Home Uncategorized ಯಾರೀ ಬಜರಂಗದಳದ ರೌಡಿಶೀಟರ್ ‘ರಘು ಸಕಲೇಶಪುರ’ ; ಬೆಚ್ಚಿ ಬೀಳಿಸುವ ವರದಿ ಇದು!

ಯಾರೀ ಬಜರಂಗದಳದ ರೌಡಿಶೀಟರ್ ‘ರಘು ಸಕಲೇಶಪುರ’ ; ಬೆಚ್ಚಿ ಬೀಳಿಸುವ ವರದಿ ಇದು!

0

ಪ್ರಚೋದನಕಾರಿ ಭಾಷಣದ ಮೂಲಕ ಸಮಾಜದಲ್ಲಿ ಶಾಂತಿ ಕದಡಿದ, ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ದ್ವೇಷ ಹುಟ್ಟುವಂತಹ ವಾತಾವರಣ ಸೃಷ್ಟಿ ಮಾಡಿದ ಆರೋಪದಲ್ಲಿ ಬಜರಂಗದಳದ ರಘು ಸಕಲೇಶಪುರ ಮೇಲೆ ಸಕಲೇಶಪುರ ಟೌನ್ ಪೊಲೀಸರು Sou moto ಕೇಸ್ ದಾಖಲಿಸಿದ್ದಾರೆ.

ಸಕಲೇಶಪುರ ಭಾಗದ ತರಕಾರಿ ಮತ್ತು ಮೀನು ವ್ಯಾಪಾರಿಗಳು ತಮಗೆ ರಘು ಸಕಲೇಶಪುರ, ಬಜರಂಗದಳ ಹಾಗೂ ಹಿಂದುತ್ವದ ಗುಂಪುಗಳ ಕಡೆಯಿಂದ ಬೆದರಿಕೆ ಇದೆ, ನಮಗೆ ರಕ್ಷಣೆ ಬೇಕು ಎಂದು ದೂರು ಸಲ್ಲಿಸಲು ಸಕಲೇಶಪುರ ಟೌನ್ ಪೊಲೀಸ್ ಠಾಣೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ನಿಮಗೆ ಬೇಕಾದ ಎಲ್ಲಾ ರಕ್ಷಣೆ ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಈತನ ಮೇಲೆ ಈಗ ಐಪಿಸಿ ಸೆಕ್ಷನ್ 153A,295A,149,506 ಕಲಂ ಅಡಿಯಲ್ಲಿ ಕೇಸು ದಾಖಲಾಗಿದೆ.

ಸರ್ಕಾರದ ವಿರುದ್ಧ ಪ್ರತಿಭಟನೆ ನೆಪದಲ್ಲಿ ಈ ವ್ಯಕ್ತಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡುವಂತೆ ‘ಮುಸ್ಲಿಂ ಸಮುದಾಯದ ವ್ಯಾಪಾರಿಗಳು ಬಂದರೆ ಬಂದೂಕಿನಿಂದ ಗುಂಡಿಟ್ಟು ಸಾಯಿಸಿ’ ಎಂದು ಮಾತನಾಡಿದ ವಿಡಿಯೋ ಬಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ ಪೀಪಲ್ ಟಿವಿ ವರದಿ ಪ್ರಸಾರ ಮಾಡಿತ್ತು. ವರದಿ ಮತ್ತು ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಜಾಗೃತಗೊಂಡ ಸ್ಥಳೀಯ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಆದರೆ ಬಂಧನದ ಸುಳಿವನ್ನು ಅರಿತ ರೌಡಿಶೀಟರ್ ರಘು ಸಕಲೇಶಪುರ ತಕ್ಷಣವೇ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದಾನೆ.

ಸಕಲೇಶಪುರದಲ್ಲಿ ಸಧ್ಯ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೋಲಿಸರನ್ನು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. ತಾಲ್ಲೂಕು ಬಿಟ್ಟು ಹೊರ ಹೋಗದಂತೆ ನಾಕಬಂದಿ ಹಾಕಲಾಗಿದೆ. ಪೋಲಿಸರು ಅನೇಕ ತಂಡವಾಗಿ ಈತ ಮತ್ತು ಈತನ ಸಹಚರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಧ್ಯ ಈತನ ಮೇಲೆ ಕೇಸು ದಾಖಲಾಗುತ್ತಿದ್ದಂತೆ ಸ್ಥಳೀಯವಾಗಿ ಗುರುತಿಸಿಕೊಂಡ ಜನಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಒಬ್ಬೊಬ್ಬರಾಗಿ ಪೊಲೀಸರಿಗೆ ಮನವಿ ಕೊಡಲು ಮುಂದಾಗಿದ್ದು, ಸ್ಥಳೀಯವಾಗಿ ಈತ ಅದೆಷ್ಟರ ಮಟ್ಟಿಗೆ ಭಯ ಹುಟ್ಟಿಸಿದ್ದ ಎಂಬುದಕ್ಕೆ ಸಾಕ್ಷಿಯಾಗಿದೆ.

