ಕಳೆದ ವರ್ಷ ಮೇ ತಿಂಗಳಿನಿಂದ ಜನಾಂಗೀಯ ಘರ್ಷಣೆಯಲ್ಲಿ ಛಿದ್ರವಾಗಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಸೋಮವಾರ ಒತ್ತಾಯಿಸಿದೆ.
ಅಷ್ಟೇ ಅಲ್ಲದೆ ಮಣಿಪುರ ರಾಜ್ಯಕ್ಕೆ ಭೇಟಿ ನೀಡಲು ಮತ್ತು ಶಾಂತಿ ಮತ್ತು ಸಹಜ ಸ್ಥಿತಿಗೆ ಮರಳಲು ನವೆಂಬರ್ 25 ರಂದು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ಸರ್ವಪಕ್ಷ ಸಭೆಯನ್ನು ಕರೆಯಲು ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದೆ.
“ಪ್ರಧಾನಿ ಮಣಿಪುರವನ್ನು ಕೇಂದ್ರ ಗೃಹ ಸಚಿವರಿಗೆ ಹೊರಗುತ್ತಿಗೆ ನೀಡಿದ್ದರು. ಮಣಿಪುರ ಮುಖ್ಯಮಂತ್ರಿಯನ್ನು (ಬಿರೇನ್ ಸಿಂಗ್) ರಕ್ಷಿಸಿದ್ದು ಗೃಹ ಸಚಿವ ಅಮಿತ್ ಶಾ ಸಾಧನೆ. ಗೃಹ ಸಚಿವರು ಮಣಿಪುರದ ಅಮಾಯಕ ಜನರಿಗೆ, ಅಮಾಯಕ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡಿಲ್ಲ. ಅವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸೋಮವಾರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಮೇ 3, 2023 ರಿಂದ ಮಣಿಪುರ ಹೊತ್ತಿ ಉರಿಯತ್ತಿದೆ. ಪ್ರಧಾನಿ ಪ್ರಪಂಚದಾದ್ಯಂತ ವಿವಿಧ ದೇಶಗಳಿಗೆ ಭೇಟಿ ನೀಡಿದ್ದಾರೆ ಆದರೆ ಮಣಿಪುರಕ್ಕೆ ಭೇಟಿ ನೀಡಲು ಸಮಯ ಸಿಕ್ಕಿಲ್ಲ. ಸಂಸತ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮತ್ತು ಇತರೆ ರಾಜಕೀಯ ಪಕ್ಷಗಳು ಮಣಿಪುರಕ್ಕೆ ಭೇಟಿ ನೀಡುವುದು, ಪರಿಹಾರ ಶಿಬಿರಗಳಿಗೆ ಭೇಟಿ ಮಾಡುವುದು ನಮ್ಮ ಮೊದಲ ಬೇಡಿಕೆಯಾಗಿದೆ ಎಂದು ಜೈರಾಮ್ ರಮೇಶ್ ಹೇಳಿದರು.
ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಕೆ.ಮೇಘಚಂದ್ರ ಸಿಂಗ್ ಮಾತನಾಡಿ, ”ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ, ಸಾಮಾನ್ಯ ಮಾನವ ಚಟುವಟಿಕೆಗಳೂ ಇಲ್ಲ. ಅಮಾಯಕ ನಾಗರಿಕರ ಅಪಹರಣ ಮತ್ತು ಮಹಿಳೆಯರು, ಮಕ್ಕಳು ಮತ್ತು ಶಿಶುಗಳ ಹತ್ಯೆ ವಿಶೇಷವಾಗಿ ಹೆಚ್ಚುತ್ತಿವೆ. ಈಗ, ವಿಪರೀತ ಸುಲಿಗೆಗಳು ನಡೆಯುತ್ತಿವೆ.” ಎಂದು ಆರೋಪಿಸಿದರು.
2017 ರ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರು “ಮಣಿಪುರದಲ್ಲಿ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದವರಿಗೆ ಆಡಳಿತ ನಡೆಸುವ ಹಕ್ಕಿಲ್ಲ” ಎಂದು ಹೇಳಿದ್ದರು. ನಾನು ಅವರನ್ನು ಕೇಳಲು ಬಯಸುತ್ತೇನೆ, ಡಬಲ್ ಎಂಜಿನ್ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಮರ್ಥವಾಗಿದೆಯೇ? ಮಣಿಪುರವಿಲ್ಲದೆ ಭಾರತವು ಭಾರತದ ಸಂಪೂರ್ಣ ಒಕ್ಕೂಟವಾಗಲು ಸಾಧ್ಯವಿಲ್ಲ. ಈಗ ಮೋದಿಯವರ ಭಾರತದಲ್ಲಿ ಮಣಿಪುರ ಮರೆತುಹೋಗಿರುವ ರಾಜ್ಯವಾಗಿದೆ ಎಂದು ಮೇಘಚಂದ್ರ ಸಿಂಗ್ ಹೇಳಿದರು.