ತಿರುವನಂತಪುರ: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಚುತಾನಂದನ್ ಅವರ ಕುಟುಂಬವು ಅವರಿಗೆ ಘೋಷಿಸಲಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.
ಅಚ್ಚುತಾನಂದನ್ ಅವರು ಪ್ರತಿನಿಧಿಸುತ್ತಿದ್ದ ಪಕ್ಷದ ಸಿದ್ಧಾಂತಗಳಿಗೆ ತಮ್ಮ ಕುಟುಂಬ ಬದ್ಧವಾಗಿರುತ್ತದೆ ಎಂದು ಅಚ್ಚುತಾನಂದನ್ ಅವರ ಪುತ್ರ ಅರುಣ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಅಚ್ಚುತಾನಂದನ್ ಅವರು ಬದುಕಿದ್ದರೆ ಪದ್ಮ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದರು ಎಂದು ಸಿಪಿಎಂ ನಾಯಕ ಎಂ.ಎ. ಬೇಬಿ ಇತ್ತೀಚೆಗೆ ಹೇಳಿದ್ದರು. ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಕಮ್ಯುನಿಸ್ಟ್ ನಾಯಕರಾದ ಇ.ಎಂ.ಎಸ್. ನಂಬೂದರಿಪಾಡ್ ಮತ್ತು ಜ್ಯೋತಿ ಬಸು ಅವರು ಈ ಹಿಂದೆ ಪದ್ಮ ಪ್ರಶಸ್ತಿಗಳನ್ನು ತಿರಸ್ಕರಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅರುಣ್ ಕುಮಾರ್, “ನನ್ನ ತಂದೆ ಪ್ರತಿನಿಧಿಸಿದ ರಾಜಕೀಯ ಪಕ್ಷವು ಇಂತಹ ಅಧಿಕೃತ ಗೌರವಗಳ ಬಗ್ಗೆ ಸ್ಪಷ್ಟ ರಾಜಕೀಯ ನಿಲುವನ್ನು ಹೊಂದಿದೆ. ಒಬ್ಬ ಕಮ್ಯುನಿಸ್ಟ್ ಆಗಿ, ನನ್ನ ತಂದೆ ಯಾವಾಗಲೂ ಆ ಸಿದ್ಧಾಂತಗಳಿಗೆ ಬದ್ಧರಾಗಿದ್ದರು. ಆದ್ದರಿಂದ ಕುಟುಂಬವು ಕೂಡ ಆ ಸಿದ್ಧಾಂತಗಳಿಗೆ ಬದ್ಧವಾಗಿರುತ್ತದೆ,” ಎಂದು ಹೇಳಿದ್ದಾರೆ.
ಜನರ ಮನಸ್ಸಿನಲ್ಲಿ ಅಚ್ಚುತಾನಂದನ್ ಅವರು ಹೊಂದಿರುವ ಸ್ಥಾನವನ್ನೇ ಅತಿದೊಡ್ಡ ಪ್ರಶಸ್ತಿ ಎಂದು ಕುಟುಂಬ ನಂಬಿದೆ ಎಂದು ಅವರು ತಿಳಿಸಿದ್ದಾರೆ.
ಅಚ್ಚುತಾನಂದನ್ ಅವರಿಗೆ ಪದ್ಮ ಪ್ರಶಸ್ತಿ ಬಂದಿದ್ದಕ್ಕೆ ಅರುಣ್ ಕುಮಾರ್ ಆರಂಭದಲ್ಲಿ ಸಂತೋಷ ವ್ಯಕ್ತಪಡಿಸಿದ್ದರಾದರೂ, ನಂತರ ತಾವು ಪಕ್ಷದ ನಿಷ್ಠ ಕುಟುಂಬವಾಗಿರುವುದರಿಂದ ಪಕ್ಷದ ನಾಯಕತ್ವದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