"ಕೋಮುಭಾವನೆ ಕೆರಳಿಸುವ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ  ಸಕಲೇಶಪುರದ ರಘು ಹಾಗೂ ಸಹಚರರ ವಿರುದ್ದ ನಮ್ಮ ಪೊಲೀಸರು ಸುಮೋಟೋ  (ಸ್ವಯಂ ಪ್ರೇರಿತರಾಗಿ )ಕೇಸು ದಾಖಲಿಸಿಕೊಂಡಿದ್ದಾರೆ. ಎಲ್ಲರೂ ಊರು ಬಿಟ್ಟಿದ್ದಾರೆ. ಧರ್ಮದ ಹೆಸರಲ್ಲಿ ಸಮಾಜದಲ್ಲಿ ಅಶಾಂತಿ ಕದಡುವರನ್ನು  ಸುಮ್ಮನೆ  ಬಿಡುವ ಪ್ರಶ್ನೆಯೇ ಇಲ್ಲ. ಶೀಘ್ರವೇ ಬಂಧಿಸಲಾಗುವುದು"
- ಹರಿರಾಂ ಶಂಕರ್ ಎಸ್ಪಿ, ಹಾಸನ

ಅಷ್ಟಕ್ಕೂ ಯಾರು ಈ ರಘು ಸಕಲೇಶಪುರ?
ಅಷ್ಟಕ್ಕೂ ಯಾರು ಈ ರಘು ಸಕಲೇಶಪುರ‌. ಇತ್ತೀಚೆಗೆ ಹೆಚ್ಚು ಸುದ್ದಿಗೆ ಬಂದಿರುವ ಈತ ಮಾಡಿರುವ ಘನಂದಾರಿ ಕೆಲಸವಾದರೂ ಏನು ಎಂದು ಹುಡುಕಲು ಹೊರಟ ನಮಗೆ ಸಿಕ್ಕಿದ್ದು ಹತ್ತು ಹಲವು ಆಘಾತಕಾರಿ ವಿಚಾರಗಳು. ಇಷ್ಟೆಲ್ಲಾ ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡಿರುವ ಈತ ಇಲ್ಲಿಯವರೆಗೆ ಹೊರ ಜಗತ್ತಿನಲ್ಲಿ ಇದ್ದದ್ದಾದರೂ ಹೇಗೆ, ಸಕಲೇಶಪುರದ ಮಹಾಜನತೆ ಈತನನ್ನು ಸಹಿಸಿಕೊಂಡದ್ದಾದರೂ ಹೇಗೆ ಅನ್ನಿಸದೇ ಇರದು.

ಅಂದಹಾಗೆ ಸಕಲೇಶಪುರ ಬಜರಂಗದಳ ಸಂಘಟನೆ ರೌಡಿಶೀಟರ್ ರಘು ಸಕಲೇಶಪುರ ಕೈಗೆ ಬಂದ ನಂತರ ಒಂದು ಸಮಾಜಘಾತುಕ ಸಂಘಟನೆಯಾಗಿ ಬದಲಾಗಿತ್ತು. ಈತನ ಕೆಳಗೆ ಗುರುತಿಸಿಕೊಂಡಿರುವ ಯುವಕರಲ್ಲಿ ಬಹುತೇಕರು ಒಂದಷ್ಟು ಪೊಲೀಸ್ ಕೇಸುಗಳನ್ನು ಎದುರಿಸುತ್ತಿರುವವರೇ ಆಗಿದ್ದಾರೆ. ಹಿಂದುತ್ವದ ಸಂಘಟನೆಗಳೆಂದೇ ಗುರುತಿಸಿಕೊಳ್ಳುವ ಸ್ಥಳೀಯ RSS, ಶ್ರೀರಾಮಸೇನೆ ಸಂಘಟನೆಗಳು ಕೂಡಾ ಈತನಿಂದ ಒಂದು ಅಂತರ ಕಾಯ್ದುಕೊಂಡಿವೆ. ಇಲ್ಲಿನ RSS ಅಂತೂ ಈತನ ಸಮಾಜಘಾತುಕ ಚಟುವಟಿಕೆಗಳ ಗಮನಿಸಿ ಈತನನ್ನು RSS ನಿಂದ ಯಾವುದೋ ಕಾಲದಲ್ಲಿ ಉಚ್ಚಾಟನೆ ಮಾಡಿದೆ.

ರೌಡಿ ಶೀಟರ್ ರಘು ಮತ್ತು ಈತನ ಸಹಚರರು ನಿರಂತರವಾಗಿ ಸಕಲೇಶಪುರದ ಶಾಂತಿ ಕದಡುಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಪಕ್ಷಗಳು, ಸಂಘಟನೆಗಳು ಭಜರಂಗದಳ ಸಂಘಟನೆಯನ್ನು ನಿಷೇಧಿಸುವಂತೆ ಹಾಗೂ ದಲಿತರ ಮೇಲೆ ಹಲ್ಲೇ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ವಿವಿದ ದಲಿತ ಹಾಗೂ ಜನಪರ ಸಂಘಟನೆಗಳು ಈ ಹಿಂದೆ ಪಟ್ಟಣದಲ್ಲಿ  ಬೃಹತ್ ಪ್ರತಿಭಟನೆ ನಡೆಸಿದ್ದರು.

