‘ಜಾತಿ ಗಣತಿಗೆ ಬಿಜೆಪಿ ಪಕ್ಷದ ವಿರೋಧವಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲೇ ಜಾತಿ ಗಣತಿಗೆ ವಿರೋಧ ಕೇಳಿ ಬಂದಿರುವ ಕಾರಣ ಜಾತಿ ಗಣತಿಯ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ. ಸರ್ಕಾರ ಜಾತಿ ಗಣತಿಯಲ್ಲಿ ಇರುವ ಲೋಪಗಳನ್ನು ಸರಿಪಡಿಸಿ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಜಾತಿಗಣತಿ ವೈಜ್ಞಾನಿಕವಾಗಿ ಇಲ್ಲ ಎಂಬುದು ಕಾಂಗ್ರೆಸ್ ಒಳಗೇ ಅದರ ಬಗ್ಗೆ ಇರುವ ಅಪಸ್ವರದ ಮೂಲಕ ತಿಳಿದು ಬಂದಿದೆ. ಜಾತಿಗಣತಿ ವೈಜ್ಞಾನಿಕವಾಗಿ ನಡೆಯಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಜಾತಿ ಗಣತಿ ನಡೆಸಿದ್ದರು. ಆಗ ಅವರ ಅವಧಿಯಲ್ಲೇ ಇದನ್ನು ಏಕೆ ಅನುಷ್ಠಾನಗೊಳಿಸಲಿಲ್ಲ. ಇದನ್ನು ನಾನು ಕೇಳುತ್ತಿಲ್ಲ. ಅವರದೇ ಪಕ್ಷದ ಶಾಸಕ ಬಾಲಕೃಷ್ಣ, ಸಂಸದ ಡಿ.ಕೆ.ಸುರೇಶ್ ಕೇಳುತ್ತಿದ್ದಾರೆ. ಜಾತಿ ಗಣತಿಯನ್ನು ಬಿಜೆಪಿ ವಿರೋಧಿಸುತ್ತಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
ಅವೈಜ್ಞಾನಿಕವಾಗಿ ಗಣತಿ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರೇ ಹೇಳಿದ್ದಾರೆ. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸಹ ಈಗ ನಡೆದಿರುವ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ವೈಜ್ಞಾನಿಕವಾಗಿ ನಡೆಯಬೇಕು ಎಂದು ಹೇಳಿದರು.