Home ವಿದೇಶ ಓದಲು ಹೋದವನನ್ನು ಯುದ್ಧಕ್ಕೆ ಕಳುಹಿಸಿದರು: ರಷ್ಯಾದಲ್ಲಿ ಕಾಣೆಯಾದ ಉತ್ತರಾಖಂಡ ಯುವಕ

ಓದಲು ಹೋದವನನ್ನು ಯುದ್ಧಕ್ಕೆ ಕಳುಹಿಸಿದರು: ರಷ್ಯಾದಲ್ಲಿ ಕಾಣೆಯಾದ ಉತ್ತರಾಖಂಡ ಯುವಕ

0

ರುದ್ರಪುರ್: ರಷ್ಯಾದಲ್ಲಿ ಶಿಕ್ಷಣ ಪಡೆಯಲು ತೆರಳಿದ್ದ ಉತ್ತರಾಖಂಡದ ಯುವಕನೊಬ್ಬ ಯುದ್ಧದಲ್ಲಿ ಭಾಗವಹಿಸಲು ಬಲವಂತವಾಗಿ ಸೇನೆಯಲ್ಲಿ ಸೇರಿಸಲಾಗಿದೆ ಎಂದು ಆತನ ಕುಟುಂಬ ಆತಂಕ ವ್ಯಕ್ತಪಡಿಸಿದೆ. ಉತ್ತರಾಖಂಡದ ಸಿತಾರ್‌ಗಂಜ್ ತಹಸಿಲ್‌ಗೆ ಸೇರಿದ 30 ವರ್ಷದ ರಾಕೇಶ್, ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಓದಲು ಹೋಗಿದ್ದರು. ಆದರೆ, ಅವರನ್ನು ಸೈನಿಕನನ್ನಾಗಿ ಮಾಡಲಾಗಿದೆ ಎಂದು ಕುಟುಂಬ ಹೇಳಿದೆ.

ಕಳೆದ ಕೆಲವು ದಿನಗಳಿಂದ ರಾಕೇಶ್ ಅವರ ಸಂಪರ್ಕ ಸಿಗುತ್ತಿಲ್ಲ. ಹೀಗಾಗಿ, ಅವರನ್ನು ತಕ್ಷಣವೇ ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ಕುಟುಂಬವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ. ಈ ವಿಚಾರದಲ್ಲಿ ನೆರವು ಕೋರಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬಳಿಯೂ ಮನವಿ ಮಾಡಿದ್ದಾರೆ.

ಪ್ರಕರಣದ ವಿವರ

ರಾಕೇಶ್ ಅವರ ಸಹೋದರ ದೀಪು ಮೌರ್ಯ ಹೇಳಿದ ಪ್ರಕಾರ, ರಾಕೇಶ್ ಆಗಸ್ಟ್ 7ರಂದು ಅಧ್ಯಯನ ವೀಸಾದೊಂದಿಗೆ ರಷ್ಯಾಕ್ಕೆ ಹೋಗಿದ್ದರು. ಅದೇ ತಿಂಗಳ 30ರಂದು, ರಾಕೇಶ್ ತನ್ನ ಸಹೋದರನೊಂದಿಗೆ ಮಾತನಾಡಿ, ರಷ್ಯಾದ ಸೇನೆಗೆ ಸೇರುವಂತೆ ಮತ್ತು ಉಕ್ರೇನ್ ಯುದ್ಧದಲ್ಲಿ ಸೈನಿಕನಾಗಿ ಹೋರಾಡುವಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿಕೊಂಡಿದ್ದರು.

ಕೆಲವು ದಿನಗಳ ನಂತರ, ರಾಕೇಶ್ ಸೇನಾ ಸಮವಸ್ತ್ರದಲ್ಲಿದ್ದ ಫೋಟೋವನ್ನು ಕುಟುಂಬಕ್ಕೆ ಕಳುಹಿಸಿದ್ದರು.

ಅದಾದ ಕೆಲ ದಿನಗಳ ನಂತರ ಮತ್ತೆ ಕರೆ ಮಾಡಿ, ತಮ್ಮ ಪಾಸ್‌ಪೋರ್ಟ್ ಮತ್ತು ಇತರ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಅಧಿಕೃತ ಇ-ಮೇಲ್‌ಗಳನ್ನು ಅಳಿಸಲಾಗಿದೆ ಎಂದು ತಿಳಿಸಿದ್ದರು. ಅಲ್ಲದೆ, ಡಾನ್‌ಬಾಸ್ ಪ್ರದೇಶದಲ್ಲಿ ತರಬೇತಿ ನೀಡಿ ಯುದ್ಧಭೂಮಿಗೆ ಕಳುಹಿಸಿರುವುದಾಗಿ ಹೇಳಿದ್ದರು.

ಇದಕ್ಕೂ ಮೊದಲು, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಪಂಜಾಬ್ ಮತ್ತು ಹರಿಯಾಣದ ಸುಮಾರು 20 ಭಾರತೀಯರನ್ನು ಇದೇ ರೀತಿ ರಷ್ಯಾದ ಸೇನೆಗೆ ಬಲವಂತವಾಗಿ ಸೇರಿಸಲಾಗಿದೆ ಎಂದು ವರದಿಗಳು ಬಂದಿದ್ದವು.

You cannot copy content of this page

Exit mobile version