ವಿರೋಧ ಪಕ್ಷದ ನಾಯಕಾಗಿದ್ದ ಸಿದ್ದರಾಮಯ್ಯ ಸಕಲೇಶಪುರದ ಆನೆಮಹಾಲ್ ಗ್ರಾಮದ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ಪೋಲಿಸ್ ಇಲಾಖೆಗೆ ಮಾಹಿತಿ ನೀಡದೆ ಅನುಮತಿ ಪಡೆಯದೆ ಕಾನೂನು ಉಲ್ಲಂಘನೆ ಮಾಡಿ ಪ್ರತಿಭಟನೆ ನೆಪದಲ್ಲಿ ಗಲಾಟೆಮಾಡಿ  ಸಮಾಜದ ಶಾಂತಿ ಕದಡಲು ಯತ್ನಿಸಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಇವರುಗಳಿಂದ ತಾಲ್ಲೂಕಿನ ಶಾಂತಿಗೆ ದಕ್ಕೆ ಬರಬಹುದು ಎಂಬ ಗುಪ್ತಚರ  ಖಚಿತ ಮಾಹಿತಿ ಮೇರೆಗೆ ಸಕಲೇಶಪುರದ ಪೊಲೀಸ್ ಇಲಾಖೆ ಇವರುಗಳ ಮೇಲೆ  ವಿದಾನಸಭೆ ಚುನಾವಣೆ ಸಂದರ್ಭದಲ್ಲಿ  ಕೇಸು ದಾಖಲಿಸಿ ತಾಲೂಕು ದಂಡಾಧಿಕಾರಿಗಳಿಗೆ ಶಿಫಾರಸು ಮಾಡಿ ಇವರುಗಳ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು. ಆರೋಪಿಗಳು ತಾಲೂಕು ದಂಡಾಧಿಕಾರಿಗಳಿಗೆ  ಮುಂದಿನ 6 ತಿಂಗಳವರೆಗೆ ನಾವು ಯಾವುದೇ ರೀತಿಯ ಸಮಾಜಘಾತಕ ಚಟುವಟಿಕೆಗಳನ್ನು, ಯಾವುದೇ ಶಾಂತಿ ಕದಡುವ ಕೆಲಸ ನಡೆಸುವುದಿಲ್ಲ ಎಂದು ಈ ವ್ಯಕ್ತಿಗಳು ತಾಲ್ಲೂಕು ದಂಡಾಧಿಕಾರಿಗಳ ಮುಂದೆ ಪ್ರಮಾಣಮಾಡಿ  ಹೇಳಿಕೆ ನೀಡಿ ಸಹಿಮಾಡಿದರೂ ಸಹ ಇಲ್ಲ ಸಲ್ಲದ ಕೀಟಲೆ ಮಾಡೋದನ್ನು ಮಾತ್ರ ನಿಲ್ಲಿಸಿಲ್ಲ.

ಇದಷ್ಟೇ ಅಲ್ಲದೆ ಅಕ್ರಮ ಮರಳು ಸಾಗಣೆ ದಂದೆಯಲ್ಲಿ ಈತನ ಗುಂಪು ಸಕ್ರಿಯವಾಗಿದೆ. ಹೇಮಾವತಿ ನದಿಯಿಂದ ಪ್ರತಿದಿನ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುವುದು, ಬೀಟೆ, ನಂದಿ, ಹೊನ್ನೆ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಳ್ಳಸಾಗಣೆ ಮಾಡುತ್ತಾರೆ. ಗೋವು ರಕ್ಷಕರೆಂದು ಹೇಳುತ್ತಾ, ದನಗಳನ್ನು ಹೆದ್ದಾರಿಯಲ್ಲಿ ಸಾಗಾಣೆಮಾಡುವ ಕಳ್ಳರಿಂದ ಮಾಮೂಲಿ ವಸೂಲಿ ಮಾಡುವುದು, ದನದ ಮಾಂಸದ ವ್ಯಾಪಾರಿಗಳಿಂದ ಹಪ್ತಾ ವಸೂಲಿಮಾಡುವುದು, ಧರ್ಮ ರಕ್ಷಣೆಯ ಹೆಸರಿನಲ್ಲಿ ಅನಗತ್ಯ ಕಾರ್ಯಕ್ರಮ ಮಾಡಿ ಸಾರ್ವಜನಿಕರಿಂದ ಹಾಗೂ ಉದ್ದಿಮೆ ದಾರರಿಂದ ಹಣ ವಸೂಲಿಮಾಡುವುದು ಒಂದಾ ಎರಡಾ. ಇದೆಲ್ಲಕ್ಕೂ ಸಕಲೇಶಪುರ ಜನರೇ ಈಗ ಸಾಕ್ಷಿಯಾಗಿ ನಿಲ್ಲುತ್ತಾರೆ.

