ಜೈಪುರ: ಗೋಮಾಂಸ ಸೇವಿಸುವ ವ್ಯಕ್ತಿಯ ಕೈಯಲ್ಲಿ ಈಶ್ವರನ ಫೊಟೋ ಇರುವುದನ್ನು ನಾವು ಸಹಿಸುವುದಿಲ್ಲ ಎಂದು ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಸಿ.ಪಿ.ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
ಇತ್ತೀಚೆಗೆ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಈಶ್ವರ್ ಫೊಟೋ ಪ್ರದರ್ಶಿಸಿದ್ದರು. ರಾಹುಲ್ ಗಾಂಧಿಯವರ ಹೆಸರು ಹೇಳದೇ ಜೋಶಿ ಹೇಳಿಕೆ ನೀಡಿದ್ದಾರೆ. ದೌಸಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜೋಶಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
‘ಅಂತರರಾಷ್ಟ್ರೀಯ ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಏರ್ಪಟ್ಟಿದೆ. ಹೀಗಿರುವಾಗ, ಆ ವ್ಯಕ್ತಿಯು ಚೀನಾದ ರಾಯಭಾರಿಯೊಂದಿಗೆ ಕುಳಿತುಕೊಳ್ಳುತ್ತಾರೆ. ಗೋಮಾಂಸವನ್ನು ತಿನ್ನುವ ಅವರು ಸಂಸತ್ತಿಗೆ ಮಹಾದೇವನ ಚಿತ್ರವನ್ನು ತರುವುದನ್ನು ಸಹಿಸಲು ನಾವು ಆಗುವುದಿಲ್ಲ’ ಎಂದು ಜೋಶಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಯಾರಾದರೂ, ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸಿದರೆ, ಗಲಭೆಕೋರರು ಎಂದರೆ ಮತ್ತು ರಾಮ ಮಂದಿರವನ್ನು ವಿರೋಧಿಸಿದರೆ, ನಾವು ಮೌನವಾಗಿರಬೇಕೇ? ರಾಷ್ಟ್ರಪತಿ ದ್ರೌಪದಿ ಮರ್ಮು ಅವರ ಬಣ್ಣವನ್ನು ಹೀಯಾಳಿಸುವುದನ್ನು ಮುಂದುವರಿಸಿದರೆ ನಾವು ಮೂಕ ಪ್ರೇಕ್ಷಕರಾಗಿ ಇರಬೇಕೇ?’ ಎಂದು ಅವರು ಪ್ರಶ್ನಿಸಿದ್ದಾರೆ.
ರಾಹುಲ್ ಅವರು, ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಜೂನ್ 1ರಂದು ಸಂಸತ್ತಿನಲ್ಲಿ ಈಶ್ವರ, ಯೇಸು ಕ್ರಿಸ್ತ, ಗುರು ನಾನಕ್ ಫೋಟೊಗಳನ್ನು ಪ್ರದರ್ಶಿಸಿದ್ದರು. ಧೈರ್ಯ ಮತ್ತು ಅಹಿಂಸೆಯನ್ನು ಈಶ್ವರ ನಮಗೆ ಬೋಧಿಸಿದ್ದಾರೆ. ಇತರ ಧರ್ಮಗಳಲ್ಲೂ ಇದೇ ಬೋಧನೆಯನ್ನು ಮಾಡಲಾಗಿದೆ ಎಂದು ಉಲ್ಲೇಖಿಸಿದ್ದನ್ನು ಇಲ್ಲಿ ಸ್ಮರಿಸಬಹುದು.