ಬೆಂಗಳೂರು : ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬೇಡಿಕೆಯಿದ್ದು, ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭರವಸೆ ನೀಡಿದರು. ದೇವಾಂಗ ಸಂಘ ಬೆಂಗಳೂರು ಇವರ ವತಿಯಿಂದ ಅವರು ಇಂದು ಆಯೋಜಿಸಲಾಗಿದ್ದ ದೇವಾಂಗ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
2004-05 ರಲ್ಲಿ ಹಣಕಾಸು ಸಚಿವನಾಗಿದ್ದ ಸಂದರ್ಭದಲ್ಲಿ ನೇಕಾರರಿಗೆ ತಲಾ ಯೂನಿಟ್ ಗೆ 4.20 ರೂ. ಇದ್ದ ವಿದ್ಯುತ್ ದರವನ್ನು 1.20 ರೂ.ಗಳಿಗೆ ಕಡಿತಗೊಳಿಸಲಾಗಿತ್ತು. ಈ ಯೋಜನೆಯ ಲಾಭವನ್ನು ಸಮುದಾಯದ ಶೇ.80 ರಷ್ಟು ಜನರಿಗೆ ನೆರವಾಗಿತ್ತು. ಪ್ರಸ್ತುತ ನೇಕಾರರಿಗೆ 20 ಹೆಚ್ ಪಿವರೆಗೆ ರಿಯಾಯತಿ ದರದಲ್ಲಿ ವಿದ್ಯುತ್ ವ್ಯವಸ್ಥೆ ನೀಡಲಾಗುತ್ತಿದೆ. ಶೂನ್ಯಬಡ್ಡಿ ದರದಲ್ಲಿ 5 ಲಕ್ಷರೂ.ವರೆಗೆ ಸಾಲ ವ್ಯವಸ್ಥೆ, ನೇಕಾರ ಸಮ್ಮಾನ ಯೋಜನೆ, ದೇವರದಾಸಿಮಯ್ಯ, ವಚನಕಾರರ ಜಯಂತಿಯನ್ನು ಪ್ರಾರಂಭಿಸಿದ್ದು ನಮ್ಮ ಸರ್ಕಾರ. ಸಮುದಾಯದ ಜನಪ್ರತಿನಿಧಿಗಳನ್ನು ಶಾಸಕರು ಮತ್ತು ಎಂಎಲ್ ಸಿ ಗಳಾಗಿದ್ದಾರೆ. ಹಿಂದುಳಿದ ಜಾತಿಗಳಿಗೆ ಜಮೀನು ನೀಡುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದರು. ಹಿಂದುಳಿದವರು ಸಂಘಟಿಸಿದರೆ ಜಾತೀಯತೆಯಾಗುವುದಿಲ್ಲ. ಉಪಜಾತಿಗಳಲ್ಲಿ ವಿಭಜಿಸದೇ ಒಂದೇ ಶಕ್ತಿಯಾಗಿ ಸಂಘಟಿತರಾಗಿ ಎಂದು ಸಮುದಾಯಕ್ಕೆ ಮುಖ್ಯಮಂತ್ರಿ ಕರೆ ನೀಡಿದರು.
ದೇವಾಂಗ ಸಮುದಾಯದವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘವು ನೂರು ವರ್ಷಗಳನ್ನು ಪೂರೈಸುವುದು ಮೈಲಿಗಲ್ಲು ಸಾಧನೆಯಾಗಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ನಿಲಯ, ವ್ಯವಸ್ಥೆ ಒದಗಿಸಲಾಗುತ್ತಿರುವುದು ಸಂತಸದ ವಿಚಾರ ಎಂದರು.
ಮಹಿಳಾ ವಸತಿನಿಲಯ ನಿರ್ಮಾಣಕ್ಕೆ ಸರ್ಕಾರದ ನೆರವಿಗೆ ಭರವಸೆ:
ಮಹಿಳೆಯರು ಹಾಗೂ ಶೋಷಿತರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಪ್ರಸ್ತುತ ಲಿಂಗ ತಾರತಮ್ಯ ನೀಗುತ್ತಿದ್ದು, ಸಂಘದವರು ಮಹಿಳಾ ಸಬಲೀಕರಣಕ್ಕೆ ನೆರವು ನೀಡುತ್ತಿದೆ. ಮಹಿಳಾ ವಸತಿನಿಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ನೀಡುವ ಭರವಸೆ ನೀಡಿದರು