ಧರ್ಮ ರಕ್ಷಣೆ ನೆಪವಾಗಿಟ್ಟು ಈತನ ನೇತೃತ್ವದ ಗುಂಪು ಯಾವ ನೀಚ ಕೆಲಸಕ್ಕೆ ಇಳಿಯಲೂ ಹೇಸುವುದಿಲ್ಲ. ದುಡ್ಡು ಸಿಗುತ್ತೆ ಎಂದರೆ ಇವರೇ ರಕ್ಷಣೆ ಮಾಡಿದ ದನಗಳನ್ನು ಮತ್ತೆ ಅವರ ಕೈಗೇ ವಾಪಸ್ ಕೊಟ್ಟು ಕಳುಹಿಸಲೂ ಹಿಂದೆ ಬೀಳುವುದಿಲ್ಲ ಈತನ ಗುಂಪು. ಈತನ ಈ ಗ್ಯಾಂಗ್ ನಲ್ಲಿರುವವರು ಸಕಲೇಶಪುರದ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿ ಇರುವಂತಹ ವ್ಯಕ್ತಿಗಳಾಗಿದ್ದಾರೆ ಎಂದು ಸಕಲೇಶಪುರದ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಇವರ ಸಮಾಜಘಾತುಕ ಚಟುವಟಿಕೆ ಗಮನಿಸಿ ಈಗಾಗಲೇ ಇವರನ್ನು ಸಕಲೇಶಪುರದಿಂದ ಗಡಿಪಾರ್ ಸಹ ಮಾಡಲಾಗಿತ್ತು.

ಮಹಿಳೆಯರ ಮೇಲೆ ನಿಂದನೆ :
ಈ ಹಿಂದೆ ಸಕಲೇಶಪುರ ತಹಸಿಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಮ್ಮ ಇವರ  ನೀಚ ಮಾತುಗಳಿಂದ ನೊಂದು ತನ್ನ ಕಚೇರಿಯಲ್ಲಿ ಸಾರ್ವಜನಿಕರ ಎದರು ಕಣ್ಣಿರು ಹಾಕಿದ್ದರು. ಇವರಿಗೆ ಮಕ್ಕಳ ಭಾಗ್ಯ ಇಲ್ಲದಿರುವುದನ್ನು ಮನಗಂಡು ಬಂಜೆ ಎಂದು  ನಿಂದಿಸಿದ್ದರು. ಆಘಾತಕಾರಿಯಾದ ಇನ್ನೊಂದು ವಿಚಾರ ಎಂದರೆ ಎ ಪಿ ಎಂ ಸಿ ಸಂತೆ ಮೈದಾನದಲ್ಲಿ ಮಾಂಸದ ಖ್ಯಾದಗಳನ್ನು ಮಾರಾಟಮಾಡುತ್ತಿದ್ದ ಮುಸ್ಲಿಂ  ಮಹಿಳೆಯನ್ನು ಜೀವಂತವಾಗಿ ಸುಡಲು ಮುಂದಾಗಿ ಟೆಂಟ್ ಗೆ ಬೆಂಕಿ ಹಾಕಲಾಗಿತ್ತು. ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ವಿಮಲಾ ಎಂಬ ಮಹಿಳೆಯ ಭೂಮಿಯನ್ನು ಕಬಳಿಸಲು ಮುಂದಾಗಿ ದೌರ್ಜನ್ಯ ವೆಸಗಿದ್ದರು.

ಪೋಲಿಸರನ್ನೂ ಬಿಟ್ಟಿಲ್ಲ ರಘು ಸಕಲೇಶಪುರ ಗ್ಯಾಂಗ್ :
ನಗರ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್ ಫೆಕ್ಟರ್ ರಾಗಿ ಸೇವೆಸಲ್ಲಿಸುತ್ತಿದ್ದ. ಕುಮಾರಿ ಮಧುರವರ ದೇಹದ ಅಂಗಾಂಗಳ ಅಳತೆಯನ್ನು ನೀಡುವಂತೆ ಮಾಹಿತಿ ಹಕ್ಕಿನಲ್ಲಿ ಕೇಳಿ ಅವಮಾನ ಮಾಡಿದ್ದರು. ಸಕಲೇಶಪುರ ನಗರ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ರಾಗಿ ಸೇವೆ ಸಲ್ಲಿಸುತ್ತಿದ್ದ ದೀಪಕ್ ರವರ ಪತ್ನಿ ಬಗ್ಗೆ ಸಾರ್ವಜನಿಕ ವಾಗಿ ಅಶ್ಲೀಲ ವಾಗಿ ನಿಂದಿಸಿದ್ದರು. ಸರ್ಕಲ್ ಇನ್ಸ್ ಪೆಕ್ಟರ್ ವಸಂತ್  ಕುಮಾರ್ ರವರನ್ನು  ಸಾರ್ವಜನಿಕವಾಗಿ ನಿಂದಿಸಿದ್ದರು. ಸರ್ಕಲ್ ಇನ್ಸ್ ಪೆಕ್ಟರ್  ಗುರುರಾಜ್ ರವರ ಮನೆಯ ಸಮೀಪ ಅವರನ್ನು ಅಶ್ಲೀಲವಾಗಿ ತೆಗಳಿ ಸಾರ್ವಜನಿಕ ವಾಗಿ ತೇಜೋವದೆ ಮಾಡಿದ್ದರು. ಸರ್ಕಲ್ ಇನ್ಸ್ ಪೆಕ್ಟರ್ ಮಂಜಯ್ಯ ವಿರುದ್ದ ಸಾರ್ವಜನಿಕ ವಾಗಿ ಅವರ ಪತ್ನಿ ಮತ್ತು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ನಗರ ಠಾಣೆ ಸಬ್ ಇನ್ಸ್ಪೆಕ್ಟರ್  ಬಸವರಾಜ್ ಚಿಂಚೋಳ್ಳಿ ರವರನ್ನು ಪಟ್ಟಣದಲ್ಲಿ ಸಾರ್ವಜನಿಕ ವಾಗಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ತಳ್ಳಾಡಿ ನಿಂದಿಸಿದ್ದರು. ಹೀಗೆ ಈತನ ಸಮಾಜಘಾತುಕ ಚಟುವಟಿಕೆ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುವ ಎಲ್ಲಾ ಪೊಲೀಸರನ್ನು ಒಂದಲ್ಲಾ ಒಂದು ರೀತಿಯಲ್ಲಿ ಅವಹೇಳನ ಮಾಡಿತ್ತು ಈತನ ನೇತೃತ್ವದ ಬಜರಂಗದಳದ ಗುಂಪು.

