ಪೋಕ್ಸೋ ಕೇಸ್ ಪುತ್ರನಿಗೆ ನಮ್ಮಬಗ್ಗೆ ಮಾತಾಡಲು ಯೋಗ್ಯತೆ ಏನಿದೆ – ಶಿವರಾಜ್ ತಂಗಡಗಿ ಪ್ರಹಾರ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್‌ ತಂಗಡಗಿ(Shivaraj S Tangadagi) ಅವರು ತೀವ್ರ ವಾಗ್ದಾಳಿ ನಡೆಸಿದ್ದು, ವಿಜಯೇಂದ್ರ ಅವರ ಆರೋಪಗಳು “ಅವಿವೇಕತನ ಹಾಗೂ ಕೀಳು ಮಟ್ಟದ ಭಾಷಣ” ಎಂದು ಕಿಡಿಕಾರಿದ್ದಾರೆ. ತಮ್ಮ ವಿರುದ್ಧ ವಿಜಯೇಂದ್ರ ಏಕವಚನದಲ್ಲಿ ಮಾತನಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಸಾಮಾಜಿಕ ಜಾಲತಾಣದ ಮೂಲಕ ಸಾಲು ಸಾಲು ಪ್ರಶ್ನೆಗಳನ್ನು ಎಸೆದಿದ್ದಾರೆ.

ವಯಸ್ಸು, ಅನುಭವದಲ್ಲಿ ನಾನು ನಿಮಗಿಂತ ಹಿರಿಯ: ಸಂಸ್ಕಾರದ ಪಾಠ

“ರಾಜಕೀಯ ಅನುಭವ, ವಯಸ್ಸು ಮತ್ತು ಜನಸೇವೆಯಲ್ಲಿ ನಾನು ನಿಮಗಿಂತ ಹಿರಿಯ. ಹಿರಿಯರಿಗೆ ಏಕವಚನದಲ್ಲಿ ಮಾತನಾಡಿದರೆ ದೊಡ್ಡವರಾಗುತ್ತೇವೆ ಅಂದುಕೊಂಡಿರುವುದು ನಿಮ್ಮ ದಡ್ಡತನ. ನನಗೂ ನಿಮಗಿಂತ ಕೀಳು ಭಾಷೆಯಲ್ಲಿ ಮಾತನಾಡಲು ಬರುತ್ತದೆ, ಆದರೆ ನನಗೆ ಸಂಸ್ಕಾರವಿದೆ. ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಿದ್ದು ಜನಸೇವೆಗೆ ಹೊರತು ಬಾಯಿ ನಂಜು ಮಾಡಿಕೊಳ್ಳಲು ಅಲ್ಲ” ಎಂದು ತಂಗಡಗಿ ತಿರುಗೇಟು ನೀಡಿದ್ದಾರೆ. ವಿಜಯೇಂದ್ರ ಅವರ ಈ ಹೇಳಿಕೆಗಳು ಅಲುಗಾಡುತ್ತಿರುವ ತಮ್ಮ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ “ಸ್ಮಶಾನ ರೋದನೆ” ಎಂದು ಲೇವಡಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು