Thursday, June 19, 2025

ಸತ್ಯ | ನ್ಯಾಯ |ಧರ್ಮ

ಉರಿದ ಸೂರ್ಯ, ಕಂಗೊಳಿಸಿದ ಕೊಹ್ಲಿ

ಭಾರತಕ್ಕೆ ಸರಣಿ

ಹೈದರಾಬಾದ್ ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಕಿಂಗ್ ಕೊಹ್ಲಿ ಅಬ್ಬರದ ಆಟದಿಂದಾಗಿ ಭಾರತ ಆಸ್ಟ್ರೇಲಿಯಾ ವಿರುದ್ಧದ ಟಿ 20 ಕ್ರಿಕೆಟ್ ಸರಣಿಯನ್ನು ಗೆದ್ದುಕೊಂಡಿದೆ.

3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಪಂದ್ಯ ಗೆದ್ದರೆ ಮಳೆಯಿಂದ ಎಂಟು ಓವರ್ ಗಳಿಗೆ ಸೀಮಿತವಾಗಿದ್ದ ಎರಡನೇ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಹಾಗಾಗಿ ನಿರ್ಣಾಯಕ ಎನಿಸಿದ್ದ ಮೂರನೇ ಪಂದ್ಯ ಎರಡೂ ತಂಡಗಳಿಗೂ ಅಗ್ನಿಪರೀಕ್ಷೆ ಆಗಿತ್ತು. ಆದರೆ ಇದರಲ್ಲಿ ಭಾರತ ಗೆದ್ದು ಬೀಗಿತು.

ಟಾಸ್ ಗೆದ್ದು ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗಿಗೆ ಇಳಿಸಿದ ಭಾರತ ಕಡಿಮೆ ಮೊತ್ತಕ್ಕೆ ಎದುರಾಳಿಯನ್ನು ಕಟ್ಟಿಹಾಕುವ ಯೋಚನೆ ಮಾಡಿತ್ತು. ಆದರೆ, ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಮತ್ತು ಟಿಮ್ ಡೇವಿಡ್ ಭಾರತದ ಬೋಲರ್ ಗಳನ್ನು ಕಾಡಿ ತ್ವರಿತ ಗತಿಯ ಅರ್ಧಶತಕಗಳನ್ನು ಗಳಿಸಿದರು. ಹಾಗಾಗಿ ಭಾರತಕ್ಕೆ 187 ರನ್ ಗಳ ಗುರಿ ಸಿಕ್ಕಿತ್ತು.

ಈ ಬಾರಿ ರಾಹುಲ್ ಮತ್ತು ರೋಹಿತ್ ಅವರಿಂದ ಹೇಳಿಕೊಳ್ಳುವ ಆರಂಭ ಭಾರತಕ್ಕೆ ಸಿಗಲಿಲ್ಲ. ಆದರೆ ಇವರಿಬ್ಬರ ವಿಕೆಟ್ ಪತನದ ನಂತರ ಅಸಲೀ ಆಟ ಈಗ ಶುರು ಎಂಬಂತೆ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅಬ್ಬರದ ಆಟ ಆಡಿದರು. ಇವರಿಬ್ಬರ ಜೋಡಿ ಭಾರತವನ್ನು ಗೆಲುವಿನ ಸಮೀಪ ಕೊಂಡೊಯ್ಯಿತು.

ತಲಾ ಅರ್ಧ ಶತಕ ಗಳಿಸಿದ ಈ ಇಬ್ಬರೂ ಆಟಗಾರರು ನೆರೆದಿದ್ದ ಪ್ರೇಕ್ಷಕರಿಗೆ ನಿಜವಾದ ಕ್ರಿಕೆಟ್ ನ ಮಜಾ ನೀಡಿದರು. ಬೌಂಡರಿ, ಸಿಕ್ಸರ್ ಗಳ ಮಳೆ ಸುರಿಸಿದ ಈ ಜೋಡಿಯ ಬ್ಯಾಟಿಂಗ್ ಹಬ್ಬ ಕ್ರಿಕೆಟ್ ಪ್ರಿಯರಿಗೆ ಮುದ ನೀಡಿತು. ಅದರಲ್ಲೂ ಆಕ್ರಮಣಕಾರಿಯಾಗಿದ್ದ ಸೂರ್ಯಕುಮಾರ್ ಯಾದವ್ ಕೆಲವು ಮನಮೋಹಕ ಹೊಡೆತಗಳನ್ನು ಬಾರಿಸಿ ವಿಶ್ವಕಪ್ ಪಂದ್ಯಾವಳಿಗೆ ತಾವು ಸಿದ್ದ ಎಂಬ ಮೆಸೇಜ್ ಕೊಟ್ಟರು.