ಪುತ್ತೂರು ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ಎರಡು ಧರ್ಮದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕವಾಗಿ ನಿಂದಿಸಿದ್ದು ಒಂದು ಕಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು.

ದಲಿತರ ಮೇಲೆ ದೌರ್ಜನ್ಯ:
ಸಕಲೇಶಪುರದ ಹಲಸುಲಿಗೆಯಲ್ಲಿ  ಮನೆಗೆ ದನ  ಸಾಗಿಸುತ್ತಿದ್ದ ದಲಿತರ ಮೇಲೆ 2020ರ ಫೆಬ್ರವರಿ 8 ರಂದು ಹಲ್ಲೆ ನಡೆಸಿ ಮರಕ್ಕೆ ಕಟ್ಟಿಹಾಕಿದ್ದರು. ರಕ್ಷಣೆಗೆ ಮುಂದಾದ  ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದರು‌. ದೇವಲಕೆರೆ ಗ್ರಾಮದಲ್ಲಿ ದಲಿತ ಕಾಲೋನಿ ಯಲ್ಲಿ  ನೀಲಿ ಬಾವುಟ ಹಾಗೂ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಮುಂದಾದ ದಲಿತ ಯುವಕರ ಮೇಲೂ ಹಲ್ಲೆ ನಡೆಸಿದ್ದರು. ತಾಲ್ಲೂಕಿನ ಕುನಿಗನ ಹಳ್ಳಿಯಲ್ಲಿ ದಲಿತರ ಮೇಲೆ ಗ್ರಾಪಂ ಚುನಾವಣೆ ಹಿನ್ನಲೆಯಲ್ಲಿ ಹಲ್ಲೆ ನಡೆಸಿ, ದಲಿತ ಮುಖಂಡ ಶಂಕರ್ ಸೇರಿದಂತೆ ಅನೇಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿತ್ತು. ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಕರು ಸಾಗಿಸುತಿದ್ದ ವ್ಯಕ್ತಿ ಹಾಗೂ ಆತನ ಸಂಬಂದಿಕನ ಮೇಲೆ ಹಲ್ಲೆ ನಡೆಸಿ ನಂತರ ಹತ್ತು ದಲಿತ ಮುಖಂಡರ ಮೇಲೆ ಸುಳ್ಳು ಕೇಸು ಹಾಕಲಾಗಿತ್ತು. ದಲಿತರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ಪರ ಪ್ರದರ್ಶನ ನಡೆಸಲಾಯಿತು. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನ ಹಿಯಾಳಿಸುವ ವಿಡಿಯೋ ಮಾಡಿ ಸಾಮಾಜಿಕ ಮಾದ್ಯಮದಲ್ಲಿ ಹರಿ ಬಿಟ್ಟದ್ದು ಈಗ ಸಕಲೇಶಪುರ ಭಾಗದ ಒಬ್ಬೊಬ್ಬ ದಲಿತ ಮುಖಂಡರು ಬಾಯಿ ಬಿಡುತ್ತಿದ್ದಾರೆ.

