋರಾಟಗಾರರು ಉಪೇಂದ್ರನನ್ನು ಬೆಂಬಲಿಸಿ ವಿಡಿಯೋ ಮಾಡುತ್ತಿರುವ ಅಭಿಮಾನಿಗಳ ವಿರುದ್ಧವೂ ಪ್ರಕರಣ ದಾಖಲಿಸಲು ಮುಂದಾಗಿದ್ದರೆಂದು ತಿಳಿದು ಬಂದಿದೆ.

ಕೆಲವು ಅಭಿಮಾನಿಗಳು ಉಪೇಂದ್ರನ ಹೇಳಿಕೆಯನ್ನು ಬೆಂಬಲಿಸಿದ್ದರು. ಅದರಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಉಪೇಂದ್ರ ಅಭಿಮಾನಿಗಳ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದ ಉಪ್ಪಿ ಫ್ಯಾನ್ಸ್​ಗೂ ತೊಂದರೆ ಎದುರಾಗುವ ಸೂಚನೆ ಸಿಕ್ಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page