ಇನ್ನು ಸೂರ್ಯ ಕುಮಾರ್ ಯಾದವ್ ಔಟ್ ಆಗುವವರೆಗೂ ಇನ್ನೊಂದು ತುದಿಯಲ್ಲಿ ಕೂಲ್ ಆಗಿ ಆಡುತ್ತಿದ್ದ ಕೊಹ್ಲಿ, ಸೂರ್ಯನ ನಿರ್ಗಮನದ ನಂತರ ಅಗ್ರೆಸಿವ್ ಆದರು. ಜೊತೆಗೆ ಜಂಪಾ ಅವರಿಗೆ ಪದೇ ಪದೇ ಔಟ್ ಆಗುತ್ತಾರೆ ಎಂಬ ಕಳಂಕವನ್ನು ತೊಡೆದು ಹಾಕಲು ತೊಡೆ ತಟ್ಟಿ ಬಂದವರಂತೆ ಆಡಿದ ಕೊಹ್ಲಿ, ಆರಂಭದಿಂದಲೂ ಆಡಂ ಜಂಪಾ ಅವರನ್ನೇ ಗುರಿಯಾಗಿಸಿಕೊಂಡು ರನ್ ಸುರಿಮಳೆಗೈದರು. ಈ ಜೋಡಿಯ ಅಬ್ಬರದ ಆಟದ ಪರಿಣಾಮ, ಸೂರ್ಯ ಔಟ್ ಆದ ಮೇಲೆ ಕೊನೆಯ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 11 ರನ್ ಗಳ ಅಗತ್ಯ ಇತ್ತು. ಆದರೆ ಮೊದಲ ಚೆಂಡನ್ನೇ ಸಿಕ್ಸರ್ ಗೆ ಅಟ್ಟಿದ ಕೊಹ್ಲಿ ಗೆಲುವನ್ನು ಸುಲಭ ಮಾಡಿ, 48 ಬಾಲಿಗೆ 63 ರನ್ ಗಳಿಸಿದರು. ಹಾಗಾಗಿ ಮರು ಎಸೆತದಲ್ಲಿ ಅವರು ಔಟ್ ಆದರೂ ಹಾರ್ದಿಕ್ ಪಾಂಡ್ಯ ಮತ್ತು ದಿನೇಸ್ ಕಾರ್ತಿಕ್ ಅವರಿಗೆ ಗುರಿಮುಟ್ಟಲು ಕಷ್ಟ ಆಗಲಿಲ್ಲ. ಇನ್ನೂ ಒಂದು ಎಸೆತ ಬಾಕಿ ಇರುವಂತೆ ಗುರಿ ತಲುಪಿ 6 ವಿಕೆಟ್ ಗಳ ಗೆಲುವು ಸಾಧಿಸಿತು ಭಾರತ.

36 ಬಾಲ್ ನಲ್ಲಿ 69 ರನ್ ಗಳಿಸಿ ಅಬ್ಬರದ ಆಟವಾಡಿದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಎನಿಸಿಕೊಂಡರೆ, ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ಫೈನಲ್ ಪಂದ್ಯದಲ್ಲೂ 3 ವಿಕೆಟ್ ಪಡೆದ ಅಕ್ಸರ್ ಪಟೇಲ್ ಸರಣಿ ಶ್ರೇಷ್ಠ ಎನಿಸಿಕೊಂಡರು. ತಂಡದ ಸೀನಿಯರ್ ಪ್ಲೇಯರ್ ಗಳಲ್ಲಿ ಒಬ್ಬರಾಗಿದ್ದರೂ, ಮಾಜಿ ನಾಯಕ ಕೊಹ್ಲಿ ಮೋಸ್ಟ್ ಎನರ್ಜಿಟಿಕ್ ಪ್ಲೇಯರ್ ಪ್ರಶಸ್ತಿ ಗಳಿಸಿದ್ದು ವಿಶೇಷವಾಗಿತ್ತು. ಈಗ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯನ್ನು ಕೂಡಾ ಗೆದ್ದು ವಿಶ್ವಕಪ್ ಟಿ 20ಗೆ ತನ್ನನ್ನು ತಾನು ಸಿದ್ಧ ಮಾಡಿಕೊಳ್ಳುವುದು ಬಾರತ ತಂಡದ ಮುಂದಿನ ಗುರಿ. ಅಂದಹಾಗೆ, ದಕ್ಷಿಣಾ ಆಫ್ರಿಕಾ ವಿರುದ್ದದ ಸರಣಿ ಇದೇ 28ರ ಬುಧವಾರದಿಂದ ಆರಂಭವಾಗಲಿದೆ.

🔶 ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನೂ ನೋಡಿ:https://www.facebook.com/watch/?v=396425086012198

Related Articles

ಇತ್ತೀಚಿನ ಸುದ್ದಿಗಳು

You cannot copy content of this page