ಮುಸ್ಲಿಂ ಮತ್ತು ಕ್ರೈಸ್ತ ರ ಮೇಲೆ ದೌರ್ಜನ್ಯ:
ಹೇಳಿಕೇಳಿ ಅಲ್ಪಸಂಖ್ಯಾತ ಸಮುದಾಯಗಳ ವಿರೋಧಿ ಗುಂಪು. ಈತನ ನೇತೃತ್ವದ ಬಜರಂಗದಳ ಇಲ್ಲಿನ ಮುಸ್ಲಿಂ ಮತ್ತು ಕ್ರೈಸ್ತರ ಮೇಲೆ ನಡೆಸಿದ ಹಲ್ಲೆ, ದೌರ್ಜನ್ಯ ಒಂದೆರಡಲ್ಲ. ಪಟ್ಟಣದ ಚಂಪಕ ನಗರದ ಮುಸ್ಲಿಂ ಕುಟುಂಬವೊಂದು  ಸಾಂಪ್ರದಾಯಿಕ ವಾಗಿ ತನ್ನ ಮನೆಯ ಮೇಲೆ  ದರ್ಗಾದ ಧ್ವಜವನ್ನು ಕಟ್ಟಿದ್ದರು. ಇದನ್ನು ಪಾಕಿಸ್ತಾನದ ಧ್ವಜ ಎಂದು ಸುಳ್ಳುಸುದ್ದಿ ಹಬ್ಬಿಸಿ ನಂತರ ಚಂಪಕ ನಗರದ ಮಸೀದಿಯಲ್ಲಿ ಧಾರ್ಮಿಕ ಗ್ರಂಥಗಳನ್ನು ಬೆಂಕಿ ಹಾಕಿ  ದಾಂದಲೆ ಮಾಡಿದ್ದರು.

ಸಮೀಪದ ಶನಿವಾರಸಂತೆ ಗ್ರಾಮದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ಕೊಲೆ ಯತ್ನ ನಡೆಸಿದ್ದರು. ಅಂಬೇಡ್ಕರ್ ರವರಿಗೆ ಜೈ ಎಂದಿದ್ದನ್ನು ಪಾಕಿಸ್ತಾನಕ್ಕೆ ಜೈ ಎಂದು ತಿರುಚಿ ವಿಡಿಯೋ ವೈರಲ್ ಮಾಡಿದ್ದರು. ಸೊಂಡೆಕೆರೆ ಗ್ರಾಮದ ಮಸೀದಿಯ ಧರ್ಮಗುರು ಮೇಲೆ ಹಲ್ಲೆ ನಡೆಸಿದ್ದರು. ಇದೇ ಸುಂಡೆಕೆರೆಯ ಕ್ರೈಸ್ತ ಧರ್ಮದ ಮನೆಯ ಮುಂದಿದ್ದ ಯೇಸು ಪುತ್ಥಳಿಯನ್ನು ಧ್ವಂಸ ಮಾಡಿದ್ದರು. ತಾಲ್ಲೂಕಿನ ಬಿರಡಹಳ್ಳಿ ಸಮೀಪ ಇಸ್ಲಾಂ ಧರ್ಮ ಪ್ರಚಾರ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಐವರು ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಕೆಂಚಮ್ಮನ ಹೊಸಕೋಟೆಯಿಂದ ದನ ತರುತ್ತಿದ್ದ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು. ಮಾರನಹಳ್ಳಿಯ ಹೋಟೆಲ್ ಮೇಲೆ ದಾಳಿನಡೆಸಿ, ಅಲ್ಲಿನವರ ಮೇಲೆ ಹಲ್ಲೆಮಾಡಿ  ಅನೇಕ ಮುಸ್ಲಿಂ ಯುವಕನ ಮೇಲೆ ದಲಿತ ದೌರ್ಜನ್ಯ ಕೇಸ್ ದಾಖಲಿಸಲಾಯಿತು. ಪ್ರೇಮ ನಗರದ ಮಸೀದಿಯ ಬಳಿ ಮುಸ್ಲಿಂ  ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಕುಶಾಲನಗರ ಬಡಾವಣೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಗಲಭೆ ಎಬ್ಬಿಸಿದ್ದರು.

ಕುಶಾಲನಗರ ಬಡಾವಣೆಯ ಮಸೀದಿಯೊಂದಕ್ಕೆ ಪರವಾನಿಗೆ ಪಡೆದು ಕಾನೂನುಬದ್ಧವಾಗಿ ಕಟ್ಟಡ ನಿರ್ಮಿಸಿದ್ದರು ಪರವಾನಿಗೆ ಪಡೆದಿಲ್ಲ ಎಂದು ಹೇಳಿ ಗಲಭೆ ಮಾಡಲು ಮುಂದಾಗಿದ್ದರು. ಕೌಡಹಳ್ಳಿ ಗ್ರಾಮದಲ್ಲಿ ಮುಸ್ಲಿಮರು ಒಕ್ಕಲೇಬ್ಬಿಸಲು ಮುಂದಾಗಿ ಅವರ ಮೇಲೆ ಭಯೋತ್ಪಾದನೆಯ ಆರೋಪ ಮಾಡಿದ್ದರು. ಲವ್ ಜಿಹಾದ್ ನಡೆಯುತ್ತಿದೆ ಎಂದು ಸೂಪರ್ ಪಾಯಿಂಟ್‌ ಅಂಗಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು ಸಹ ಇಲ್ಲಿನ ಮುಸ್ಲಿಮರು ಮತ್ತು ದಲಿತರು ಇನ್ನೂ ಮರೆತಿಲ್ಲ. ಹಾನುಬಾಳಿನಲ್ಲಿ  ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮುಸ್ಲಿಮ್ ವ್ಯಾಪಾರಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಾಳ್ಳು ಪೇಟೆಯಲ್ಲಿ 53 ಭೂ ಕಾಯ್ದೆ ಅನ್ವಯ ಜಮೀನು ಸಾಗುವಳಿ ಮಾಡುತ್ತಿದ್ದ. ಮೂವರು ಮುಸ್ಲಿಂ ವ್ಯಕ್ತಿಗಳ ವಿರುದ್ದ ದೇವಸ್ಥಾನ ದ್ವಂಸ ಸುಳ್ಳು ಕೇಸು ಪ್ರಕರಣ ದಾಖಲಿಸಿದ್ದಾರೆ. ದೋಣಿಗಾಲ್ ಬಳಿಯ ಮುಸ್ಲಿಂ ಮಾಲಿಕತ್ವದ  ಹೊಟೆಲ್ ಬಾಗಿಲು ಹಾಕಿಸುವಂತೆ ಗಲಾಟೆ ಮಾಡಿದ್ದರು. ಸದ್ಯ ಈತ ಹಾಕಿದ ಬೆಂಕಿ ಇನ್ನೂ ಸಮಾಜದಲ್ಲಿ ದೊಡ್ಡ ಕಂದಕ ಸೃಷ್ಟಿಸಿದೆ.

