ಮಾತು ಬಾರದ, ಕಿವಿ ಕೇಳದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಆರೋಪಿಯನ್ನು ಬಂಧಿಸುವ ವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಬಾಲಕಿ ಕುಟುಂಬಸ್ಥರು ಪೊಲೀಸ್ ಸ್ಟೇಶನ್ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದ ಘಟನೆ ರಾಮನಗರ ಜಿಲ್ಲೆ ಬಿಡದಿ ಬಳಿ ನಡೆದಿದೆ.
ಮೂರು ದಿನಗಳ ಹಿಂದೆ ಬಿಡದಿಯ ಭದ್ರಾಪುರ ಬಳಿ ರೈಲ್ವೆ ಹಳಿ ಪಕ್ಕ ಅರೆನಗ್ನಾವಸ್ಥೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಮಾತು ಬಾರದ, ಕಿವಿ ಕೇಳದ ಬಾಲಕಿ ಮೇಲೆ ಕಾಮುಕ ಅತ್ಯಾಚಾರವೆಸಗಿ, ಬಳಿಕ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹಕ್ಕಿಪಿಕ್ಕಿ ಸಮುದಾಯದವರಾದ ಮೃತ ಬಾಲಕಿ ತಾಯಿ ಆದ ಅನ್ಯಾಯಕ್ಕೆ ನ್ಯಾಯ ಸಿಗುವ ವರೆಗೂ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.
ಶವ ಕೊಳೆತ ಸ್ಥಿತಿಗೆ ಬಂದರೂ ಲೆಕ್ಕಿಸದೆ ಗ್ರಾಮಸ್ಥರು ಧರಣಿ ನಡೆಸುತ್ತಿದ್ದು, ಊರಿನ ಬಾಲಕಿಗೆ ಆಗಿರುವ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ಊರ ಜನರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಶವದ ಸ್ಥಿತಿ ನೋಡಿದರೆ ಮೂರ್ನಾಲ್ಕು ದಿನಗಳ ಹಿಂದೆಯೇ ಕಾಮುಕ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಒಂದು ದಿನ ಕಳೆದ ನಂತರ ಬಾಲಕಿಯ ಪೋಷಕರಿಗೆ ಮೃತದೇಹ ಪತ್ತೆಯಾಗಿದೆ. ಆ ಸಂದರ್ಭದಲ್ಲೇ ಇದು ಕೊಳೆತ ಸ್ಥಿತಿ ತಲುಪಿದರೂ ಲೆಕ್ಕಿಸದೆ ಪೋಷಕರು ಮೃತ ದೇಹ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.