ಅಷ್ಟೆ ಅಲ್ಲದೆ ಪಟ್ಟಣದ ಮಹೇಶ್ವರಿ ದೇವಸ್ಥಾನದ ಮುಂದೆ ಭಗವದ್ ದ್ವಜ ಸುಟ್ಟುಹಾಕಿ ಸುಳ್ಳು ಸುದ್ದಿ ಹಬ್ಬಿಸಿ  ಶಾಂತಿ ಕದಡಲು ಪ್ರಯತ್ನಿಸಿದ್ದರು. ನಡಹಳ್ಳಿ ಕಾಫಿ ತೋಟದ ಮಾಲೀಕರು ತನ್ನ ಮನೆಯ ಹಸುಗಳನ್ನು ಮಾರಾಟ ಮಾಡಿದ ನಂತರ ಅವರಿಗೆ ಮಾನಸಿಕ ಹಿಂಸೆ ನೀಡಿ  ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ್ದು ಅತ್ಯಂತ ಆಘಾತಕಾರಿ ವಿಚಾರವಾಗಿದೆ.

ಜೊತೆಗೆ ಆಯುಧಪೂಜೆ ಸಂದರ್ಭದಲ್ಲಿ ತಮ್ಮ ಕಚೇರಿಯಲ್ಲಿ ಬಂದೂಕು ಕತ್ತಿಗಳಿಗೆ ಪೂಜೆ ಸಲ್ಲಿಸಿ ಊರಿನಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಇದರ ವಿಡಿಯೋ ಆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ದೊಡ್ಡ ಸುದ್ದಿ ಮಾಡಿತ್ತು. ತಾಲ್ಲೂಕಿನ ಕೊಲ್ಲಹಳ್ಳಿಯಲ್ಲಿ ಭೂಮಿ ಹೋರಾಟ ಮಾಡುತ್ತಿದ್ದ ಚಳುವಳಿಗಾರರ ಪ್ಲಾಸ್ಟಿಕ್ ಕಟ್ಟಿದ ಟೆಂಟುಗಳ ಮೇಲೆ ಪೆಟ್ರೋಲ್ ತುಂಬಿದ ಬಾಟಲಿಗಳ ಮೂಲಕ ಬೆಂಕಿ  ಹಚ್ಚಿ ಗಲಭೆ ನಡೆಸಿದ್ದರು. ಸಕಲೇಶಪುರದ ಜೆಡಿಎಸ್ ಮುಖಂಡ ಸುಪ್ರದೀಪ್ ಯಜಮಾನ ವಿರುದ್ಧ ಅವಮಾನಕಾರಿಯಾದ ಹೇಳಿಕೆ ನೀಡಿ ಊರಿನಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿತ್ತು ಈತನ ಗುಂಪು. ಆನೆ ಮಹಲ್ ಗ್ರಾಮದ ವ್ಯಕ್ತಿಯೊಬ್ಬ ದನದ ಮಾಂಸ ತರುತಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ‌, ಸಾಮಾಜಿಕ ಮಾದ್ಯಮ ಗಳಲ್ಲಿ ಆನೆಮಹಲ್ ಧರ್ಮಗುರು ಎಂದು ಸುಳ್ಳು ಮಾಹಿತಿ ನೀಡುತ್ತಿದ್ದರು. ಅಸ್ಸಾಂ ರಾಜ್ಯದ ತೋಟ ಕಾರ್ಮಿಕರನ್ನು ಬಾಂಗ್ಲಾ ನುಸುಳುಕೋರರು, ಭಯೋತ್ಪಾದಕರು ಎಂದು ಬಿಂಬಿಸಿ ಊರಿನ ಶಾಂತಿ ಕದಡಲು ವಿಫಲ ಯತ್ನ ನಡೆಸಿದ್ದೂ ಸಹ ಇಲ್ಲಿನ ಜನ ಈಗ ಮಾತಾಡಿಕೊಳ್ಳುತ್ತಿದ್ದಾರೆ.

ದಲಿತ ದೌರ್ಜನ್ಯ ಕಾಯಿದೆ ದುರ್ಬಳಕೆ:
ಸಮಾಜದಲ್ಲಿ ಅಣ್ಣ ತಮ್ಮಂದಿರಂತೆ ಇದ್ದ ದಲಿತರು ಮತ್ತು ಮುಸಲ್ಮಾನರ ನಡುವೆ ಸದಾಕಾಲ ಎತ್ತಿಕಟ್ಟುವ ಕೆಲಸ ಮಾಡಿದ್ದು ಇದೇ ರಘು ಸಕಲೇಶಪುರ. ಅದರಂತೆ 17 ಮುಸ್ಲಿಮರ ಮೇಲೆ ವಿವಿದ ಪ್ರಕರಣದಲ್ಲಿ ಸುಳ್ಳು ದಲಿತ ದೌರ್ಜನ್ಯ ಕೇಸು ದಾಖಲುಮಾಡಿದರು. ಹಲಸುಲಗೆ ಪ್ರಕರಣ, ಮಾರನ ಹಳ್ಳಿ ಹಾಗೂ  ಪುರಸಬೆಯ ಮಾಜಿ ಅಧ್ಯಕ್ಷ ಸಯ್ಯದ್ ಮುಪೀಜ್ ವಿರುದ್ದ ಸುಳ್ಳು ಪ್ರಕರಣ ದಾಖಲಿಸಲಾಯಿತು. ಸಭೆ ಸಮಾರಂಭಗಳಲ್ಲಿ ಸ್ಥಳಿಯ ಮುಸ್ಲಿಂ ಮುಖಂಡರನ್ನು, ಗಣ್ಯರನ್ನು, ಪತ್ರಕರ್ತರನ್ನು ಭಯೋತ್ಪಾದಕರು, ನಕ್ಸಲರು, ದೇಶ ದ್ರೋಹಿಗಳು ಎಂದು ಅವಮಾನ ಮಾಡುವುದು ನಿರಂತರವಾಗಿ ನಡೆದುಕೊಂಡು ಬಂದಿದೆ.

ಇನ್ನು ಇವರ ಅಣತಿಯಂತೆ ಅಲ್ಪಸಂಖ್ಯಾತರು, ದಲಿತರ ವಿರುದ್ಧ ಇಲ್ಲಿನ ಯಾವುದೇ ಅಧಿಕಾರಿಗಳು ನಡೆದುಕೊಳ್ಳದಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧ ಇವರು ತಿರುಗಿ ಬೀಳುವುದು ಮಾಮೂಲಾಗಿದೆ.

ಇವುಗಳು ನಮ್ಮ ಪೀಪಲ್ ಟಿವಿಗೆ ಸಿಕ್ಕ ಕೆಲವೇ ಮಾಹಿತಿಗಳು ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಯಾಕೆಂದರೆ ವರ್ಷದ 365 ದಿನವೂ ಸಕಲೇಶಪುರದ ಶಾಂತಿ ಸುವ್ಯವಸ್ಥೆ ಕದಡಲು ರೌಡಿಶೀಟರ್ ರಘು ಸಕಲೇಶಪುರ ಗುಂಪು ಮಾಡಿದ ಕೃತ್ಯಗಳು ಒಂದೆರಡಲ್ಲ. ಮೇಲೆ ಉಲ್ಲೇಖಿಸಿದ ಪ್ರತಿಯೊಂದು ಅಂಶಗಳೂ ಈತನ ಜನ್ಮಜಾತಕವನ್ನು ಹೊರಹಾಕುತ್ತಿದೆ. ಇಂತಹ ಸಮಾಜಘಾತುಕ ವ್ಯಕ್ತಿಯ ಮೇಲೆ ಇಷ್ಟೆಲ್ಲಾ ಆರೋಪಗಳಿದ್ದರೂ ಕಳೆದ ಅವಧಿಯಲ್ಲಿ ಇದ್ದ ಬಿಜೆಪಿ ಸರ್ಕಾರ ಕ್ರಮ ತಗೆದುಕೊಳ್ಳದೇ ಇದ್ದದ್ದು ಬಿಜೆಪಿ ಎಂತಹ ವ್ಯಕ್ತಿಗಳನ್ನು ಪೋಷಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಂತಿದೆ. ಇದೇ ಕೆಲಸವನ್ನು ಕಾಂಗ್ರೆಸ್ ಸರ್ಕಾರವೂ ಮಾಡಿದರೆ, ಜನತೆ ಈ ಸರ್ಕಾರದ ಮೇಲೆ ಇರಿಸಿದ್ದ ನಂಬಿಕೆ ಕಳೆದುಕೊಂಡಂತೆಯೇ ಸರಿ.

You cannot copy content of this page

Exit mobile version